Advertisement

ಕಂಬಳ ಓಟದ ಹುಮ್ಮಸ್ಸಿನಲ್ಲಿ ಹೊಸ ಶಿಬಿರಾರ್ಥಿಗಳು

06:00 AM Oct 27, 2018 | Team Udayavani |

ಕಾರ್ಕಳ: ಓಟಕ್ಕೆ ಸಿದ್ಧವಾಗಿ ನಿಂತಿರುವ ಕೋಣಗಳು, ಅವುಗಳ ಹಿಂದೆ ಓಡುವ ಕಟ್ಟುಮಸ್ತಾದ ಯುವಕರು. ಕಂಬಳ ಓಟದಲ್ಲಿ ಕೋಣಗಳು ಓಡಿದರೆ ಸಾಲದು. ಅದರ ಹಿಂದೆ ಓಡುವವರಿಗೂ ಸಾಮರ್ಥ್ಯ ಇರಬೇಕು. ಇದಕ್ಕಾಗಿಯೇ ಹುಟ್ಟಿಕೊಂಡದ್ದು ಕಂಬಳ ಓಟದ ತರಬೇತಿ ಶಿಬಿರ. 

Advertisement

ಕಂಬಳ ಸಂರಕ್ಷಣೆ ಮತ್ತು ತರಬೇತಿ ಅಕಾಡೆಮಿ  ವತಿಯಿಂದ ಮಿಯ್ನಾರು ಕಂಬಳ ಕ್ರೀಡಾಂಗಣದಲ್ಲಿ ಕಂಬಳ ಓಟ ಆಸಕ್ತ ಯುವಕರಿಗೆ ತರಬೇತಿ ನೀಡಲಾಗುತ್ತಿದೆ.  

12 ದಿನದ ಶಿಬಿರ 
ಸುಮಾರು 12 ದಿನಗಳ ಕಾಲ ನಡೆಯಲಿರುವ ಉಚಿತ ತರಬೇತಿ ಶಿಬಿರ ಈಗಾಗಲೇ ಆರಂಭಗೊಂಡಿ¨ ನವೆಂಬರ್‌ 2ರ ವರೆಗೆ ನಡೆಯಲಿದೆ. ಕಂಬಳ ಶಿಬಿರಾರ್ಥಿಗಳಿಗೆ ಮಾದರಿಯಲ್ಲಿ ವೈಜ್ಞಾನಿಕ ತರಬೇತಿ ನೀಡಲಾಗುತ್ತಿದೆ. ಈ ಬಾರಿ 27 ಉತ್ಸಾಹಿಗಳು ಭಾಗಿಯಾಗಿದ್ದಾರೆ.   

ಏನೆಲ್ಲ ತರಬೇತಿ? 
ಕೋಣಗಳ ಆಹಾರ ಪದ್ಧತಿ ತಿಳಿಯುವುದು, ಕಂಬಳ ಸ್ಪರ್ಧೆಗೆ ಹಗ್ಗ ಹೆಣೆಯುವುದು,  ನೊಗ ಕಟ್ಟುವುದು, ಒಟಕ್ಕೆ ಬಿಡುವಲ್ಲಿ ಕೋಣಗಳನ್ನು ನಿಲ್ಲಿಸುವುದು, ಹಿಡಿಯುವುದು,  ಓಡಿಸುವ ಕಲೆ, ಕಚ್ಚೆ, ಮುಂಡಾಸು ಕಟ್ಟಲೂ ಹೇಳಿಕೊಡಲಾಗುತ್ತದೆ. ಜಾನ್‌ಸಿರಿಲ್‌ ಡಿಸೋಜಾ ಸರಪಾಡಿ, ಶ್ರೀಧರ ಆಚಾರ್ಯ ಸಾಣೂರು, ವಿಶ್ವನಾಥ ಪ್ರಭು ಶಿರ್ವ, ವಿನಯ ಶೆಟ್ಟಿ ಸಾಣೂರು, ಚಂದ್ರಶೇಖರ ಶೆಟ್ಟಿ ಕೆಲ್ಲಪುತ್ತಿಗೆ, ದಯಾನಂದ ಪೂಜಾರಿ ಸಾಣೂರು, ಶ್ರೀಧರ್‌ ಕಲತ್ರಪಾದೆ ಕಂಬಳ ಪರಿಣತರು ತರಬೇತಿ ನೀಡುತ್ತಾರೆ. 

ನಾಲ್ಕು ತಂಡ  
27 ಮಂದಿ ಶಿಬಿರಾರ್ಥಿಗಳನ್ನು 4 ತಂಡಗಳಾಗಿ ಮಾಡಲಾಗಿದ್ದು ಲವ-ಕುಶ-ಕೋಟಿ-ಚೆನ್ನಯ ಎಂದು ವಿಭಾಗಿಸಲಾಗಿದೆ.  ಆ ತಂಡಗಳ ಮೂಲಲಕ ಕೆಲಸ ಹಂಚಲಾಗುತ್ತದೆ. ಕೋಣಗಳ ಆರೈಕೆಯನ್ನೂ ಮಾಡಬೇಕಿದೆ. 

Advertisement

ವ್ಯಕ್ತಿತ್ವ ವಿಕಸನ ತರಬೇತಿ
ಶಿಬಿರದಲ್ಲಿ ಮುಖ್ಯವಾಗಿ ಯುವಕರಿಗೆ ವ್ಯಕ್ತಿತ್ವ ವಿಕಸನದ ತರಬೇತಿಗಳನ್ನು ನೀಡಲಾಗುತ್ತದೆ. ಪ್ರತಿದಿನ ಆಯಾ ವಿಷಯಗಳ ಬಗ್ಗೆ ಒಬ್ಬೊಬ್ಬರು ಸಂಪನ್ಮೂಲ ವ್ಯಕ್ತಿಗಳು ಅದಕ್ಕಾಗಿ ಆಗಮಿಸುತ್ತಾರೆ.  ವ್ಯಕ್ತಿತ್ವ ವಿಕಸನ, ಯೋಗ ದೈಹಿಕ ಶಿಕ್ಷಣ ನಿರ್ದೇಶಕರಿಂದ ತರಬೇತಿ ನೀಡಲಾಗುತ್ತಿದೆ. 

ನಾಲ್ಕು ವರ್ಷಗಳ ಬಳಿಕ ಶಿಬಿರ
2011ರಲ್ಲಿ ಕಂಬಳ ಸಂರಕ್ಷಣೆಗಾಗಿ ಅಕಾಡೆಮಿ ಸ್ಥಾಪಿಸಿ ಮೊದಲ ಬಾರಿಗೆ ಶಿಬಿರ ನಡೆಸಲಾಗಿತ್ತು. ಅನಂತರ 2014ರ ವರೆಗೆ ಯಶಸ್ವಿಯಾಗಿ ಶಿಬಿರ ನಡೆದಿದೆ. ಆದರೆ ಆ ಬಳಿಕ ಕಂಬಳಕ್ಕೆ ಕಾನೂನಿನ ತೊಡಕು ಉಂಟಾಗಿ ಶಿಬಿರವೂ ನಿಂತಿತ್ತು. ಈಗ ಮತ್ತೆ ಶಿಬಿರ ಆಯೋಜಿಸಲಾಗಿದೆ. 150 ಮಂದಿಯಲ್ಲಿ 27 ಮಂದಿಯನ್ನು ಶಿಬಿರಕಆಯ್ಕೆ ಮಾಡಲಾಗಿದೆ. ವಿದ್ಯಾವಂತರು, ಉದ್ಯೋಗಸ್ಥರೂ ಶಿಬಿರದಲ್ಲಿದ್ದಾರೆ.

ಹೀಗಿವೆೆ ತರಬೇತಿ ದಿನಗಳು
ಬೆಳಗ್ಗೆ 5.15ಕ್ಕೆ ಎದ್ದು ನಿತ್ಯಕರ್ಮಗಳು, 6.15-7.15 ಯೋಗಾಭ್ಯಾಸ, 7.15-7.30 ಚಹಾ ವಿರಾಮ, 7.30-9 ವ್ಯಾಯಾಮ, 9.9.30 ಚಾ ತಿಂಡಿ, 9.30-10 ಸ್ವತ್ಛತೆ, 10.30-1 ಇತರ ತರಬೇತಿಗಳು, 1-2 ಊಟ, 2.30-4.30 ಉಪನ್ಯಾಸ ಹಾಗೂ ತರಬೇತಿ, 4.30-4.45 ಟೀ ವಿರಾಮ, 4.45-6 ವ್ಯಾಯಾಮ, 6-7 ಸ್ನಾನ, 7-8 ಅನಿಸಿಕೆ, 8.30-9 ಊಟ.

ಕಂಬಳದ ಉಳಿವಿಗಾಗಿ ಶಿಬಿರ
ಶಿಬಿರಾಧಿಕಾರಿಗಳ ಮಾರ್ಗ ದರ್ಶನದಲ್ಲಿ ಶಿಬಿರ ನಡೆಯುತ್ತಿದೆ. ನಮ್ಮ ಪರಂಪರೆಯನ್ನು ಉಳಿಸಿ ಕೊಳ್ಳಬೇಕು. ಹೊಸ ಯುವಕರು ಇದನ್ನು ಅರಿತುಕೊಂಡರೆ ಮಾತ್ರ ಭವಿಷ್ಯವಿದೆ. ಕೋಣ ಸಾಕಣೆ ಸಹಿತ ಕಂಬಳ ಕ್ರೀಡೆಯ ಪ್ರತೀ ವಿಚಾರ, ಪೂರಕ ಮಾಹಿತಿ ನೀಡಲಾಗುತ್ತಿದೆ. ವಿದ್ಯಾವಂತರೂ ಶಿಬಿರದಲ್ಲಿದ್ದಾರೆ.
ಗುಣಪಾಲ ಕಡಂಬಅಕಾಡೆಮಿಯ ಸಂಚಾಲಕರು

ಆಚರಣೆ ಉಳಿಯಬೇಕು
ಕಂಬಳ ನಮ್ಮ ನಾಡಿನ ಸಂಸ್ಕೃತಿ. ತುಳುನಾಡಿನ ಈ ಆಚರಣೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಕಂಬಳದ ಶಿಬಿರಕ್ಕೆ ಬಂದಿದ್ದೇನೆ. ಶಿಬಿರದಲ್ಲಿ  ಕಂಬಳದ ಚಟುವಟಿಕೆ ಮಾತ್ರವಲ್ಲದೇ ವ್ಯಕ್ತಿತ್ವ ವಿಕಸನದ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ.
ಅಭಿಷೇಕ್‌ ಪಾವಂಜೆ, ಶಿಬಿರಾರ್ಥಿ
 
ಜಿವೇಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next