Advertisement

ಗಮನ ಸೆಳೆಯುತ್ತಿದೆ “ಕಾಂಡ್ಲಾ ಕಾಡಿನ ಕಯಾಕಿಂಗ್‌’

05:10 PM Dec 15, 2021 | Team Udayavani |

ಕೋಟ: ಕರಾವಳಿಯ ಕಡಲ ತೀರಗಳಲ್ಲಿ ಅದ್ಭುತವಾದ ಪ್ರಕೃತಿ ಸೌಂದರ್ಯದ ವಿವಿಧ ತಾಣಗಳಿದೆ. ಆದರೆ ಹೊರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ನಿಸರ್ಗ ಸೌಂದರ್ಯವನ್ನು ಪ್ರವಾಸಿ ಚಟುವಟಿಕೆಗೆ ಬಳಸಿಕೊಳ್ಳುವಲ್ಲಿ ನಾವು ತೀರಾ ಹಿಂದುಳಿದಿದ್ದೇವೆ ಎಂದರೆ ತಪ್ಪಾಗಲಾರದು.

Advertisement

ಈ ನಡುವೆ ಅಲ್ಲಲ್ಲಿ ಖಾಸಗಿಯಾಗಿಯೇ ಕಡಲ ತೀರದ ಹಿನ್ನೀರಿನ ಪ್ರದೇಶಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಸಾಲಿಗ್ರಾಮ ಸಮೀಪದಲ್ಲಿ ಸೀತಾ ನದಿಯ ಹಿನ್ನೀರಿನಲ್ಲಿನ ಕಾಂಡ್ಲಾ ವನದ ಮಧ್ಯದಲ್ಲಿ ಸಂಚರಿಸುವ ಕಯಾಕಿಂಗ್‌ ಸಾಹಸ ಯಾನ ಪ್ರಾಯೋಗಿಕವಾಗಿ ಯಶಸ್ವಿ ಯಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಚಟುವಟಿಕೆಯನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಜಿಲ್ಲಾಡಳಿತ ಕ್ರಮಕೈಗೊಂಡರೆ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಕಾಂಡ್ಲಾವನದಲ್ಲಿ ಕಯಾಕಿಂಗ್‌
ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿ ಹಾಗೂ ಕೋಡಿಕನ್ಯಾಣ ಸೇರಿದಂತೆ ಎರಡು ಕಡೆಗಳಲ್ಲಿ ಪ್ರತ್ಯೇಕ ಕಯಾ ಕಿಂಗ್‌ ಪಾಯಿಂಟ್‌ ಇದೆ. ಇಲ್ಲಿನ ಸೀತಾನದಿಯ ಹಿನ್ನೀರಿನ ಹತ್ತಾರು ಎಕ್ರೆ ದಟ್ಟ ಕಾಂಡ್ಲಾ ವನದಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಉಬ್ಬರ ಇಳಿತದ ಆಧಾರದಲ್ಲಿ ಸಾಹಸಯಾನ ನಡೆಯುತ್ತದೆ. ಕಾಂಡ್ಲಾ ವನ ಗಳನ್ನು ದೂರದಿಂದ ನೋಡುವಾಗಲೇ ಕಣ್ಣಿಗೆ ರಂಗು ನೀಡುತ್ತವೆ. ಇಂತಹ ರಮಣೀಯ ಪ್ರಕೃತಿ ಸೌಂದರ್ಯದ ನಡುವೆ ಕಿವಿಗಪ್ಪಳಿಸುವ ಹಕ್ಕಿಗಳ ಚಿಲಿ-ಪಿಲಿ, ತಂಪಗಿನ ತಂಗಾಳಿ, ತಿಳಿನೀರು ಮನಸ್ಸಿಗೆ ಮತ್ತಷ್ಟು ಖುಷಿ ನೀಡುತ್ತದೆ. ಹೀಗೆ ದಟ್ಟ ಕಾಂಡ್ಲಾವನದ ಮಧ್ಯದಲ್ಲಿ ಕಯಾಕಿಂಗ್‌ ಯಾನ ಆರಂಭಿಸಿರುವುದು ಜಿಲ್ಲೆಯಲ್ಲೇ ಪ್ರಥಮ ಯತ್ನ ಎನ್ನಲಾಗುತ್ತಿದೆ.

ಸೂಕ್ತ ಮಾರ್ಗದರ್ಶನ
ಕಯಾ ಕಿಂಗ್‌ ನಡೆಯುವ ಪಾರಂಪಳ್ಳಿ ಹೊಳೆ ಮೇಲ್ನೋಟಕ್ಕೆ ಭಾರೀ ಆಳವಾಗಿ ಕಾಣುತ್ತೆ. ಆದ್ರೆ ಇಲ್ಲಿ ಕೇವಲ ಮೂರ್ನಾಲ್ಕು ಫೀಟ್‌ ನೀರಿನ ಮಟ್ಟವಿರುವ ಇಳಿ ಹೊತ್ತಿನಲ್ಲೇ ಈ ಚಟುವಟಿಕೆ ನಡೆಸಲಾಗುತ್ತದೆ. ಜತೆಗೆ ಲೈಫ್ ಜಾಕೆಟ್‌ ಹಾಗೂ ತುಂಬಾ ಕಂಪರ್ಟ್‌ ಆಗಿರುವ ಆಧುನಿಕ ತಂತ್ರಜ್ಞಾನದ ದೋಣಿಗಳಿದೆ.

ದೋಣಿ ನಡೆಸು ವಾಗ ಆಯಾಸವಾದಲ್ಲಿ ಹಿನ್ನೀರಿನ ಮಧ್ಯೆಯೇ ದೋಣಿಯಲ್ಲಿ ಕುಳಿತು ವಿಶ್ರಾಂತಿ ಪಡೆದು ಯಾನ
ಮುಂದುವರಿಸಬಹುದು. ಪ್ರವಾಸಿಗರು ನಡೆಸುವ ದೋಣಿಯ ಮುಂದೆ ಮಾರ್ಗದರ್ಶಕರಾಗಿ ಮತ್ತು ದೋಣಿಯ ಹಿಂದೆ ಸುರಕ್ಷತೆಯ ದೃಷ್ಟಿಯಿಂದ ತರಬೇತಿದಾರರು ಇರಲಿದ್ದು, ದೋಣಿಯ ವೇಗ ಹೆಚ್ಚಿಸುವ, ಕಡಿಮೆಗೊಳಿಸುವ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ. ಹೀಗಾಗಿ ಪ್ರವಾಸಿಗರು ಪುಟ್ಟ ಮಕ್ಕಳೊಂದಿಗೂ ಕೂಡ ಇಲ್ಲಿಗೆ ಆಗಮಿಸುತ್ತಾರೆ.

Advertisement

ಫೋಟೋಶೂಟ್‌ ಮುಂತಾದ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿದೆ. ಅತ್ಯಂತ ದಟ್ಟವಾದ ಕಾಂಡ್ಲಾ ವನದೊಳಗಿನ ಪಕ್ಷಿಗಳ ಇಂಚರ, ತಂಪು ವಾತಾ ವರಣ, ಜುಳು ಜುಳು ಹಿನ್ನೀರಿನ ಹರಿವು, ಕಾಂಡ್ಲಾದ ಬೃಹತ್‌ ಬೇರುಗಳು, ಕತ್ತಲೆಯನ್ನು ಸೀಳಿ ಹೊರಬರುವ ಸೂರ್ಯ ಕಿರಣಗಳು ಪರಿಸರದ ವಿಸ್ಮಯ ಲೋಕವನ್ನು ನಮ್ಮೆದುರಿಗೆ ತೆರೆದಿಡುತ್ತವೆ. ಪಾರಂಪಳ್ಳಿಯ ಮರದ ಸೇತುವೆಯ ಬಳಿ ಕಯಾ ಕಿಂಗ್‌ ಯಾನ ಕೊನೆಗೊಳ್ಳಲಿದ್ದು ಹಿನ್ನೀರಿನಲ್ಲಿ ಮರದ ಸೇತುವೆಯ ಸೌಂದರ್ಯ ಸವಿಯುವುದು ಕೂಡ ಅದ್ಭುºತ ಅನುಭವವಾಗಿದೆ. ಒಟ್ಟು ಎರಡು ಗಂಟೆಗಳ ಕಾಲ ನಡೆಯುವ ಈ ಯಾನ ಸಾಕಷ್ಟು ಖುಷಿ ನೀಡುತ್ತದೆ.

ಪ್ರವಾಸೋದ್ಯಮವಾಗಿಸಲು
ಚಿಂತನೆ ಅಗತ್ಯ
ಕಾಂಡ್ಲವನದ ನಡುವಿನ ಕಯಾ ಕಿಂಗ್‌ ಯಾನ ಯಶಸ್ವಿಯಾಗಿರುವುದು ನಿಜ. ಹೀಗಾಗಿ ಇದನ್ನು ಪ್ರವಾಸೋದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಮತ್ತು ಖಾಸಗಿಯಾಗಿ ಕಯಾ ಕಿಂಗ್‌ ಯಾನ ಆರಂಭಿಸುವವರಿಗೆ ಅನುಮತಿ ಹಾಗೂ ಸೂಕ್ತ ಮಾಗದರ್ಶನ, ನೆರವು ನೀಡಲು ಅಗತ್ಯ ಯೋಜನೆಗಳನ್ನು ರೂಪಿಸುವ ಮೂಲಕ ಈ ಚಟುವಟಿಕೆಯನ್ನು ಪ್ರವಾಸೋದ್ಯಮವಾಗಿ ಬೆಳೆಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸಬೇಕಿದೆ.

ಜನರು ಖುಷಿ ಪಡುತ್ತಿದ್ದಾರೆ
ಕಾಂಡ್ಲಾವನದಲ್ಲಿ ಪ್ರಾಯೋಗಿಕ ರೀತಿಯಲ್ಲಿ ಕಯಾ ಕಿಂಗ್‌ ಯಾನ ಆರಂಭಿಸಲಾಗಿದ್ದು ಭೇಟಿ ನೀಡಿದವರೆಲ್ಲ ಸಾಕಷ್ಟು ಖುಷಿಪಡುತ್ತಿದ್ದಾರೆ. ಪ್ರಸ್ತುತ ಕನಿಷ್ಠ ಮೊತ್ತದ ನಿರ್ವಹಣೆ ವೆಚ್ಚವನ್ನು ಪ್ರವಾಸಿಗರಿಂದ ಪಡೆದು ಕಾರ್ಯ ನಿರ್ವಹಿಸುತ್ತಿದ್ದೇವೆ. ಅಗತ್ಯ ಮಾರ್ಗದರ್ಶನ ನೀಡಿದಲ್ಲಿ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು.
ಕಾಂಡ್ಲಾವನದಲ್ಲಿ ಪ್ರಾಯೋಗಿಕ ರೀತಿಯಲ್ಲಿ ಕಯಾ ಕಿಂಗ್‌ ಯಾನ ಆರಂಭಿಸಲಾಗಿದ್ದು ಭೇಟಿ ನೀಡಿದವರೆಲ್ಲ ಸಾಕಷ್ಟು ಖುಷಿಪಡುತ್ತಿದ್ದಾರೆ. ಪ್ರಸ್ತುತ ಕನಿಷ್ಠ ಮೊತ್ತದ ನಿರ್ವಹಣೆ ವೆಚ್ಚವನ್ನು ಪ್ರವಾಸಿಗರಿಂದ ಪಡೆದು ಕಾರ್ಯ ನಿರ್ವಹಿಸುತ್ತಿದ್ದೇವೆ. ಅಗತ್ಯ ಮಾರ್ಗದರ್ಶನ ನೀಡಿದಲ್ಲಿ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು.
-ಮಿಥುನ್‌ ಕೋಡಿ, ಕಯಾ ಕಿಂಗ್‌ ಚಟುವಟಿಕೆಯ ನಿರ್ವಾಹಕರು

ಕೇರಳಕ್ಕೆ ಭೇಟಿ ನೀಡಿದ ಅನುಭವ
ಕಾಂಡ್ಲಾವನದ ನಡುವಿನ ಕಯಾ ಕಿಂಗ್‌ ಯಾನ ಅತ್ಯಂತ ಖುಷಿಕೊಟ್ಟಿದೆ. ಈ ಹಿಂದೆ ಒಮ್ಮೆ ಕೇರಳಕ್ಕೆ ಭೇಟಿ ನೀಡಿದಾಗ ಕಯಾ ಕಿಂಗ್‌ನಲ್ಲಿ ಭಾಗವಹಿಸಿದ್ದು ಇದೇ ರೀತಿ ಖುಷಿ ನೀಡಿತ್ತು. ಸರಕಾರ, ಜಿಲ್ಲಾಡಳಿತ ಪ್ರವಾಸೋದ್ಯಮವಾಗಿ ಇದನ್ನು ಬೆಳೆಸಲು ಉತ್ತೇಜನ ನೀಡಬೇಕು.
– ಶಮಂತ್‌ ಮಣಿಪಾಲ, ಪ್ರವಾಸಿಗ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next