ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಚರ್ಚೆ ನಡೆಯಲಿದೆ. ಆದರೆ ಈ ವಿಷಯದಲ್ಲಿ ಯಾವುದೇ ಒಂದು ಸಮುದಾಯವನ್ನು ವೈಯಕ್ತಿಕವಾಗಿ ಗುರಿಯಾಗಿಟ್ಟುಕೊಂಡು ಮಾತನಾಡುವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಹೀಗೆ ಯಾವುದೇ ಒಂದು ಸಮುದಾಯವನ್ನು ವೈಯಕ್ತಿಕವಾಗಿ ಗುರಿಯಾಗಿಟ್ಟುಕೊಂಡು ಮಾತನಾಡುವುದರಿಂದ ಪ್ರಜಾಪ್ರಭುತ್ವದ ಆರೋಗ್ಯ ಹಾಳಾಗುತ್ತದೆ ಎಂದರು.
ಪೌರತ್ವ ಕಾಯಿದೆಗೆ ಈಗಾಗಲೇ ಲೋಕಸಭಾ, ರಾಜ್ಯಸಭಾದಲ್ಲಿ ಅನುಮೋದನೆ ಪಡೆದು ರಾಷ್ಟ್ರಪತಿ ಅಂಕಿತ ಬಿದ್ದಿದ್ದು ಈಗ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಭಾರತ ಬಂದ್ ಸಹ ಸಿಎಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಒಂದು ಪ್ರಯತ್ನ ಎಂದರು.
ನಾನು ಯಾವುದೇ ಕಾರಣಕ್ಕೂ ಮತ್ತೆ ಡಿಸಿಎಂ ಆಗುವುದಿಲ್ಲ. ಅನೇಕರು ಈ ಹುದ್ದೆ ಬಯಸಿದ್ದಾರೆ. ಜೊತೆಗೆ ನಾನು ಈ ಮೊದಲೇ ಡಿಸಿಎಂ ಆಗಿದ್ದೇನೆ ಎಂದರು.
ಬಿಜೆಪಿಯಿಂದ ಕೆಲ ಶಾಸಕರು ಹೊರಬರಲಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ಏಕೆಂದರೆ ನಮಗೆ ಈಗಾಗಲೇ ಶಾಸರು ಹೆಚ್ಚಾಗಿ ಓವರ್ ಲೋಡ್ ಆಗಿದೆ. ನಮ್ಮ ಎಲ್ಲಾ ಶಾಸಕರು ಹುಲಿಗಳಿದ್ದಂತೆ. ಅವರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದರು.