Advertisement

ವಿಸ್ಮಯ: ಎಲ್ಲೋರಾದ ದಿ ಗ್ರೇಟ್‌ ಕೈಲಾಸನಾಥ ದೇವಾಲಯ

04:15 PM Mar 15, 2018 | Sharanya Alva |

ರಾಜ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು! ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ!

Advertisement

ಕೈಲಾಸನಾಥ ದೇವಸ್ಥಾನವು ವಿಶ್ವದ ಅತಿ ದೊಡ್ಡ ಏಕಶಿಲೆಯ ರಚನೆಯಾಗಿದೆ. ವಾಸ್ತುಶಿಲ್ಪದ ಇತಿಹಾಸದಲ್ಲಿ ಅತ್ಯಂತ ವಿಸ್ಮಯಕಾರಿ ಕಟ್ಟಡಗಳಲ್ಲಿ ಒಂದಾಗಿರುವ ಕೈಲಾಸನಾಥ ದೇವಸ್ಥಾನ ಸುಮಾರು 60 ಅಡಿ ಎತ್ತರ ಮತ್ತು 200 ಅಡಿ ಅಗಲವನ್ನು ಹೊಂದಿದೆ. ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನವನ್ನು 8ನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜರು ನಿರ್ಮಿಸಿದರು. ಈ ಏಕಶಿಲೆಯ ರಚನೆಯನ್ನು ನಿರ್ಮಿಸಲು ಬಳಸಲಾದ ಬಂಡೆ ಸುಮಾರು 4,00,000 ಟನ್‌ಗಳಷ್ಟು ತೂಕವನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.

34 ಗುಹಾಂತರ ದೇವಾಲಯಗಳಲ್ಲಿ 16ನೇ ಗುಹೆಯಾದ ಈ ದೇವಾಲಯದ ಉದ್ದ 276 ಅಡಿಗಳು. ಅಗಲ 154 ಅಡಿಗಳು ಮತ್ತು ಎತ್ತರ 100 ಅಡಿ. ದೇವಾಲಯದ ಮಧ್ಯದಲ್ಲಿ ಗರ್ಭಗೃಹ, ಪಶ್ಚಿಮದಲ್ಲಿ ಮಹಾದ್ವಾರ, ನಂದಿ ಮಂಟಪ, ಮತ್ತು ಅಂಗಳವನ್ನು ಹೊಂದಿದ್ದು ಅದು ಸನ್ಯಾಸಿ ಮಂಟಪಗಳನ್ನೂ ಹೊಂದಿದೆ. (ಅಂದಿನ ಕಾಲದಲ್ಲಿ ಸನ್ಯಾಸಿಗಳು ದೇವಾಲಯದ ಪ್ರಾಂಗಣದಲ್ಲಿಯೇ ವಾಸಿಸುತ್ತಿದ್ದರು). ಈ ದೇವಾಲಯವು ಎರಡು ಅಂತಸ್ತುಗಳನ್ನು ಹೊಂದಿದೆ. ದೇವಾಲಯದಲ್ಲಿ ಪೀಠ ಮತ್ತು ಆನೆ ಕೆತ್ತಲಾಗಿದ್ದು, ಅದರ ಕುಸುರಿ ಕಲೆಯ ಕೆತ್ತನೆ ಅದ್ಭುತವಾಗಿದೆ. ಈ ಆನೆಯ ಬಳಿ ಮನುಷ್ಯ ನಿಂತರೆ ಬಹಳ ಕುಬ್ಜನಾಗಿ ಕಾಣುತ್ತಾನೆ! ಇಲ್ಲಿನ ಶಿಲ್ಪಗಳ ಪಟ್ಟಿಯಲ್ಲಿ ದಶಾವತಾರ, ಭೈರವನೊಂದಿಗೆ ಕೈಲಾಸ ಪರ್ವತವನ್ನು ಎತ್ತಿ ಹಿಡಿದ ರಾವಣನ ವಿಗ್ರಹ. ಇದರಲ್ಲಿ ಹತ್ತು ತಲೆಗಳೂ ಒಂದೇ ತಲೆಯಂತೆ ರಚಿತವಾಗಿದೆ. ವೀರಮಂಡಿಯಲ್ಲಿ ಕುಳಿತಿರುವ 
ಭಂಗಿ ಭವ್ಯವಾಗಿದೆ. ನಟರಾಜ, ವಿಷ್ಣು, ಪಾರ್ವತಿಯರ ಭಂಗಿಗಳೂ ಸಹ ಅತ್ಯಂತ ಶ್ರೇಷ್ಠ ಕಲಾಕೃತಿಗಳಾಗಿ ಮೂಡಿವೆ.

ಮೊಘಲ್‌ ದೊರೆ ಔರಂಗಜೇಬ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು! ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ! ಮಳೆಗಾಲದಲ್ಲಿ ದೇವಾಲಯದ ಆವರಣದಲ್ಲಿ ಜಲಪಾತದಂತೆ ಮಳೆ ಸುರಿಯುವುದನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಗೋಪುರ ಒಂದು ಹೆಲಿಪ್ಯಾಡ್‌ನ‌ಷ್ಟು ವಿಸ್ತೀರ್ಣವನ್ನು ಹೊಂದಿದೆ ಎಂದರೆ ಅದರ ಬೃಹದಾಕಾರ ಕಲ್ಪನೆಗೆ ಬಂದೇ ಬರುತ್ತದೆ. ಎಎಲ್ಲೋರಾದ ಕೈಲಾಸನಾಥ ದೇವಾಲಯ ಭಾರತದ ಅಪೂರ್ವವಾದ ವಾಸ್ತುಶಿಲ್ಪ ರಚನೆಯಾಗಿದೆ ಎಂದು ಇಂಗ್ಲೆಂಡಿನ ಪ್ರಸಿದ್ಧ ಇತಿಹಾಸಕಾರರಾದ ಬ್ರೌನ್‌ ಹಾಗೂ ವಿ.ಎ.ಸ್ಮಿತ್‌ ಅಭಿಪ್ರಾಯ ಪಡುತ್ತಾರೆ.

Advertisement

*ಪುರುಷೋತ್ತಮ ವೆಂಕಿ

Advertisement

Udayavani is now on Telegram. Click here to join our channel and stay updated with the latest news.

Next