Advertisement

ಕೈಗೂಡಿಲ್ಲ ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ಯೋಜನೆ

04:56 AM Jan 15, 2019 | |

ಕಾಣಿಯೂರು: ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಕಾೖಮಣ ಗ್ರಾಮದ ಮರಕ್ಕಡ-ಕಟ್ಟತ್ತಾರು ಎನ್ನುವಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕೆನ್ನುವ ಈ ಭಾಗದ ಜನತೆಯ ಬೇಡಿಕೆ ಇನ್ನೂ ಈಡೇರಿಲ್ಲ.

Advertisement

ಈ ಭಾಗದ ಜನತೆ ನಿರಂತರವಾಗಿ ಕಳೆದ 28 ವರ್ಷದಿಂದ ಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಆದರೆ ಫ‌ಲಿತಾಂಶ ಶೂನ್ಯ. ಈ ಭಾಗದಲ್ಲಿ ಅಣೆಕಟ್ಟು ನಿರ್ಮಾಣವಾದರೆ ಇಲ್ಲಿನ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ. ನೂರಾರು ಎಕ್ರೆ ಕೃಷಿ ಭೂಮಿ ಹಚ್ಚ ಹಸುರಾಗಿ ಕಂಗೊಳಿಸಲಿದೆ.

ಈ ಹಿಂದೆ ಇಲ್ಲಿ ಜೈನರಸರ ಆಳ್ವಿಕೆ ಸಂದರ್ಭದಲ್ಲಿ ಅವರೇ ಅಣೆಕಟ್ಟು ನಿರ್ಮಿಸಿ ಕೃಷಿಕರಿಗೆ ನೆರವಾಗಿದ್ದರು,ಬಳಿಕ ಭೂ ಮಸೂದೆಯಿಂದ ಅವರ ಆಡಳಿತ ನಿಂತ ಮೇಲೆ ಈ ಅಣೆಕಟ್ಟು ಸರಿಯಾದ ನಿರ್ವಹಣೆ ಇಲ್ಲದೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಅದರ ಕುರುಹುಗಳಿವೆ.

ನಿರಂತರ ಮನವಿ ಸಲ್ಲಿಕೆ
1991 ಡಿ. 15ರಂದು ಊರಿನವರೇ ಸೇರಿ ಬೆಳಂದೂರು ಮಂಡಲ ಪಂಚಾಯತ್‌ನ ಅಧ್ಯಕ್ಷರ ಮೂಲಕ ಸಂಬಂಧಪಟ್ಟವರಿಗೆ ಮೊದಲ ಮನವಿ ಸಲ್ಲಿಸಿದ್ದರು. ಆ ಬಳಿಕ ಪ್ರತೀ ಬಾರಿಯೂ ಶಾಸಕರಿಗೆ, ಸಂಸದರಿಗೆ ನಿರಂತರ ಮನವಿ ನೀಡಲಾಗುತ್ತಿದ್ದರೂ, ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಭಾಗದ ಜನತೆ.

ಪ್ರಧಾನಿ ಮೋದಿಗೆ ಮೊರೆ
ಮನವಿ ನೀಡಿ ಯಾವುದೇ ಬೆಳವಣಿಗೆಯಾಗದ್ದನ್ನು ಮನಗಂಡು 2017 ಫೆ. 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದರು. ಈ ಪರಿಣಾಮ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯವರು ದ.ಕ.ಜಿ.ಪಂ.ಗೆ ಅನುದಾನ ಬಿಡುಗಡೆ ಮಾಡುವಂತೆ ನಿರ್ದೇಶನವನ್ನು ನೀಡಿದ್ದರು.

Advertisement

ಶಾಸಕರಿಗೆ ವಿವರ ಸಲ್ಲಿಕೆ
ಈ ಎಲ್ಲ ಬೆಳವಣಿಗೆಗಳ ಸವಿವರಗಳನ್ನು ಸುಳ್ಯ ಶಾಸಕರಿಗೆ 2017ರಂದೇ ಸಲ್ಲಿಸಿದ್ದು, ಈವರೆಗೂ ಯಾವುದೇ ಸ್ಪಂದನೆ ಇಲ್ಲ ಎನ್ನುತ್ತಾರೆ ಈ ಭಾಗದವರು. ಶಾಸಕರು ಪ್ರಯತ್ನ ಮಾಡಿದರೆ ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆ ಈಡೇರುವಂತಾಗುತ್ತದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.

ಪ್ರಸ್ತಾವನೆ ಸಲ್ಲಿಕೆ
ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ನಿರ್ಮಾಣ ಕುರಿತ ಕಡತಗಳೊಂದಿಗೆ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆಗೊಂಡು ಅನುದಾನ ಬಿಡುಗಡೆಯಾಗಬೇಕಿದೆ. ಈ ಕುರಿತು ಪ್ರಯತ್ನ ಮಾಡಲಾಗುತ್ತಿದೆ.
-ಎಸ್‌. ಅಂಗಾರ, ಶಾಸಕರು, ಸುಳ್ಯ

ಆಶಾಭಾವನೆ ನಮ್ಮದು
ಕಳೆದ 28 ವರ್ಷಗಳಿಂದ ನಿರಂತರವಾಗಿ ವಿವಿಧ ಸ್ತರಗಳ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಬೇಡಿಕೆ ಈಡೇರಬಹುದು ಎನ್ನುವ ಆಶಾಭಾವನೆ ನಮ್ಮದು. 
-ಸೀತಾರಾಮ ಗೌಡ ಮುಂಡಾಳ,

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next