Advertisement

ಬೇಸರಾಗಿದೆ ಮಾತು ಭಾರವಾಗಿದೆ ಮೌನ

03:32 PM May 04, 2020 | Suhan S |

ನಿತ್ಯೋತ್ಸವದ ಕವಿ ಎಂದೇ ಹೆಸರಾಗಿದ್ದವರು ಕೆ. ಎಸ್‌. ನಿಸಾರ್‌ ಅಹಮದ್‌. ಹೊಸಬಗೆಯ ಪದ ಮತ್ತು ಪದ್ಯಗಳ ಮೂಲಕ ಕಾವ್ಯಲೋಕಕ್ಕೆ ಹೊಸದೊಂದು ಬೆರಗನ್ನು, ಕೋಮಲತೆಯನ್ನು, ಕಾಂತಿಯನ್ನು ತಂದದ್ದು ಅವರ ಹೆಚ್ಚುಗಾರಿಕೆ. ಯಾವುದೇ ಕಾರ್ಯಕ್ರಮದಲ್ಲಿ ನಿಸಾರ್‌ ಅವರು ಇದ್ದರೆಂದರೆ, ಅದಕ್ಕೊಂದುಗಾಂಭೀರ್ಯ ಇರುತ್ತಿತ್ತು. ಶ್ರೇಷ್ಠ ಕವಿ, ಶ್ರೇಷ್ಠಅಧ್ಯಾಪಕ, ಶ್ರೇಷ್ಠ ವಾಗ್ಮಿ ಮತ್ತು ಶ್ರೇಷ್ಠ ಮನುಷ್ಯ- ಇದೆಲ್ಲವೂ ಆಗಿದ್ದ ಅವರು,ತಮ್ಮ ಬದುಕಿನ ಕುರಿತು ಹೇಳಿಕೊಂಡಿದ್ದ ಕೆಲವು ಪ್ರಸಂಗಗಳ ವಿವರ ಇಲ್ಲಿದೆ…

Advertisement

ಒಮ್ಮೆ ನಾನು ಗುರು (ಕೆ.ಎಸ್‌. ನಿಸಾರ್‌ ಅಹಮದ್‌)ಗಳನ್ನು ಸಂದರ್ಶನ ಮಾಡಿದಾಗ- ‘ ನೀವೀಗ ಇಳಿ ವಯಸ್ಸಿನಲ್ಲಿ ಇದ್ದೀರಿ. ಹೇಗನ್ನಿಸ್ತಾ ಇದೆ?’ ಅಂತೇನೋ ಕೇಳಿದ್ದೆ. ಆಗ ಅವರು,’ನಿಂಗೆ ಯಾರಯ್ಯ ಹೇಳಿದ್ದು, ನಂಗೆ ವಯಸ್ಸಾಯ್ತು ಅಂತ? ಐ ಆಮ್‌ ಆಲ್ವೇಸ್‌ ಯಂಗ್.’ ಅಂತ ಹೇಳಿದ್ದರು. ಹೀಗೆ, ಸದಾಕಾಲ ಲವಲವಿಕೆಯಿಂದ ಇದ್ದವರು ಅವರು. ನನ್ನ ಪಾಲಿಗೆ ನಿಸಾರ್‌ ಅಹಮದ್‌, ಮೆಚ್ಚಿನ ಕವಿ ಮಾತ್ರವಲ್ಲ, ಕಾವ್ಯ ರಚನೆಯ ಆದ್ಯ ಗುರುಗಳು. ಯಾಕಂದ್ರೆ, ಬಹಳ ಸಣ್ಣ ವಯಸ್ಸಿನಲ್ಲಿ ಅವರ ಪದ್ಯಗಳನ್ನು ಓದಿ ಪ್ರಭಾವಿತನಾದವನಲ್ಲಿ ನಾನೂ ಒಬ್ಬ. ದಾವಣಗೆರೆಯಲ್ಲಿ ಬಿ. ಎಸ್ಸಿ ಓದುವಾಗ, ಗ್ರಂಥಾಲಯದಲ್ಲಿ ಅವರ ‘ಮದುವೆ’ ಪದ್ಯ ಓದಿ, ಬಹಳ ಇಷ್ಟಪಟ್ಟಿದ್ದೆ. ಡಿಗ್ರಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ. ಎ ಪದವಿಗೆ ಸೇರಿದಾಗ, ಅವರು ಭೂವಿಜ್ಞಾನ ವಿಭಾಗದಲ್ಲಿ ಬೋಧಕರಾಗಿದ್ದರು. ಬಿ. ಎ ತರಗತಿಗಳಿಗೆ ‘ಜನರಲ್‌ ಸೈನ್ಸ್ ಪಾಠ ಮಾಡಲು ಬರುತ್ತಿದ್ದರು. ಆಗ ನಾನು ಅವರನ್ನು ಮುಖತಃ ಭೇಟಿ ಮಾಡಿದ್ದು.

‘ ಸಾರ್‌, ನಿಮ್ಮ ಕವಿತೆಗಳೆಂದರೆ ನಂಗೆ ಬಹಳ ಇಷ್ಟ. ನಾನೂ ಕೆಲವು ಕವನಗಳನ್ನು ಬರೆದಿದ್ದೇನೆ. ಓದಿ, ನೋಡ್ತೀರ?’ ಅಂತ ಕೇಳಿಕೊಂಡಾಗ ಅವರು ‘ಖಂಡಿತಾ ನೋಡ್ತೀನಿ ಕೊಡಯ್ಯಾ…’ ಅಂತ ಖುಷಿಯಿಂದ ಒಪ್ಪಿಕೊಂಡರು. ನಾನು ಎರಡ್ಮೂರು ಪದ್ಯಗಳನ್ನು ಅವರಿಗೆ ಕೊಟ್ಟಿದ್ದೆ. ಅವರು, ‘ಓದಿತೇìನೆ, ಎರಡು ದಿನ ಬಿಟ್ಟು ಬಾ’ ಅಂತ ಹೇಳಿದರು. ಆಮೇಲೆ ಹೋದಾಗ ನನ್ನ ಬೆನ್ನು ತಟ್ಟಿ, ‘ಚೆನ್ನಾಗಿ ಬರಿತೀಯ ಕಣಯ್ನಾ. ಹೀಗೇ ಮುಂದುವರಿಸು. ಈಗ ನೀನು ಇಂಗ್ಲಿಷ್‌ ಮೇರ್ಜ ನಲ್ಲಿ ಇದ್ದೀಯ ತಾನೇ? ಹಾಗಾದ್ರೆ, ಲಂಕೇಶ್‌ ಅವರ ಪರಿಚಯ ಮಾಡಿಕೋ…’ ಅಂತೆಲ್ಲ ಪ್ರೋತ್ಸಾಹ ನೀಡಿದ್ದರು. ಹೀಗೆ, ನನ್ನನ್ನು ‘ಕವಿ’ ಅಂತ ಮೊದಲುಗುರುತಿಸಿದ್ದು ಅವರೇ. ಈ ಪರಿಚಯ ಮುಂದೆ ಆತ್ಮೀಯತೆಯಾಗಿ ಬೆಳೆಯಿತು.

ನನ್ನ ಇಡೀ ಕುಟುಂಬಕ್ಕೆ ಅವರು ಆತ್ಮೀಯರು. ಚಿಂತಾಮಣಿಯಲ್ಲಿ ನಮ್ಮ ಮನೆಗೂ ಬಂದಿದ್ದರು. ಇನ್ನು, ನಿತ್ಯೋತ್ಸವ ಕ್ಯಾಸೆಟ್‌ ಬಂದಾಗ, ನಾವು ಮನೆ ಮಂದಿಯೆಲ್ಲ ಕುಳಿತು ಆ ಹಾಡುಗಳನ್ನು ಪದೇ ಪದೆ ಕೇಳಿ, ಆನಂದಿಸಿದ್ದೇವು. ನನ್ನ ಭಾವಗೀತೆಗಳಿಗೆ ಒಂದರ್ಥದಲ್ಲಿ ಅವರೇ ಪ್ರಭಾವ, ಪ್ರೇರಣೆ ಅಂದರೂ ತಪ್ಪಿಲ್ಲ.

ನಾನು ಬೆಂಗಳೂರಿಗೆ ಬಂದು ನೆಲೆಸಿದ್ದು ಕೂಡಾ, ಅವರ ಮನೆ ಇರುವ ಏರಿಯಾದಲ್ಲಿಯೇ. ಹಾಗಾಗಿ, ಆಗಾಗ ಭೇಟಿಯಾಗುತ್ತಿದ್ದೆವು. ಅವರು ತಮ್ಮ ಶಿಷ್ಯರ ಬಗ್ಗೆ ಮಾತನಾಡುವಾಗ ನನ್ನನ್ನು ಮತ್ತು ಎಚ್ಚೆಸ್ವಿಯನ್ನು ನೆನಪಿಸಿಕೊಳ್ಳದೇ ಇರುತ್ತಿರಲಿಲ್ಲ. ಅವರು ಅಮೆರಿಕಕ್ಕೆ ಹೋಗುವ ಮುಂಚೆ, ಹೋಗಿ ಬಂದ ಮೇಲೆ, ಅವರನ್ನು ಭೇಟಿ ಮಾಡಿದ್ದೆ. ಪತ್ನಿ ಮತ್ತು ಮಗ ತೀರಿಕೊಂಡ ಬಳಿಕ ಬಹಳ ಕುಗ್ಗಿದ್ದರು. ಇನ್ನು ನಿಸಾರ್‌ ಅಹಮದ್‌ ಅವರು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ಹೇಗೆ ಕಟ್ಟಿ ಕೊಡುವುದು? ‘ನಿತ್ಯೋತ್ಸವ’ ಧ್ವನಿ ಸುರುಳಿಯ ಮೂಲಕ ಕನ್ನಡದಲ್ಲಿ ಭಾವಗೀತೆಗಳ ಹೊಸ ಟ್ರೆಂಡ್‌ ಸೃಷ್ಟಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ‘ಕುರಿಗಳು ಸಾರ್‌ ಕುರಿಗಳು’ ಕವಿತೆ ನನ್ನ ಮೆಚ್ಚಿನದ್ದು. ಅವರ ಕವಿತೆಗಳಲ್ಲಿ ನಾನು ಗಮನಿಸಿದ್ದೇನೆಂದರೆ, ಜನಸಾಮಾನ್ಯರು ಆಡುವ ಭಾಷೆಯನ್ನೇ ಬಳಸಿ, ನವಿರು ಹಾಸ್ಯದ ಮೂಲಕ ಗಹನವಾದುದನ್ನು ಅವರು ಹೇಳಬಲ್ಲವರಾಗಿದ್ದರು.

Advertisement

ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಚಿಂತಾಮಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಪ್ರಸ್ತುತ ಸಾಹಿತ್ಯ’ ಎಂಬ ವಿಷಯದ ಕುರಿತು ಒಂದು ದಿನದ ಸಾಹಿತ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಅದೊಂದು ಅಪರೂಪದ ಕಾರ್ಯಕ್ರಮ. ರಾಜ್ಯದ ಪ್ರಸಿದ್ಧ ಸಾಹಿತಿಗಳನ್ನೆಲ್ಲ ಬೆಂಗಳೂರಿನಿಂದ ಕರೆಸಿ, ಹಿರಿ-ಕಿರಿಯ ಸಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ತಂದ ಕಾರ್ಯಕ್ರಮ ಅದು.

ಇಂಥ ಅದ್ಭುತ ಚೇತನ ನಮ್ಮನ್ನು ಆಗಲಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ, ಅವರ ಅಭಿಮಾನಿಗಳಿಗೆ ಅಂತಿಮ ದರ್ಶನವೂ ಅಲಭ್ಯವಾಗಿರುವುದು ಬೇಸರದ ಸಂಗತಿ. ವೈಯಕ್ತಿಕವಾಗಿ ನನಗೆ ತೀರ್ಥರೂಪ ಸಮಾನರಾಗಿದ್ದ ಅವರು, ನವಿರು ಭಾವಗೀತೆಗಳ, ಗಂಭೀರ ಕಾವ್ಯಗಳ ಮೂಲಕ ಎಂದೆಂದಿಗೂ ಜೊತೆಗೇ ಇರುತ್ತಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾರೈಸುತ್ತೇನೆ.

 

ಬಿ.ಆರ್‌. ಲಕ್ಷ್ಮಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next