Advertisement

ಕನ್ನಡ ಕಲಾಕೇಂದ್ರ ಮುಂಬಯಿ :ಪ್ರಶಸ್ತಿ ಪ್ರದಾನ,ಸಾಂಸ್ಕೃತಿಕ ಸಂಭ್ರಮ

05:34 PM Mar 13, 2019 | |

ಮುಂಬಯಿ: ಮುಂಬಯಿ ಕನ್ನಡಿಗರು ಯಾವುದೇ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿ ಕೊಂಡವರಲ್ಲ. ದುಡಿಮೆಯೊಂದಿಗೆ ಕಲಾ ಪ್ರಕಾರಗಳನ್ನು ಕನ್ನಡತನವನ್ನು ಉಳಿಸಿ-ಬೆಳೆಸಿಕೊಂಡವರು. ಇಲ್ಲಿನ ಕನ್ನಡಿಗರ ಕಾಯಕದ ಫಲದಿಂದ ಕನ್ನಡ ಸ್ಪಂದನಶೀಲವಾಗಿದೆ. ದಕ್ಷಿಣ ಕನ್ನಡದವರಿಂದಲೇ ಮುಂಬ ಯಿಯಲ್ಲಿ ಕನ್ನಡ ಉಳಿದಿದೆ ಎಂದು ನಾನು ಹೇಳಬಲ್ಲೆ, ಅವರು ಸ್ಥಾಪಿಸಿದ ರಾತ್ರಿ ಶಾಲೆಗಳು, ಕನ್ನಡ ಸಂಘಟನೆಗಳ ನಿರಂತರ ಕಾರ್ಯ ಚಟುವಟಿಕೆಗಳಿಂದ ನಗರದಲ್ಲಿ ಕನ್ನಡವು ಇಂದಿಗೂ ನಳನಳಿಸುತ್ತಿದೆ ಎಂದು ಹಿರಿಯ ಸಾಹಿತಿ, ಕವಿ, ಕತೆಗಾರ ಜಯಂತ್‌ ಕಾಯ್ಕಿಣಿ ನುಡಿದರು.

Advertisement

ಕನ್ನಡ ಕಲಾಕೇಂದ್ರ ಮುಂಬಯಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ಣಾಟಕ ಬ್ಯಾಂಕ್‌ ಮಂಗಳೂರು ಇವರ ಪ್ರಾಯೋಜಕತ್ವತಲ್ಲಿ ಮಾ. 11ರಂದು ಅಪರಾಹ್ನ 3ರಿಂದ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮುಂಬ ಯಿಯಲ್ಲಿ ಕನ್ನಡ ಉಳಿವಿಗಾಗಿ ಪತ್ರಿಕೆಗಳ ಯೋಗದಾನವು ಮಹತ್ತರವಾಗಿದೆ. ಇಲ್ಲಿನ ಎರಡು ದಿನ ಪತ್ರಿಕೆಗಳು, ಜಾತೀಯ ಸಂಘಟನೆಗಳ ಮುಖವಾಣಿಗಳು ಸದಾ ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿವೆ. ರಂಗಭೂಮಿ ಎಂದರೆ ನಮ್ಮ ಬದುಕಿಗೆ ಹತ್ತಿರವಾದ ಕ್ಷೇತ್ರವಾಗಿದೆ. ಮನುಷ್ಯನ ಬದುಕಿನ ವಿಕಾಸಕ್ಕಾಗಿ ರಂಗಭೂಮಿಯ ಪಾತ್ರ ಮಹತ್ತರವಾಗಿದೆ. ಕನ್ನಡ ಕಲಾಕೇಂದ್ರವು ಕಳೆದ ಆರು ದಶಕಗಳಿಂದಲೂ ಹೆಚ್ಚಿನ ಕಾಲದಿಂದ ರಂಗಭೂಮಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಕನ್ನಡ ಕಲಾಕೇಂದ್ರದ ಪ್ರೇಕ್ಷಕರ ಸ್ಥಾನದಲ್ಲಿ ಕುಳಿತು ನೋಡಿ ಬೆಳೆದವನು ನಾನು. ಈ ಸಂಸ್ಥೆಯ ರಂಗಭೂಮಿಗೆ ನೀಡಿದ ಕೊಡುಗೆಯನ್ನು ನೆನೆಪಿ ಸುವಾಗ ಆಶ್ಚರ್ಯವಾಗುತ್ತದೆ. ಬೈಲೂರು ಬಾಲಚಂದ್ರ ರಾವ್‌ ಅವರ ನೇತೃತ್ವದಲ್ಲಿ ಕನ್ನಡ ಕಲಾಕೇಂದ್ರವು ರಂಗಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀ ಯವಾಗಿದೆ ಎಂದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಇವರು ಮಾತನಾಡಿ, ಪ್ರಶಸ್ತಿ-ಪುರಸ್ಕಾರಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಂದು ಮುಂಬಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನಿಸುತ್ತಿರುವುದು ಅರ್ಥ ಪೂರ್ಣವಾಗಿದೆ.ಇಂತಹ ಕಾರ್ಯ ಕ್ರಮಗಳು ಸಾಧಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಕನ್ನಡ ಕಲಾಕೇಂದ್ರದ ಈ ಸಾಧನೆಗಳನ್ನು ನಾನು ಹತ್ತಿರದಿಂದ ತಿಳಿದಿದ್ದೇನೆ. ಕಲಾವಿದರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ ಎಂದರು.

ಇದೇ ಸಂದರ್ಭದಲ್ಲಿ ಮುಂಬಯಿ ಪತ್ರಕರ್ತರಿಗೆ ನೀಡಲ್ಪಡುವ ಸಂಸ್ಥೆಯ ಎಂ. ಬಿ. ಕುಕ್ಯಾನ್‌ ಪ್ರಶಸ್ತಿಯನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕನ್ನಡ ನಾಟಕ ರಂಗದ ಸಾಧಕರಿಗೆ ನೀಡಲಾಗುವ ದಿ| ಕೆ. ಜೆ. ರಾವ್‌ ಸ್ಮರಣಾರ್ಥ ನೀಡಲಾಗುವ “ಕಲಾಜ್ಯೋತಿ’ ಪ್ರಶಸ್ತಿಯನ್ನು ಕನ್ನಡ ರಂಗನಟ, ನಿರ್ದೇಶಕ ರಘುವೀರ್‌ ಭಟ್‌, ಸಂಗೀತ ರಂಗದ ಸಾಧಕರಿಗೆ ನೀಡುವ ದಿ| ಡಾ| ಲಲಿತಾರಾವ್‌ ಸ್ಮರಣಾರ್ಥ “ಲಲಿತ ಕಲಾಶ್ರೀ’ ಪ್ರಶಸ್ತಿಯನ್ನು ನಾದ ಬಿಂದು, ಚಿನ್ಮಯ ಮಿಷನ್‌ ಕೋಲ್ವಾಣ್‌ ನಿರ್ದೇಶಕಿ ಪ್ರಮೋದಿನಿ ರಾವ್‌, ನೃತ್ಯ ರಂಗದ ಸಾಧಕರಿಗೆ ನೀಡಲಾಗುವ “ತಾರಾಶ್ರೀ’ ಪ್ರಶಸ್ತಿಯನ್ನು ಅರುಣೋದಯ ಕಲಾನಿಕೇತನದ ನೃತ್ಯಗುರು ಮೀನಾಕ್ಷೀ ರಾಜು  ಶ್ರೀಯಾನ್‌, ಯಕ್ಷರಂಗದ ಸಾಧಕರಿಗೆ ನೀಡಲಾಗುವ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ಕಲಾರಂಗದ ಬಾಲಪ್ರತಿಭೆಗೆ ನೀಡಲಾಗುವ “ಸುವರ್ಣಶ್ರೀ’ ಪ್ರಶಸ್ತಿಯನ್ನು ಕು| ಜೀವಿಕಾ ವಿ. ಶೆಟ್ಟಿ ಪೇತ್ರಿ ಅವರಿಗೆ ಪ್ರದಾನಿಸಲಾಯಿತು.

ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬಿ. ಬಾಲಚಂದ್ರ ರಾವ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ರಂಗ ನಿರ್ದೇಶಕ ಸಾಣೇಹಳ್ಳಿ ವೈ. ಡಿ. ಬಾದಾಮಿ ಮತ್ತು ನಟನಾ ಮೈಸೂರು ನಿರ್ಮಾತೃ ಮಂಡ್ಯ ರಮೇಶ್‌ ಅವರು ಮಾತನಾಡಿ ಶುಭ ಹಾರೈಸಿದರು. 

Advertisement

ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಟಿ. ಆರ್‌. ಅವರು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಿರ್ವಹಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಗೀತಾ ಭಟ್‌ ನಿರ್ವಹಿಸಿದರು. ಕಲಾಕೇಂದ್ರದ ಗೌರವ ಉಪಾಧ್ಯಕ್ಷೆ ಡಾ| ಸುನೀತಾ ಎಂ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ದಾನಿ ಎಂ. ಬಿ. ಕುಕ್ಯಾನ್‌ ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಾ| ಪಿ. ಜಿ. ರಾವ್‌, ಜತೆ ಕಾರ್ಯದರ್ಶಿ ರಮೇಶ್‌ ಬಿರ್ತಿ, ಕೋಶಾಧಿಕಾರಿ ರಮೇಶ್‌ ಎಂ. ರಾವ್‌ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ರಂಗನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ, ಜಗದೀಶ್‌ ರೈ, ಗೋಪಿನಾಥ್‌ ರಾವ್‌, ವಾಣಿ ಭಟ್‌, ಶಕುಂತಲಾ ಸಾಮಗ ಮೊದಲಾದವರು ಸಹಕರಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನು ಪಡೆದ ಶ್ಯಾಮಲಾ ಪ್ರಕಾಶ್‌ ಮತ್ತು ಸುರೇಖಾ ನಾಯಕ್‌ ಇವರನ್ನು ಗೌರವಿಸಲಾಯಿತು.

ಪ್ರಾರಂಭದಲ್ಲಿ ಪ್ರಮೋದಿನಿ ರಾವ್‌ ಮತ್ತು ಬಳಗದವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಮಂಜುಳಾ ಬಾದಾಮಿ ಇವರಿಂದ ಆತ್ಮ ಬಯಲು ನಾಟಕದ ಏಕಪಾತ್ರಾಭಿನಯ ವೈ. ಡಿ. ಬಾದಾಮಿ ಅವರ ನಿರ್ದೇ ಶನದಲ್ಲಿ ಜರಗಿತು. ಆನಂತರ ನಟನಾ ಬಳಗ ಮೈಸೂರು ಇದರ ಕಲಾವಿದರಿಂದ ರವೀಂದ್ರನಾಥ ಠಾಗೋರ್‌ ಮೂಲಕಥೆಯ, ಕನ್ನಡಕ್ಕೆ ಅನುವಾದಿತ “ಕೆಂಪು ಕಣಗಿಲೆ’ ನಾಟಕವು ಡಾ| ಶ್ರೀಪಾದ ಭಟ್‌ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. 
ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಲಾ ಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next