Advertisement

ತಂಬಾಕು ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ

04:52 PM Jan 08, 2020 | Naveen |

ಕಲಬುರಗಿ: ತಂಬಾಕು ನಿಯಂತ್ರಣಕ್ಕಾಗಿ ಸಂತೆ, ಜಾತ್ರೆ, ಸಾರ್ವಜನಿಕ ಸಭೆ- ಸಮಾರಂಭಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಶಂಕರಪ್ಪ ವಣಿಕ್ಯಾಳ ಹೇಳಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳು, ನೌಕರರು ಮೊದಲು ಇದನ್ನು ತ್ಯಜಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಸೇವನೆ ಕಂಡುಬಂದಲ್ಲಿ ಮುಲಾಜಿಲ್ಲದೇ ದಂಡ ಹಾಕಿ. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಮುಖ ವೃತ್ತ ಮತ್ತು ಜನಸಂದಣಿ ಪ್ರದೇಶದಲ್ಲಿ ಭಿತ್ತಿಚಿತ್ರ ಅಂಟಿಸಬೇಕು, ಕರಪತ್ರ ವಿತರಿಸಬೇಕು ಎಂದರು. ತಂಬಾಕು ಸೇವನೆ ನಿಯಂತ್ರಣದಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಇದನ್ನರಿತು ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸಬೇಕು ಎಂದರು.

ಶಾಲೆ-ಕಾಲೇಜುಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ಕಲಬುರಗಿ ವಿಭಾಗೀಯ ಸಂಯೋಜಕ ಮಹಾಂತೇಶ ಮಾತನಾಡಿ, 2019ರ ಏಪ್ರಿಲ್‌ ನಿಂದ ಡಿಸೆಂಬರ್‌ ತಿಂಗಳ ವರೆಗೆ ತನಿಖಾ ತಂಡವು ತಂಬಾಕು ಸೇವನೆ ಮಾಡುವವರ ಮೇಲೆ ನಿರಂತರ ದಾಳಿ ಮಾಡಿ 69180 ರೂ. ದಂಡ ಸಂಗ್ರಹಿಸಿದೆ. ತಂಬಾಕು ವ್ಯಸನಕ್ಕೆ ಒಳಗಾದ ಅಭ್ಯರ್ಥಿಗಳಿಗೆ ತಂಬಾಕು ವ್ಯಸನ ಮುಕ್ತ ಕೇಂದ್ರ, ಸಮಾಲೋಚನಾ ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಇಲ್ಲಿಯವರೆಗೆ ಸುಮಾರು 897 ಜನ ತಂಬಾಕು ವ್ಯಸನಿಗಳೊಂದಿಗೆ
ಸಮಾಲೋಚನೆ ನಡೆಸಲಾಗಿದೆ. 360 ಜನ ವ್ಯಸನಿಗಳೊಂದಿಗೆ ಅನುಸರಣೆ ಹಾಗೂ ಮಾನಸಿಕ ಬೆಂಬಲ ಕೋಶದಿಂದ ನಿರಂತರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ತಂಬಾಕು ನಿಯಂತ್ರಣದ ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ಶಿವಶರಣಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಲೇಕರ್‌, ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ್ತಿ ಸುಜಾತಾ ಪಾಟೀಲ ಹಾಗೂ ಪೌರ ಸಂಸ್ಥೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next