ಬೀದರ್ : ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಮಾತಿನ ಸಮರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಬೀದರ್ ನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರ ನಡುವಿನ ಸಮರಕ್ಕೆ ಯಾವ ಪದ ಬಳಸಬೇಕು ನನಗೂ ಗೊತ್ತಾಗುತ್ತಿಲ್ಲ. ಹೀಗಾಗಿ ಇಬ್ಬರು ಬಳಸುವ ಪದದಿಂದಾಗಿ ನನಗೆ ತುಂಬಾ ನೋವಾಗಿದೆ. ಇಬ್ಬರೂ ಏನು ಬೇಕಾದರೂ ಚರ್ಚೆ ಮಾಡಲಿ ಅದರೆ, ನೋಡಿಕೊಂಡು ಪದಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರು ಮಂತ್ರಿ ಸ್ಥಾನ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಮೋದಿ ದೇಶಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ ಇತಿಹಾಸದಲ್ಲೇ ಐಎಎಸ್, ಐಪಿಎಸ್, ದಲಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲರಿಗೂ ಮಂತ್ರಿ ಮಂಡಲದಲ್ಲಿ ಮೋದಿ ಅವಕಾಶ ನೀಡಿದ್ದಾರೆ. ಕರ್ನಾಟಕ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ರಾಜ್ಯದ ಆರು ಜನಕ್ಕೆ ಅವಕಾಶ ನೀಡಿದ್ದು, ರಾಜ್ಯದ ಎಲ್ಲಾ ಭಾಗಗಳಿಗೆ ಮೋದಿ ಕೊಡುಗೆ ನೀಡಿದ್ದು ವಿಶೇಷವಾಗಿದೆ. ಹೀಗಾಗಿ ನಾನು ರಾಜ್ಯದ ಜನರ ಪರವಾಗಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.
ಇದನ್ನೂ ಓದಿ:ರಾಜ್ಯದಿಂದ ನಾಲ್ವರು ಕೇಂದ್ರ ಸಚಿವರಾದರೂ ಯಾವುದೇ ಪ್ರಯೋಜನವಿಲ್ಲ: ಸತೀಶ್ ಜಾರಕಿಹೊಳಿ
ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿಎಂ ಕೂಗಿನ ಬಗ್ಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿಗೆ ಹೇಳೋರು ಕೇಳೋರು ಇದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಯಾರೂ ಇಲ್ಲ. ಅದಕ್ಕಾಗಿ ಕಾಂಗ್ರೆಸ್ ನಲ್ಲಿ ನಾನೇ ಸಿಎಂ, ನಾನೇ ಅಭ್ಯರ್ಥಿ ಎಂದು ಹೇಳಬಹುದು. ಆದರೆ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೈ ನಾಯಕರ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.