Advertisement

ಮಣ್ಣು ಮುಕ್ಕಿದ ಮುಂಗಾರು ಬೆಳೆ!

06:32 PM Aug 05, 2021 | Team Udayavani |

ವಾಡಿ (ಚಿತ್ತಾಪುರ): ಕಳೆದ ಏರಡು ವರ್ಷಗಳಿಂದ ನಿರಂತರ ಅತಿವೃಷ್ಠಿಗೆ ತುತ್ತಾಗುತ್ತಿರುವ ಮುಂಗಾರು ಬೆಳೆ, ಈ ವರ್ಷವೂ ಮಹಾ ಮಳೆಗೆ ಮುಗ್ಗರಿಸಿ ಮಣ್ಣು ಮುಕ್ಕಿವೆ. ಹವಮಾನದ ವೈಪರಿತ್ಯದ ಫಲವಾಗಿ ವರ್ಷಧಾರೆ ಆರ್ಭಟಿಸಿದ್ದು, ಜಮೀನುಗಳು ತತ್ತರಿಸಿ ಬೆಳೆ ಸರ್ವನಾಶಗೈದಿವೆ.

Advertisement

ಚಿತ್ತಾಪುರ ತಾಲೂಕಿನಾಧ್ಯಂತ ಕೊಳೆತ ಹೆಸರು ಬೆಳೆಗಳದ್ದೇ ದರ್ಶನ. ವಾಡಿ, ನಾಲವಾರ, ಸನ್ನತಿ, ರಾವೂರ ವಲಯದಲ್ಲಿ ಭೂಮಿಯ ತೇವಾಂಶ ಅತಿಹೆಚ್ಚಳದಿಂದ ಹೆಸರು ಬೆಳೆಯ ಹಸಿರೆಲೆಗಳಿಗೆ ಹಳದಿ ರೋಗ ಬಾಧಿಸಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕೆಸರಿನ ಹೂಳಿನಲ್ಲಿ ಕೊಳೆತು ಹಾಳಾದ ಫಸಲಿಂದಾಗಿ ಇಳುವರಿಗೆ ಕುತ್ತು ಬಂದೆರೆಗಿದೆ. ನೀರು ಹೊತ್ತು ನಿಂತ ಹೊಲಗಳಲ್ಲಿನ ಹೆಸರು ಬೆಳೆಯ ಹಸಿರೆಲೆಗಳು ಹಳಿದಿ ಬಣ್ಣಕ್ಕೆ ಮರಳಿದ್ದು ಒಂದೆಡೆಯಾದರೆ, ಪ್ರವಾಹಕ್ಕೆ ಸಿಲುಕಿ ನರಳಿದ ಸಾವಿರಾರು ಎಕರೆ ಕೃಷಿ ಭೂಮಿಗಳ ಮೇಲೆ ಹಸಿ ಬರದ ಛಾಯೆ ಮೂಡಿದೆ.

ಹೆಸರು ಬೆಳೆ ಕೃಷಿಗೆ ಕಡಿಮೆ ವೆಚ್ಚವಾದರೂ ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಒಕ್ಕಲಿಗರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಬಿತ್ತನೆ ಮಾಡಿದ್ದಾರೆ. ಕೀಟ ಬಾಧೆ ಒಕ್ಕರಿಸಿ ಎಲೆಗಳು ಪುಡಿಪುಡಿಯಾಗಿವೆ. ಜಿಗಿ ಹುಳು, ಹೇನು, ನಂಜು ರೋಗ ಮತ್ತು ಬೂದಿ ರೋಗ ತಗುಲಿ ಬೆಳೆ ನೆಲಕಚ್ಚಿದೆ. ಬಂಪರ್ ಬೆಳೆ ಹಾಗೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಅತಿವೃಷ್ಠಿಯ ಬರಸಿಡಿಲು ಬಡಿದಿದೆ.

ಬಿತ್ತನೆಗೆ ಖರ್ಚು ಮಾಡಿದ ಬಂಡವಾಳ ಅಕ್ಷರಶಃ ನೀರುಪಾಲಾಗಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ರೈತರು ಔಷಧಿ ಸಿಂಪರಣೆ ಮಾಡುತ್ತಿದ್ದಾರೆ. ಬೇಸಾಯಗಾರರ ಬೆವರು ಕೂಡ ಮಣ್ಣಿಗೆ ಸೇರಿ ಕಣ್ಣೀರಾಗಿ ಹರಿದಿದೆ.

ಮಳೆಯ ಹೊಡೆತಕ್ಕೆ ಸಿಕ್ಕು ನರಳುತ್ತಿರುವ ರೈತರಿಗೆ ಧೈರ್ಯ ಹೇಳಿ ಪರ್ಯಾಯ ಮಾರ್ಗ ತೋರಿಸಬೇಕಾದ ಕೃಷಿ ಇಲಾಖೆಯ ಅಧಿಕಾರಿಗಳು ಕಚೇರಿ ಸೇರಿಕೊಂಡಿದ್ದಾರೆ. ಹೆಸರು ಹಾಳಾಗಿ ಗೋಳಾಡುವವರು ಒಂದೆಡೆಯಾದರೆ, ತೊಗರಿ ಬೀಜದ ಮೊಳಕೆ ಕೊಳೆತು ಸಂಪೂರ್ಣ ಹಳ್ಳ ಹಿಡಿದದ್ದು ಕಂಡು ಮರುಗುವವರು ಹಲವೆಡೆ ಕಾಣಸಿಗುತ್ತಿದ್ದಾರೆ. ತೊಗರಿ ಬೆಳೆ ಹರಗಿ ಫಸಲು ಕಿತ್ತೆಸೆಯುತ್ತಿರುವ ಅನ್ನದಾತರು ಮರು ಬಿತ್ತನೆಗೆ ಚಾಲನೆ ನೀಡಿದ್ದಾರೆ.

Advertisement

ಹಳದಿ ರೋಗದಿಂದ ಶೇ.5೦ ರಷ್ಟು ಇಳುವರಿ ನಷ್ಟ ಉಂಟಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿ ಶೇ.100 ರಷ್ಟು ನಷ್ಟದ ಹೊಡೆತ ಬಿದ್ದಿದೆ. ಮಳೆಯ ನಂತರ ಬೆಳೆ ವೀಕ್ಷಣೆ ಮತ್ತು ಹಾನಿ ಸರ್ವೆಗೆ ಮುಂದಾಗಬೇಕಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟದೆಡೆಗೆ ಬೆನ್ನು ತಿರುಗಿಸಿರುವುದು ಅತ್ಯಂತ ಶೋಚನೀಯ.

“ವಿಪರೀತ ಮಳೆಯಿಂದಾಗಿ ನಾಲವಾರ ಕೃಷಿ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು ೫೧೫೨ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ವಿವಿಧ ರೀತಿಯ ರೋಗ ಬಾಧೆಯಿಂದ ಹೆಸರು ಹಾಳಾಗಿದೆ. ತೇವಾಂಶ ಹೆಚ್ಚಾಗಿ ಬೆಳೆ ಚೇತರಿಸಿಕೊಳ್ಳದೆ ತೊಗರಿ ಫಸಲು ಸಂಪೂರ್ಣ ಕೊಳೆತುಹೋಗಿದೆ. ತೊಗರಿ ಮರು ಬಿತ್ತನೆಗಾಗಿ ಸಕಾಲದಲ್ಲಿ ಬೇಡಿಕೆಯಿದ್ದಷ್ಟು ರೈತರಿಗೆ ಬೀಜ ವಿತರಣೆ ಮಾಡಿದ್ದೇವೆ. ಅಂದಾಜು ರೂಪದಲ್ಲಿ ಈಗಾಗಲೇ ಬೆಳೆ ನಷ್ಟದ ಪಟ್ಟಿ ತಯಾರಿಸಿದ್ದೇವೆ. ತೊಗರಿ 3460 ಹೆಕ್ಟೆರ್, ಹೆಸರು  1120ಹೆಕ್ಟೆರ್, ಉದ್ದು 92 ಹೆಕ್ಟೆರ್ ಹಾಗೂ ೪೮೦ ಹೆಕ್ಟೆರ್ ಹತ್ತಿ ಬೆಳೆ ನಷ್ಟದ ವರಿದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದೇವೆ. ಬೆಳೆ ಪರಿಹಾರ ನಿರೀಕ್ಷೆಯಲ್ಲಿ ರೈತರಿದ್ದು, ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.”

– ಸತೀಶಕುಮಾರ ಪವಾರ.

ಕೃಷಿ ಅಧಿಕಾರಿ. ರೈತ ಸಂಪರ್ಕ ಕೇಂದ್ರ ನಾಲವಾರ

Advertisement

Udayavani is now on Telegram. Click here to join our channel and stay updated with the latest news.

Next