Advertisement

ಕನ್ನಡ ಚಿತ್ರರಂಗದ ನಟ ಸಾರ್ವಭೌಮನ ಸ್ಮರಣೆ

01:42 PM Apr 25, 2019 | Team Udayavani |

ಮಂಡ್ಯ: ವರನಟ ಡಾ.ರಾಜಕುಮಾರ್‌ ಗೋಕಾಕ್‌ ಚಳವಳಿಯ ಮೂಲಕ ಕನ್ನಡದ ಉಳಿವಿಗೆ ಬಹುದೊಡ್ಡ ಕೊಡುಗೆ ನೀಡಿದ್ದರು. ಅವರ ಕನ್ನಡದ ಬದ್ಧತೆಯ ಪರಂಪರೆ ಇಂದಿನ ಕನ್ನಡ ಚಿತ್ರರಂಗದ ನಟ-ನಟಿಯರು ಮುಂದುವರಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ.ರಾಜಕುಮಾರ್‌ ಅವರ 91ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಡಾ.ರಾಜಕುಮಾರ್‌ ದಿಟ್ಟತನದಿಂದ ಮುನ್ನುಗ್ಗುವ ಪ್ರವೃತ್ತಿಯನ್ನು ಹೊಂದಿದ್ದರು. ಅದೇ ಕಾರಣಕ್ಕೆ ಅವರು ತೆರೆಯ ಮೇಲೆ ನಾಯಕನಾಗಿ ಉಳಿಯದೆ ಜನಸಾಮಾನ್ಯರ ಬದುಕಿನಲ್ಲೂ ಹೀರೋ ಆಗಿ ವಿಜೃಂಭಿಸಿದರು ಎಂದು ಬಣ್ಣಿಸಿದರು.

ಸಜ್ಜನ ಸರಳ ವ್ಯಕ್ತಿತ್ವ: ಕನ್ನಡ ಚಿತ್ರರಂಗಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಡಾ.ರಾಜಕುಮಾರ್‌ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸುವಲ್ಲಿ ಅವರ ಪಾತ್ರ ಮಹತ್ವವಾದುದು. ರಾಜಕುಮಾರ್‌ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮೆರೆದರು. ಅನ್ಯಭಾಷೆಗಳಿಂದ ಅವಕಾಶಗಳು ಬಂದರೂ, ಅವೆಲ್ಲವನ್ನೂ ವಿನಯದಿಂದಲೇ ತಿರಸ್ಕರಿಸಿ ಕನ್ನಡದಲ್ಲೇ ಉಳಿದುಕೊಂಡರು. ಕಲೆಯ ಮೂಲಕ ಮೇರು ಸಾಧನೆ ಮಾಡಿದ್ದರೂ ಸರಳತೆ, ಸಜ್ಜನಿಕೆ ಹಾಗೂ ಸಹಜವಾದ ಬದುಕಿನ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರ ಬದುಕು ಆದರ್ಶನೀಯ ಎಂದು ಹೇಳಿದರು.

ಭಾರತ ರತ್ನ ನೀಡಿ: ಡಾ.ರಾಜಕುಮಾರ್‌ ಜೀವನದುದ್ದಕ್ಕೂ ಸಾರ್ಥಕತೆ ಮೆರೆದಿದ್ದರು. ಸಾವಿನ ಸಂದರ್ಭದಲ್ಲೂ ಕೂಡ ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಬೆಳಕಾಗುವ ಸಂದೇಶವನ್ನು ಕೊಟ್ಟ ಅವರ ಸಮಗ್ರ ಬದುಕು, ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಸದಭಿರುಚಿಯ ಚಿತ್ರಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾದ ಡಾ.ರಾಜಕುಮಾರ್‌ ಅವರು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡಿದರು. ನಮ್ಮೆದುರು ಕನಕದಾಸ, ಪುರಂದರದಾಸರು, ಶ್ರೀ ಕೃಷ್ಣದೇವರಾಯರಂತಹ ಮಹನೀಯರನ್ನು ನೇರವಾಗಿ ನೋಡಿಲ್ಲದಿದ್ದರೂ ರಾಜಕುಮಾರ್‌ ಅಭಿನಯದ ಮೂಲಕ ಅವರೆಲ್ಲರನ್ನೂ ಜನರಿಗೆ ಸಾಕ್ಷಾತ್‌ ದರ್ಶನ ಮಾಡಿಸಿದರು.

Advertisement

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫ‌ರ್‌ ಉದ್ಘಾಟಿಸಿ, ಡಾ.ರಾಜಕುಮಾರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ರಾಜೇಶ್‌, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ಹರೀಶ್‌, ಮುಖಂಡರಾದ ಮಹಮದ್‌ ಜಬೀವುಲ್ಲಾ, ಸಿದ್ದಶೆಟ್ಟಿ, ಎಸ್‌.ರಾಜೇಂದ್ರ ಇತರರಿದ್ದರು. ಕಲಾವಿದರಾದ ಸ್ವಾಮಿ, ಬಸವರಾಜು, ಶೇಖರ್‌ ಅವರಿಂದ ಡಾ.ರಾಜಕುಮಾರ್‌ ಗೀತ ಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next