Advertisement

ಹಿರಿಯ ಲೇಖಕಿ, ಆಕಾಶವಾಣಿ ನಿರ್ದೇಶಕಿ ಜ್ಯೋತ್ಸ್ನಾ ಕಾಮತ್ ಇನ್ನಿಲ್ಲ

07:27 PM Aug 24, 2022 | Team Udayavani |

ಹೊನ್ನಾವರ: ಶಿಕ್ಷಕಿ, ಲೇಖಕಿ, ಇತಿಹಾಸಜ್ಞೆ, ಆಕಾಶವಾಣಿ ನಿರ್ದೇಶಕಿ ಹೀಗೆ ಹಲವು ರೀತಿಯಲ್ಲಿ ನಾಡಿಗೆ ಸಂದ ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ (85) ಬುಧವಾರ ಸಂಜೆ 4ಕ್ಕೆ ಬೆಂಗಳೂರು ಸ್ವಗೃಹದಲ್ಲಿ ನಿಧನರಾದರು.

Advertisement

ಇವರ ಪತಿ, ಹೆಸರಾಂತ ಲೇಖಕ ದಿ| ಡಾ| ಕೃಷ್ಣಾನಂದ ಕಾಮತರ ಸಾಹಿತ್ಯಕ್ಕೆ ಸ್ಫೂರ್ತಿಯಾಗಿ, ಬಾಳಸಂಗಾತಿಯಾಗಿ ಅನ್ಯೋನ್ಯ ಸಾಹಿತ್ಯ ದಂಪತಿಗಳ ಜೋಡಿಯೆಂದು ನಾಡಿಗೆ ಪರಿಚಿತರಾಗಿದ್ದರು.

1937ರಲ್ಲಿ ಜನಿಸಿದ ಜ್ಯೋತ್ಸ್ನಾ ರ ತಂದೆ ಗಣೇಶ ರಾವ್‌ ಕುಮಟಾದವರು. ಪೋಸ್ಟ್‌ ಮಾಸ್ತರರಾಗಿದ್ದರು. ಇಂಗ್ಲಿಷ್‌, ಕನ್ನಡ ಸಾಹಿತ್ಯ ಪ್ರಿಯರಾಗಿದ್ದರು. ಮನೆಯಲ್ಲಿ ಗ್ರಂಥಾಲಯವಿತ್ತು.

ಜ್ಯೋತ್ಸ್ನಾ ರಲ್ಲಿ ಸಹಜವಾಗಿ ಸಾಹಿತ್ಯಾಸಕ್ತಿ ಬೆಳೆಯಿತು. ಅವರು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿ ಸಾಹಿತ್ಯದ ಅಧ್ಯಯನ ಮುಂದುವರಿಸಿದರು. ಇತಿಹಾಸದಲ್ಲಿ ಎಂಎ ಓದಿದ ಜ್ಯೋತ್ಸ್ನಾ ಧಾರವಾಡ ಆಕಾಶವಾಣಿಯ ಕಾರ್ಯನಿರ್ವಾಹಕಿಯಾಗಿ ಆಯ್ಕೆಗೊಂಡು ದೇಶದ ನಾನಾಭಾಗಗಳಲ್ಲಿ ನಿಲಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿ 1994ರಲ್ಲಿ ಬೆಂಗಳೂರಿನಲ್ಲಿ ನಿವೃತ್ತಿ ಪಡೆದರು.

ಅಲೆಮಾರಿ ಸಾಹಿತಿ ಎಂದು ಪ್ರಸಿದ್ಧರಾಗಿದ್ದ ಹೊನ್ನಾವರ ಕೃಷ್ಣಾನಂದ ಕಾಮತರನ್ನು 1966ರಲ್ಲಿ ವಿವಾಹವಾದ ಜ್ಯೋತ್ಸ್ನಾ ಸಮಾನ ಆಸಕ್ತಿ, ಮನೋಭಾವ, ಧ್ಯೇಯಗಳಿಂದಾಗಿ ಇವರು ಆದರ್ಶ ಸಾಹಿತಿಗಳ ಜೋಡಿ ಎನಿಸಿಕೊಂಡರು.

Advertisement

ಮಗ ವಿಕಾಸ ಜನಿಸಿದ ಮೇಲೆ ಡಾಕ್ಟರೇಟ್‌ ಮಾಡಿದ ಜ್ಯೋತ್ಸ್ನಾ ಸಂಸಾರದಲ್ಲಿ ಸ್ವಾರಸ್ಯ, ಕರ್ನಾಟಕ ಶಿಕ್ಷಣ ಪರಂಪರೆ, ಹೀಗಿದ್ದೇವೆ ನಾವು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಬಹುಭಾಷೆಯನ್ನು ಬಲ್ಲ ಇವರಿಗೆ ಸಾಹಿತ್ಯ ಅಕಾಡೆಮಿ ಮತ್ತು ರಾಜ್ಯಸರ್ಕಾರ ಗೌರವಿಸಿದೆ. ವಿದೇಶ ನೋಡಿ ಬಂದ ಕೃಷ್ಣಾನಂದ ಕಾಮತ ದೇಶದ ಉದ್ದಗಲ ಓಡಾಡುತ್ತಾ ಅಪರೂಪದ ಕೃತಿಗಳನ್ನು ರಚಿಸುತ್ತಿದ್ದರೆ, ಇನ್ನೊಂದು ಊರಿನಲ್ಲಿ ಆಕಾಶವಾಣಿ ವೃತ್ತಿಯಲ್ಲಿದ್ದ ಜ್ಯೋತ್ಸ್ನಾ ಅವರ ಜೀವನ ಪತಿಪತ್ನಿಯರಿಗಿಂತ ಗೆಳೆಯ ಗೆಳತಿಯರ ಜೀವನದಂತೆ ಸಾಮರಸ್ಯ ಹಾಗೂ ಸಂತೋಷದಿಂದ ಸಾಗಿತ್ತು. ಮಗ ವಿಕಾಸ್‌ ಕಾಮತ್‌ 25 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದು,  ಕಾಮತ್‌ಡಾಟ್‌ಕಾಮ್‌ ವೆಬ್‌ಸೈಟ್‌ 25 ವರ್ಷದ ಹಿಂದೆ ಆರಂಭಿಸಿ ಡಾ| ಕೃಷ್ಣಾನಂದ ಕಾಮತ್‌ ಇವರ ಲಕ್ಷಾಂತರ ಫೋಟೋ , ಬರಹ ಮತ್ತು ಜ್ಯೋತ್ಸ್ನಾ ಕಾಮತರ ಬರಹಗಳನ್ನು ವೆಬ್‌ಸೈಟ್‌ನಲ್ಲಿ ತುಂಬಿಸಿದ್ದು, ಈ ವೆಬ್‌ಸೈಟ್‌ಗಳು ಇಂದಿಗೂ ಭಾರತದ ಕುರಿತು ಅಧ್ಯಯನ ಮಾಡಲು ಜಗತ್ತಿನಲ್ಲಿ ಬಳಕೆಯಾಗುತ್ತಿದ್ದು, ದಿನಕ್ಕೆ ಲಕ್ಷಾಂತರ ಜನ ಈ ವೆಬ್‌ಸೈಟ್‌ ವೀಕ್ಷಿಸುತ್ತಾರೆ. ಈ ಮೂಲಕ ಡಾ| ಕಾಮತ್‌ ದಂಪತಿ ಸಾಹಿತ್ಯ ಲೋಕದಲ್ಲಿ ಚಿರಂಜೀವಿಗಳಾಗಿದ್ದಾರೆ.

ಕೃಷ್ಣಾನಂದ ಕಾಮತರ ಹೆಸರಿನಲ್ಲಿ ಹೊನ್ನಾವರದಲ್ಲಿ ವಾಚನಾಲಯ ಸ್ಥಾಪಿಸಿದ್ದು, ಪ್ರತಿವರ್ಷ ಕಾಮತರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ, ಸಾಹಿತ್ಯ ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಾ ಸಾಹಿತ್ಯ ಚಟುವಟಿಕೆಯಲ್ಲಿ ಜ್ಯೋತ್ಸ್ನಾ ಕಾಮತ್‌ ಸಕ್ರಿಯರಾಗಿದ್ದರು.

ಪ್ರಸಿದ್ಧ ಜವಳಿ ವ್ಯಾಪಾರಿಗಳಾದ ಲಕ್ಷ್ಮಣ ಕಾಮತ್‌ ಕುಟುಂಬದ ಹಿರಿಯ ಸೊಸೆಯಾಗಿದ್ದ ಜ್ಯೋತ್ಸ್ನಾ ಕಾಮತ್‌ ನಿಧನಕ್ಕೆ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಘವ ಬಾಳೇರಿ, ಹತ್ತು ಸಮಸ್ತರ ಸಮಿತಿ ಅಧ್ಯಕ್ಷ ನರೇಂದ್ರ ಕಾಮತ್‌, ಉದ್ಯಮಿ ರಾಘವ ಪೈ, ಜಿಎಸ್‌ಬಿ ಮಹಿಳಾ ವಾಹಿನಿ ಸದಸ್ಯರು, ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ್‌ ನಾಯ್ಕ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next