Advertisement

ಕೆಲಗೇರಿಯ ಕಲ್ಮೆಶ್ವರ ದೇವಾಲಯ

09:13 AM Jun 02, 2019 | Vishnu Das |

ಕಲ್ಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಬಸವ ಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ನಂತರ ಐದು ದಿನಗಳ ಕಾಲ ಜಾತ್ರೆ ಜರುಗುತ್ತದೆ.

Advertisement

ಧಾರವಾಡ ತಾಲ್ಲೂಕಿನ ಕೆಲಗೇರಿಯಲ್ಲಿರುವ ಶ್ರೀಕಲ್ಮೇಶ್ವರ ಎಂದರೆ ಈಶ್ವರನ ಪ್ರತಿರೂಪವೇ ಅನ್ನೋ ಮನೋಭಾವ ಭಕ್ತರಲ್ಲಿದೆ. ಇಲ್ಲಿನ ಕಲ್ಮೇಶ್ವರ ಅಥವಾ ಈಶ್ವರ ದೇವರಿಗೆ ನಿತ್ಯ ಪೂಜೆ ನಡೆಯುತ್ತದೆ. ಈ ದೇವಸ್ಥಾನದ ರಚನೆಯೇ ವಿಭಿನ್ನವಾಗಿದೆ. ಕೋಲಾರದ ಕೋಟಿ ಲಿಂಗೇಶ್ವರದಲ್ಲಿರುವ ಅತ್ಯಂತ ದೊಡ್ಡ ಗಾತ್ರದ ಶಿವಲಿಂಗವಿದ್ದು, ಅದರೊಳಗಡೆ ಬೃಹತ್‌ ದೇವಾಲಯವಿದೆ. ಈ ರೀತಿಯ ಶಿವಲಿಂಗದ ಒಳಗಡೆ ದೇವಸ್ಥಾನದಂಥ ಪರಿಕಲ್ಪನೆಯ ಕನಸನ್ನು ಕಂಡವರು ಶ್ರೀಮತಿ ವಿಜಯಲಕ್ಷಿ$¾ ವೀರಯ್ಯ ಲೂತಿಮಠ. ಹಾವೇರಿಯಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಆಶ್ರಮದಲ್ಲಿ ಇದೇ ಮಾದರಿಯ ಪ್ರಾರ್ಥನಾ ಮಂದಿರವಿದ್ದು, ಇದರ ತಳಭಾಗದಲ್ಲಿ ಚೌಕಾಕಾರದ ಪಂಚಾಂಗವಿದೆ. ಇದರ ಮೇಲ್ಭಾಗದಲ್ಲಿ ಬೃಹತ್‌ ಶಿವಲಿಂಗವನ್ನು ಸ್ಥಾಪಿಸಿ ಶಿವಲಿಂಗದ ಒಳಗಡೆ ಪ್ರಾರ್ಥನೆ ಮಂದಿರವನ್ನು ನಿರ್ಮಿಸಲಾಗಿದೆ. ಇದನ್ನು ಗಮನಿಸಿದ ವಿಜಯಲಕ್ಷಿ$¾à ಲೂತಿಮಠ ಅವರು, ಗ್ರಾಮದ ಹಿರಿಯರನ್ನೂ, ದೇವಾಲಯ ನಿರ್ಮಾಣ ಕಮಿಟಿಯ ಸದಸ್ಯರನ್ನು ಹಾವೇರಿಯ ಬ್ರಹ್ಮಕುಮಾರಿ ಆಶ್ರಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಮಾದರಿಯನ್ನು ಅಧ್ಯಯನ ಮಾಡಿ, ಇದೇ ಮಾದರಿಯಲ್ಲೇ ಕಲ್ಮೇಶ್ವರ ದೇವಸ್ಥಾನ ಕಟ್ಟಬೇಕೆಂಬ ನಿರ್ಧರಿಸಿದರು. ಹೀಗಾಗಿ, ದೇವಾಲಯದ ತಳಭಾಗವು ಚೌಕಾಕಾರದಲ್ಲಿದ್ದು, ಮುಂಭಾಗವು ವೃತ್ತಾಕಾರವಾಗಿದೆ.

ಕಲ್ಮೇಶ್ವರ ದೇವಸ್ಥಾನಕ್ಕೆ ದೊಡ್ಡ ಇತಿಹಾಸವೇ ಇದೆ. ಇದು ಕೆಲಗೇರಿ ಕೆರೆಯ ದಂಡೆಯ ಮೇಲಿದೆ. 1911ರಲ್ಲಿ ಈ ಕೆರೆಯನ್ನು ಸರ್‌.ಎಂ.ವಿಶ್ವೇಶ್ವರಯ್ಯರವರು ನಿರ್ಮಿಸಿದರು. 250 ಎಕರೆ ವ್ಯಾಪ್ತಿಯಲ್ಲಿರುವ ಈ ಕೆರೆಯ ನಿರ್ಮಾಣದ ಪೂರ್ವದಲ್ಲೆ ಕಲ್ಮೇಶ್ವರನ ಗುಡಿಯು ಈ ಸ್ಥಳದಲ್ಲಿತ್ತೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಕಲ್ಮೇಶ್ವರನ ಗುಡಿಯ ಜಾಗವನ್ನಷ್ಟೇ ಬಿಟ್ಟು ಮೂರೂ ದಿಕ್ಕಿನ ಜಾಗದಲ್ಲಿ ಕೆರೆ ನಿರ್ಮಿಸಿದ್ದಾರೆ.

ಶತಮಾನದ ಹಿಂದೆಯೇ ಗ್ರಾಮದ ದಿ.ವಿರನಗೌಡ ವೀರಭದ್ರ ಪಾಟೀಲರು ಮೊದಲು ಕಲ್ಮೇಶ್ವರ ದೇವಾಲಯದ ನವೀಕರಣಕ್ಕೆ ಕೈ ಹಾಕಿದರು. ಆಗ ಗ್ರಾಮದಲ್ಲಿ ಕಡು ಬಡತನವಿತ್ತಂತೆ. ಆದ್ದರಿಂದ ಈ ದೇವಾಲಯದ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರವೂ ಅಷ್ಟಾಗಿ ಇರಲಿಲ್ಲ. ಹಾಗಾಗಿ, ಒಂದು ಜೋಡಿ ಎತ್ತು ಹೊಂದಿರುವ ಗ್ರಾಮಸ್ಥರು ಒಂದು ಚೀಲ ಭತ್ತವನ್ನು ಹಾಗೂ ಎರಡು ಜೋಡಿ ಎತ್ತನ್ನು ಹೊಂದಿರುವವರು ಎರಡು ಚೀಲ ಭತ್ತವನ್ನು ದೇಣಿಗೆಯಾಗಿ ನೀಡಿ, ಗುಡಿ ಕಟ್ಟಲು ನೆರವಾದರು. ಹೀಗೆ ಕೆಲಗೇರಿಯ ಗ್ರಾಮಸ್ಥರಿಂದ ಭತ್ತವನ್ನು ದೇಣಿಗೆಯಾಗಿ ಪಡೆದು ಹಳೆಯ ಕಲ್ಮೇಶ್ವರ ಗುಡಿಯನ್ನು ಕಟ್ಟಿದರಂತೆ. ಆನಂತರ ದೇವಾಲಯವನ್ನು ಮತ್ತೆ ವಿಸ್ತರಿಸಲು 2009ರಲ್ಲಿ ಕಾಶಿ ಪೀಠದ ಜಗದ್ಗುರುಗಳು ಗುದ್ದಲಿ ಪೂಜೆ ಮಾಡಿದರು. ಇದು 2014ರಲ್ಲಿ ಪೂರ್ಣಗೊಂಡು ಕಾಶಿ ಜಗದ್ಗುರುಗಳ ಅಮೃತಹಸ್ತದಿಂದ ಆರಂಭ ಗೊಂಡು ಹೊಸ ರೂಪ ಪಡೆದಿದೆ.

Advertisement

ಕಲ್ಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಬಸವ ಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ನಂತರ ಐದು ದಿನಗಳ ಕಾಲ ಜಾತ್ರೆ ಜರುಗುತ್ತದೆ. ಲೋಕೂರು ಗ್ರಾಮ ದೇವತೆಗಳಾದ ದ್ಯಾಮವ್ವ ಮತ್ತು ದುರ್ಗವ್ವ ಎಂಬ ಇಬ್ಬರು ಕಲ್ಮೇಶ್ವರ ಸಹೋದರಿಯರಾಗಿದ್ದು, ವರ್ಷಾವಧಿ ಜಾತ್ರೆಯಂದು ಲೋಕೂರು ಗ್ರಾಮದೇವತೆಗಳ ದೇವಸ್ಥಾನದಲ್ಲಿ ಇವರಿಗೆ ಉಡಿ ತುಂಬಿದ ಕಾಯಿಯನ್ನು ತಂದ ನಂತರವಷ್ಟೇ ಕಲ್ಮೇಶ್ವರನಿಗೆ ಕೆಲಗೇರಿಯಲ್ಲಿ ರಥೋತ್ಸವವು ಜರುಗುವುದು.
ಶಿವರಾತ್ರಿ ವೈಭವ

ಶಿವರಾತ್ರಿಯಂದು ಕಲ್ಮೇಶ್ವರ ಲಿಂಗಕ್ಕೆ ವಿಶೇಷ ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ, ಭಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಕಲ್ಮೇಶ್ವರ ವರ್ಷಾವಧಿ ಜಾತ್ರೆಯಲ್ಲಿ ವೈವಿಧ್ಯಮಯ ಸ್ಪರ್ಧೆಗಳು ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಎತ್ತಿನ ಗಾಡಿ ಓಟ, ಟಗರು ಕಾಳಗ, ಸಾಮೂಹಿಕ ವಿವಾಹ, ಯುವಕರಿಗೆ ಕಲ್ಲು ಎತ್ತುವ ಶಕ್ತಿ ಪ್ರದರ್ಶನ, ಕಾಳಿನ ಚೀಲಗಳನ್ನು ಎತ್ತುವಿಕೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಮಹಾತಪಸ್ವಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಲೋಕ ಕಲ್ಯಾಣಾರ್ಥವಾಗಿ ತಪಸ್ಸನ್ನಾಚರಿಸುತ್ತಾ ಪ್ರಪಂಚ ಪರ್ಯಟನೆ ನಡೆಸಿ ಕೆಲಗೇರಿಗೆ ಬಂದಿದ್ದರು ಎನ್ನುತ್ತದೆ ಇತಿಹಾಸ.

ಲೇಖನ
ಸಂತೋಷ ರಾವ್‌ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160

ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next