Advertisement

ಅತಿವೃಷ್ಟಿ ತಂದ ಆಪತ್ತು: ಪ್ರವಾಹಕ್ಕೆ ಬದುಕು ದುಸ್ತರ

05:12 PM Oct 17, 2020 | Suhan S |

ಕಲಬುರಗಿ: ಹಿಂದೆಂದು ಕಂಡರೀಯದ ಭಾರಿ ಪ್ರಮಾಣದ ಮೇಘ ಸ್ಫೋಟದಿಂದ ಉಂಟಾದ ಪ್ರವಾಹ  ದಿಂದ ಜಿಲ್ಲಾದ್ಯಂತ ನೂರಾರು ವಿದ್ಯುತ್‌ ಕಂಬಗಳು  ನೀರಲ್ಲಿ ಮುಳುಗಿವೆ. ಹತ್ತಾರು ಟ್ರಾನ್ಸ್‌ಫಾರ್ಮಗಳು ಸುಟ್ಟಿದ್ದರೆ, ಸಾವಿರಾರು ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ನೂರಾರು ಗ್ರಾಮಗಳು ಕಳೆದ ನಾಲ್ಕು ದಿನಗಳಿಂದ ಕಗ್ಗತ್ತಲಲ್ಲಿವೆ.

Advertisement

ಒಂದೇಡೆ ಕೋವಿಡ್ ಕಾಟ, ಮತ್ತೂಂದೆಡೆ ಪ್ರವಾಹ ಭೀತಿ. ಇದೆಲ್ಲರ ನಡುವೆ ಕೊಡ ಕುಡಿಯುವ ನೀರು ಸಿಗದ ಪರಿಸ್ಥಿತಿ. ಮನೆಯಲ್ಲಿದ್ದ ದವಸ-ಧಾನ್ಯಗಳು ನೀರು ಪಾಲಾಗಿ ಅಕ್ಷರಶಃ ಬೀದಿಗೆ ಬಿದ್ದ ದುಸ್ಥಿತಿ. ಮೇಲಾಗಿ ಸುಖ-ದುಃಖ ಹಂಚಿಕೊಳ್ಳಬೇಕೆಂದರೆ ಮೊಬೈಲ್‌ ಸಂಪೂರ್ಣ ಬಂದಾಗಿವೆ. ವಿದ್ಯುತ್‌ ಇಲ್ಲದಿದ್ದರೆ ಮೊಬೈಲ್‌ನಲ್ಲಿ ಚಾರ್ಜ್‌ವೂ ಇಲ್ಲ, ಸರ್ವಿಸವೂ ಇಲ್ಲ.

ನೂರಕ್ಕೂ ಹೆಚ್ಚು ಹಳ್ಳಿಗಳು ಕಗ್ಗತ್ತಲಲ್ಲಿ: ಅಫ‌ಜಲಪುರ ತಾಲೂಕಿನ ಕರ್ಜಗಿ ದೊಡ್ಡ ಗ್ರಾಮದಲ್ಲಿ ವಿದ್ಯುತ್‌ ಸರಬರಾಜು ಉಪಕೇಂದ್ರದ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ (ಟಿಸಿ) ನೀರಲ್ಲಿ ನಿಂತು ಸುಟ್ಟು ಹೋಗಿದೆ.ಅದೇ ರೀತಿ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸಹ ಸುಟ್ಟಿದ್ದರಿಂದ ಈಎರಡು ವಲಯಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿವೆ.

ಅದೇ ರೀತಿ ಕಾಳಗಿ ವ್ಯಾಪ್ತಿ ಸೇರಿ ಜಿಲ್ಲಾದ್ಯಂತ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಂಬ ಬಿದ್ದಿದ್ದರಿಂದ ಹಾಗೂ ಕಂಬುಗಳು ನೀರಲ್ಲಿ ನಿಂತ ಪರಿಣಾಮದಿಂದ ವಿದ್ಯುತ್‌ ಕಡಿತಗೊಂಡಿದೆ. ಹೀಗಾಗಿ ಈ ಎಲ್ಲ ಗ್ರಾಮಗಳಲ್ಲಿ ಒಂದು ಕೊಡ ಶುದ್ಧ ಕುಡಿಯಲು ನೀರು ಸಿಕ್ತಾ ಇಲ್ಲ. ಮಳೆ ನೀರನ್ನೇ ಕಾಯಿಸಿ ಕುಡಿಯುತ್ತಿದ್ದಾರೆ. ಅಲ್ಲಲ್ಲಿ ಕಾಳಜಿ ಕೇಂದ್ರ ತೆಗೆದಿದ್ದರೂ ಸುರಕ್ಷತೆ ಹಾಗೂ ಸ್ವತ್ಛತೆ ಇಲ್ಲದ ಕಾರಣ. ಜನರ್ಯಾರು ಕೇಂದ್ರಗಳತ್ತ ಸುಳಿಯುತ್ತಿಲ್ಲ. ಮಳೆಯಿಂದ ಹಾವು, ಚೇಳು ಕಾಟವೊಂದು ಕಾಡ್ತಾ ಇದೆ. ಹೀಗಾಗಿ ನಮಗೆ ಬಂದ ಕಷ್ಟ ಇನ್ನಾರಿಗೂ ಬೇಡ ಎನುತ್ತಿದ್ದಾರೆ ಸಂತ್ರಸ್ತರು. ತಮಗೆ ಈಗ 80 ವರ್ಷ, 70 ವರ್ಷಗಳಾಗಿವೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಮಳೆ ಬಂದಿಲ್ಲ ಹಾಗೂ ಹೀಗೆ ಒಮ್ಮೆಯೂ ಹೈರಾಣ ಆಗಿರಲಿಲ್ಲ ಎಂದು ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದ ಶರಣಬಸಪ್ಪ ಹಾಗೂ ಅಫ‌ಜಲಪುರ ತಾಲೂಕಿನ ಕರ್ಜಗಿಯ ಮಾಳಪ್ಪ, ಫಿರೋಜಾಬಾದ್‌ನ ಉಮೇಶ ಮಾಮನಿ, ಮಹಾದೇವಪ್ಪ ಪೂಜಾರಿ ಹೇಳುತ್ತಾರೆ.

ಈಗಿನ ಪ್ರವಾಹ ಭಿನ್ನ: ಜಿಲ್ಲೆಯಲ್ಲಿ ಈ ಹಿಂದೆ ಪ್ರವಾಹ ಬಂದಾಗ ನದಿ ತೀರದಲ್ಲಷ್ಟೇ ಅನಾಹುತ ಪರಿಸ್ಥಿತಿ ನಿರ್ಮಾಣವಾಗಿತ್ತು. ಭೀಮಾ ನದಿಯುದ್ದಕ್ಕೂ ಪ್ರವಾಹವು ಮೂರ್‍ನಾಲ್ಕು ದಿನ ಇರುತ್ತಿತ್ತು. ಆದರೆ, ಈ ಸಲ ಇಡೀ ಜಿಲ್ಲಾದ್ಯಂತ ಪ್ರವಾಹ ಪರಿಸ್ಥಿತಿ ಇರುವುದರಿಂದ ಜಿಲ್ಲಾಡಳಿತ ಈಗ ಕೈಗೊಂಡಿರುವ ಪರಿಹಾರೋಪದ ಕ್ರಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

Advertisement

ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಜನತೆಯನ್ನುಸಂರಕ್ಷಿಸಲು ಹಾಗೂ ತಕ್ಷಣವೇ ಸ್ಪಂದಿಸಲು ಜಿಲ್ಲಾಡಳಿತ ಸೂಕ್ತ ಅನುದಾನ ಬಿಡುಗಡೆ ಮಾಡುವುದರ ಜತೆಗೆ ಕೋವಿಡ್ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಶಾಲೆ-ದೇವಾಲಯ ಸೇರಿ ಇತರೆಡೆ ವ್ಯಾಪಕವಾಗಿ ಗಂಜಿ ಕೇಂದ್ರಗಳನ್ನು ತೆರೆದು ಶುದ್ಧ ಕುಡಿಯುವ ನೀರು ಹಾಗೂ ಊಟ ನೀಡಿದಲ್ಲಿ ಮಾತ್ರ ಜನರಿಗೆ ಸ್ವಲ್ಪ ಪ್ರಮಾಣದಲ್ಲಾದರೂ ಸ್ಪಂದಿಸಿದಂತಾಗುತ್ತದೆ ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿ ಈ ಹಿಂದೆ ನಿಭಾಸಿದ್ದರಕ್ಕಿಂತ ಹತ್ತು ಪಟ್ಟು ಜಾಸ್ತಿವಿದೆ. ಹೀಗಾಗಿ ಅಧಿಕಾರಿಗಳು ಮೈ ಮರೆಯಬಾರದು. ಉಸ್ತುವಾರಿ ಸಚಿವರು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಂಕಷ್ಟದಲ್ಲಿರುವ ಜನರನ್ನು ಕಾಪಾಡುವುದು ಬಹುಮುಖ್ಯವಾಗಿದೆ. ಪರಿಹಾರ ಕ್ರಮಗಳು ಕೊನೆ ವ್ಯಕ್ತಿಗೆ ತಲುಪುವ ಕೆಲಸ ತುರ್ತಾಗಿ ಆಗಬೇಕಿದೆ.

ಕರ್ಜಗಿ ವಲಯದಲ್ಲಿ ವಿದ್ಯುತ್‌ ಇಲ್ಲದೇ 50ಕ್ಕೂ ಹೆಚ್ಚು ಹಳ್ಳಿಗಳು ಕಗ್ಗತ್ತಲಲ್ಲಿ ಮುಳುಗಿದ್ದರಿಂದ ಕುಡಿಯಲು ನೀರು ಸಿಗದೇ ಜನರು ಪರದಾಡುತ್ತಿದ್ದಾರೆ. ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಕೊಚ್ಚಿಕೊಂಡು ಹೋಗಿರುವ ರಸ್ತೆ ಸೇತುವೆಗಳನ್ನು ತಾತ್ಕಾಲಿಕ ಮಾಡಿದಾಗ ಮಾತ್ರ ಟ್ಯಾಂಕರ್‌ಗಳನ್ನು ಗ್ರಾಮಕ್ಕೆ ಹೋಗಲು ಸಾಧ್ಯವಾಗುತ್ತದೆ. ಹೀಗಾಗಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು ಅವಶ್ಯಕವಿದೆ. -ಎಂ.ವೈ. ಪಾಟೀಲ್‌, ಶಾಸಕರು, ಅಫ‌ಜಲಪುರ

ಶುಕ್ರವಾರ ಕಂದಾಯ ಸಚಿವ ಆರ್‌. ಅಶೋಕ ಅವರು ಅತಿವೃಷ್ಟಿ ಹಾಗೂ ಪ್ರವಾಹ ಹಾನಿಯನ್ನು ಕಾಟಾಚಾರಕ್ಕೆ ವೀಕ್ಷಿಸಿದ್ದು, ಒಂದೇ ಒಂದು ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಲಿಲ್ಲ ಜತೆಗೆ ಪರಿಹಾರಕ್ಕೂ ಮುಂದಾಗಲಿಲ್ಲ. ಹಿಂದೆಂದು ಕಂಡರೀಯದಶತಮಾನದ ಮೇಘ ಸ್ಫೋಟವಾಗಿದ್ದರೂ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದು ಈ ಮೂಲಕ ತೋರಿಸುತ್ತದೆ. -ಡಾ| ಅಜಯಸಿಂಗ್‌, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ

 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next