Advertisement

ಕನ್ನಡ ಸಮೃದ್ಧ ತಾಂತ್ರಿಕ ಭಾಷೆ: ಸಚಿವ ಕತ್ತಿ

06:48 PM Nov 02, 2021 | Team Udayavani |

ಬಾಗಲಕೋಟೆ: ಕನ್ನಡವು ಸಮೃದ್ಧ ತಾಂತ್ರಿಕ ಭಾಷೆಯಾಗಿ ಎಲ್ಲ ಹಂತಗಳಲ್ಲೂ ಬಳಕೆಯಾಗುವುದು ವಿಶ್ವ ಕನ್ನಡ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅರಣ್ಯ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

Advertisement

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ವಿನ್ಯಾಸಗಳಲ್ಲಿ ಯುನಿಕೋಡ್‌ ಪೂರ್ಣ ರೂಪದಲ್ಲಿ ಕನ್ನಡ ಸುಲಭವಾಗಿ ಎಲ್ಲರಿಗೂ ಲಭ್ಯವಾಗುವ ಹಾಗೆ ಮಾಡಿರುವುದು ಕನ್ನಡ ಭಾಷೆ ವಿಶ್ವ ಪ್ರಸಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವ ಸಂಭ್ರಮದ ಹಬ್ಬವನ್ನು ಹೊರರಾಜ್ಯಗಳಲ್ಲಿ ಆಚರಿಸಲಾಗುತ್ತಿದೆ. ಅಮೆರಿಕಾ, ಸಿಂಗಾಪುರ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದುಬೈ ಸೇರಿದಂತೆ ಇನ್ನಿತರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ನಮ್ಮ ಸರಕಾರ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತದ ಬಗ್ಗೆ ಯುವ ಪೀಳಿಗೆಗೆ ಉತ್ತೇಜನ ನೀಡಲು ಅನೇಕ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ಕರ್ನಾಟಕ ಪ್ರಕೃತಿ ಸೊಬಗು, ಶಿಲ್ಪಕಲಾ ಸೌಂದರ್ಯ, ವನ್ಯಜೀವಿ ಸಂಪತ್ತು, ನೈಸರ್ಗಿಕ ಸಂಪತ್ತು ಹಾಗೂ ಅನನ್ಯವಾದ ಸಾಹಿತ್ಯ ಸಂಪತ್ತು ಬೆರಗುಗೊಳಿಸುವಂಥದ್ದಾಗಿವೆ ಎಂದರು. ಕನ್ನಡ ಭಾಷೆ ಕವಿ ಕೋಗಿಲೆಗಳ ಸಾಹಿತ್ಯವಾಗಿ ವಿಜೃಂಭಿಸುತ್ತಿದೆ. ಜೀವನ ಪ್ರೀತಿ, ಮಾನವೀಯತೆ, ಕನ್ನಡ ಜನಪದ ಸಾಹಿತ್ಯ ತಾಯಿಬೇರಾಗಿ ಕನ್ನಡ ಭಾಷೆಯಾಗಿದೆ. ಜಾಗತಿಕ ಅಂತಕರಣವನ್ನು ಕಲಕುವ ರೀತಿಯಲ್ಲಿ ಬಂಡಾಯ-ದಲಿತ ಸಾಹಿತ್ಯವು ಕನ್ನಡ ಭಾಷೆಗೆ ಶ್ರೇಷ್ಠತೆ ನೀಡಿದೆ ಎಂದು ಹೇಳಿದರು.

ಸ್ವಾತಂತ್ರೊತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಮುಖ್ಯಮಂತ್ರಿಗಳು ನವಕರ್ನಾಟಕದ ಕನಸನ್ನು ಸಾಕಾರಗೊಳಿಸಲು 13 ಅಮೃತ ಯೋಜನೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಲಸಿಕಾಕರಣ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ. 86ರಷ್ಟು ಪ್ರಥಮ ಡೋಸ್‌ ನೀಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೂರ್ವದಲ್ಲಿ ಕನ್ನಡಾಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿದರು.

Advertisement

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿ ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ. ಭೂಬಾಲನ್‌, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಮ್‌. ಗಂಗಪ್ಪ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಜೀವನ ಬಡಿಗೇರ, ಬಸವರಾಜ ಭಜಂತ್ರಿ, ಹನಮಂತ ಭಜಂತ್ರಿ (ಜಾನಪದ), ಶಿವಪುತ್ರಪ್ಪ ತಾರಿವಾಳ (ಸಂಗೀತ), ಲಕ್ಷ್ಮಣ ಮಾದರ (ತಬಲಾ), ಮುಪ್ಪನಗೌಡ ಗೌಡರ, ಜಯಶ್ರೀ ಬನಹಟ್ಟಿ (ನಾಟಕ), ಎನ್‌. ಎಸ್‌.ಸನ್ನೂರ, ತಯಾನಖಾನ್‌ ಇನಾಮದಾರ (ರಂಗಭೂಮಿ), ಹಯತಸಾಬ ಮದರಖಾನ (ಬಯಲಾಟ), ಮಹಾದೇವ ಜಗತಾಪ (ಚಿತ್ರಕಲೆ), ಹನಮಂತ ತಳವಾರ (ಶಿಲ್ಪಕಲೆ), ಸಿದ್ದಪ್ಪ ಮಾದರ, ಶೀಲಾಕಾಂತ ಪತ್ತಾರ (ಸಾಹಿತ್ಯ), ವಿಜಯಕುಮಾರ ಪವಾರ (ಬಲ್ಬಕಲೆ), ಗುಣಾಕರ ಶೆಟ್ಟಿ, ಆರ್‌.ಡಿ.ಬಾಬು, ಅಶೋಕ ಶ್ಯಾವಿ, ಲಕ್ಷ್ಮೀ ಗೌಡರ, ನಿಂಗರಾಜ ಮಬ್ರುಮಕರ (ಸಮಾಜ ಸೇವೆ), ಬಿ.ರತ್ನಾಕರ ಶೆಟ್ಟಿ, ರಾಘವೇಂದ್ರ ಕಲಾದಗಿ (ಪತ್ರಿಕಾ ಮಾಧ್ಯಮ) ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next