Advertisement

ಕಡಬ: ಮರಳು ನೀತಿ ಸರಳೀಕರಿಸಲು ಆಗ್ರಹಿಸಿ ಪ್ರತಿಭಟನೆ

02:57 PM Oct 28, 2017 | Team Udayavani |

ಕಡಬ: ಜಿಲ್ಲಾಡಳಿತದ ಮರಳು ನೀತಿಯನ್ನು ಸಡಿಲಗೊಳಿಸಿ ಎಲ್ಲ ವರ್ಗದ ಜನತೆಗೆ ಅನುಕೂಲಕರವಾದ ರೀತಿಯಲ್ಲಿ ಮಾರ್ಪಡಿಸಬೇಕು. ಸರಕಾರದ ತೊಂದರೆಗೊಳಗಾಗಿರುವ ಸಮಸ್ಯೆಯನ್ನು ನಿವಾರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಲಿ ಎಂದು ಕಡಬದ ಮರಳು ನೀತಿ ಸರಳೀಕರಣ ಹೋರಾಟ ಸಮಿತಿಯ ಸಂಚಾಲಕ, ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸೈಯದ್‌ ಮೀರಾ ಸಾಹೇಬ್‌ ಅವರು ಅಭಿಪ್ರಾಯಪಟ್ಟರು.

Advertisement

ಶುಕ್ರವಾರ ಕಡಬದಲ್ಲಿ ಸರಕಾರದ ಅಸಮರ್ಪಕ ಮರಳು ನೀತಿ ಹಾಗೂ ಮಲತಾಯಿ ಧೊರಣೆಯ ವಿರುದ್ಧ ಕಡಬದ ಮರಳು ನೀತಿ ಸರಳೀಕರಣ ಹೋರಾಟ ಸಮಿತಿ ವತಿಯಿಂದ ಕಡಬ ತಹಶೀಲ್ದಾರ್‌ ಕಚೇರಿ ಎದುರು ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರದ ಅಸಮರ್ಪಕ ಮರಳು ನೀತಿಯಿಂದಾಗಿ ಕಡಬ ತಾಲೂಕಿನಾದ್ಯಂತ ನೈರ್ಸಗಿಕ ಮರಳಿನ ಕೃತಕ ಅಭಾವ ಉಂಟಾಗಿದೆ. ಇಲ್ಲಿನ ನದಿ ಹಾಗೂ ತೊರೆಗಳಲ್ಲಿ ಯಥೇತ್ಛ ವಾಗಿ ನೈಸರ್ಗಿಕ ಮರಳು ತುಂಬಿಕೊಂಡಿದ್ದರೂ ಮರಳು ತೆಗೆಯಲು ಅವಕಾಶ ಇಲ್ಲದೆ ಜನರು ತಮ್ಮ ಅಗತ್ಯಗಳಿಗೆ ಮರಳು ಸಿಗದೆ ಪರದಾಡುವಂತಾಗಿದೆ ಎಂದರು.

ಮಲತಾಯಿ ಧೋರಣೆ
ಜಿಲ್ಲೆಯಲ್ಲಿನ ಮರಳು ನೀತಿಯ ಮಲ ತಾಯಿ ಧೋರಣೆಯಿಂದ ಇಲ್ಲಿನ ರೈತರಿಗೆ ಅನ್ಯಾಯವಾಗಿದೆ. ಉಡುಪಿ, ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ ತಾಲೂಕಿಗೆ ಈಗಾಗಲೇ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಆದರೆ ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿಗೆ ಈ ತನಕ ಪರವಾನಿಗೆ ನೀಡಿಲ್ಲ. ಅದರಿಂದಾಗಿ ಮನೆ, ವಾಣಿಜ್ಯ ಕಟ್ಟಡ ಸೇರಿದಂತೆ ನಿರ್ಮಾಣ ಕಾಮಗಾರಿ ನಡೆಸಲು ಪರದಾಡುವಂತಾಗಿದೆ. ಬಡವರಿಗಾಗಿ ಗ್ರಾ.ಪಂ.ನಿಂದ ಮಂಜೂರಾದ ಮನೆಗಳು, ಮೋರಿ, ರಸ್ತೆಗಳ ಕಾಮಗಾರಿ ಮರಳಿಲ್ಲದೆ ಸ್ಥಗಿತವಾಗಿದೆ. ಸೂಕ್ತ ಮರಳು ನೀತಿ ಇಲ್ಲದೆ ಸಣ್ಣಪುಟ್ಟ ವಾಹನಗಳಲ್ಲಿ ಕೂಡ ಮರಳು ಸಾಗಿಸುವಂತಹ ಅನಿವಾರ್ಯ ಎಂದರು.

ಜನರ ಬೇಡಿಕೆ ಸ್ಪಂದಿಸಿ
ಅಧಿಕಾರಿಗಳು ಸಣ್ಣ ಪುಟ್ಟ ವಾಹನಗಳಲ್ಲಿ ಮರಳು ಸಾಗಿಸುವುದಕ್ಕೆ ತಡೆ ಉಂಟು ಮಾಡಿ ಹಣ ಮಾಡುವ ದಂಧೆ ನಡೆಸುತ್ತಿದ್ದಾರೆ. ಈಗ ಇರುವ ಅವೈಜ್ಞಾನಿಕ ಮರಳು ನೀತಿಯಿಂದ ನದಿ, ತೋಡು, ಹಳ್ಳ ಕೊಳ್ಳಗಳಲ್ಲಿ ಮರಳು
ಸಂಗ್ರಹಿಸಿ ಜೋರು ಮಳೆ ಬಂದಾಗ ನೆರೆ ನೀರು ಕೃಷಿ ತೋಟಗಳಿಗೆ ನುಗ್ಗಿ ಹಾನಿ ಉಂಟಾಗುತ್ತಿದೆ. ಆದುದರಿಂದ ಸಂಬಂಧ ಪಟ್ಟವರು ಕೂಡಲೇ ಜನರ ಬೇಡಿಕೆ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.

Advertisement

ಅವಕಾಶ ಕಲ್ಪಿಸಿ
ಕಡಬ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲ್‌ ಅವರು ಮಾತನಾಡಿ, ಜನರ ಮೂಲ ಸೌಕರ್ಯಗಳಿಗೆ ಯಾವುದೇ ರೀತಿಯ ಆಡಚಣೆ ಆಗಬಾರದು. ಪ್ರಾಕೃತಿಕವಾಗಿ ನದಿ, ತೋಡುಗಳಲ್ಲಿ ಹರಿಯುವ ನೀರಿನೊಂದಿಗೆ ವರ್ಷಂಪ್ರತಿ ಬಂದು ಬೀಳುವ ಮರಳನ್ನು ಎತ್ತಿ ಬಳಸಲು ಜನರಿಗೆ ಅವಕಾಶ ಕಲ್ಪಿಸಬೇಕು. ಅದರಿಂದ ನದಿಯ ನೀರು ಸರಾಗವಾಗಿ ಹರಿದು ಹೋಗುವ ಮೂಲಕ ರೈತರ ಕೃಷಿಭೂಮಿಗೆ ನೀರು ನುಗ್ಗಿ ಕೃಷಿ ನಾಶವನ್ನು
ತಪ್ಪಿಸಬಹುದು ಎಂದರು.

ಕಾರ್ಮಿಕರು ಬೀದಿಗೆ
ರೈತ ಮುಖಂಡ ವಿಕ್ಟರ್‌ ಮಾರ್ಟಿಸ್‌ ಮಾತನಾಡಿ, ಕಡಬ ತಾಲೂಕಿನ ರೈತರು ಈ ದೇಶದ ಕಾನೂನಿನ ವ್ಯಾಪ್ತಿಯಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು. ಸರಕಾರದ ಈ ಮಲತಾಯಿ ಧೋರಣೆಯಿಂದಾಗಿ ಗಾರೆ ಕೆಲಸವನ್ನು ಮಾಡುವ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ನಮಗೆ ಅಧಿಕಾರಿಗಳ ಪತ್ರಿಕಾ ಪ್ರಕಟನೆ ಬೇಡ. ಜನರಿಗೆ ಅನುಕೂಲವಾಗುವ ಕಾನೂನನ್ನು ಶೀಘ್ರ ಜಾರಿಗೊಳಿಸಲಿ ಎಂದರು.

ಕುಟ್ರಾಪ್ಪಾಡಿ ಗ್ರಾ.ಪಂ. ಸದಸ್ಯ ಮಹಮ್ಮದ್‌ ಆಲಿ ಹಾಗೂ ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಪ್ರಭಾಕರ ಗೌಡ ಪದಕ, ಮರ್ದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್‌ ರೈ ನಡುಮಜಲು, ಕಡಬ ರೋಟರಿ ಕ್ಲಬ್‌ ಅಧ್ಯಕ್ಷ ಹರೀಶ್‌ ಕೋಡಿಬೈಲ್‌, ಪ್ರಮುಖರಾದ ಶೇಕ್‌ ಇಮಾಮ್‌ ಸಾಹೇಬ್‌ ಪಾಲೆತ್ತಡ್ಕ, ಅಬ್ದುಲ್‌ ಲತೀಫ್‌ ಕೆ.ಜಿ.ಎನ್‌., ಉದ್ಯಮಿ ಕೆ.ಟಿ. ಥಾಮ್ಸನ್‌, ಮರ್ದಾಳ ಮಸೀದಿಯ ಅಧ್ಯಕ್ಷ ಹಮೀದ್‌ ತಂಙಳ್‌, ಪುತ್ತುಮೇಸ್ತ್ರೀ ಕಲ್ಲಂತಡ್ಕ, ಮೋಹನ್‌ ಪಂಜೋಡಿ, ಜಿಲ್ಲಾ ಜೆಡಿಎಸ್‌ ಸಂಘಟನ ಕಾರ್ಯದರ್ಶಿ ಉತ್ತಮನ್‌ ಶಿರಾಡಿ, ಗಣೇಶ್‌ ವೆಂಕಟಹಿತ್ಲು, ಸಜಿ ಪಾಲಾ ರಬ್ಬರ್‌, ರಮೇಶ್‌ ರೈ ಅಳೇರಿ, ಶೇಕ್‌ ಆದಂ ಪಾಲೆತ್ತಡ್ಕ ಮೊದಲಾದವರು ಭಾಗವಹಿಸಿದ್ದರು. ಬಳಿಕ ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸರಕಾರ ನೀತಿ ಸರಳೀಕರಿಸಿದೆ
ಕರಾವಳಿ ಜಿಲ್ಲೆಗಳ ಸಿಆರ್‌ಝಡ್‌ ಹೊರತುಪಡಿಸಿದ ಪ್ರದೇಶಗಳಲ್ಲಿ ನದಿ ಪಾತ್ರ ದಲ್ಲಿ ಮರಳು ತೆಗೆಯುವ ನೀತಿಯನ್ನು ಸರಕಾರ ಸರಳೀಕರಿಸಿ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದೆ ಎಂದು ಕಡಬ ತಹಶೀ ಲ್ದಾರ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿಗಳನ್ನು ಗುರುತಿಸಲು ಅವರಿಂದ ಅಗತ್ಯ
ದಾಖಲೆಗಳೊಂದಿಗೆ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಉಲ್ಲೇಖೀ ಸಲಾಗಿದೆ. ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿಗಳು ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ವರ್ಷದಿಂದ ವಾಸವಾಗಿರಬೇಕು. ಈ ಬಗ್ಗೆ ತಹಶೀಲ್ದಾರರು ದೃಢೀಕರಿಸಬೇಕು. ಅಂತಹವರು ಕನಿಷ್ಠ 5 ವರ್ಷಗಳಿಂದ ಮರಳು ತೆಗೆಯುತ್ತಿರುವ ಬಗ್ಗೆ ದಾಖಲೆ ನೀಡುವುದು, ನದಿ ಪಾತ್ರದಲ್ಲಿ ತನ್ನದೇ ಆದ ಮರಳು ದಾಸ್ತಾನು ಪ್ರದೇಶವನ್ನು ಹೊಂದಿರಬೇಕು. ಇಲ್ಲದಿದ್ದರೆ ಅಂತಹ ವರಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು. ಜಿಲ್ಲಾ ಮರಳು ಸಮಿತಿ ಅನುಮೋದನೆ ಪಡೆಯುವುದರೊಂದಿಗೆ ನಿಯಮಾನುಸಾರ ಮರಳು ಬ್ಲಾಕ್‌ಗಳನ್ನು ಟೆಂಡರ್‌ ಮೂಲಕ ಹರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಯಾಂತ್ರೀಕೃತ ಮರಳುಗಾರಿಕೆಗೆ ಅವಕಾಶವಿಲ್ಲ ಎನ್ನುವುದನ್ನು ಆದೇಶದಲ್ಲಿ ಉಲ್ಲೇಖೀಸಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next