Advertisement

ಗುವಿವಿಯಲ್ಲಿ ವೈಜನಾಥ ಅಧ್ಯಯನ ಪೀಠ

11:07 AM Nov 21, 2019 | |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವೈಜನಾಥ ಪಾಟೀಲರ ಅಧ್ಯಯನ ಪೀಠ ಮತ್ತು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸ್ಮಾರಕ ಭವನ ಹಾಗೂ ಮೂರ್ತಿ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಡಾ| ಉಮೇಶ ಜಾಧವ ಪ್ರಕಟಿಸಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ 371ನೇ (ಜೆ) ಕಲಂ ಜಾರಿ ರೂವಾರಿ ವೈಜನಾಥ ಪಾಟೀಲರ ಅಭಿಮಾನಿ ಬಳಗದವರು ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಅಪಾರ ಕಾಳಜಿ ಹೊಂದಿದ್ದ ವೈಜನಾಥ ಪಾಟೀಲರು ಯಾವುದೇ ಜಾತಿ-ಕುಲಕ್ಕಾಗಿ ಹೋರಾಟ ನಡೆಸಿದವರಲ್ಲ. ಈ ಭಾಗಕ್ಕೆ ಅನ್ಯಾಯವಾಗುತ್ತದೆ ಎಂದು ಗೊತ್ತಾದ ತಕ್ಷಣವೇ ಸಿಡಿದೇಳುವ ವ್ಯಕ್ತಿತ್ವ ಹೊಂದಿದ್ದರು. ತಮ್ಮ ಕೊನೆ ಉಸಿರಿರುವರೆಗೂ “ಕಲ್ಯಾಣ ಕರ್ನಾಟಕ’ ಅಭಿವೃದ್ಧಿ ಆಗಬೇಕೆಂದು ಅವರು ಬಯಸಿದ್ದರು ಎಂದು ಸ್ಮರಿಸಿದರು.

ವೈಜನಾಥ ಪಾಟೀಲ ಅವರಂತ ನಾಯಕರ ಮಾರ್ಗದರ್ಶನ ನಮಗೆ ಸದಾ ಬೇಕಿತ್ತು. ಅವರನ್ನು ದೈಹಿಕವಾಗಿ ನಾವು ಕಳೆದುಕೊಂಡಿರಬಹುದು. ಆದರೆ ಅವರ ಮಾರ್ಗದರ್ಶನ ಸದಾ ಜೀವಂತವಾಗಿರುತ್ತದೆ. ಆರು ಜಿಲ್ಲೆಗಳಲ್ಲಿ ವೈಜನಾಥ ಪಾಟೀಲರ ಮೂರ್ತಿ ಸ್ಥಾಪಿಸಲು ಪಕ್ಷಾತೀತವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಬೇಕಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಲವಾರ ಕೋರಿಸಿದ್ದೇಶ್ವರ ಮಹಾ ಸಂಸ್ಥಾನ ಮಠದ ಡಾ| ಸಿದ್ದತೋಟೇಂದ್ರ ಶಿವಾಚಾರ್ಯರು ಮಾತನಾಡಿ, ವೈಜನಾಥ ಪಾಟೀಲರು  ಕಲ್ಯಾಣ ಕರ್ನಾಟಕದ ಭವ್ಯ ಹಾಗೂ ಶ್ರೀಮಂತ ಪರಂಪರೆ ಪರಿಕಲ್ಪನೆಯಲ್ಲಿ ಹೋರಾಟ ನಡೆಸಿದವರು ಎಂದರು.

ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತಿರುವ ಕಲ್ಯಾಣ ಕರ್ನಾಟಕ ಅತ್ಯಂತ ಶ್ರೀಮಂತ ಪರಂಪರೆ ನಾಡು. ಮಳಖೇಡದ ರಾಷ್ಟ್ರಕೂಟ ರಾಜರು ಕಾವೇರಿಯಿಂದ ಗೋದಾವರಿವರೆಗೆ ಭವ್ಯವಾಗಿ ಆಳಿದರು. ಬಸವಾದಿ ಶರಣರು  ಇದೇ ನೆಲದಿಂದ ಸರ್ವ ಮಾನವ ಕುಲಕ್ಕೆ ಸಮಾನತೆ ತತ್ವ ಸಾರಿಸಿದರು.

Advertisement

ಇಂತಹ ಶ್ರೀಮಂತ ಪರಂಪರೆ ಕಲ್ಪನೆ ಇಟ್ಟುಕೊಂಡು ಹೋರಾಟ ಕೈಗೊಂಡವರು ವೈಜನಾಥ ಪಾಟೀಲರು ಎಂದು ಸ್ಮರಿಸಿದರು. ವೈಜನಾಥ ಪಾಟೀಲರು ಬೀದರ್‌ನಲ್ಲಿ ಹುಟ್ಟಿದ್ದರೂ ಕಲಬುರಗಿಯಲ್ಲಿ ಹೋರಾಟ ಮಾಡಿದ್ದು ಒಂದು ವಿಶೇಷವೇ ಸರಿ. ಚಿಂತನಾ ಪರವಾದ ಆಲೋಚನೆಗಳನ್ನು ಅವರು ಹೊಂದಿದ್ದರು. ವೈಜನಾಥರ ನೆನಪಿನಲಿ ಮೂರ್ತಿ ಸ್ಥಾಪನೆ ಮತ್ತು ಶಾಲೆಗಳನ್ನು ಆರಂಭಿಸುವುದರೊಂದಿಗೆ ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯವಾಗಬೇಕು.

ಅವರಿಗೆ ನಾವೆಲ್ಲರೂ ಹೃದಯದ ನಮನಗಳನ್ನು ಸಲ್ಲಿಸಬೇಕೆಂದು ಆಶಿಸಿದರು.
ಸುಲಫ‌ಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 371ನೇ (ಜೆ) ಕಲಂ ಬೀಜ ಬಿತ್ತಿದವರು ವೈಜನಾಥ ಪಾಟೀಲರು. ನಂತರ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌, ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಸಸಿಯನ್ನು ಬೆಳೆಸಿದ್ದಾರೆ ಎಂದರು.

ಕೊಪ್ಪಳದ ಸಾಹಿತಿ ಅಲ್ಲಂಪ್ರಭು ಬೆಟ್ಟದೂರ ಮಾತನಾಡಿ, ಅಧಿಕಾರಕ್ಕಿಂತ ಹೋರಾಟ ದೊಡ್ಡದೆಂದು ವೈಜನಾಥ ಪಾಟೀಲರು ನಂಬಿದ್ದರು. ಅವರು ಸರ್ಕಾರದ ವಿರುದ್ಧವೇ ತಿರುಗಿಬಿದ್ದರು. ಇಂತಹ ನಾಯಕರ ಹೆಸರಿನಲ್ಲಿ ಸಂಸ್ಮರಣ ಗ್ರಂಥ ಹೊರ ತರಬೇಕು. ಅವರು ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಸದಾ ನಮ್ಮೊಂದಿಗಿರುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ವೈಜನಾಥ ಪಾಟೀಲರು ನಿಶ್ಚಿತ ಹೋರಾಟ ಮಾಡಿಕೊಂಡು ಬಂದವರು. ಅವರ ಹೋರಾಟದ ಫ‌ಲದಿಂದಾಗಿಯೇ ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲಂ ಜಾರಿಯಾಗಿದೆ. ಅವರಂತಹ ನಿಜವಾದ ಹೋರಾಟಗಾರರು ಮತ್ತೆ ಜನ್ಮತಾಳಬೇಕಿದೆ ಎಂದರು.

ವೈಜನಾಥರು ಸರ್ಕಾರದಲ್ಲಿದ್ದರೂ ಜನಪರವಾಗಿ ಧ್ವನಿ ಎತ್ತುತ್ತಿದ್ದರು. ಅವರು ಯಾವುದನ್ನು ಅವಮಾನ, ಅಪಮಾನ ಎಂದು ಭಾವಿಸಲಿಲ್ಲ. ಹೋರಾಟಗಾರರು ಜೈಲಿಗೆ ಹೋಗಲು, ಲಾಠಿ ಏಟು ತಿನ್ನಲು ಅಪಮಾನಗಳನ್ನು ಸಹಿಸಿಕೊಳ್ಳಬೇಕು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೈಜನಾಥ ಪಾಟೀಲರು, ಬಿ.ಆರ್‌. ಪಾಟೀಲರು ಮತ್ತು ತಾವು ಜೈಲಿಗೆ ಹೋದ ದಿನಗಳನ್ನು ಸ್ಮರಿಸಿದ ಅವರು, ವೈಜನಾಥರ ಹೆಸರಿನಲ್ಲಿ ಹೊರತರುವ ಸಂಸ್ಮರಣ ಪುಸ್ತಕದ ಮುದ್ರಣ ಮಾಡಿಸುವ ಹೊಣೆ ನನ್ನದು ಎಂದರು.

ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ, ಸಂಸದ ಡಾ| ಉಮೇಶ ಜಾಧವ, ಎಂ.ಬಿ. ಅಂಬಲಗಿ, ವೈಜನಾಥ ಪಾಟೀಲರ ಪುತ್ರ ಡಾ| ವಿಕ್ರಂ ಪಾಟೀಲ ಮಾತನಾಡಿದರು. ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ, ಜಿ.ಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಮಾಜಿ ಶಾಸಕ ಬಿ.ಆರ್‌. ಪಾಟೀಲ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಶಶೀಲ ನಮೋಶಿ, ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ಶಿವಶಂಕರ ಗಾರಂಪಳ್ಳಿ, ಚಂದ್ರಶೇಖರ ಹರಸೂರ, ದೇವೇಂದ್ರಪ್ಪ ಅವಂಟಿ, ಸುಭಾಷ ರಾಠೊಡ, ಲಕ್ಷ್ಮಣ ದಸ್ತಿ, ಪಿ.ಎಂ. ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರು, ಸುರೇಶ ಸಜ್ಜನ, ಎಂ.ಬಿ.ಅಂಬಲಗಿ, ಮಹಾದೇವಿ ಕೆಸರಟಗಿ, ಎಂ.ಎಸ್‌. ಪಾಟೀಲ ನರಿಬೋಳ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next