Advertisement

ತಲ್ಲಣಿಸಿದ ಜಗತ್ತಿಗೆ ಕನಕ ತಣ್ತೀಗಳೇ ಬೆಳಕಿಂಡಿ

12:14 PM Nov 22, 2021 | Team Udayavani |

ಕನಕದಾಸರು ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಕವಿಯಾಗಿ, ಕಲಿಯಾಗಿ, ಭಕ್ತ, ದಾಸ, ಸಂತ, ದಾಸಶ್ರೇಷ್ಠ, ವಿಶ್ವಬಂಧು, ವಿಶ್ವಮಾನವ, ದಾರ್ಶನಿಕ ಕನಕದಾಸರೆಂದು ಜನಮನದಲ್ಲಿ ಒಡ ಮೂಡಿದ್ದಾರೆ.

Advertisement

16ನೇ ಶತಮಾನದಲ್ಲಿ ಕೆಳವ ರ್ಗದ ಒಬ್ಬ ಸಂತ ಈ ಹಂತಕ್ಕೆ ಏರಿದ ಎತ್ತರವನ್ನು ಗಮನಿಸಿದರೆ ಅದು ಸಾಮಾನ್ಯ ದಾರಿಯೇನಲ್ಲ. ಅವರ ಬದುಕು ಕೂಡ ತಿಮ್ಮಪ್ಪ, ತಿಮ್ಮಪ್ಪ ನಾಯಕ, ಕನಕ ನಾಯಕ, ಕನಕದಾಸ ಹೀಗೆ ಹಲವು ತಿರುವುಗಳನ್ನು ಪಡೆಯುತ್ತ ಕೊನೆಗೆ ವಿಶ್ವಮಾನವನಾಗಿ ಬೆಳೆದು ನಿಂತ ಪರಿಯನ್ನು ನೋಡಿದರೆ ಅಚ್ಚರಿಯನ್ನುಂಟು ಮಾಡುತ್ತದೆ. ಜತೆಗೆ ಕನಕದಾಸರ ಚಿಂತನೆಗಳ ಗಟ್ಟಿತನ ಎದ್ದು ತೋರುತ್ತದೆ.

ಬಾಡ-ಬಂಕಾಪುರ ಪ್ರದೇಶದ ಎಪ್ಪತ್ತೆಂಟು ಹಳ್ಳಿಗಳ ಡಣ್ಣಾಯಕ ಬೀರಪ್ಪ ನಾಯಕ ಮತ್ತು ಬಚ್ಚಮ್ಮರ ಪುತ್ರನಾಗಿ ಜನಿಸಿದ ತಿಮ್ಮಪ್ಪ, ತಂದೆಯ ಅಕಾಲಿಕ ಮರಣದ ಅನಂತರ ಡಣ್ಣಾಯಕನಾಗಿ ಅಧಿಕಾರ ವಹಿಸಿ ಕೊಂಡನು. ಕುದುರೆ ಲಾಯದಲ್ಲಿ ಅಗೆಯುವಾಗ ದೊರೆತ ನಿಧಿಯನ್ನು ಸಾಮಾಜಿಕ, ಧಾರ್ಮಿಕ ಕಾರ್ಯ ಗಳಿಗೆ ವಿನಿಯೋಗಿಸಿ ಕನಕ ನಾಯಕನಾದನು. ಯುದ್ಧ ಮಾಡಲು ಹುಮ್ಮಸ್ಸು ಪಡುತ್ತಿದ್ದ ಕನಕನಾಯಕ. (ಇಲ್ಲಿನ ನಾಯಕ ಪದ ಜಾತಿ ಹಿನ್ನೆಲೆಯ ಪದವಾಗಿರದೆ ಡಣ್ಣಾಯಕ ಅಧಿಕಾರ ಹಿನ್ನೆಲೆಯ ಪದವಾಗಿದೆ) ಯುದ್ಧ ಭೂಮಿಯಲ್ಲಿ ತಾನು ವೈರಿ ಪಡೆ ಯಿಂದ ಮಾರಣಾಂತಿಕ ಪೆಟ್ಟುಗಳಿಂದ ಪ್ರಜ್ಞಾಹೀನನಾಗಿ, ಬಳಿಕ ಪ್ರಜ್ಞಾ ಸ್ಥಿತಿಗೆ ಮರಳಿದಾಗ ಯುದ್ಧಭೂಮಿಯಲ್ಲಿನ ಸಾವು-ನೋವು ಗಳಿಗೆ ತಾನು ಹಾಗೂ ತನ್ನ ಖಡ್ಗವೂ ಕಾರಣವಾಯಿತೆಂದು ಖಡ್ಗ ಕಳಚಿ ದಾಸನಾಗುತ್ತಾರೆ.

ದಾಸನಾಗಿ ಮೂಢಭಕ್ತಿಯನ್ನು ಮಾಡದೇ ವೈಚಾರಿಕ ನೆಲೆಯ ಭಕ್ತಿಯನ್ನು ಅರಸುತ್ತಾರೆ. “ತನು ನಿನ್ನದು ಜೀವನ ನಿನ್ನದು’ ಎಂದು ಭಗವಂತನಿಗೆ ಶರಣಾಗತರಾದರೂ ಆರು ಬದುಕಿಹರು ಹರಿ ನಿನ್ನ ನಂಬಿ ತೋರು ಈ ಧರೆಯೊಳಗೆ ಎಂದು ಭಗವಂತನನ್ನೇ ಪ್ರಶ್ನಿಸಿದವರು. ತೀರ್ಥಯಾತ್ರೆ ಮಾಡುತ್ತ ಗಯಾ ಕ್ಷೇತ್ರಕ್ಕೆ ಹೋಗುತ್ತಾರೆ. ಅಲ್ಲಿ ನಡೆಯುವ ಪಿಂಡವಿಕ್ಕುವ ಕ್ರಿಯಾ ವಿಧಿಯನ್ನು ನೋಡಿ ಆವ ಕರ್ಮವೋ ಇದು ಆವ ಧರ್ಮವೊ ಸತ್ತವನು ಎತ್ತ ಪೋದ ಸತ್ತು ತನ್ನಜನ್ಮಕೆ ಪೋದ ಸತ್ತವನು ಉಣ್ಣುವನೆಂದು ನಿತ್ಯ ಪಿಂಡ ವಿಕ್ಕುತೀರಿ ಎಂದು ಮನುಷ್ಯ ಬದುಕಿದ್ದಾಗ ಅಲ್ಲಗಳೆದು, ಸತ್ತ ಅನಂತರ ಮಾಡುವ ಎಲ್ಲ ವಿಧಿ ವಿಧಾನಗಳು ನಿರರ್ಥಕ. ಎಳ್ಳು ದರ್ಭೆ ಬಿಟ್ಟು ಪೀತರನ್ನು ತೃಪ್ತಿಪಡಿಸುವಾಗ ಎಳ್ಳನ್ನು ಮೀನು ನುಂಗು ತ್ತದೆ; ದರ್ಭೆ ತೇಲಿ ಹೋಗುತ್ತದೆ. ಹಾಗಾದರೆ ಪೀತರಿಗೆ ಮುಟ್ಟಿ ಸಿದ್ದು ಯಾವುದು ಎಂದು ಪ್ರಶ್ನಿಸುತ್ತಾರೆ. ಸಾಂಪ್ರದಾಯಿಕವಾಗಿ ಒಂದು ನಂಬಿಕೆಯಿತ್ತು. ಪುತ್ರನಿಲ್ಲದೆ ಪರಗತಿಯಿಲ್ಲ (ಅಪುತ್ರಸ್ಯ ಗತಿರ್ನಾಸ್ತಿ) ಎಂಬುದನ್ನು ಮಗನಿಂದ ಮಾತ್ರ ಗತಿಯುಂಟೆ ಈ ಜಗತ್ತಿನಲ್ಲಿ ಎನ್ನುವ ಪ್ರಶ್ನೆ ಇಟ್ಟುಕೊಂಡು ಸತ್ಯನೊಬ್ಬ ಮಗ ಶಾಂತನೊಬ್ಬ ಮಗದು ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ ಹೆತ್ತರೇನು ಇನ್ನು ಹೆರದಿದ್ದರೇನು ಎನ್ನುವಲ್ಲಿ ಇಂದಿನ ಹೆಣ್ಣು ಮಗುವಿನ ಭ್ರೂಣ ಹತ್ಯೆ ಮಹಾಪಾಪ ಎನ್ನುವ ಪರಿಕಲ್ಪನೆಯನ್ನು ಅಂದೇ ಮೂಡಿಸಿ ಸ್ತ್ರೀಯೂ ಶಕ್ತಳು, ಅವಳೂ ಸ್ವತಂತ್ರಳು ಎಂದು “ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ’ ಎಂಬ ಕೀರ್ತನೆಯಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳೆಂದು ಘಂಟಾಘೋಷವಾಗಿ ಹೇಳಿದ್ದಾರೆ. ಮುಂದುವರಿದು ಸೋತ ಹೆಣ್ಣಿಗೆ ಓತು ನಡೆಯದ ಪುರುಷನೇತಕೆ ಎನ್ನುತ್ತ ಸ್ತ್ರೀ ವಾದಕ್ಕೆ ಬುನಾದಿಯನ್ನು ಒದಗಿಸಿದವರಲ್ಲಿ ಕನಕದಾಸರೂ ಒಬ್ಬರು.

ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್‌

Advertisement

ಯಾವ ವ್ಯಕ್ತಿ ಏನೇ ಕಾಯಕ ಮಾಡಿದರೂ ಅದರ ಹಿಂದೆ ಆತನ ಹೊಟ್ಟೆ-ಬಟ್ಟೆಯ ಆವಶ್ಯಕತೆಯಿರುತ್ತದೆ. ಮನುಷ್ಯ ಕಾಯಕ, ವೇಷಭೂಷಣದಲ್ಲಿ ಬದಲಾವಣೆ ಇರಬಹುದು. ಸಮಾಜ ಸುಧಾರಕ, ಸಾಧು ಸನ್ಯಾಸಿ, ರಾಜ-ರಾಜಕಾರಣ ಹೀಗೆ ಅನೇಕ ವೇಷಗಳನ್ನು ತೊಟ್ಟು ಮಾಡುವ ಕಾರ್ಯ ಇನ್ನೊಬ್ಬರ ಉದ್ಧಾರದ ಜತೆಗೆ ವೈಯಕ್ತಿಕ ಹಿತಾಸಕ್ತಿಗಳು ಅದರ ಹಿಂದಿರುತ್ತವೆ. ಆದ್ದರಿಂದ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಇಲ್ಲಿ ವೃತ್ತಿಯ ತಾರತ್ಯಮ್ಯ ಸಲ್ಲದು. ಎಲ್ಲ ವೃತ್ತಿಗಳು ಸಮಾನವೆಂದು ಅವರು ನೀಡಿದ ಸಂದೇಶ ಗಮನೀಯವಾಗಿದೆ.

“ಮೋಹನ ತರಂಗಿಣಿ’ ಕಾವ್ಯದಲ್ಲಿ ಮೂರು ತಲೆಮಾರುಗಳ ಪ್ರೇಮಕತೆಯನ್ನು ಹೇಳುತ್ತಾರೆ. ಅದರಲ್ಲಿ ಶೃಂಗಾರ ಬೆರೆಸಿ ಕನ್ನಡ ನಾಡಿನ ಅನೇಕ ಐತಿಹಾಸಿಕ ದಾಖಲೆಗಳನ್ನು ನೀಡುತ್ತಾರೆ. ನಳ ಚರಿತ್ರೆ ಮೂಲಕ ಆದರ್ಶ ಪ್ರೇಮ ಮತ್ತು ಆದರ್ಶ ದಾಂಪತ್ಯ ಕುರಿತು ಹೇಳುತ್ತಾರೆ. “ರಾಮಧಾನ್ಯ ಚರಿತ್ರೆ’ ಈ ಮಣ್ಣಿನ ಬಡವ, ದೀನ-ದಲಿತ ತನ್ನ ಹಕ್ಕಿಗಾಗಿ ಹೋರಾಡಬೇಕು. ಜಯ ಸಿಕ್ಕೇ ಸಿಗುತ್ತದೆ ಎಂದು ವಿಶೇಷವಾಗಿ ಆಹಾರ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮನದಟ್ಟು ಮಾಡುತ್ತಾರೆ. ಮನುಷ್ಯ ತನ್ನ ಬದುಕು ಕಟ್ಟಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಾನೆ. ಆ ಪ್ರಯತ್ನ ರೀತಿ-ನೀತಿ-ಧರ್ಮ ಮಾರ್ಗದಿಂದ ಕೂಡಿರಬೇಕು. ಜ್ಞಾನದಿಂದ ಭಕ್ತಿ; ಭಕ್ತಿಯಿಂದ ಮುಕ್ತಿ ಎಂದು “ಹರಿ ಭಕ್ತಿ ಸಾರ’ದಲ್ಲಿ ಹೇಳುತ್ತಾರೆ. ಒಂದೊಂದು ಕಾವ್ಯದ ಹಿಂದೆ ಒಂದೊಂದು ಆಶಯವನ್ನಿಟ್ಟುಕೊಂಡು ಕನಕದಾಸರು ಕಾವ್ಯಗಳನ್ನು ರಚಿಸುತ್ತಾರೆ.

ಜಗತ್ತು ಇಂದು ಜಾತಿ, ಮತ, ಪಂಥ, ಭ್ರಷ್ಟಾಚಾರ, ಯುದ್ಧ ಭೀತಿ ಪ್ರಕೃತಿ ವಿಕೋಪಗಳ ಮಧ್ಯೆ ತಲ್ಲಣಗೊಂಡಿದೆ. ಜೀವಪರ ನಿಲುವು ಎನ್ನುವುದು ಮರೀಚಿಕೆಯಾಗಿದೆ. ಬದುಕು ಎನ್ನುವುದು ಚೌಕಟ್ಟಿಲ್ಲದ ಕನ್ನಡಿಯಂತಾಗಿದೆ. ಆದ್ದರಿಂದ ಕನಕದಾಸರ ದಾರ್ಶನಿಕ ತಣ್ತೀ ಇಂದು ಜಾಗತಿಕ ಮಟ್ಟಕ್ಕೆ ಪ್ರಚುರಗೊಂಡು “ತಲ್ಲಣಿಸದಿರು ಕಂಡ್ಯ ತಾಳು ಮನವೆ’ ಎಂಬ ತಾಯ್ತತನದ ಸಾಂತ್ವನ ಬೇಕಾಗಿದೆ. ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನಾದರೂ ಬಲ್ಲಿರಾ, ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ, ಆತ್ಮ ಯಾವ ಕುಲ, ಜೀವ ಯಾವ ಕುಲ. ಇಲ್ಲಿ ಯಾವ ವೃತ್ತಿಗಳೂ ಮತ್ತು ವೃತ್ತಿ ಮಾಡುವ ಸಮುದಾ ಯವರು ಮೇಲಲ್ಲ-ಕೀಳಲ್ಲ. ಏಕೆಂದರೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬಂತಹ ಕನಕದಾಸರ ದಾರ್ಶನಿಕ ತಣ್ತೀ ಗಳ ಸಂದೇಶ ವಿಶ್ವಕ್ಕೆ ಆವಶ್ಯಕತೆ ಇದೆ.

ಕನಕದಾಸರು ತಮಗೆ ನಿಧಿ ದೊರೆತಿದ್ದನ್ನು ದಾನ ಮಾಡಿದರು. ಭಗವಂತನನ್ನು ಪ್ರಾರ್ಥಿಸಬೇಕಾದರೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪ್ರಾರ್ಥಿಸದೇ “ರಕ್ಷಿಸು ನಮ್ಮನ ನವರತ’ ಎಂದು ವಿಶ್ವ ಜೀವಿಗಳ ಒಳಿತನ್ನು ಬಯಸಿ ಪ್ರಾರ್ಥಿಸಿದರು. ತಮಗಾಗಿ ಏನನ್ನೂ ಬಯಸದೆ ಮನುಷ್ಯ ಪರ, ಜೀವ ಪರ ನಿಲುವು ತಾಳಿ ಹಸಿದು ಬಂದವರಿಗೆ ಅಶನವೀಯಲುಬೇಕು ಎಂದು ಹೇಳಿದ ಕನಕದಾಸರ ಬದುಕು ಹಾಗೂ ಚಿಂತನೆಗಳು ಪರೋಪಕಾರಿಯೇ ಆಗಿವೆ. ಹೀಗಾಗಿ ಇಂದು ತಲ್ಲಣಗೊಂಡಿರುವ ಜಗತ್ತಿಗೆ ದಾರ್ಶನಿಕ ಕನಕದಾಸರ ತತ್ವದರ್ಶಗಳ ಬಗ್ಗೆ ತಿಳಿವಳಿಕೆ ನೀಡುವ ಆವಶ್ಯಕತೆ ಇದೆ.

– ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು,
ಕನಕ ಗುರುಪೀಠ, ಸುಕ್ಷೇತ್ರ ಕಾಗಿನೆಲೆ

Advertisement

Udayavani is now on Telegram. Click here to join our channel and stay updated with the latest news.

Next