Advertisement

ಕನ್ನಡಿಗ v/s ಕನ್ನಡಿಗ; ವಾಟಾಳ್ ಗೆ ಕರ್ನಾಟಕವನ್ನು ಬರೆದುಕೊಟ್ಟಿಲ್ಲ!

10:42 AM Jun 12, 2017 | Team Udayavani |

ಬೆಂಗಳೂರು: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿ, ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲವಾಗಿದೆ. ಕನ್ನಡ ಪರ ಸಂಘಟನೆಗಳ ಮುಖಂಡರ ನಡುವಿನ ಸ್ವಪ್ರತಿಷ್ಠೆಯಿಂದಾಗಿ ಒಗ್ಗಟ್ಟು ಮುರಿದು ಹೋದಂತಾಗಿದೆ. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳಿಗೆ ಬಂದ್ ಗೆ ಅನುಮತಿ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ವಾಟಾಳ್ ನಾಗರಾಜ್ ವಿರುದ್ಧವೇ ಪ್ರತಿಭಟನೆ:
ಏಕಾಏಕಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ವಿರುದ್ಧವೇ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಂಗಳೂರಿನಲ್ಲಿ ನಡೆಯಿತು. ಸುಮ್ಮನಹಳ್ಳಿ ಸೇತುವೆ ಸಮೀಪ ವಾಟಾಳ್ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ ನಡೆಯಿತು. 

ಕರ್ನಾಟಕವನ್ನು ವಾಟಾಳ್ ನಾಗರಾಜ್ ಗೆ ಬರೆದುಕೊಟ್ಟಿಲ್ಲ; ನಾರಾಯಣ ಗೌಡ
ಕರ್ನಾಟಕ ರಾಜ್ಯವನ್ನು ವಾಟಾಳ್ ನಾಗರಾಜ್ ಅವರಿಗೆ ಬರೆದುಕೊಟ್ಟಿಲ್ಲ. ಪದೇ, ಪದೇ ರಾಜ್ಯ ಬಂದ್ ನಡೆಸುವುದರಿಂದ ಯಾರಿಗೆ ಲಾಭವಿದೆ. ಕನ್ನಡಪರ ಸಂಘಟನೆಗಳು ಸಚಿವರು, ಶಾಸಕರು, ಸಚಿವರ ಮನೆ ಎದುರು ಪ್ರತಿಭಟನೆ ನಡೆಸಬೇಕು. ಅದನ್ನು ಬಿಟ್ಟು ನಾನು ಹೇಳಿದ್ದೇ ಅಂತಿಮ ಎನ್ನುವವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಬಂದ್ ವಿಫಲವಾಗಿಲ್ಲ; ಪ್ರವೀಣ್ ಶೆಟ್ಟಿ
ಕನ್ನಡ ಪರ ಸಂಘಟನೆಗಳ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಕರ್ನಾಟಕ ಬಂದ್ ವಿಫಲವಾಗಿಲ್ಲ. ನಾರಾಯಣ ಗೌಡರು ಸ್ವಪ್ರತಿಷ್ಠೆಯನ್ನು ಬಿಡಬೇಕಾಗಿತ್ತು. ಬಂದ್ ವಿಫಲಗೊಳಿಸಲು ಪಿತೂರಿ ನಡೆಸಿದವರ ಹೆಸರನ್ನು ಶೀಘ್ರವೇ ಬಹಿರಂಗಗೊಳಿಸುತ್ತೇವೆ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಟೌನ್ ಹಾಲ್ ಬಳಿ ಕರವೇ ಮುಖಂಡರ ಸುಳಿವೇ ಇಲ್ಲ!
ಅನುಮತಿಯ ಹೊರತಾಗಿಯೂ ಕರ್ನಾಟಕ ಬಂದ್ ಗೆ ಕರೆ ಕೊಟ್ಟು ಬಂದ್ ವಿಫಲವಾದ ಹಿನ್ನೆಲೆಯಲ್ಲಿ ಬೆಳಗ್ಗೆ 10ಗಂಟೆಗೆ ಟೌನ್ ಹಾಲ್ ಬಳಿ ಧರಣಿ ನಡೆಸುವುದಾಗಿ ತಿಳಿಸಿದ್ದ ಕನ್ನಡಪರ ಸಂಘಟನೆಯ ಮುಖಂಡರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಪ್ರವೀಣ್ ಶೆಟ್ಟಿಯಾಗಲಿ ಯಾರೂ ಬಂದಿಲ್ಲ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next