Advertisement

ಐತಿಹಾಸಿಕ ಕಥೆ ಹೇಳುವ ಕೆಲಗೇರಿಯ ಕಲ್ಮೇಶ್ವರ

10:02 PM Jun 05, 2019 | Sriram |

ಕಲ್ಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಅನ್ನೋ ನಂಬಿಕೆ ಹಲವರಲ್ಲಿದೆ.ಇಲ್ಲಿ ಪ್ರತಿ ವರ್ಷ ನಡೆಯುವ ಬಸವ ಜಯಂತಿಗೆ ಸಾವಿರಾರು ಮಂದಿ ಬರುತ್ತಾರೆ ಎಂದು ಕೇಳಿದ್ದೆ.ಹೀಗಾಗಿ ಇಲ್ಲಿ ಗೊಮ್ಮೆ ಹೋಗಿ ದೇವರ ದರ್ಶನ ಮಾಡಿ ಬರುವ ಹಂಬಲ ಮನದಲ್ಲಿ ಚಿಗುರಿತ್ತು.

Advertisement

ಧಾರವಾಡ ತಾಲೂಕಿನ ಕೆಲಗೇರಿಯಲ್ಲಿರುವ ಶ್ರೀ ಕಲ್ಮೇಶ್ವರ ಎಂದರೆ ಈಶ್ವರನ ಪ್ರತಿರೂಪವೇ ಅನ್ನೋ ಮನೋಭಾವ ಭಕ್ತರಲ್ಲಿದೆ. ಇಲ್ಲಿನ ಕಲ್ಮೇಶ್ವರ ಅಥವಾ ಈಶ್ವರ ದೇವರಿಗೆ ನಿತ್ಯ ಪೂಜೆ ನಡೆಯುತ್ತದೆ. ಈ ದೇವಸ್ಥಾನದ ರಚನೆಯೇ ವಿಭಿನ್ನವಾಗಿದೆ. ಕೋಲಾರದ ಕೋಟಿ ಲಿಂಗೇಶ್ವರದಲ್ಲಿರುವ ಅತ್ಯಂತ ದೊಡ್ಡ ಗಾತ್ರದ ಶಿವಲಿಂಗವಿದ್ದು, ಅದರೊಳಗಡೆ ಬೃಹತ್‌ ದೇವಾಲಯವಿದೆ. ಈ ರೀತಿಯ ಶಿವಲಿಂಗದ ಒಳಗಡೆ ದೇವಸ್ಥಾನದಂಥ ಪರಿಕಲ್ಪನೆಯ ಕನಸನ್ನು ಕಂಡವರು ವಿಜಯಲಕ್ಷ್ಮೀ  ವೀರಯ್ಯ ಲೂತಿಮಠ.

ಹಾವೇರಿಯಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಆಶ್ರಮದಲ್ಲಿ ಇದೇ ಮಾದರಿಯ ಪ್ರಾರ್ಥನ ಮಂದಿರವಿದ್ದು, ಇದರ ತಳಭಾಗದಲ್ಲಿ ಚೌಕಾಕಾರದ ಪಂಚಾಂಗವಿದೆ. ಇದರ ಮೇಲ್ಭಾಗದಲ್ಲಿ ಬೃಹತ್‌ ಶಿವಲಿಂಗವನ್ನು ಸ್ಥಾಪಿಸಿ ಶಿವಲಿಂಗದ ಒಳಗಡೆ ಪ್ರಾರ್ಥನೆ ಮಂದಿರವನ್ನು ನಿರ್ಮಿಸಲಾಗಿದೆ. ಇದನ್ನು ಗಮನಿಸಿದ ವಿಜಯಲಕ್ಷ್ಮೀ ಲೂತಿಮಠ ಅವರು, ಗ್ರಾಮದ ಹಿರಿಯರನ್ನೂ, ದೇವಾಲಯ ನಿರ್ಮಾಣ ಕಮಿಟಿಯ ಸದಸ್ಯರನ್ನು ಹಾವೇರಿಯ ಬ್ರಹ್ಮಕುಮಾರಿ ಆಶ್ರಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಮಾದರಿಯನ್ನು ಅಧ್ಯಯನ ಮಾಡಿ, ಇದೇ ಮಾದರಿಯಲ್ಲೇ ಕಲ್ಮೇಶ್ವರ ದೇವಸ್ಥಾನ ಕಟ್ಟಬೇಕೆಂದು ನಿರ್ಧರಿಸಿದರು. ಹೀಗಾಗಿ, ದೇವಾಲ ಯದ ತಳಭಾಗವು ಚೌಕಾಕಾರದಲ್ಲಿದ್ದು, ಮುಂಭಾಗವು ವೃತ್ತಾಕಾರ ವಾಗಿದೆ.

ಕಲ್ಮೇಶ್ವರ ದೇವಸ್ಥಾನಕ್ಕೆ ದೊಡ್ಡ ಇತಿಹಾಸವೇ ಇದೆ. ಇದು ಕೆಲಗೇರಿ ಕೆರೆಯ ದಂಡೆಯ ಮೇಲಿದೆ. 1911ರಲ್ಲಿ ಈ ಕೆರೆಯನ್ನು ಸರ್‌.ಎಂ. ವಿಶ್ವೇಶ್ವರಯ್ಯ ನವರು ನಿರ್ಮಿಸಿದರು. 250 ಎಕರೆ ವ್ಯಾಪ್ತಿಯಲ್ಲಿರುವ ಈ ಕೆರೆಯ ನಿರ್ಮಾಣದ ಪೂರ್ವದಲ್ಲೇ ಕಲ್ಮೇಶ್ವರನ ಗುಡಿಯು ಈ ಸ್ಥಳದಲ್ಲಿತ್ತೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಕಲ್ಮೇಶ್ವರನ ಗುಡಿಯ ಜಾಗವನ್ನಷ್ಟೇ ಬಿಟ್ಟು ಮೂರೂ ದಿಕ್ಕಿನ ಜಾಗದಲ್ಲಿ ಕೆರೆ ನಿರ್ಮಿಸಿದ್ದಾರೆ.

ಶತಮಾನದ ಹಿಂದೆಯೇ ಗ್ರಾಮದ ದಿ. ವಿರನಗೌಡ ವೀರಭದ್ರ ಪಾಟೀಲರು ಮೊದಲು ಕಲ್ಮೇಶ್ವರ ದೇವಾಲಯದ ನವೀಕರಣಕ್ಕೆ ಕೈ ಹಾಕಿದರು. ಆಗ ಗ್ರಾಮದಲ್ಲಿ ಕಡು ಬಡತನವಿತ್ತಂತೆ. ಆದ್ದರಿಂದ ಈ ದೇವಾಲಯದ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರವೂ ಅಷ್ಟಾಗಿ ಇರಲಿಲ್ಲ. ಹಾಗಾಗಿ, ಒಂದು ಜೋಡಿ ಎತ್ತು ಹೊಂದಿರುವ ಗ್ರಾಮಸ್ಥರು ಒಂದು ಚೀಲ ಭತ್ತವನ್ನು ಹಾಗೂ ಎರಡು ಜೋಡಿ ಎತ್ತನ್ನು ಹೊಂದಿರುವವರು ಎರಡು ಚೀಲ ಭತ್ತವನ್ನು ದೇಣಿಗೆಯಾಗಿ ನೀಡಿ, ಗುಡಿ ಕಟ್ಟಲು ನೆರವಾದರು. ಹೀಗೆ ಕೆಲಗೇರಿಯ ಗ್ರಾಮಸ್ಥರಿಂದ ಭತ್ತವನ್ನು ದೇಣಿಗೆಯಾಗಿ ಪಡೆದು ಹಳೆಯ ಕಲ್ಮೇಶ್ವರ ಗುಡಿಯನ್ನು ಕಟ್ಟಿದರಂತೆ. ಆನಂತರ ದೇವಾಲಯವನ್ನು ಮತ್ತೆ ವಿಸ್ತರಿಸಲು 2009ರಲ್ಲಿ ಕಾಶಿ ಪೀಠದ ಜಗದ್ಗುರುಗಳು ಗುದ್ದಲಿ ಪೂಜೆ ಮಾಡಿದರು. ಇದು 2014ರಲ್ಲಿ ಪೂರ್ಣಗೊಂಡು ಕಾಶಿ ಜಗದ್ಗುರುಗಳ ಅಮೃತಹಸ್ತದಿಂದ ಆರಂಭಗೊಂಡು ಹೊಸ ರೂಪ ಪಡೆದಿದೆ.

Advertisement

ಇಲ್ಲಿ ಬಸವ ಜಯಂತಿ,ವರ್ಷಾವಧಿ ಉತ್ಸವ,ಶಿವರಾತ್ರಿ ವೈಭವ ಅದ್ದೂರಿಯಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಮಹಾತಪಸ್ವಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಲೋಕಕಲ್ಯಾಣಾರ್ಥವಾಗಿ ತಪಸ್ಸನ್ನಾಚರಿಸುತ್ತಾ ಪ್ರಪಂಚ ಪರ್ಯಟನೆ ನಡೆಸಿ ಕೆಲಗೇರಿಗೆ ಬಂದಿದ್ದರು ಎನ್ನುವುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ.

ರೂಟ್‌ ಮ್ಯಾಪ್‌
·  ಮಂಗಳೂರಿನಿಂದ  ಧಾರವಾಡಕ್ಕೆ 367 ಕಿ.ಮೀ. ದೂರವಿದೆ.
·  ಸಾಕಷ್ಟು ಬಸ್‌ ಸೌಲಭ್ಯವಿದೆ.
·  ಧಾರವಾಡ ಪೇಟೆಯಿಂದ ಸ್ವಲ್ಪ ದೂರದಲ್ಲಿರುವ ಕಲ ಗೇರಿಗೆ ಬಸ್‌, ರಿಕ್ಷಾ
ವ್ಯವಸ್ಥೆಯಿದೆ.
·  ಧಾರವಾಡ ಪೇಟೆ ಹತ್ತಿರದಲ್ಲಿರುವುದರಿಂದ ಊಟ, ವಸ ತಿಗೆ ಸಮಸ್ಯೆಯಿಲ್ಲ.

-   ಸಂತೋಷ್‌ ರಾವ್‌ ಪೆರ್ಮುಡ

ನೀವು ಇತ್ತೀಚೆಗೆ ಸ್ನೇಹಿತರು, ಬಂಧುಗಳೊಂದಿಗೆ ತೆರಳಿ ರುವ ಪ್ರವಾಸಿ ತಾಣಗಳಲ್ಲಿ ಕಂಡು ಬಂದ ಅದ್ಭುತ ವಿಚಾರ ಗಳ ಜತೆಗೆ ಅಲ್ಲಿ ನಿಮಗೇನು ಖುಷಿ ಕೊಟ್ಟಿತು ಎಂಬುದನ್ನು ಸೇರಿಸಿ ಇಲ್ಲಿ ನಿಮ್ಮ ಪ್ರವಾಸ ಕಥನಗಳನ್ನು ಬರೆಯಬಹುದು.
ನಿಮ್ಮ ಅನುಭವ ಮತ್ತು ನೀವು ದಾಖಲಿಸಿದ ಮಾಹಿತಿಯೊಂದಿಗೆ ಒಳ್ಳೆಯ ಫೋಟೋ ಕೊಡಿ. ಪ್ರಕಟಿಸುತ್ತೇವೆ. ನಮ್ಮ ಇ-ಮೇಲ್‌ ವಿಳಾಸ: mlr.sudina@udayavani.com,
ವಾಟ್ಸಪ್‌ ನಂ.76187 74529

Advertisement

Udayavani is now on Telegram. Click here to join our channel and stay updated with the latest news.

Next