Advertisement

ನಗುತಾ ನಗುತಾ ನಿವೇದಿತಾ “ಶುದ್ಧಿ’ಹುಡ್ಗಿಯ ಸುದ್ದಿ ಕೇಳ್ರಪ್ಪೋ…

03:45 AM Apr 05, 2017 | Harsha Rao |

ಇವರು ನಿವೇದಿತಾ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯರ ಸಾಲಿನಲ್ಲಿ ಸ್ಥಾನ ಪಡೆದಿರುವ ನಟಿ. ಸದಾ ಸದ್ದು ಮಾಡುತ್ತಾ ಸುದ್ದಿಯಲ್ಲಿರುವ ಅಭಿನೇತ್ರಿ ಇವರಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಥಟ್‌ ಅಂತ ಪ್ರತ್ಯಕ್ಷರಾಗಿ ಉತ್ತಮ ಪಾತ್ರ ಮತ್ತು ಶಕ್ತ ಪಾತ್ರ ಪೋಷಣೆಯಿಂದ ನಮ್ಮನ್ನೆಲ್ಲ ಬೆರಗಾಗಿಸುತ್ತಲೇ ಇರುತ್ತಾರೆ. “ಅವ್ವ’, “ಡಿಸೆಂಬರ್‌ 1′, “ಮಾತಾಡ್‌ ಮಾತಾಡು ಮಲ್ಲಿಗೆ’ ಚಿತ್ರಗಳಲ್ಲಿ ಅಭಿನಯಿಸಿ ಭೇಷ್‌ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಚಿತ್ರ “ಶುದ್ಧಿ’ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ…

Advertisement

1. ಒಂದು ಇಂಗ್ಲಿಷ್‌ ಪದಕ್ಕೆ ಮತ್ತೂಂದು ಇಂಗ್ಲಿಷ್‌ ಪದವನ್ನು ಬೆಸೆಯಲು ಮಾತ್ರ ನಾವು ಕನ್ನಡವನ್ನು ಬಳಸುತ್ತೇವೆ. ಎಲ್ಲಾ ಇಂಗ್ಲಿಷ್‌ ಪದಗಳಿಗೂ ಪರ್ಯಾಯವಾಗಿ ಸುಂದರವಾದ ಕನ್ನಡ ಪದಗಳಿರುತ್ತವೆ. ನಾವು ಅದನ್ನು ನಮ್ಮ ನಿತ್ಯದ ಜೀವನದಲ್ಲಿ ಬಳಸುವುದೇ ಇಲ್ಲ. ನಾನೊಂದು ದೃಢಸಂಕಲ್ಪ ಮಾಡಿದ್ದೇನೆ. ನಾನು ಉಪಯೋಗಿಸುವ ಪ್ರತಿ ಇಂಗ್ಲಿಷ್‌ ಪದಕ್ಕೂ ಕನ್ನಡದಲ್ಲಿ ಅರ್ಥ ಹುಡುಕಿ ಅದನ್ನು ನನ್ನ ಪದಕೋಶಕ್ಕೆ ಸೇರಿಸಿಕೊಳ್ಳುತ್ತೇನೆ. ಕನ್ನಡ ಮಾತನಾಡುವಾಗ ಸ್ವತ್ಛ ಕನ್ನಡವನ್ನೇ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. 

2. ನನ್ನ ಹುಡುಗನಿಗೆ ನನ್ನ ಮೇಲೆ ಲವ್‌ ಅಟ್‌ ಫ‌ಸ್ಟ್‌ ಸೈಟ್‌ ಆಯಿತಂತೆ. ನಾವಾಗ 10ನೇ ತರಗತಿಯಲ್ಲಿದ್ವಿ. ಆದಾದ 10 ವರ್ಷಗಳ ನಂತರ ನಾನವನ ಪ್ರೀತಿಯನ್ನು ಒಪ್ಪಿಕೊಂಡೆ. ಮಧ್ಯದಲ್ಲಿ 5 ವರ್ಷಗಳು ನಾವು ಸಂಪರ್ಕದಲ್ಲೇ ಇರಲಿಲ್ಲ. ಒಮ್ಮೆ ನಾನವನನ್ನು ಪ್ರೇಮಿ ಎಂದು ಸ್ವೀಕರಿಸಿದ ಬಳಿಕ ಅವನನ್ನು ಬಿಟ್ಟು ಬದುಕುವ ಯೋಚನೆ ಕನಸಲ್ಲೂ ಬಂದಿಲ್ಲ. ನಮ್ಮದೊಂದು ಟೆರೇಸ್‌ ಗಾರ್ಡನ್‌ ಇದೆ. ಅಲ್ಲಿ ಅವನೊಂದಿಗೆ ಕುಳಿತು ಸೂರ್ಯೋಯ, ಸೂರ್ಯಾಸ್ತ ನೋಡುವುದರಲ್ಲಿ ಸಿಗುವ ಮುದ ಬೇರಾವುದರಲ್ಲೂ ಸಿಗುವುದಿಲ್ಲ.

– ನಿವೇದಿತಾ, ಸ್ಮಿತಾ ತುಂಬಾ ಗೊಂದಲವಾಗುತ್ತದೆ. ನಿಮ್ಮ ನಿಜವಾದ ಹೆಸರು ಯಾವುದು?
ಸ್ಮಿತಾ. ಸಂಖ್ಯಾಶಾಸ್ತ್ರŒದ ಪ್ರಕಾರ ನಿವೇದಿತಾ ಎಂದು ಬದಲಿಸಿಕೊಂಡೆ. ನಾನೇನು ನನ್ನ ಹೆಸರನ್ನು ಬದಲಿಸಲೇಬೇಕೆಂದು ಸಂಖ್ಯಾಶಾಸ್ತ್ರಜ್ಞರನ್ನು ಹುಡುಕಿಕೊಂಡು ಹೋಗಿರಲಿಲ್ಲ. ಚಿತ್ರರಂಗಕ್ಕೆ ಬಂದು ಕೆಲ ದಿನಗಳ ಬಳಿಕ ಪರಿಚಿತರೊಬ್ಬರು  ನನಗೆ ಹೆಸರು ಬದಲಿಸಿದರೆ ಅಧೃಷ್ಟ ಖುಲಾಯಿಸುತ್ತದೆ ಎಂದು ಸೂಚಿಸಿದರು. ಆದಕ್ಕೆ ಬದಲಿಸಿದೆ.

– ಹೆಸರು ಬದಲಿಸಿದ ಮೇಲೆ ಅದೃಷ್ಟ ಬದಲಾಯಿತೇ?
(ನಗು….) ಮೊದಲು ನನ್ನ ಅದೃಷ್ಟ ಚೆನ್ನಾಗಿಯೇ ಇತ್ತು. ಹೆಸರು ಬದಲಿಸಿದ ಬಳಿಕ ಅಂಥ ಬದಲಾವಣೆಯೇನೂ ನನ್ನ ಜೀವನದಲ್ಲಿ ಆಗಿಲ್ಲ. ಹೇಳಬೇಕೆಂದರೆ ನನಗೆ ನನ್ನ ಮೂಲ ಹೆಸರು “ಸ್ಮಿತಾ’ ತುಂಬಾ ಇಷ್ಟ. ಆದರೆ ಒಮ್ಮೆ ನಿವೇದಿತಾ ಎಂದು ಬದಲಿಸಿ ಆಗಿದೆಯಲ್ಲ, ಆದ್ದರಿಂದ ಅದನ್ನೇ ಇರಿಸಿಕೊಂಡಿದ್ದೇನೆ. 

Advertisement

– ನಿಮ್ಮ ಬಾಲ್ಯದ ಬಗ್ಗೆ ಹೇಳಿ. 
ನಾನು ಎಂಜಿನಿಯರ್‌ ಪದವಿ ಓದಲು ಬೆಂಗಳೂರಿಗೆ ಬರುವವರೆಗೆಗೂ ಸಾಕಷ್ಟು ಊರುಗಳನ್ನು ಸುತ್ತಿದ್ದೇನೆ. ಮಂಡ್ಯ, ಕುಂದಾಪುರ, ಭಟ್ಕಳ, ಮೈಸೂರು ಮುಂತಾದೆಡೆಗಳಲ್ಲಿ ಬಾಲ್ಯ ಕಳೆದಿದ್ದೇನೆ. ನನ್ನ ಶಾಲೆ, ಊಟ, ಜೀವನ ಶೈಲಿ, ಪ್ರಕೃತಿ ಎಲ್ಲವೂ ನೋಡ ನೋಡುತ್ತಿದ್ದಂತೆಯೇ ಬದಲಾಗಿಬಿಡುತ್ತಿತ್ತು. ಚಿಕ್ಕ ವಯಸ್ಸಿನಲ್ಲೇ ವಿವಿಧ ಸ್ವಭಾವದ ಜನರ ಜೊತೆ ನಾನು ಬೆರೆತಿದ್ದೇನೆ. ಆ ಅನುಭವಗಳೆಲ್ಲವೂ ನನಗೆ ಗಟ್ಟಿ ವ್ಯಕ್ತಿತ್ವವನ್ನು ನೀಡಿವೆ. ಎಲ್ಲಾ ಸಂದರ್ಭಕ್ಕೂ ಒಗ್ಗಿ ಹೋಗುವ, ಎಲ್ಲಾ ಸ್ಥಳಗಳಲ್ಲೂ ಹೊಂದಿಕೊಳ್ಳುವುದು ಬಾಲ್ಯದಲ್ಲೇ ಅಭ್ಯಾಸವಾದ ಕಾರಣ ಚಿತ್ರರಂಗಕ್ಕೆ ಬಂದ ಬಳಿಕ ಯಾವ ಸಂದರ್ಭದಲ್ಲೂ ನನಗೆ ಕಷ್ಟವಾಗಲಿಲ್ಲ. 

– ಎಷ್ಟು ಚಂದ ಕನ್ನಡ ಮಾತನಾಡುತ್ತೀರಿ!?
ಪ್ರಜ್ಞಾಪೂರ್ವಕವಾಗಿ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುವ ಶಪಥ ನನ್ನದು. ಇದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ. ಇದರಿಂದ ಕೆಲವು ಸಲ ಪೇಚಿಗೆ ಸಿಲುಕಿದ್ದೂ ಇದೆ. ಮಾಧ್ಯಮಗಳಲ್ಲಿ ಅಥವಾ ಯಾವುದಾದರೂ ವೇದಿಕೆಗಳಲ್ಲಿ ಮಾತನಾಡುವಾಗ ನನಗೆ ತಿಳಿಯದೇ ಇಂಗ್ಲಿಷ್‌ ಪದವೇನಾದರೂ ಮನಸ್ಸಿನಲ್ಲಿ ಬಂದರೆ ನಾನದಕ್ಕೆ ಕನ್ನಡದ ಅರ್ಥ ಏನೆಂದು ಯೋಚಿಸುತ್ತಾ ಕೂರುತ್ತೇನೆ. ಅಷ್ಟರೊಳಗೆ ನಾನೇನು ಮಾತಾಡುತ್ತಿದ್ದೇನೆ ಎಂದು ಮರೆತು ಹೋಗಿ ಊಂ.. ಹಾಂ.. ಎಂದು ಕೂರುತ್ತೇನೆ. 

– ಎಷ್ಟೋ ಅನ್ಯಭಾಷಿಕರು ವರ್ಷಗಳಿಂದ ನಮ್ಮ ನಾಡಿನಲ್ಲೇ ವಾಸಿಸುತ್ತಿದ್ದರೂ ಕನ್ನಡ ಕಲಿಯುವುದೇ ಇಲ್ಲವಲ್ಲ?
ಅದು ಅವರ ತಪ್ಪಲ್ಲ, ನಮ್ಮ ತಪ್ಪು. “ಗಾಂಚಾಲಿ ಬಿಡಿ ಕನ್ನಡ ಮಾತಾಡಿ’, “ಇಲ್ಲಿಯ ನೆಲ ಬೇಕು, ಜನ ಬೇಕು, ಭಾಷೆ ಬೇಡ’ ಎಂದು ಅನ್ಯಭಾಷಿಕರನ್ನು ನಾವು ಅವಕಾಶ ಸಿಕ್ಕಾಗಲೆಲ್ಲಾ ಟೀಕಿಸುತ್ತೇವೆ. ಆದರೆ ನಾವೆಷ್ಟು ಕನ್ನಡ ಮಾತನಾಡುತ್ತೇವೆ ಎಂದು ಯೋಚಿಸುವ ಗೋಜಿಗೇ ಹೋಗುವುದಿಲ್ಲ. ಅವರ್ಯಾರೂ ಕನ್ನಡದ ವಿರೋಧಿಗಳಲ್ಲ. ಅವರಿಗೆ ಕನ್ನಡ ಮಾತನಾಡುವ ಅನಿವಾರ್ಯತೆ ನಾವು ಸೃಷ್ಟಿಸಿಲ್ಲ ಅಷ್ಟೆ. ಕನ್ನಡ ಮಾತನಾಡಲೇಬೇಕೆಂಬ ಅನಿವಾರ್ಯತೆಯನ್ನು ನಾವವರಿಗೆ ತಂದೊಡ್ಡಿದರೆ ಅವರಿಗೆ ಕನ್ನಡ ಕಲಿಯದೇ ವಿಧಿ ಇರುತ್ತಿರಲಿಲ್ಲ. 

– ಇದುವರೆಗೂ ನೀವು ಪೋಷಿಸಿದ ಪಾತ್ರಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದ ಪಾತ್ರ ಯಾವುದು?
ಯಾವುದೂ ಇಲ್ಲ. ಅಭಿನಯಕ್ಕೆ ಅವಕಾಶವಿರುವ ಪಾತ್ರಗಳು ಸಿಕ್ಕಿವೆ ನಿಜ. ಆದರೆ ನನ್ನ ಅಭಿನಯ ಕೌಶಲ್ಯವನ್ನು ಸಂಪೂರ್ಣವಾಗಿ ಹೊರಹಾಕುವಂಥ ಅವಕಾಶ ಇನ್ನೂ ಸಿಕ್ಕಿಲ್ಲ. “ಕ್ವೀನ್‌’ ಚಿತ್ರದಲ್ಲಿ ಕಂಗನಾ ರಣೌತ್‌ ನಿರ್ವಹಿಸಿದಂಥ ಪಾತ್ರ ನಿರ್ವಹಿಸಲು ನನಗೆ ಇಷ್ಟ. ಅದರಲ್ಲಿ ಆಕೆ ಒಬ್ಬ ಮುಗ್ಧ ಹುಡುಗಿಯಾಗಿ ಬಳಿಕ ದಿಟ್ಟೆಯಾಗಿ ಮಾರ್ಪಾಡಾಗುತ್ತಾಳೆ. ಅದೇ ರೀತಿ ಒಂದೇ ಪಾತ್ರದಲ್ಲಿ ಬೇರೆ ಬೇರೆ ಮಜಲುಗಳಿರುವ ಪಾತ್ರ ನಿರ್ವಹಿಸಬೇಕೆಂಬ ಆಸೆ ಇದೆ. 

– ಚಿತ್ರರಂಗಕ್ಕೆ ಬಂದಾಗಿನಿಂದ ನಿಮಗೆ ಹೆಚ್ಚು ಖುಷಿ ಸಿಕ್ಕ ಘಟನೆ ಯಾವುದು?
ನಾನೊಂಥರಾ ಸ್ಥಿತಪ್ರಜ್ಞಳು. ನನಗೆ ಹೆಚ್ಚು ಖುಷಿಯೂ ಆಗುವುದಿಲ್ಲ, ಹೆಚ್ಚು ದುಃಖವೂ ಆಗುವುದಿಲ್ಲ. ಎಂಥದ್ದೇ ದೊಡ್ಡ ಸರ್‌ಪ್ರೈಸ್‌ ಆದರೂ ಅನಿರೀಕ್ಷಿತ ಅಚ್ಚರಿ ಎಂದು ಅನಿಸುವುದಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ನನ್ನ ವಿಕಿಪೀಡಿಯಾ ಪೇಜ್‌ ನೋಡಿದಾಗ ತುಂಬಾ ಸಂತೋಷವಾಗಿತ್ತು. ಸದ್ಯಕ್ಕೆ ಅದು ಮಾತ್ರ ನೆನಪಿಗೆ ಬರುತ್ತಿದೆ.

– ಇಷ್ಟು ಸಮಯ ಸಾಮಾಜಿಕ ಜಾಲತಾಣಗಳಲ್ಲಿ ನಾಪತ್ತೆಯಾಗಿದ್ದ ನಿವೇದಿತಾ ಈಗ ಮತ್ತೆ ಪ್ರತ್ಯಕ್ಷರಾಗಿದ್ದಾರಲ್ಲ?
ನಾನು ವಾಸ್ತವ ಪ್ರಪಂಚದಲ್ಲಿ ಇರಲು ಸದಾ ಬಯಸುತ್ತೇನೆ. ಯಾರೊಂದಿಗಾದರೂ ಕಾಲ ಕಳೆಯುವಾಗ ಮೊಬೈಲ್‌, ಫೇಸ್‌ಬುಕ್‌ ಯಾವುದನ್ನೂ ಬಳಸುವುದಿಲ್ಲ. ಹೀಗಾಗಿ ಅದರ ಮೇಲೆ ಆಸಕ್ತಿಯೂ ಇರಲಿಲ್ಲ. “ಶುದ್ಧಿ’ ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು ಮತ್ತೆ ಜಾಲತಾಣಗಳಿಗೆ ಮರಳಿದ್ದೇನೆ. ಈಗ ಹೆಚ್ಚಿನ ಸಮಯ ಅದರಲ್ಲೇ ಕಳೆಯುತ್ತೇನೆ. ತುಂಬಾ ಜನರ ಸಂಪರ್ಕ ದೊರೆಯುತ್ತಿದೆ. ಆದರೆ ಇಲ್ಲೂ ಅಷ್ಟೇ ಯಾರಾದರೂ ಒಬ್ಬರ ಜೊತೆ ಚಾಟ್‌ ಮಾಡಲು ಕೂತರೆ ಅವರೊಬ್ಬರ ಜೊತೆಯೇ ಸಂಭಾಷಿಸುತ್ತಿರುತ್ತೇನೆ, ಬೇರೆಯವರ ಮೆಸೇಜ್‌ಗಳನ್ನು ನೋಡುವುದೇ ಇಲ್ಲ. 

– “ಶುದ್ಧಿ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಹೌಸ್‌ಫ‌ುಲ್‌ ಪ್ರದರ್ಶನವನ್ನೂ ಕಂಡಿತು. ಆದರೂ ಚಿತ್ರಮಂದಿರಗಳಿಂದ ಕಾಣಿಯಾಗುತ್ತಿದೆಯಲ್ಲ.
ನೋಡಿ, ಈ ಜಗತ್ತು ನಿಂತಿರುವುದೇ ಹಣದ ಮೇಲೆ. ಹೆಚ್ಚು ದುಡ್ಡು ಗಳಿಸುವ ತೆಲುಗು ಚಿತ್ರವೊಂದಕ್ಕೆ ಅವಕಾಶ ಮಾಡಿಕೊಡಲು ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳು “ಶುದ್ಧಿ’ ಪ್ರದರ್ಶನ ನಿಲ್ಲಿಸುತ್ತಿವೆ. ಕನ್ನಡದ ಮೇಲಿನ ದ್ವೇಷದಿಂದ ಅವರು ಹೀಗೆ ಮಾಡುತ್ತಿಲ್ಲ. ದುಡ್ಡಿಗಾಗಿ ಹೀಗೆ ಮಾಡುತ್ತಿದ್ದಾರೆ. ಆದರೆ ಕನ್ನಡ ಪ್ರೇಕ್ಷಕರ ಬಗ್ಗೆ ನನಗೆ ಬೇಸರವಿಲ್ಲ. “ಶುದ್ಧಿ’ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿದೆ ಎಂದರೆ ಅದಕ್ಕೆ ಅವರೇ ಕಾರಣ. ಫೇಸ್‌ಬುಕ್‌, ಟ್ವಿಟರ್‌ಗಳಲ್ಲೂ ಉತ್ತಮ ಬೆಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ. ಜನರಿಂದಾಗಿ “ಶುದ್ಧಿ’ ಗೆದ್ದಿದೆ. ಹಾಗೆ ನೋಡಿದರೆ ಇತ್ತೀಚಿನ ಯಾವ ಸದಭಿರುಚಿಯ ಚಿತ್ರಗಳನ್ನೂ ಕನ್ನಡ ಪ್ರೇಕ್ಷಕರು ಸೋಲಿಸಿಲ್ಲ. 

– “ಶುದ್ಧಿ’ಯಲ್ಲಿ ದಿಟ್ಟ ಪತ್ರಕರ್ತೆಯ ಪಾತ್ರ ನಿರ್ವಹಿಸುವಾಗ ನಿಮಗೂ ಪತ್ರಕರ್ತೆಯಾಗಬೇಕಿತ್ತು ಎಂದು ಅನಿಸಿದ್ದು ಇದೆಯೇ?
ನನಗೆ ಪತ್ರಕರ್ತೆಯಾಗುವ ಆಸೆ ಮೊದಲಿನಿಂದಲೂ ಇತ್ತು. ಆದರೆ ಕೆಲ ಕಾರಣಗಳಿಂದ ಸಾಫ್ಟ್ವೇರ್‌ ಎಂಜಿನಿಯರ್‌ ಆದೆ. ನಾನೇನಾದರೂ ಪತ್ರಕರ್ತೆಯಾಗಿದ್ದರೆ ತುಂಬಾ ದಿಟ್ಟ ಪತ್ರಕರ್ತೆಯಾಗಿರುತ್ತಿದ್ದೆ. ಸುದ್ದಿ ಮೂಲವನ್ನು ಹುಡುಕಿಕೊಂಡು ಹೋಗಿ ಸತ್ಯವನ್ನು ಬಯಲಿಗೆಳೆಯದೇ ಇರುತ್ತಿರಲಿಲ್ಲ. ಅದಕ್ಕೇನಾದರೂ ಅವಕಾಶವಾಗದೇ ಹೋಗಿದ್ದಲ್ಲಿ, ಈ ವೇಳೆಗಾಗಲೇ ನನ್ನದೇ ಆದ ವೆಬ್‌ಪೋರ್ಟಲ್‌, ಯುಟ್ಯೂಬ್‌ ಚಾನೆಲ್‌ ಅಥವಾ ಬ್ಲಾಗ್‌ ಬಳಸಿ ನನ್ನ ಕೆಲಸ ಮುಂದುವರಿಸುತ್ತಿದ್ದೆ. 

– ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರಿ?
ಹೆಚ್ಚಾಗಿ ಮನೆಯಲ್ಲೇ ಇರುತ್ತೇನೆ. ಹಾಡ್ತಾ, ಕುಣೀತಾ ಕಾಲ ಕಳೆಯುತ್ತೇನೆ. ನಮ್‌ ಹುಡ್ಗನ ಜೊತೆ ಹರಟೆ ಹೊಡೆಯುತ್ತೇನೆ. ತುಂಬಾ ಬಿಡುವಿದ್ದರೆ ಪ್ರವಾಸ ಮಾಡುತ್ತೇನೆ.

– ಮನೆಯಲ್ಲಿ ಒಬ್ಬರೇ ಇದ್ದಾಗ ಯಾವ ಹಾಡು ಕೇಳುತ್ತೀರ?
ನಾನು ಹೆಚ್ಚಾಗಿ ಹಾಡು ಕೇಳುವುದಿಲ್ಲ. ನನಗೆ ಹೊರಗಡೆ ಪ್ರಪಂಚದಲ್ಲಿರುವ ಶಬ್ದಗಳನ್ನು ಆಲಿಸುವುದೆಂದರೆ ತುಂಬಾ ಇಷ್ಟ. ಹಕ್ಕಿ ಹಾಡುವುದರಿಂದ, ವಾಹನ ಬ್ರೇಕ್‌ ಹಾಕುವುದು, ಸೇರಿ ಎಲ್ಲಾ ಬಗೆಯ ಶಬ್ದಗಳನ್ನು ಗಮನಿಸುತ್ತಾ ಕೂರುತ್ತೇನೆ. ನಾನು ಸಂಗೀತ ಕಲಿತಿದ್ದೇನೆ, ಬಿಡುವಿನಲ್ಲಿ ಅಲಂಕಾರಗಳು ಮತ್ತು ರಂಗಗೀತೆಗಳನ್ನು ಹಾಡಿಕೊಳ್ಳುತ್ತಿರುತ್ತೇನೆ.

– ಮದುವೆ ಯಾವಾಗ?
ನಮ್ಮಿಬ್ಬರ (ನನ್ನ ಹುಡುಗ ನಾಗರಾಜ್‌) ಮನಸ್ಸುಗಳ ಮದುವೆ ಯಾವಾಗಲೋ ಆಗಿದೆ. ಎಲ್ಲರ ಕಣ್ಣಿಗೆ ಕಾಣುವಂಥ ಮದುವೆಯ ಅಗತ್ಯ ನಮ್ಮಿಬ್ಬರಿಗೆ ಖಂಡಿತಾ ಇಲ್ಲ. 

– ನಿಮ್ಮ ಭವಿಷ್ಯದ ಯೋಜನೆಗಳು ಏನು?
ನಾನು ಏನನ್ನೂ ಯೋಚಿಸಲು ಹೋಗುವುದಿಲ್ಲ. ಮೊದಲೆಲ್ಲಾ ಭವಿಷ್ಯದ ಬಗ್ಗೆ ಪ್ಲಾನ್‌ ಮಾಡುತ್ತಾ ಕೂತು ವರ್ತಮಾನವನ್ನು ಹಾಳು ಮಾಡಿಕೊಂಡಿದ್ದೇನೆ. ಆ ತಪ್ಪನ್ನು ಮತ್ತೆ ಮಾಡುವುದಿಲ್ಲ. 

– ನಿಮ್ಮಿಷ್ಟದ ತಿನಿಸು?
ಅಮ್ಮ ಮಾಡುವ ಎಲ್ಲ ಅಡುಗೆಯೂ ನನಗಿಷ್ಟ. ಆದರೆ ಅನ್ನ ಸಾರು ಇಷ್ಟ ಆಗಲ್ಲ. ಇನ್ನು ಹೊರಗೆ ಹೋದರೆ ಪಿಜ್ಜಾ, ಥಾಯ್‌ ಖಾದ್ಯಗಳನ್ನು ತಿನ್ನುತ್ತೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ರಸ್ತೆ ಬದಿ ಚಾಟ್ಸ್‌, ಅದರಲ್ಲೂ ಚುರುಮುರಿ ಬಹಳ ಇಷ್ಟ. 

– ಡಯಟ್‌ ಟಿಪ್ಸ್‌ ಹೇಳಿ?
ನಾನು ಡಯಟ್‌ ಮಾಡಲ್ಲ. ಆದ್ದರಿಂದ ಇಂಥ ಸಮಯದಲ್ಲಿ ಇಂಥದ್ದನ್ನೇ ತಿನ್ನಿ ಎಂದು ಹೇಳಲು ಗೊತ್ತಿಲ್ಲ. ನಾನು ಹೇಳುವುದೇನೆಂದರೆ, ಎಲ್ಲವನ್ನೂ ತಿನ್ನಿ ಆದರೆ ಹಿತಮಿತವಾಗಿ ತಿನ್ನಿ. ಇಡೀ ದಿನ ಚಟುವಟಿಕೆಯಿಂದಿರಿ. ಹೆಚ್ಚು ಹಣ್ಣುಗಳನ್ನು ಸೇವಿಸಿ. 

– ಬ್ಯೂಟಿ ಮೆಂಟೇನ್‌ ಮಾಡಲು ಏನು ಮಾಡ್ತೀರಾ?
ಮೇಕಪ್‌ನಿಂದ ಬಹಳ ದೂರ. ನಾನು ಹೇರ್‌ಕಟ್‌ ಮತ್ತು ವ್ಯಾಕ್ಸಿಂಗ್‌ಗೆ ಮಾತ್ರ ಪಾರ್ಲರ್‌ಗೆ ಹೋಗುವುದು. ಕೂದಲಿಗೆ ದಾಸವಾಳ ಎಲೆ ರುಬ್ಬಿ ಹಚ್ಚುತ್ತೇನೆ. ಮನೆಯಲ್ಲೇ ಯಾವುದಾದರೂ ಫೇಸ್‌ಪ್ಯಾಕ್‌ ಸಿದ್ಧಪಡಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ಪಪ್ಪಾಯವನ್ನು ಆಗಾಗ ಮುಖಕ್ಕೆ ಹಚ್ಚುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಖುಷಿಯಾಗಿ, ನೆಮ್ಮದಿಯಾಗಿ ಇರಬೇಕು. ಆಗ ಮಾತ್ರ ನಾವು ಸುಂದರವಾಗಿ ಕಾಣುವೆವು.

– ಚೇತನ. ಜೆ.ಕೆ

Advertisement

Udayavani is now on Telegram. Click here to join our channel and stay updated with the latest news.

Next