Advertisement

ಕನ್ನಡ ಸಾಯೋದೂ ಇಲ್ಲ, ಸವೆಯೋದೂ ಇಲ್ಲ

12:30 AM Nov 24, 2018 | |

ನಮ್ಮ ಕನ್ನಡ ಚಾರ್ಮಾಡಿಯ ಝರಿಗಳಂತೆ ನಾನಾ ನಮೂನೆಯಲ್ಲಿ ಹರಿಯುತ್ತಿದೆ. ಬ್ಯಾರಿ ಕನ್ನಡ, ಕುಂದಾಪುರ, ಹವ್ಯಕ ಕನ್ನಡ ಒಂದು ಕಡೆ, ಮರಾಠಿ ಮಿಶ್ರಿತ, ಕೊಂಕಣಿ ಪ್ರೇರಿತ, ತೆಲುಗು, ತಮಿಳು ಪ್ರಭಾವಿತ ಕನ್ನಡ ಮತ್ತೂಂದೆಡೆ, ಎಲ್ಲ ದಾಟಿದರೆ ಬೆಂಗಳೂರಲ್ಲಿ ಸಮ್ಮಿಶ್ರ ಕನ್ನಡ. ಅಬ್ಟಾಬ್ಟಾ…ಹಾಗಾದರೆ, ನಮ್ಮ ಸಿನಿಮಾ ನಿರ್ದೇಶಕರೆಲ್ಲಾ ಅಚ್ಚ ಕನ್ನಡ ಮೀಡಿಯಂನಲ್ಲಿ ಓದಿರಬೇಕಾ? ನಿರ್ದೇಶಕ ಯೋಗರಾಜ್‌ ಭಟ್‌ ನವೆಂಬರ್‌ ನೆಪದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ… 

Advertisement

ಸಿನಿಮಾ ನಿರ್ದೇಶಕರಿಗೆ, ಭಾಷೆ ಹಿಡಿತ ಹೇಗಿರಬೇಕು ?
ಎಷ್ಟು ಗೊತ್ತಿರುತ್ತೋ ಅಷ್ಟು ಒಳ್ಳೆಯದು. ನಮ್ಮಲ್ಲಿ ಒಂದೇ ಥರ ಕನ್ನಡ ಇಲ್ಲ. ನಾನಾ ಭಾಗಗಳಲ್ಲಿ, ನಾನಾ ಕನ್ನಡ.
ಅವುಗಳ ಪರಿಚಯ ಇದ್ದರೆ ಇನ್ನೂ ಒಳ್ಳೇದು.  

ಒಳ್ಳೆಯದು ಅಂದರೆ ಹೇಗೆ?
ಇದರಿಂದ ಗಟ್ಟಿ ಪಾತ್ರಗಳು, ಕಥೆಗಳು ಹುಟ್ಟಿಕೊಳ್ಳುತ್ತವೆ. ಬದುಕಿನ ಅನುಭವಗಳು ಕಲಿಸುವ ಪಾಠ ಇದೆಯಲ್ಲ, ಅದು ನಿರ್ದೇಶಕನಿಗೆ ಬಹು ಮುಖ್ಯ. ಭಾಷೆ ಕೂಡ ಅನುಭವದ ಒಂದು ಭಾಗ. ಜನಪದ, ಜಾನಪದ, ನುಡಿ ಅಂತೆಲ್ಲ ಇದೆಯಲ್ಲ. ಈ ಬಗ್ಗೆ ಆಳವಾದ ಪರಿಜ್ಞಾನ ಇದ್ದರೆ ಚಿಂತನೆಗಳು ಗಾಢವಾಗಿರುತ್ತವೆ.  

ಇವೆಲ್ಲ ಕಲೀಬೇಕಾ, ಬದುಕೇ ಹೇಳಿಕೊಡಬೇಕಾ?
ತಿಳಿಯಬೇಕು ಮತ್ತು ಬದುಕು ಹೇಳಿಕೊಟ್ಟಿದ್ದನ್ನು ಶ್ರದ್ಧೆಯಿಂದ ಕಲೀಬೇಕು. 

ಕಲಿತರೆ ಪ್ರಯೋಜನ ಏನು?
ಸಿನಿಮಾ ಮೇಲೆ ಹಿಡಿತ ಇರುತ್ತೆ. ಇವತ್ತು ಈ ಹಿಡಿತ ಇಲ್ಲದೇ ಇರೋ ಹೊತ್ತಿಗೇನೇ ಎಷ್ಟೋ ಚಿತ್ರಗಳಲ್ಲಿ ಕ್ಯಾರಕ್ಟರ್‌ಗಳು ದಬ್ಟಾಕ್ಕೊಂಡು ಬಿಟ್ಟಿರೋದು. ಫೋಕ್‌ ಒಲವಿದ್ದರೆ ಮಂಟೆಸಾಮಿ, ದೇವನೂರು ಮಹದೇವ, ಕಂಬಾರರಂಥವರ ಬಗ್ಗೆ ಪ್ರೀತಿ ಹುಟ್ಟುತ್ತೆ. ನಿರ್ದೇಶಕನ ಚಿಂತನೆ, ಬಳಸುವ ಭಾಷೆ ಕೂಡ ಸೊಗಡು, ಸೊಗಡಾಗಿರುತ್ತದೆ. 

Advertisement

ನಿಮ್ಮ ಹಾಡುಗಳಲ್ಲಿ ಫೋಕ್‌ ಅಂಶ ಇರುತ್ತಾ?
ನನ್ನ ಚಿತ್ರದಲ್ಲಿ ಫೋಕ್‌ ಸುಮಾರು ಕಡೆ ವರ್ಕ್‌ ಆಗುತ್ತೆ. ನಾನು ಹಾಡುಗಳನ್ನು ಸಿನಿಮಾದಿಂದ ಹೊರಗೆ ಬರೆದು ಬಿಟ್ಟಿರ್ತೀನಿ. ಹಾಗಾಗಿ, ನಾನು ಬರೆದ ಹಾಡುಗಳನ್ನು ಸಿನಿಮಾಕ್ಕೆ ಅಂತಲೇ ಹಾಕಬೇಕಿಲ್ಲ. ಎಲ್ಲಿ ಬೇಕಾದರೂ ಬಳಸಬಹುದು. ಇದು ಎಲ್ಲಕಡೆ ಹೊಂದುತ್ತೆ; ಎಲ್ರಿಗೂ ಇಷ್ಟ ಆಗಿಬಿಡುತ್ತೆ. ಅದು ಹೇಗೆ, ಏನು, ಎತ್ತ ನಂಗೂ ಗೊತ್ತಿಲ್ಲ. 

ನಿಮಗೆ ಈ ಭಾಷೆ ಹಿಡಿತ ಹೇಗೆ ಸಾಧ್ಯವಾಯಿತು?
ನನ್ನ ತಾಯ್ನಾಡೆಲ್ಲಾ ಕುಂದಾಪುರ. ಅಲ್ಲೇ ಬಾಲ್ಯ ಕಳೆದಿದ್ದರಿಂದ ಅವರಷ್ಟೇ ಚೆನ್ನಾಗಿ ಮಾತನಾಡಬಲ್ಲೆ. ಒಂದನೇ ಕ್ಲಾಸಿಂದ ಡಿಗ್ರಿವರೆಗೆ ಓದಿದ್ದೆಲ್ಲಾ ಧಾರವಾಡದಲ್ಲಿ. ಹಂಗಾಗಿ, ಅಲ್ಲಿನ ಭಾಷೆ ಮೇಲೂ ಭಯಂಕರ ಗ್ರಿಪ್ಪು. ಆಮೇಲೆ ಕೆಲಸ, ಅದಕ್ಕೆ ಇದಕ್ಕೆ ಅಂತ ಮೂರು ವರ್ಷ ಮೈಸೂರು ಸೇರಿಬಿಟ್ಟೆ. ಪರಿಣಾಮ, ಮಂಡ್ಯ, ಮೈಸೂರಿನ ಭಾಷೆ ಬಳಕೆ, “ಅ’ಕಾರ “ಹ’ಕಾರ ದೋಷಗಳು ಚೆನ್ನಾಗಿ ತಿಳೀತು. ಇದು ಎಷ್ಟು ಪ್ರಯೋಜನಕ್ಕೆ ಬಂತಂದ್ರೇ.. ದೇವನೂರರನ್ನು ಓದೋವಾಗ ಧಾರವಾಡಿಗ ಗೆಳೆಯರು ಒದ್ದಾಡೋರು, ನನಗೆ ಅರ್ಥವಾಗಿಬಿಡೋದು. ಆ ಕಡೆಯವರು ಬೇಂದ್ರೆ ಅಜ್ಜನ ಬರಹಗಳನ್ನು ತುಂಬಾ ಕಾಂಪ್ಲಿಕೇಟ್‌ ಮಾಡ್ಕೊಂಡಾಗ- ನನಗೆ ಅಂಥ ಸಮಸ್ಯೆಗಳೇನೇ ಇರ್ತಿರಲಿಲ್ಲ. ನನ್ನ ಅತ್ತಿಗೆ ಮಲೆನಾಡೊರು. ಹೀಗಾಗಿ ಹವ್ಯಕ ಭಾಷೆ ಕೂಡ ತಂತಾನೇ ನಾಲಿಗೆ ಸೇರಿದೆ. ಎಲ್ರೂನೂ ಹೀಗೆ ಕಲೀಬೇಕು ಅಂತಲ್ಲ. ನನಗೆ ಇವೆಲ್ಲಾ ಅನುಕೂಲಕ್ಕೆ ಬಂದವು.  

ಇದೆಲ್ಲಾ ಸಿನಿಮಾಕ್ಕೆ ಹೇಗೆ ನೆರವಾಗುತ್ತೆ?
ಪಾತ್ರಗಳು- ಅದು ಯಾವ ಭಾಗದ್ದು, ಅದು ಮಾತನಾಡುವ ಶೈಲಿ, ಇದನ್ನೆಲ್ಲಾ ನೋಡಿಕೊಂಡು ಸಂಭಾಷಣೆಗಳನ್ನು,  ಹಾಡುಗಳನ್ನು ಬರೆಯಲು ಸುಲಭವಾಯಿತು. ಹೊಡಿ ಒಂಭತ್ತು, ಹಾಲುಕುಡಿಯೋ ಮಕ್ಕಳೇ ಬದುಕಲ್ಲ… ಬೊಂಬೆ ಆಡ್ಸೋನು ಮೇಲೆ ಕುಂತೌನೇ, ಕಾತಲುಕಟ್ಟು ಕಾ.. ಇವೆಲ್ಲ ಹುಟ್ಟಿದ್ದು ಹೀಗೆ…

ನಗರ ವಲಯದ ಬರಹಗಾರರ ಬಗ್ಗೆ ಹೇಳಿ?
ನಗರದ ಬರಹಗಾರರಿಗೆ ನುಡಿ, ಜನಪದ ಅಂತೆಲ್ಲ ಕರೀತಾರಲ್ಲ, ಅದರ ಸತ್ವಾನೇ ಗೊತ್ತಿಲ್ಲ. ಅದೊಂಥರ ಸಿನಿಮಾ, ಸಾಹಿತ್ಯದ ತಾಯಿ ಬೇರಿದ್ದಂಗೆ. ಶಾಸ್ತ್ರೀಯ ಸಂಗೀತ ಎಷ್ಟು ಗೊತ್ತೋ, ಜಾನಪದದ ಬಗ್ಗೇನೂ ಅಷ್ಟೇ ತಿಳಿದಿರಬೇಕು. ಎಷ್ಟೋ ಜನ ಫೋಕ್‌ ಅಂದರೆ ಕಾಡು, ಸೋಲಿಗರ ಹಾಡು ಅಂತೆಲ್ಲ ಅಂದೊRಂಡಿರ್ತಾರೆ. ತಪ್ಪದು. ಹಂಸಲೇಖ, ದೇವನೂರು, ಮಂಟೆಸ್ವಾಮಿ ಇಂಥವರೆಲ್ಲ ಗೊತ್ತಿದ್ದರೆ 

ಹೀಗಾಗಲ್ಲ…
ಅನುಭವ ಪಡೆಯೋದು ಅಂದರೆ ಹೇಗೆ? 
ಪ್ರಯಾಣ, ಓದು, ಭೇಟಿಗಳು, ಕಾರ್ಯಕ್ರಮಗಳು, ನಾಟಕ, ಯಕ್ಷಗಾನ- ಇವುಗಳು ಕೊಡುವ ಅನುಭವ ಇದೆಯಲ್ಲಾ, ಅದು ಸಿನಿಮಾ ಮಾಡುವಾಗ ಎಲ್ಲೋ ಕೆಲಸಕ್ಕೆ ಬಂದು ಬಿಡುತ್ತೆ. ಆದರೆ, ಈ ಅನುಭವಾನ ಮೊಬೈಲ್‌ನಲ್ಲಿ ತಗೋತೀವಿ ಅಂದರೆ ಬರೋಲ್ಲ. ಉದಾಹರಣೆಗೆ- ನೀವು ಯಕ್ಷಗಾನ ನೋಡ್ತಾ ಇರ್ತೀರಿ. ನಿಮ್ಮ ಪಕ್ಕದಲ್ಲಿ ಒಬ್ಬರು ಅದಕ್ಕೆ ಪ್ರತಿಕ್ರಿಯಿಸ್ತಾರೆ. ನೀವು ಸ್ಪಂದಿಸಬೇಕು, ಆ ಕ್ಷಣಾನ ಅನುಭವಿಸಬೇಕು. ಅಬ್ಸರ್‌ವೆàಷನ್‌ ತಪ್ಪಿದರೆ ಹೋಯ್ತು. ಅದೆಲ್ಲಾ, ಮೊಬೈಲ್‌ನಲ್ಲಿ ನೋಡಿದ್ರೆ ಸಿಗಲ್ಲ.

ಕರ್ನಾಟಕದಲ್ಲಿ ಭಾಷೆ ರಚನೆ ಹೇಗಿದೆ?
ಭೂಪಟದ ಕೆಳಭಾಗದಲ್ಲಿ- ಮಂಗಳೂರು. ತುಳುನಾಡು. ಬಹಳ ಹಿಂದೆ ಇದನ್ನು ಮದರಾಸು ಸರ್ಕಾರ ಆಳಿತ್ತು. ಕಾಸರಗೋಡಿನ ಕೆಳಗೆ ಹೋದರೆ ಮಲಯಾಳಂ, ಅದರ ಮೇಲಾºಗದಲ್ಲಿ ಬ್ಯಾರಿ ಕನ್ನಡ, ತುಳು. ಮಂಗಳೂರಿಂದ ಸೀದಾ ಕೆಳಗೆ ಇಳಿದರೆ ಸುಳ್ಯ ಸುತ್ತಮುತ್ತ ಕೊಡವ, ಹವ್ಯಕ ಭಾಷೆ. ಉಡುಪಿಯಿಂದ 80.ಕಿ.ಮೀ ದಾಟಿದರೆ ಕುಂದಾಪುರದ ಭಾಷೆ ಶುರು. ಹಿಂದೆ ಒಂದೂವರೆ ಲಕ್ಷ ಜನ, ಈಗ ಅಲ್ಲಿ ಎರಡು ಲಕ್ಷ ಜನ ಈ ಭಾಷೆ ಮಾತಾಡ್ತಾ ಇದ್ದಾರೆ. ಉಡುಪೀಲಿ ಇದಿಲ್ಲ. ಕುಂದಾಪುರ ದಾಟಿ ಕಡಲು ದಂಡೆ ಕುಮಟಕ್ಕೆ ಬಂದರೆ ಹವ್ಯಕ ಶುರುವಾಗುತ್ತೆ. ಇಲ್ಲಿಂದ ಸ್ವಲ್ಪ ಮೇಲೆ ಹೋದರೆ ಕೊಂಕಣ ಪಟ್ಟಿ ಶುರು. ಇದನ್ನು ರಚಿಸಿದವರು ಕಾಶ್ಮೀರಿಗಳು. ಸರಸ್ವತಿ ನದಿಗೆ ನೇರ ಲಿಂಕ್‌ ಇದೆ. ಅದಕ್ಕೆ ಇಲ್ಲಿನವರನ್ನು ಸಾರಸ್ವತರು ಅಂತ ಕರೆಯೋದು. ಕುಂದಾಪುರದ ದೀವರುಗಳ ಮೂಲ ಹುಡುಕಿದರೆ ಪಶ್ಚಿಮ ಬಂಗಾಲ ಕಾಣುತ್ತೆ.  ಕೊಂಕಣ ಪಟ್ಟಿ ದಾಟಿ ಮೇಲೆ ಬಂದು ಬಲಕ್ಕೆ 180 ಕಿ.ಮೀ ಸವೆಸಿದರೆ ಧಾರವಾಡ ಸಿಗ್ತದೆ.  ಛಲೋ ಅದ, ಚಂದದ, ಛಲೋ ಐತಿ, ಚ‌ಂದ್‌ ಐತಿ ಅನ್ನೋ ಎರಡು ರೀತಿ ಕನ್ನಡ ಇಲ್ಲಿದೆ.  ಕರಾವಳಿ ಘಟ್ಟದ ಮೇಲಿನ, ಕೆಳಗಿನ ಸ್ಥಿತಿ ಇದು. ಇನ್ನ ಬೀದರ್‌ನಿಂದ ಕನ್ನಡದ ಹೆಗಲ ಮೇಲೆ ಉರ್ದು, ಮರಾಠಿ ಪದಗಳು ಕೈಹಾಕ್ತಾ ಹೋಗ್ತವೆ. ಹೀಗಾಗಿ ಇಲ್ಲಿ ಅಂಕಿಗಳೆಲ್ಲ ಉರ್ದುವಿನಲ್ಲೇ ಬದುಕಿರೋದು. ಅತ್ಲಕಡೆ ತುಮಕೂರು ದಾಟಿದರೆ ಬಯಲು ಸೀಮೆಯ 7 ಜಿಲ್ಲೆಗಳಲ್ಲಿ ಸಿಗುವುದು ಒಂದೇ ಕನ್ನಡ. ಇದೇ ನಿಜಗನ್ನಡ ಅನಿಸುತ್ತೆ. ಮೈಸೂರು, ಮಂಡ್ಯದಲ್ಲಿ ಕನ್ನಡವಿದೆ. ಮಂಡ್ಯ ಕನ್ನಡಕ್ಕೆ ಮಂಟೆಸ್ವಾಮಿ, ದೇವನೂರರ ಲಿಂಕ್‌ ಇದೆ. ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡಿನ ಕಡೆ ತಮಿಳಿನ ಪ್ರಭಾವ ಇರೋದರಿಂದ ಕನ್ನಡ ಉಚ್ಚಾರದ ಹಿಂದಿನ ಮ್ಯೂಸಿಕ್‌ ಬದಲಾಗಿದೆ. ಕೊಂಕಣಿ, ಬ್ಯಾರಿ ಎರಡೂ ಬೇರೆ ಭಾಷೆ. ತುಳುವಿನಲ್ಲಿ ಶೂದ್ರ ತುಳು, ಬ್ರಾಹ್ಮಣರ ತುಳು ಅನ್ನೋ ಪಂಗಡವಿದೆ. ಈ ಮೂರಕ್ಕೂ ಲಿಪಿ ಇಲ್ಲ. ಹೀಗೆ ಕರ್ನಾಟಕದ 9-10 ಬೆಲ್ಟ್ನಲ್ಲಿ ಕನ್ನಡವೇ ನಾನಾ ನಮೂನೆಯಲ್ಲಿದೆ. ಬೆಂಗಳೂರಲ್ಲಿ “ಸಿಟಿಗನ್ನಡಂ ಗೆಲ್ಗೇ’. ಇಲ್ಲಿ ಸ್ಲಂ ಕನ್ನಡ ಇದೆ. ಅಪ್ಪರ್‌ ಕ್ಲಾಸ್‌ನ ಕನ್ನಡ ಬೇರೆ. ಲೋಕಲ್‌ ಕನ್ನಡ ಅಂತಲೂ, ಹಾಸನ ಶಿವಮೊಗ್ಗ ಕಲೆಸಿದ್ದು ಇನ್ನೊಂದು ಕಡೆ, ಮಂಡ್ಯ ಮೈಸೂರ ಸೊಗಡು ಬೆರೆಸಿದ ಕನ್ನಡ ಮತ್ತೂಂದು ಕಡೆ. 

ಭಾಷೆ ಬದಲಾವಣೆಗಳನ್ನು ನಿರ್ದೇಶಕ ಗಮನಿಸುತ್ತಿರಬೇಕೇ?
ಭಾಷೆ ರಾತ್ರೋ ರಾತ್ರಿ ಬದಲಾಗೋಲ್ಲ. 100-200 ವರ್ಷ ಬೇಕು. ಆದರೆ ಮಕ್ಕಳ ಹೆಸರುಗಳು, ನಿಕ್‌ ನೇಮ್‌ಗಳು ಬದಲಾಗ್ತವೆ. ಉದಾಹರಣೆಗೆ- ಬಂಟಿ, ಬಬ್ಲು, ಬಬ್ಲಿ, ಅಪ್ಪು ಇಂಥ -6-8 ಅಕ್ಷರಗಳ ಹೆಸರು ಬದಲಾಗ್ತಾನೇ ಇರ್ತವೆ. ಹಾಗೇನೆ, ಲೋಕಲ್‌ ಸ್ಲಾಂಗ್‌- ಈ ಅನುಕರಣವಾಚಕಗಳು ಕೂಡ. ಉದಾಹರಣೆಗೆ- ಟಪಾರ್‌ ಅಂತ ಬಿದ್ದು, ಢಂ ಅಂತ ಸೌಂಡ್‌ ಬರುತ್ತೆ, ಖರಾಬಾಗಿದೆ  ಇಂಥವು. ಈ ಬಾಮ್ಮ, ಹೋಗಮ್ಮ ಅಂತ ಲಿಂಗ ಬೇಧವಿಲ್ಲದೆ ಕರೀತಾರಲ್ಲ: ಈ ಪ್ರಯೋಗದ ಹಿಂದೆ ತಮಿಳಿನ ನೆರಳಿದೆ. ಇವನ್ನೆಲ್ಲಾ ಯಾರು ಸೃಷ್ಟಿ ಮಾಡಿದ್ರೋ, ಇನ್ಯಾರು ಬದಲಾಯಿಸ್ತಿದ್ದಾರೋ ಗೊತ್ತಾಗಲ್ಲ.

ಹಾಗಾದರೆ, ನಿರ್ದೇಶಕರಿಗೆ ಭಾಷೆ ಬಗ್ಗೆ ನಿಖರತೆ ಇರಬೇಕು‌? 
ಇದ್ದರೆ ಒಳ್ಳೆಯದು. ಈತ ಪಾತ್ರಗಳ ಸೃಷ್ಟಿಕರ್ತ. ಹೀಗಾಗಿ ಭಾಷೆ ಶುದ್ಧಿ ಎಷ್ಟಿರುತ್ತದೋ ಅದಕ್ಕೆ ಉಲ್ಟಾ ಆಗಿ ಅಪಭ್ರಂಷಗಳ ಪ್ರಯೋಗಗಳೂ ಗೊತ್ತಿರಬೇಕು. ಏಕೆಂದರೆ, ಸಿನಿಮಾದಲ್ಲಿ ಓದು, ಬರಹ ಇಲ್ಲದ ಅನಕ್ಷರಸ್ಥ ಪಾತ್ರಗಳು ಶುದ್ಧವಾಗಿ ಉಚ್ಚರಿಸಲು ಆಗದು. ಧರ್ಮ, ಸ್ವಾಮೀ ಪದಗಳನ್ನೆಲ್ಲಾ ದರ್ಮ, ಸಾಮಿ ಅಂತಲೇ ಹೇಳಿಸಬೇಕಾಗುತ್ತದೆ. ಹೀಗಾಗಿ, ಶ್ರೇಷ್ಠತೆಯ ಜೊತೆ ಶ್ರೇಷ್ಠವಲ್ಲದ್ದೂ ತಿಳಿದಿರಬೇಕಾಗುತ್ತದೆ.   

ಕನ್ನಡ ಹೋಗಿಬಿಡುತ್ತೆ ಅಂತಾರಲ್ಲ…
ಏನೋ ಆಗಿಬಿಡುತ್ತೆ ಅನ್ನೋದೆಲ್ಲಾ ಶುದ್ಧ ಸುಳ್ಳು ರೀ. ಕನ್ನಡದವರು ಎಲ್ಲೇ ಇದ್ದರೂ ಕನ್ನಡಾನೇ ಕೇಳಿಸಿಕೊಳ್ತಾರೆ. ಬೀದಿಗೆ ಬಿದ್ದು, ರೊಚ್ಚಿಗೆದ್ದು ನಾನು ಕನ್ನಡಿಗ ಅಂತ ಹೇಳೊಲ್ಲ ಅನ್ನೋದು ಬಿಟ್ಟರೆ, ಅವನ ಪಾಡಿಗೆ ಅವನು ಏನೋ ಮಾಡ್ತಿರ್ತಾನೆ. ಭಾಷೆ ಸಾಯೋದೂ ಇಲ್ಲ; ಸವೆಯೋದೂ ಇಲ್ಲ. ನಾವು, ನೀವು ಇದನ್ನೇ ತೌಡು ಕುಟ್ಟಿà ಕುಟ್ಟಿà ಈ ಆತಂಕ ಹುಟ್ಟಿಕೊಂಡಿದೆ ಅಷ್ಟೇ. ತಂತ್ರಜ್ಞಾನ ಮುಂದುವರಿದಂತೆ ಪ್ರಾದೇಶಿಕ ಭಾಷೆಗಳ ಅನಿವಾರ್ಯ ಶುರುವಾಗಿದೆ. ನಾವು, ನೀವೆಲ್ಲ ಈಗ ಕನ್ನಡದಲ್ಲೇ ತಾನೇ ಟೈಪು ಮಾಡ್ತಾ ಇದ್ದೀವಿ ಅಂದ್ರೆ ಭಾಷೆ ಸತ್ತಿಲ್ಲ ಅಂತ. 

ಭಾಷೆ ಅನ್ನೋದು ಕಮ್ಯುನಿಕೇಷನ್‌ ಅಷ್ಟೇ. ನಾನು ಮಾತನಾಡಿದ್ದು ನಿಮಗೆ ಅರ್ಥವಾಗಬೇಕು. ನೀವು ಹೇಳಿದ್ದು ನನಗೆ ತಿಳೀಬೇಕು. ಭಾರತ್‌ ಮಾತಾಕಿ ಜೈ ಅನ್ನೋದು ಸರಿಯಾದ ಉಚ್ಚಾರ- ಅವನು ಬಾರತ್‌ ಮಾತಾಕಿ ಜೈ ಅಂದರೆ ಅದೂ ಸರಿ. ಅವನಿಗೆ “ಭಾ’ ಒತ್ತಿ ಉಚ್ಚಾರ ಮಾಡೋಕೆ ಬರೋಲ್ಲ. ಏನು ಮಾಡೋದು? ಅವನಿಗೆ ಬೇಕಿಲ್ಲ. ಕೇಳಿದ ನಮಗೆ ಅರ್ಥವಾಯಿತಾ? ಅದು ಮುಖ್ಯ. ಈ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ಬರೆಯುವ ವಿಚಾರಕ್ಕೆ ಬಂದರೆ ಬೇರೆ. ಪಾಪ, ಕೆಲವರ ಶ್ವಾಸದ ರಚನೆ ಹಾಗಿರುತ್ತದೆ. ತಮಿಳರಲ್ಲಿ “ಹ ‘ ಉಚ್ಚಾರ ಸ್ವಲ್ಪ ಕಷ್ಟ. ಹೀಗಾಗಿ, ಆ ಪದವನ್ನೇ ತೆಗೆದು, ಅದಕ್ಕೆ ಬದಲಾಗಿ “ಗ’ ಬಳಸುತ್ತಾರೆ.  ನಮಗೆ ಕಮಲಹಾಸನ್‌, ಅವರಿಗೆ ಕಮಲಗಾಸನ್‌. ಹಾಗಂತ ಅವರು ಮಾತಾಡೋದನ್ನು ಆಡ್ಕೊಳ್ಳಬಾರದು. ತಪ್ಪಾಗುತ್ತೆ. 

ಇದಕ್ಕೆ ಇನ್ನೊಂದು ಕಥೆ ಹೇಳ್ತೀನಿ. 
ಒಂದು ದಿನ ನನ್ನ ಮಗಳು ನಿದ್ದೆ ಮಾಡ್ತಾ ಇದ್ದವಳು ಮಧ್ಯರಾತ್ರಿ ಎದ್ದಳು. ನಾನು ಯಾವುದೋ ಸ್ಕ್ರೀಪ್ಟ್ ಓದ್ತಾ ಕೂತಿದ್ದೆ.  ಅವಳು “ಅಪ್ಪಾ ನೀರು ಕುಡೀಬೇಕು’ ಅಂದಳು. ನಾನು – “ಇಲ್ಲೇ ಕೂತಿದ್ದೀನಲ್ಲಮ್ಮಾ. ಹೋಗಿ ಕುಡಿ’ ಅಂದೆ. 
“ಬಯ ಆಗ್ತಿದೆ ಅಪ್ಪಾ’ ಅಂದಳು.
 “”ಅದು ಬಯ ಅಲ್ಲ ಕಣೇ, “ಭಯ’ ಅನ್ನು “ಭ’ಕ್ಕೆ ಹೊಕ್ಕಳು 
 ಸೀಳು” ಅಂದೆ.  
ಅದಕ್ಕೆ ಅವಳು- “ಹಂಗೇ ಹೇಳಿದ್ರೂ ಭಯ ಆಗುತ್ತೆ ಅಪ್ಪಾ’ ಅಂದ್ಳು ನೋಡಿ… ಮಂಡೆ ಬಿಸಿಬಿಸಿಯಾಯ್ತು.  ಮಗಳು ಹೇಳಿದ್ದು ಸರಿ ಅಲ್ವಾ? ಅನಿಸಿತು. 

ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next