Advertisement

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ :16ನೇ ವಾರ್ಷಿಕೋತ್ಸವ

12:52 PM Nov 15, 2017 | Team Udayavani |

ಕಲ್ಯಾಣ್‌: ತಮಿಳು ಹಾಗೂ ಮಲಯಾಳಿ ಭಾಷಿಕರ ಭಾಷಾಭಿಮಾನವನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗೆಗಿನ ಕೀಳರಿಮೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ವಿಷಾದನೀಯ ಸಂಗತಿಯಾಗಿದೆ ಎಂದು ಹಿರಿಯ ಸಾಹಿತಿ ಡಾ| ವ್ಯಾಸರಾವ್‌ ನಿಂಜೂರು ಅವರು ನುಡಿದರು.

Advertisement

ನ. 12ರಂದು ಕಲ್ಯಾಣ್‌ ಪಶ್ಚಿಮದ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರದ 16ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಬರಲು ಕರ್ನಾಟಕ ಬಹುಭಾಷಿಕತ್ವವೆ ಕಾರಣವಾಗಿದೆ. ಇಲ್ಲಿಯ ಜನರ ಮಾತೃಭಾಷೆಗಳು ಬೇರೆ ಬೇರೆಯಾಗಿದ್ದು, ತಮಿಳುನಾಡು ಹಾಗೂ ಕೇರಳಲ್ಲಿ ಅಲ್ಲಿಯ ಭಾಷೆ ಬಿಟ್ಟರೆ, ಬೇರೆ ಮಾತೃಭಾಷೆಗಳಿಲ್ಲ. ಕನ್ನಡದ ಎಷ್ಟೋ ಸಾಹಿತಿಗಳ ಮಾತೃಭಾಷೆ ಕನ್ನಡವಾಗಿರಲಿಲ್ಲ. ಆದರೂ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಕೃಷಿ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಕನ್ನಡಕ್ಕೆ 8 ಜ್ಞಾನ ಪೀಠವನ್ನು ತಂದುಕೊಟ್ಟಿರುವುದು  ಹೆಮ್ಮೆಯ ಸಂಗತಿಯಾಗಿದೆ. ಕನ್ನಡವನ್ನು ಮಾತನಾಡಿದಂತೆ ಬರೆಯುವುದು ಹಾಗೂ ಬರೆದಂತೆ ಓದಬಹುದು. ಇಂತಹ ಭಾಷೆ ಬೇರೊಂದಿಲ್ಲ. ಕನ್ನಡದಲ್ಲಿರುವ ರಗಳೆ ಮತ್ತು ಷಟ³ದಿಗಳು ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳಿಗೆ ಸ್ವಂತ ಲಿಪಿಯೂ ಇಲ್ಲ. ಆದರೆ ಇದರ ಮಧ್ಯೆ ಸಿಲುಕಿದ  ಕನ್ನಡ ಭಾಷೆ ಇಂದು ಸೊರಗಿ ಹೋಗಿದೆ. 

ಆದರೂ ಕನ್ನಡ ಭಾಷೆಗೆ ಸಾವಿಲ್ಲ. ಅದು ನಿತ್ಯ ಹಾಗೂ ನಿರಂತರವಾದ ಶ್ರೀಮಂತ ಭಾಷೆಯಾಗಿದ್ದು, ಇಂದು ದೃಶ್ಯ ಮಾಧ್ಯಮಗಳ ಯುಗದಲ್ಲೂ ಕನ್ನಡ ಸಾಹಿತ್ಯದಲ್ಲಿ ಓದುಗರು ಹೆಚ್ಚಾಗುತ್ತಿದ್ದು, ಕತೆ, ಕಾದಂಬರಿಗಳನ್ನು ಓದುವವರಿಗಿಂತಲೂ ವೈಚಾರಿಕ ಸಾಹಿತ್ಯವನ್ನು ಓದುವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ವಿಶೇಷತೆಯಾಗಿದೆ ಎಂದು ನುಡಿದು,  ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ನ ಕಾರ್ಯವನ್ನು ಶ್ಲಾಘಿಸಿ ಕೇಂದ್ರದ ಉತ್ತರೋತ್ತರ ಅಭಿವೃದ್ಧಿಗೆ ಶುಭ ಕೋರಿದರು.

ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿ ಮುಂಬಯಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗ ಅಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಮಾತನಾಡಿ, ನಮ್ಮ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ಮಾಡಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ನಾವು ನಮ್ಮ ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜ ಸೇವೆ ಮಾಡಿದರೆ ನಮಗೆ ಪರಮಾತ್ಮ ಯಶ ನೀಡುತ್ತಾನೆ ಎಂದು ನುಡಿದು ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಕಲ್ಯಾಣ ಕಸ್ತೂರಿ ವಾರ್ಷಿಕ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಘದ ಹಿರಿಯ ಅರ್ಥತಜ್ಞ ಟಿ. ಮೋಹನ್‌ದಾಸ್‌ ಪೈ, ಉದ್ಯಮಿ ಲೋಹಿತಾಕ್ಷ ಶೆಟ್ಟಿ ದಂಪತಿ, ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಚನ್ನವೀರ ಅಡಿಗಣ್ಣವರ ದಂಪತಿ ಹಾಗೂ ಎಸ್‌. ಎಂ. ಸಾಲಿಮಠ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಹಿರಿಯ ಸಾಹಿತಿಗಳಾದ ಡಾ| ಜಿ. ಡಿ. ಜೋಶಿ, ಖ್ಯಾತ ಓಡಿಸ್ಸಿ ನೃತ್ಯ ಕಲಾವಿದೆ ಆಶಾ ನಂಬಿಯಾರ್‌ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಜತೆ ಕಾರ್ಯದರ್ಶಿ ಪ್ರಕಾಶ್‌ ಹೆಗ್ಡೆ ಕುಂಠಿನಿ, ಪುಟ್ಟಪ್ಪ ಹಾನಗಲ್‌, ಕರುಣಾ ನಾಯಕ್‌, ಪ್ರಕಾಶ್‌ ನಾಯಕ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ಅಂಬರ್‌ನಾಥ್‌ ಕನ್ನಡ ಸರಕಾರಿ ಶಾಲೆಯ 16 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಪ್ರತಿಭಾವಂತ ತುಳು-ಕನ್ನಡಿಗ ಮಕ್ಕಳನ್ನು ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.

Advertisement

ಸಂಸ್ಥೆಯ ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಕಾಶ್‌ ಹೆಗ್ಡೆ ಕುಂಠಿನಿ ಕಾರ್ಯಕ್ರಮ ನಿರ್ವಹಿಸಿದರು. ಎಂ. ಆರ್‌. ಹೊಸಕೋಟೆ ವಂದಿಸಿದರು. ಕಲ್ಯಾಣ್‌ನ ವಿವಿಧ ಸಂಘಟನೆಗಳ ಸದಸ್ಯರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಸು ಸಿರಂಗಿ ಅವರಿಂದ ಸಂಗೀತ ಸಂಜೆ, ಚಂದ್ರಹಾಸ ರೈ ಬಳಗದಿಂದ ಜಾನಪದ ಹಾಗೂ ಗಿಗಿ ಪದಗಳು ಗಮನ ಸೆಳೆಯಿತು. ಭಾರತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಗೌರವ ಕಾರ್ಯದರ್ಶಿ ಸಂಜೀವ ಹಿರೇಮಠ ವಾರ್ಷಿಕ ವರದಿ ಮಂಡಿಸಿದರು. ಗಣ್ಯರಾದ ದಿವಾಕರ ಶೆಟ್ಟಿ ಇಂದ್ರಾಳಿ, ಗೋಪಾಲ್‌ ಹೆಗ್ಡೆ, ಗುರುದೇವ್‌ ಭಾಸ್ಕರ್‌ ಶೆಟ್ಟಿ, ಡಾ| ಸುರೇಂದ್ರ ಶೆಟ್ಟಿ, ಡಾ| ರಘುನಾಥ್‌ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಪದಾಧಿಕಾರಿಗಳಾದ ಸಂಜೀವ ಹಿರೇಮಠ, ಪ್ರಕಾಶ್‌ ನಾಯಕ್‌, ಎಂ. ಆರ್‌. ಹೊಸಕೋಟಿ, ಅಕ್ಕ ಮಹಾದೇವಿ ಹಿರೇಮಠ, ಜಿ. ಆರ್‌. ಮೂರ್ತಿ, ಗಿರಿಜಾ ಸೊಗಲದ, ಭಾರತಿ ಭೋಜ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಪುಟ್ಟಪ್ಪ ಹಾನಗಲ್‌, ಜಿ. ವಿಶ್ವನಾಥ್‌, ಬಸವ ಪ್ರಭು ಜತ್ತಿ, ಕೊಟ್ರೇಶ್‌ ಮಠ, ಸದಾಶಿವ ಕೆ. ಶೆಟ್ಟಿ, ಮಾರುತಿ ಗಜಕೋಶ ಮೊದಲಾದವರು ಉಪಸ್ಥಿತರಿದ್ದರು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಬಿ. ಎಸ್‌. ಕುರ್ಕಾಲ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯೋತ್ಸವಗಳಂತಹ ಪ್ರಶಸ್ತಿಗಳಲ್ಲಿ ತುಳು-ಕನ್ನಡಿಗರಲ್ಲಿ ಭೇದ‌-ಭಾವ ಮಾಡಬಾರದು. ಅವಿರತ ಶ್ರಮದಿಂದಲೇ ಈ ಪ್ರಶಸ್ತಿಗಳು ಲಭಿಸುತ್ತದೆ. ಕಲ್ಯಾಣ್‌ ಕನ್ನಡ ಸಾಂಸ್ಕೃತಿಕ ಕೇಂದ್ರದ ಶೈಕ್ಷಣಿಕ, ಸಾಮಾಜಿಕ ಕಳಕಳಿ ಪ್ರಶಂಸನೀಯ 
   – ಬಿ. ಶಾಂತಾರಾಮ ಶೆಟ್ಟಿ (ಕಾರ್ಯಾಧ್ಯಕ್ಷರು: ಬಂಟರವಾಣಿ ಮಾಸಿಕ).

ಸಾಹಿತಿ ವ್ಯಾಸರಾವ್‌ ನಿಂಜೂರು ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಹೆಮ್ಮೆಯಾಗುತ್ತಿದೆ. ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಹಾಗೂ ಕಲ್ಯಾಣ್‌ ಕರ್ನಾಟಕ ಸಂಘಗಳು ಸಹೋದರ ಸಂಸ್ಥೆಯಿದ್ದಂತೆ. ಸಂಸ್ಥೆಯ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ 
   – ಟಿ. ಎಸ್‌. ಉಪಾಧ್ಯಾಯ (ಮಾಜಿ ಅಧ್ಯಕ್ಷರು : ಕಲ್ಯಾಣ್‌ ಕರ್ನಾಟಕ ಸಂಘ).

ಕಲ್ಯಾಣ್‌ ಕನ್ನಡ ಸಾಂಸ್ಕೃತಿಕ ಕೇಂದ್ರ ನಡೆದು ಬಂದ ದಾರಿ ರೋಚಕವಾಗಿದೆ. ಸಂಸ್ಥೆಯ ಯೋಜನೆ, ಯೋಚನೆಗಳಿಗೆ ಎಲ್ಲರ ಸಹಕಾರ ಅಗತ್ಯ. ಸಂಘದ ನೂತನ ಕಟ್ಟಡದ ಕನಸನ್ನು ನನಸಾಗಿಸಲು ತುಳು-ಕನ್ನಡಿಗರು ಒಮ್ಮತದಿಂದ ಸಹಕರಿಸಬೇಕು. ಕನ್ನಡದ ಕೈಂಕರ್ಯವನ್ನು ನಿಭಾಯಿಸಲು  ನಮ್ಮ ಸಂಸ್ಥೆಯು ಸದಾ ಬದ್ಧವಾಗಿದೆ 
– ಜ್ಯೋತಿ ಪ್ರಕಾಶ್‌ ಹೆಗ್ಡೆ ಕುಂಠಿನಿ (ಅಧ್ಯಕ್ಷರು : ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌). 

Advertisement

Udayavani is now on Telegram. Click here to join our channel and stay updated with the latest news.

Next