Advertisement

ಅಣಿ ವೈವಿಧ್ಯದ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ

12:03 PM Jan 22, 2018 | |

ಮಹಾನಗರ: ಭೂತಾರಾಧನೆಯ ಅಣಿ ವೈವಿಧ್ಯವನ್ನು ಸಾರುವ ಹಾಗೂ ಬಣ್ಣಗಾರಿಕೆಯನ್ನು ವಿವರಿಸುವ 380 ಪುಟಗಳ ‘ಅಣಿ ಅರದಲ-ಸಿರಿ ಸಿಂಗಾರ’ ಪುಸ್ತಕದ ವಿನ್ಯಾಸ ಹಾಗೂ ಮುದ್ರಣ ಸೌಂದರ್ಯಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ‘ಪುಸ್ತಕ ಸೊಗಸು 2016-17’ರ ಪ್ರಥಮ ಬಹುಮಾನದ ಗೌರವ ಪ್ರದಾನಿಸಿದೆ. ಕರಾವಳಿ ಕರ್ನಾಟಕದ ಸಂಸ್ಕೃತಿ ಕಲೆಗಳನ್ನು ಪರಿಚಯಿಸುವ ವಿನೂತನ ಪ್ರಯತ್ನಕ್ಕೆ ಈ ಗೌರವ ದೊರೆತಿದೆ.

Advertisement

ವಿಶಿಷ್ಟ ಕಲೆ
ಭೂತಾರಾಧನೆ ಕರಾವಳಿ ಕರ್ನಾಟಕದ ವಿಶಿಷ್ಟ ಕಲೆ. ಇದು ಆರಾಧನ ರಂಗ ಭೂಮಿಯೂ ಹೌದು. ಈ ಕುರಿತ ಸಮಗ್ರ ವಿಚಾರಗಳನ್ನು ಬಿತ್ತರಿಸುವ ಕಾರ್ಯವನ್ನು ‘ಅಣಿ ಅರದಲ-ಸಿರಿ ಸಿಂಗಾರ’ ಪುಸ್ತಕ ಮಾಡಿದೆ. ಎಚ್‌.ಬಿ.ಎಲ್‌. ರಾವ್‌ ಪ್ರಧಾನ ಸಂಪಾದಕತ್ವದ, ಕೆ.ಎಲ್‌. ಕುಂಡಂತಾಯ ಸಂಪಾದಕತ್ವದ ಈ ಪುಸ್ತಕದ ಸಂಪಾದಕ ಸಮಿತಿಯಲ್ಲಿ ಪ್ರೊ| ಹೆರಂಜೆ ಕೃಷ್ಣ ಭಟ್‌, ಡಾ| ವೈ.ಎನ್‌. ಶೆಟ್ಟಿ, ಡಾ| ಅಶೋಕ್‌ ಆಳ್ವ, ಡಾ| ಬಿ. ಜನಾರ್ದನ ಭಟ್‌ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಂಗಳೂರಿನ ಆಕೃತಿ ಪ್ರಿಂಟ್ಸ್‌ನಲ್ಲಿ ವಿನ್ಯಾಸಗಾರ ಕಲ್ಲೂರು ನಾಗೇಶ್‌ ಅವರ ವಿಶೇಷ ಕಾಳಜಿಯಿಂದ ಪುಸ್ತಕ ಸೊಗಸು ಪಡೆದುಕೊಂಡಿದೆ.

2016ರಲ್ಲಿ ಬಿಡುಗಡೆ
ಕನ್ನಡ ಸಾಹಿತ್ಯ ಪರಿಷತ್‌ ಮಹಾರಾಷ್ಟ್ರ ಘಟಕ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಎಂಜಿಎಂ ಕಾಲೇಜು ಉಡುಪಿ ಇದರ ಜಂಟಿ ಆಶ್ರಯದಲ್ಲಿ ‘ಅಣಿ ಅರದಲ, ಸಿರಿ ಸಿಂಗಾರ’ ಅಧ್ಯಯನ ದಾಖಲೀಕರಣ ಕಮ್ಮಟದ ಹುಟ್ಟುವಳಿಯಾಗಿ ಈ ಗ್ರಂಥ ಮುಂಬಯಿಯ ಪ್ರತಿಷ್ಠಿತ ಸಾಹಿತ್ಯ ಬಳಗವು ಪ್ರಕಟಿಸಿದೆ. 2016ರ ಮಾರ್ಚ್  ನಲ್ಲಿ ಮುಂಬಯಿಯಲ್ಲಿ ನಡೆದ 22ನೇ ತುಳು ಪರ್ಬದಲ್ಲಿ ಈ ಗ್ರಂಥ ಬಿಡುಗಡೆಯಾಗಿದೆ.

ಅಣಿ ವೈವಿಧ್ಯ, ಮುಖವರ್ಣಿಕೆ ವಿಶೇಷ
ಕಮ್ಮಟದಲ್ಲಿ ದಾಖಲಿಸಿಕೊಂಡ ಚಿತ್ರಗಳನ್ನು ಪ್ರಧಾನವಾಗಿ ಬಳಸಿಕೊಂಡು ಉಳಿದಂತೆ ದೈವ ನೇಮದ ‘ಕಟಿ ಬೈರೂಪ’ದ ಚಿತ್ರಗಳನ್ನು ಹಾಗೂ ವಿಶಿಷ್ಟ ಸಂದರ್ಭಗಳ (ಕೋಲ, ನೇಮದ) ಚಿತ್ರಗಳನ್ನು ಬೇರೆ ಮೂಲಗಳಿಂದ ಪಡೆದು ಈ ಗ್ರಂಥದಲ್ಲಿ ಬಳಸಿಕೊಳ್ಳಲಾಗಿದೆ. ಸುಮಾರು 50 ಕಲಾವಿದರು, 25 ಮಂದಿ ಅರದಲದ ಬಣ್ಣಕ್ಕೆ ಹಾಗೂ ರೇಖೆಗಳಿಗೆ ಮುಖ ಕೊಟ್ಟಿದ್ದಾರೆ. ಭೂತಾರಾಧನೆಗೆ ಭವ್ಯತೆಯ ಪ್ರಭಾವಳಿಯನ್ನು ಹಾಗೂ ಬಣ್ಣದ ಬೆಡಗನ್ನು ಒದಗಿಸುವ ‘ಅಣಿ’ ಹಾಗೂ ‘ಅರದಲ’ವನ್ನು ಪ್ರಧಾನವಾಗಿ ಗಮನಿಸಿ 100ಕ್ಕಿಂತಲೂ ಹೆಚ್ಚು ಅಣಿ ವೈವಿಧ್ಯಗಳ ಹಾಗೂ ಮುಖವರ್ಣಿಕೆಯ ಕ್ರಮಗಳನ್ನು ಈ ಪುಸ್ತಕದಲ್ಲಿ ದಾಖಲಿಸಿರುವುದು ವಿಶೇಷ. ತೆಂಗಿನ ಎಳೆಯ ಗರಿ (ಸಿರಿ), ಅಣಿ ನಿರ್ಮಾಣದ ವಿಧಾನ, ಜಕ್ಕಲಣಿ.. ಹೀಗೆ ನಾನಾ ವಿಚಾರದ ಬಗ್ಗೆ ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.

ವಿದ್ವಾಂಸರ ಲೇಖನ
ಗಗ್ಗರ ಧರಿಸಿ, ಮುಕ ಏರಿ ದೈವದ ಪರಿಪೂರ್ಣತೆಯ ಬಿಂಬದ ಚಿತ್ರಗಳನ್ನು ಕೋಲ, ನೇಮ, ಮೆಚ್ಚಿ, ಗೆಂಡ, ಬಂಡಿ ಮುಂತಾದ ಸಂದರ್ಭ ಸೆರೆಹಿಡಿಯಲಾಗಿದೆ. ದೈವಾರಾಧನೆ ಸಂಬಂಧಿತವಾಗಿ ನಾಡಿನ ಶ್ರೇಷ್ಠ ವಿದ್ವಾಂಸರು ಬರೆದ ಲೇಖನಗಳು ಈ ಪುಸ್ತಕಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸಿದೆ.

Advertisement

ಅಣಿಯ ನಿರ್ಮಾಣಕ್ಕೆ ಬೇಕಾಗುವ ವ್ಯವಸ್ಥೆಗಳು ಹಾಗೂ ವಿಧಾನವನ್ನು ಪುಸ್ತಕದಲ್ಲಿ ಛಾಯಾಚಿತ್ರದ ಮೂಲಕ ತೋರಿಸಲಾಗಿದೆ. ಕಾಲಿಗೆ ಕಟ್ಟಿಕೊಳ್ಳುವ ದೈವದ ಪ್ರಧಾನ ಆಭರಣ ಗಗ್ಗರ, ಕೆಬಿನ, ಕಂಚಿಯ ಗುಬ್ಬೆಸರ, ಕೆಕ್ಕಿದಲೆ, ದಂಡೆ ಕಾಜಿ, ಬೆಳ್ಳಿಯ ಸೊಂಟದ ಕಾಜಿ, ಪ್ರಾಚೀನ ತಲೆಮಣಿ ಹೀಗೆ ನಾನಾ ಪ್ರಕಾರದ ‘ಪದ್ದೆಯಿ’ಗಳನ್ನು ಪುಸ್ತಕದಲ್ಲಿ ಪರಿಚಯಿಸಲಾಗಿದೆ. 

1435 ಭೂತ/ದೈವಗಳ ಹೆಸರು…!
ಡಾ| ಲಕ್ಷ್ಮೀ ಜಿ. ಪ್ರಸಾದ್‌ ಅವರು ತಮ್ಮ ಕ್ಷೇತ್ರ ಕಾರ್ಯದ ಮೂಲಕ ಸಾವಿರದ ನಾಲ್ಕುನೂರ ಮೂವತ್ತ ಐದು ಭೂತ/ದೈವಗಳನ್ನು ಗುರುತಿಸಿ ‘ಅಣಿ ಅರದಲ-ಸಿರಿ ಸಿಂಗಾರ’ ಪುಸ್ತಕದಲ್ಲಿ ಪಟ್ಟಿ ಮಾಡಿರುವುದು ವಿಶೇಷ. ಅರಸು ಕುಂಜರಾಯ ದೈವ, ಅರಸು ಕುರಿಯಾಡಿತ್ತಾಯ ದೈವ, ಉಳ್ಳಾಲ್ತಿ ಅಮ್ಮ, ಧೂಮಾವತಿ ದೈವ, ಜಾರಂದಾಯ, ಬಬ್ಬರ್ಯ ನೇಮ, ಕಾಪುವಿನ ಪಿಲಿಕೋಲ, ಮರ್ಲ್ಮಾಣಿ ಭೂತ, ವಿಷ್ಣುಮೂರ್ತಿ, ಬವನೊ, ಹನುಮಂತ ಕೋಲ ಜತೆಕುಲೆ ಮತ್ತು ನಾಯಕ, ಕುಲೆಮಾನಿಗ, ಕುಲೆಭೂತ, ಕನ್ನಡ ಯಾನೆ ಪುರುಷ ಭೂತ, ಕನ್ನಡ ಭೂತ, ಕನ್ನಡ ಬೀರ, ಕಕ್ಕಂಬಿಲ ಸರ್ಪ ಕೋಲ, ಮಾಯಂದಾಲ್‌, ಮೈಸಂದಾಯ, ಪಿಲಿಚಂಡಿ, ಜುಮಾದಿ ಬಂಟ ಸೇರಿದಂತೆ ಬಹುತೇಕ ಎಲ್ಲ ಭೂತ/ದೈವಗಳ ಹೆಸರನ್ನು ಉಲ್ಲೇಖೀಸಲಾಗಿದೆ.

ಕರಾವಳಿಯ ಸಂಸ್ಕೃತಿಗೆ ದೊರಕಿದ ಗೌರವ
ಭೂತಾರಾಧನೆ ಸಂಸ್ಕೃತಿಯನ್ನು ಎಲ್ಲ ವೈವಿಧ್ಯತೆಗಳ ಮುಖೇನವಾಗಿ ಪ್ರಾಜ್ಞರ ಅಭಿಪ್ರಾಯಗಳನ್ನು ಪಡೆದುಕೊಂಡು ಮಾಡಿರುವ ‘ಅಣಿ ಅರದಲ-ಸಿರಿ ಸಿಂಗಾರ’ ಪುಸ್ತಕವು ತನ್ನ ಸೊಗಸಿನ ಮೂಲಕವೇ ರಾಜ್ಯಮಟ್ಟದ ಪ್ರಶಸ್ತಿಗೆ ಪಾತ್ರವಾಗಿರುವುದು ಕರಾವಳಿಯ ಸಂಸ್ಕೃತಿಗೆ ದೊರಕಿದೆ ದೊಡ್ಡ ಗೌರವ. ಪುಸ್ತಕದ ರೂಪ ಬಹಳಷ್ಟು ಆಕರ್ಷಕವಾಗಿ ಮೂಡಿಬಂದಿದೆ.
ಪ್ರದೀಪ್‌ ಕುಮಾರ್‌ ಕಲ್ಕೂರ,
 ಅಧ್ಯಕ್ಷರು, ಜಿಲ್ಲಾ ಕಸಾಪ.

ಸಮಗ್ರ ವಿವರ ದಾಖಲು
ಭೂತಾರಾಧನೆ ಕುರಿತಂತೆ ಸಮಗ್ರವಾಗಿ ತಿಳಿದು ಸಮಾಜಕ್ಕೆ ಸಮಗ್ರವಾಗಿ ವಿವರಿಸುವ ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಕಾರ್ಯಾಗಾರವನ್ನು ಆಯೋಜಿಸಿ, ಅದನ್ನು ದಾಖಲಿಸಿ ಪುಸ್ತಕವನ್ನು ಸಿದ್ಧಗೊಳಿಸಲಾಗಿತ್ತು. ಕೆ.ಎಲ್‌. ಕುಂಡಂತಾಯ
ಸಂಪಾದಕತ್ವದಲ್ಲಿ, ಕಲ್ಲೂರು ನಾಗೇಶ್‌ ಅವರ ವಿಶೇಷ ಕಾಳಜಿಯಿಂದ ಈ ಪುಸ್ತಕ ಸೊಗಸು ಪಡೆದುಕೊಂಡು ಇದೀಗ ಗೌರವಕ್ಕೆ ಪಾತ್ರವಾಗಿರುವುದು ಖುಷಿಯ ವಿಚಾರ.
ಎಚ್‌.ಬಿ.ಎಲ್‌. ರಾವ್‌,
   ಪ್ರಧಾನ ಸಂಪಾದಕ

Advertisement

Udayavani is now on Telegram. Click here to join our channel and stay updated with the latest news.

Next