Advertisement

ರಾಹುಲ್‌ ಚೌಧರಿ ಎಂಬ ಕಬಡ್ಡಿ ಹುಲಿ!

10:57 AM Aug 16, 2017 | |

ರಾಹುಲ್‌ ಚೌಧರಿ!
ಕಬಡ್ಡಿ ಪ್ರೇಮಿಗಳ ಪರಿಚಿತ ಮುಖ. ಕಬಡ್ಡಿ ಕಲಿಯುತ್ತಿರುವ ಎಷ್ಟೋ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಸೆಲೆ. ಉತ್ತರ ಪ್ರದೇಶದ ಜಾಟ್‌ ಸಮುದಾಯದಲ್ಲಿ ಜನನ. 24ರ ಯುವಕ…

Advertisement

ರಾಹುಲ್‌ ಮೊದಲ ಬಾರಿಗೆ ಕಬಡ್ಡಿ ಆಡಲು ಆರಂಭಿಸಿದ್ದು ಪ್ರಾಥಮಿಕ ಶಾಲಾ ದಿನಗಳಲ್ಲಿ. ರಾಹುಲ್‌ನ ಅಣ್ಣ ಕೂಡ ಕಬಡ್ಡಿ ಆಟಗಾರನಾಗಿದ್ದ. ಹೀಗಾಗಿ ರಾಜ್ಯದ ವಿವಿಧೆಡೆ ನಡೆಯುವ ಕಬಡ್ಡಿ ಟೂರ್ನಿಗಳಿಗೆ ಅಣ್ಣನ ಜತೆ ರಾಹುಲ್‌ ತೆರಳುತ್ತಿದ್ದ. ಅಣ್ಣ ಆಡುವ ತಂಡದಲ್ಲಿ ಯಾರಾದರೂ ಗಾಯಗೊಂಡರೆ ತನಗೂ ಅವಕಾಶ ಸಿಗುತ್ತದೆ ಎನ್ನುವ ಆಶಾಮನೋಭಾವ ರಾಹುಲ್‌ನದ್ದಾಗಿತ್ತು. ಅಂತೂ ಕೆಲವು ಬಾರಿ ತನ್ನ ಅಣ್ಣ ಆಡುವ ತಂಡದಲ್ಲಿ ಅವಕಾಶ ಪಡೆದೇ ಬಿಟ್ಟ. ಇದು ಚೌಧರಿಯ ಜೀವನದ ದಿಕ್ಕನ್ನೇ ಬದಲಿಸಿತು.

ಮಗ ಹಾಳಾಗುತ್ತಾನೆ ಎಂಬ ಭಯ
ರಾಹುಲ್‌ ಚೌಧರಿ ಕಬಡ್ಡಿ ಆಡುವುದು ಅವರ ಕುಟುಂಬದಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಮಗ ಕಬಡ್ಡಿ ಆಡುತ್ತ ಸಮಯ ಕಳೆಯುತ್ತಾನೆ, ವಿದ್ಯಾಭ್ಯಾಸದ ಕಡೆ ದೃಷ್ಟಿ ಹರಿಸುವುದಿಲ್ಲ, ಇದರಿಂದ ಹಾಳಾಗಿ ಹೋಗುತ್ತಾನೆ ಅನ್ನುವ ಆತಂಕ ರಾಹುಲ್‌ ಅವರ ಅಪ್ಪ, ಅಮ್ಮನದ್ದಾಗಿತ್ತು. ಹೀಗಾಗಿ ತಂದೆ, ತಾಯಿ ಕಣ್ಣು ತಪ್ಪಿಸಿ ಕಬಡ್ಡಿ ಪಂದ್ಯಗಲ್ಲಿ ಆಡಲು ತೆರಳಿದ ದೃಷ್ಟಾಂತವಿದೆ. ಚಿಕ್ಕಪುಟ್ಟ ಗಾಯ ಮಾಡಿಕೊಂಡರೂ ಅದು ಮನೆಯವರಿಗೆ ತಿಳಿಯದಂತೆ ನಿಭಾಯಿಸಿದ ಘಟನೆಗಳೂ ನಡೆದಿವೆ. ಆದರೂ ಚೌಧರಿಗೆ ಕಬಡ್ಡಿ ಮೇಲಿನ ಪ್ರೀತಿ ಬಿಡಲಿಲ್ಲ. ಇಂಥದೊಂದು ಪ್ರೀತಿ, ಛಲವೇ ಇಂದು ಚೌಧರಿಯನ್ನು ಕಬಡ್ಡಿಯಲ್ಲಿ ಘರ್ಜಿಸುವ ಹುಲಿಯಾಗಿ ರೂಪಿಸಿದೆ. ಇಂದು ಅವರ ತಂದೆ, ತಾಯಿ ಮಗನ ಸಾಧನೆಗೆ ಖುಷಿ ಪಡುತ್ತಿದ್ದಾರೆ. ಮಗ ಆಡುತ್ತಿರುವ ಪ್ರೊ  . ಕಬಡ್ಡಿ ಪಂದ್ಯವನ್ನು ತಪ್ಪದೇ ನೋಡುತ್ತಾರೆ!

ಪ್ರೊ ಕಬಡ್ಡಿಯಲ್ಲಿ  ಘರ್ಜನೆ
ಕಬಡ್ಡಿಯ ಎಷ್ಟೋ ಪ್ರತಿಭೆಗಳು ಹೊರ ಬಂದಿರುವುದೇ ಪ್ರೊ ಕಬಡ್ಡಿಯಲ್ಲಿ. ಅದೇ ರೀತಿ ರಾಹುಲ್‌ ಚೌಧರಿ ಎಂಬ ಪ್ರತಿಭೆಯನ್ನು ಪರಿಚಯಿಸಿದ್ದು ಕೂಡ ಪ್ರೊ ಕಬಡ್ಡಿ ಕೂಟ. ಚೌಧರಿ ಎದುರಾಳಿ ಅಂಕಣಕ್ಕೆ ನುಗ್ಗಿ ಹುಲಿಯಂತೆ ಘರ್ಜಿಸುತ್ತಾನೆ. ರಕ್ಷಣಾ ಬಲೆಯಿಂದ ತಪ್ಪಿಸಿಕೊಳ್ಳಲು ಜಿಂಕೆ ಮರಿಯಂತೆ ಜಿಗಿಯುತ್ತಾನೆ. ಎದುರಾಳಿಯನ್ನು ಟಚ್‌ ಮಾಡಿ ಚಿರತೆಯ ವೇಗದಲ್ಲಿ ಪುನಃ ತನ್ನ ಕೋರ್ಟ್‌ಗೆ ಮರಳುತ್ತಾನೆ. ಹೀಗಾಗಿ ಯಾವುದೇ ತಂಡದ ಅಭಿಮಾನಿಯಾಗಿದ್ದರೂ ಚೌಧರಿ ರೈಡಿಂಗ್‌ ಎಂದರೆ ಹಬ್ಬ ಮಾಡುತ್ತಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೇ ಕುಣಿದು ಕುಪ್ಪಳಿಸುತ್ತಾರೆ. ಆತ ರೈಡಿಂಗ್‌ಗೆ ಹೋದ ಎಂದರೆ ಎದುರಾಳಿಯಿಂದ ಅಂಕ ಬಂತು ಎಂದೇ ತೀರ್ಮಾನ. ಎಲ್ಲಿಯೂ ಅಪರೂಪಕ್ಕೊಮ್ಮೆ ಮಾತ್ರ ಕ್ಷೇತ್ರ ರಕ್ಷಣೆಯ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.  ಅಂದಹಾಗೆ ಚೌಧರಿ ಈ ಬಾರಿ ತೆಲುಗು ಟೈಟಾನ್ಸ್‌ ತಂಡದ ಸಾರಥಿ. ತಂಡ ತವರಿನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದೆ. ಈ ಆತಂಕವನ್ನು ಹೋಗಲಾಡಿಸಿ ತಂಡವನ್ನು ಮೇಲೆತ್ತಿ ಮುನ್ನಡೆಸುವ ಮಹತ್ವದ ಜವಾಬ್ದಾರಿ ರಾಹುಲ್‌ ಮೇಲಿದೆ.

ರೈಡಿಂಗ್‌ನಲ್ಲಿ  500 ಅಂಕ
ರಾಹುಲ್‌ ಚೌಧರಿ ಕಬಡ್ಡಿಯಲ್ಲಿ ಮೊದಲ ಬಾರಿಗೆ ವೃತ್ತಿ ಜೀವನ ಆರಂಭಿಸಿದ್ದು ರಕ್ಷಣಾ ಆಟಗಾರನಾಗಿ. ಆದರೆ ಅನಂತರ ರೈಡರ್‌ ಆಗಿ ಬದಲಾದರು. ಇದು ಚೌಧರಿಯ ಕೈ ಹಿಡಿದಿದೆ. ಪ್ರೊ ಕಬಡ್ಡಿಯ ಪಂದ್ಯಗಳಲ್ಲಿ ರೈಡಿಂಗ್‌ನಲ್ಲಿ 500 ಅಂಕಗಳ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್‌ ನರ್ವಾಲ್‌, ಅನೂಪ್‌ ಕುಮಾರ್‌, ದೀಪಕ್‌ ಹೂಡಾ, ಅಜಯ್‌ ಠಾಕೂರ್‌, ಜಸ್ವೀರ್‌ ಸಿಂಗ್‌… ಇವರೆಲ್ಲರಿಗಿಂತ ಚೌಧರಿಯೇ ಒಂದು ಕೈ ಮೇಲಾಗಿ ಕಾಣುತ್ತಾರೆ.

Advertisement

 ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next