Advertisement

ಒಂದು ಪಿಸು ಮಾತು

08:15 AM Sep 28, 2019 | mahesh |

ಮದುವೆ ಆಗಿ ಬಂದ ಮೊದ ಮೊದಲು ನನಗೆ ಮುಟ್ಟಾದಾಗ, ತೀರಾ ನಿಕೃಷ್ಟವಾಗಿ ಕಾಣುತ್ತಿದ್ದರು. ಆಗ ಒಂಥರ ಬೇಸರವಾಗಿ ಅಮ್ಮನ ಮನೆಗೆ ಹೋಗುತ್ತಿದ್ದೆ. ಅಮ್ಮನ ಮನೆಗೆ ಹೋಗಲು ಈ ನಾಲ್ಕು ದಿನಗಳನ್ನೇ ಮೀಸಲಾಗಿಡುತ್ತಿದ್ದೆ. ಶಿಖಾ ಹುಟ್ಟಿದ ಬಳಿಕ ಅವಳ ಬಟ್ಟೆಬರೆ ಹಾಲಿನ ಡಬ್ಬಿ ಹೊತ್ತುಕೊಂಡು ಹೋಗುವ ತ್ರಾಸಿನಿಂದಾಗಿ ಇಲ್ಲೇ ಇರುವುದೇ ಲೇಸು ಎಂದು ಇರಲಾರಂಭಿಸಿದೆ. ಅತ್ತೆಗೆ ಸೊಸೆಯ ಸೇವೆ ಮಾಡುವುದು ಅನಿವಾರ್ಯವಾಯಿತು. ನನಗೂ ಅವರಿಂದ ಕೆಲಸಮಾಡಿಸಿಕೊಳ್ಳುವುದೆಂದರೆ ಕಸಿವಿಸಿಯಾಗುತ್ತಿತ್ತು. ಐದನೆಯ ದಿನದ ಸ್ನಾನದ ಬಳಿಕ ಬಳಸಿದ ಎಲ್ಲಾ ಬಟ್ಟೆಗಳನ್ನು ಒಗೆದು ಪ್ರತ್ಯೇಕವಾಗಿ ಒಣಗಲು ಹಾಕುವುದು. ಏನೇ ಆಗಲಿ, ಎಲ್ಲವನ್ನೂ ಅವರು ಹೇಳಿದಂತೆ ಪಾಲಿಸುತ್ತ ಬಂದೆ. ಶಿಖಾ ಬೆಳೆಯುತ್ತ ಬಂದಂತೆ, ಅವಳು ಕೂಡ ನನ್ನಂತೆ ಈ ಮಡಿ-ಮೈಲಿಗೆಯನ್ನು ಪಾಲಿಸಬಹುದಾ? ಎಂಬ ಪ್ರಶ್ನೆ ಆಗಾಗ ಕಾಡುತ್ತಲೇ ಇತ್ತು.

Advertisement

ಅಂದು ಅದೇನು ಆಗಿತ್ತೋ ಗೊತ್ತಿಲ್ಲ . ಅವಳು ನನ್ನ ಕೈ ಎಳೆದು ಸಾನಿಟರಿ ಪ್ಯಾಡ್‌ ಪ್ಯಾಕೆಟ್‌ ಅನ್ನು ಇಟ್ಟು , “”ಅಮ್ಮಾ, ಇನ್ನು ನೀನೂ ಇದನ್ನೇ ಬಳಸು” ಎಂದಾಗ, ನಾನು ಕಣ್ಣು-ಬಾಯಿ ಬಿಟ್ಟು ಅವಳತ್ತ ನೋಡಿ, “”ಅಕ್ಕ ಪಕ್ಕ ಯಾರಾದರೂ ಇದ್ದಾರಾ?” ಎಂದು ಖಚಿತಗೊಳಿಸಲು ಕತ್ತನ್ನು ತಿರುಗಿಸಿದೆ. ನನ್ನ ಪುಣ್ಯಕ್ಕೆ ಯಾರೂ ಇರಲಿಲ್ಲ. ಅತ್ತೆ ಅಡುಗೆಮನೆಯಲ್ಲಿ ಮುಖ ಗಂಟಿಕ್ಕಿಸಿಕೊಂಡು ಕಾಯಿ ತುರಿಯುತ್ತಿದ್ದರು. ಮಾವ ಕಾಲ ಮೇಲೆ ಕಾಲಿಟ್ಟು ಟಿ. ವಿ. ನೋಡುವುದರಲ್ಲಿ ಮಗ್ನರಾಗಿದ್ದರು.

ನಾನವಳನ್ನು ಕಣ್ಣಲ್ಲೇ ಬೆದರಿಸಿ ಚಾಪ್ಟರ್‌ ಇಲ್ಲಿಗೆ ಮುಗಿಸಲು ಪ್ರಯತ್ನಿಸಿದೆ. ಅವಳು ಈ ಪೊಳ್ಳು ಬೆದರಿಕೆ ನನ್ನಲ್ಲಿ ನಡೆಯದು ಎನ್ನುವಂತೆ ಕೈಯಲ್ಲಿದ್ದ ಪ್ಯಾಕೆಟನ್ನು ಎರಡು ಬಾರಿ ತಟ್ಟಿ ಮುಗುಳು ನಗೆ ಬೀರಿ “ಬಳಸು’ ಎಂದಳು. ನಾನೂ ಬಿಡದೆ, “”ಎಂತದ್ದೆ? ಇವೆಲ್ಲ. ನಮಗೆ ಹೇಳಿದ್ದಲ್ಲ” ಎಂದು ಪಿಸುರಿದೆ. “”ಓಹೋ! ವಿಸ್ಪರಿಂಗ್‌ಖಖಖ… ಎಲ್ಲಿ ಬರೆದಿದೆ ತೋರಿಸು” ಎಂದು ಪ್ಯಾಕೆಟನ್ನು ಕಸಿದು ಹುಡುಕುವ ಸೋಗು ಮಾಡಿದಳು.

ಸುಮ್ನಿರೆ ಕತ್ತೆ
ತೆಗೆದು ಒಳಗಿಡು, ಬಂದಾಳು ನಿನ್ನತ್ತೆ
ಸಾಸಿವೆಯೇ ಸಿಡಿಯಬೇಡ
ಹೋಗಿನ್ನು ಎಂದು ಹೊರಗಟ್ಟಿಸಿ ಬಿಟ್ಟೆ !
ಅವಳು ಹೋದ ಬಳಿಕ ಕೋಣೆಯ ನೀರವ ಮೌನದಲ್ಲಿ ಸುಖದ ಚಿಲುಮೆ ಚಿಮ್ಮಿ ಹುಚ್ಚು ಹುಡುಗಿ ಎಂದೆನಿಸಿತು.

ನಿಜ ಹೇಳಬೇಕೆಂದರೆ ಸಂಪ್ರದಾಯಗಳ ಬೇರುಗಳು ಗಟ್ಟಿಯಾಗಿ ತಳವೂರಿದ ಮನೆ ನನ್ನದು. ಎಲ್ಲವೂ ಮೊದಲಿನಿಂದ ನಡೆದು ಬಂದ ರೀತಿಯಲ್ಲೇ ನಡೆಯಬೇಕು. ಹಾಗೆ ಊರಿನ ತಲೆಮಾರಿನ ಸಂಪ್ರದಾಯ ವಲ್ಲ ಬಿಡಿ. ಕಳೆದ ಆರು ದಶಕಗಳಿಂದ ಮುಂಬೈಯಲ್ಲಿ ಬಂದು ನೆಲೆ ನಿಂತ ಅತ್ತೆ, ಅವರದ್ದೇ ಒಂದು ನೀತಿ-ನಿಯಮಗಳ ಚೌಕಟ್ಟನ್ನು ರಚಿಸಿದ್ದರು. ಅದೂ ದಿನಾ ಮನೆ ಮುಂದೆ ರಂಗೋಲಿ ಬಿಡಿಸುವಂತೆ ಸರಳವಾಗಿರಬೇಕು. ಕಾಲಕ್ರಮೇಣ ಅದುವೇ ಶಾಸನವಾಗಿದೆ.

Advertisement

ಮಾವನ ಸಣ್ಣ ಬಟ್ಟೆಯ ಅಂಗಡಿ. ಅವರು ಬೆಳಿಗ್ಗೆ ಅಂಗಡಿಗೆ ಹೋದರೆ ಮನೆಗೆ ಮರಳುವಾಗ ರಾತ್ರಿ 8 ಗಂಟೆ. ಹೀಗಾಗಿ, ಅತ್ತೆಯದ್ದೇ ಹುಖುಮತ್‌! ಅವರಿಗೆ ಹಿಡಿಸದ್ದ‌ನ್ನು ಹೇಳಬೇಕಾದರೆ ಮಾವನ ಹೆಗಲಲ್ಲಿಟ್ಟು ಬಾಣ ಪ್ರಯೋಗಿಸಿ ಗೆಲುವನ್ನು ಸಾಧಿಸುತ್ತಿದ್ದರು. ಮುಟ್ಟಿನ ವಿಷಯದಲ್ಲೂ ಒಂದು ರೀತಿ ಹೀಗೆಯೇ. ತಿಂಗಳ ಈ ನಾಲಕ್ಕು ದಿನ ಸೂತಕದ ಹೊಗೆ ತಟ್ಟಿದಂತೆ ಅವರ ಚರ್ಯೆ. ಕಾಲ ಬದಲಾದರೂ ಕಟ್ಟುಪಾಡು ಬದಲಾಗಬಾರದೆಂಬುದು ಅವರ ಭಾವ.

ಮದುವೆ ಆಗಿ ಬಂದ ಮೊದಮೊದಲು ನನಗೆ ಮುಟ್ಟಾದಾಗ, ತೀರಾ ನಿಕೃಷ್ಟವಾಗಿ ಕಾಣುತ್ತಿದ್ದರು. ಆಗ ಒಂಥರ ಬೇಸರವಾಗಿ ಅಮ್ಮನ ಮನೆಗೆ ಹೋಗುತ್ತಿದ್ದೆ. ಅಮ್ಮನ ಮನೆಗೆ ಹೋಗಲು ಈ ನಾಲ್ಕು ದಿನ ಗಳನ್ನೇ ಮೀಸಲಾಗಿಡುತ್ತಿದ್ದೆ. ಶಿಖಾ ಹುಟ್ಟಿದ ಬಳಿಕ ಅವಳ ಬಟ್ಟೆಬರೆ, ಹಾಲಿನ ಡಬ್ಬಿ ಹೊತ್ತುಕೊಂಡು ಹೋಗುವ ತ್ರಾಸಿನಿಂದಾಗಿ ಇಲ್ಲೇ ಇರುವುದೇ ಲೇಸು ಎಂದು ಇರಲಾರಂಭಿಸಿದೆ. ಅತ್ತೆಗೆ ಸೊಸೆಯ ಸೇವೆ
ಮಾಡುವುದು ಅನಿವಾರ್ಯವಾಯಿತು. ನನಗೂ ಅವರಿಂದ ಕೆಲಸ ಮಾಡಿಸಿಕೊಳ್ಳುವುದೆಂದರೆ ಕಸಿವಿಸಿಯಾಗುತ್ತಿತ್ತು. ಐದನೆಯ ದಿನದ ಸ್ನಾನದ ಬಳಿಕ ಬಳಸಿದ ಎಲ್ಲಾ ಬಟ್ಟೆಗಳನ್ನು ಒಗೆದು ಪ್ರತ್ಯೇಕವಾಗಿ ಒಣಗಲು ಹಾಕುವುದು. ಏನೇ ಆಗಲಿ, ಎಲ್ಲವನ್ನೂ ಅವರು ಹೇಳಿದಂತೆ ಪಾಲಿಸುತ್ತ ಬಂದೆ. ಶಿಖಾ ಬೆಳೆಯುತ್ತ ಬಂದಂತೆ, ಅವಳು ಕೂಡ ನನ್ನಂತೆ ಈ ಮಡಿ-ಮೈಲಿಗೆಯನ್ನು ಪಾಲಿಸಬಹುದಾ? ಎಂಬ ಪ್ರಶ್ನೆ ಆಗಾಗ ಕಾಡುತ್ತಲೇ ಇತ್ತು.

ನಮ್ಮ ಶಿಖಾ ನನ್ನ ಹಾಗೆ ಅಲ್ಲ. ಸ್ವಲ್ಪ ತನ್ನ ತಂದೆಯ ಸ್ವಭಾವವನ್ನೇ ಪಡೆದುಕೊಂಡು ಬಂದಿದ್ದಾಳೆ. ಎಲ್ಲವೂ ನೇರಾನೇರ. ಮುಂಬೈಯಲ್ಲಿ ಕಲಿತು ಬೆಳೆದ ಹೆಣ್ಣು ನಾನಾಗಿದ್ದರೂ ಒಂದು ತರಹ ಪುಕ್ಕಲು ಸ್ವಭಾವದ ವಳೇ. ಮಾತುಮಾತಿಗೂ ಅಳುವುದೊಂದು ಬಿಟ್ಟು ಬೇರೇನೂ ಗೊತ್ತಿಲ್ಲ. ಯಾರು ಏನೇ ಕೆಲಸ ಹೇಳಿದರೂ ಚಾಚೂತಪ್ಪದೆ ಮಾಡುವುದು. ಅದರಿಂದಾಗಿ ನನಗಾಗುವ ತೊಂದರೆಗಳನ್ನು ಸಹಿಸಿಯೋ ಸುಮ್ಮನಿರುವುದೇ ನನ್ನ ಗುಣ.

ಶಿಖಾ ಹಾಗಲ್ಲ. ಯಾರಿಗೂ ಹೆಚ್ಚು ಬೆಣ್ಣೆ ಹಚ್ಚಲು ಹೋಗುವವಳಲ್ಲ. ಮುಖ್ಯವಾಗಿ ತಪ್ಪಿದ್ದದ್ದನ್ನು ತಪ್ಪು ಎನ್ನುವ ಛಾತಿ ಅವಳಲ್ಲಿ ಉಂಟು. ಮೊದ ಮೊದಲು ನಾನೇ ಜೋರು ಮಾಡಿ, “ದೊಡ್ಡವರಿಗೆ ಗೌರವಕೊಡುವುದು ನಮ್ಮ ಆದ್ಯ ಕರ್ತವ್ಯ’ ಎಂದು ಬುದ್ಧಿವಾದ ಹೇಳುತ್ತಿದ್ದೆ. “”ಅಮ್ಮಾ, ದೊಡ್ಡವರು ಅಂದ ಮಾತ್ರಕ್ಕೆ ತಪ್ಪು ಮಾಡೋದೇ ಇಲ್ವಾ? ನಮ್ಮ ಪೌರಾಣಿಕ ಕಥೆಗಳನ್ನೇ ನೋಡು, ಇತಿಹಾಸವನ್ನೇ ಓದು”

ಅವಳ ಮಾತಲ್ಲಿ ತಥ್ಯವಿದೆಯೆಂದು ನನಗೆ ತಿಳಿದದ್ದು, ಶಿಖಾ ಋತುಮತಿಯಾದಾಗ. ಅತ್ತೆಯವ ರು ನನ್ನ ಹಾಗೆಯೇ ಅವಳನ್ನೂ ದೂರ ಕೂರಿಸಿ ತನ್ನ ಜರ್ಜರಿತವಾದ ಕಾಟನ್‌ ಸೀರೆಯನ್ನು ಹರಿದು ತಂದು ಕೊಟ್ಟಿದ್ದರು. ಈ ದಿನಗಳಲ್ಲಿ ಮಾನಸಿಕ ಹಾಗೂ ಶಾರೀರಿಕವಾಗಿ ಬಳಲಿರುವ ಅವಳಿಗೆ ಇವೆಲ್ಲಾ ಸೂಕ್ತವಲ್ಲ ಎಂದು, ಮೊದಲ ಬಾರಿಗೆ ತಡವರಿಸುತ್ತ, “”ಅತ್ತೆ, ಇವೆಲ್ಲ ಈಗಿನ ಮಕ್ಕಳು ಎಲ್ಲಿ ಬಳಸುತ್ತಾರೆ? ಸ್ಯಾನಿಟರಿ ಪ್ಯಾಡ್‌ಗಳು ಸಿಗುವಾಗ ಇದೆಲ್ಲ ರಗಳೆ ಅಲ್ವಾ?”

“”ಹೌದೌದು, ದೊಡ್ಡ ಫ್ಯಾಕ್ಟರಿ ಮಾಲಿಕನ ಮಗಳಲ್ವಾ ಅವಳು? ತಿಂಗಳಿಗೆ ಲಕ್ಷಗಟ್ಟಲೆ ಗಳಿಸುತ್ತಾನೆ. ಪುಕ್ಸಟ್ಟೆಗೆ ಹಣ ಖರ್ಚು ಮಾಡುವುದಂದ್ರೆ ಏನು? ಜಗಕ್ಕೆ ಆಗದ್ದು ನಿನ್ನ ಮಗಳಿಗೆ ಆದದ್ದಲ್ಲ. ಅಷ್ಟು ಕೊಂಡಾಟ ಇದ್ರೆ, ಒಂದಿಷ್ಟು ಚಿನ್ನ ಗುದ್ದಿಸಿ ಹಾಕು. ಇನ್ನೇನು ಕೆಲವು ವರ್ಷಗಳಲ್ಲಿ ಅವಳ ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಅವನಿಗೆ ಒಳ್ಳೆಯ ಸಂಪಾದನೆ ಇದ್ದರೆ ಸರಿ. ಇಲ್ಲಾಂದ್ರೆ ಸೂಕ್ಷ್ಮವಾಗಿ ಮನೆ ಹೇಗೆ ನಡೆಸುವುದೆಂದು ಹೇಳಿಕೊಡುವುದು ನಿನ್ನ ಕರ್ತವ್ಯ ತಾನೇ” ಸಿಕ್ಕ ಅವಕಾಶದಲ್ಲೇ ಜವಾಬ್ದಾರಿಯ ಪಾಠ ಹೇಳಿಯೇ ಬಿಟ್ಟರು. ನನ್ನೊಳಗಿನ ಸಿಟ್ಟು ಯಾವ ಪ್ರತಿಕ್ರಿಯಯನ್ನೂ ತೋರದೆ ನಿಷ್ಕ್ರಿಯವಾಯಿತು.

ಶಿಖಾ ಮಾತ್ರ ಕಟ್ಟುನಿಟ್ಟಿನ ಚೌಕಟ್ಟಿನಲ್ಲಿ ಸಿಲುಕಿರಲು ಒಪ್ಪಲಿಲ್ಲ. ಆರಂಭದ ಕೆಲವು ದಿನಗಳಲ್ಲಿ ಕಿರಿಕಿರಿಯಂತೆ ಭಾಸವಾದರೂ, ನಂತರ ಎಲ್ಲವೂ ಸಹಜವೆನ್ನುವಂತೆ ಹೊಂದುಕೊಳ್ಳುವುದು ಪ್ರಕೃತಿ ನಿಯಮವೇ ಸರಿ. ಅತ್ತೆ ಎಂದಿನಂತೆ ಮುಖ ತಿರುಗಿಸುವುದು, ಅಲ್ಲಿ ಕೂತದ್ದು ಸರಿಯಲ್ಲ, ಇಲ್ಲಿ ನಿಂತದ್ದು ತಪ್ಪು ಎಂದು ವಟಗುಟ್ಟುವುದು ಇದ್ದೇ ಇತ್ತು.

ಈ ದಿನ ಶಿಖಾ ನನಗೂ ಪ್ಯಾಡ್‌ ಉಪಯೋಗಿಸಲು ಹೇಳಿದ ಸಂವೇದನೆಗೆ ಮನಸ್ಸು ಮೌನವಾಗಿಯೂ, ಆಪ್ತವಾಗಿಯೂ ಕಂಪಿಸಿದ್ದ‌ಂತೂ ನಿಜ. ಹುಟ್ಟಿದಾಗ ಅಮ್ಮನ ಆಂತಂಕಕ್ಕೆ ಕಾರಣವಾಗುವ ಈ ಹೆಣ್ಣುಮಕ್ಕಳು ಬೆಳೆಯುತ್ತ ಹೋದಂತೆ ಅಮ್ಮನ ತಲ್ಲಣಗಳನ್ನೆಲ್ಲ  ಅರ್ಥಮಾಡಿಕೊಳ್ಳುತ್ತಾರೆ.
ನನ್ನನ್ನು ನೋಡುವ ನೋಟ ಬದಲಾಗಿದೆ
ಮಿದು ಹೃದಯದ ಅವಳು
ಬೇವು ಬೆಲ್ಲದ ಸವಿಯ ಸವಿದು
ಒಳದನಿಯ ಆಲಿಸಿ ಹೊರ ಜಗವ
ಹೊಸತಾಗಿ ನೋಡಲು ಪ್ರೇರಿಸಿ
ಸಂಸ್ಕಾರದ ಬುನಾದಿಯ ಕಲಶವಾದಳು
ಇಂದು ನನಗವಳು ಅಮ್ಮನಾದಳು
ಮರುದಿನ ದಿಢೀರಾಗಿ ಅತ್ತೆಯು ಹೊಟ್ಟೆನೋವು ತಡೆಯಲಾರದೆ, ಒಂದೇ ಸವನೆ ಬಾಯಿಕೊಟ್ಟು ಅಳಲಾರಂಭಿಸಿದರು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಮಾವನ ಬಳಿ ಮೊಬೈಲೂ ಇಲ್ಲ. ಇವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಫ್ಯಾಮಿಲಿ ಡಾಕ್ಟರರ ಬಳಿ ಕರೆದುಕೊಂಡು ಹೋಗಲು ಹೇಳಿದರು.
ಸರಿಯಾಗಿ ನಿಲ್ಲಲೂ ಅಶ‌ಕ್ತರಾದ ಅವರನ್ನು ಕರೆದುಕೊಂಡು ದವಾಖಾನೆಗೆ ಹೇಗಪ್ಪ ಹೋಗೋದು? ಮನಸ್ಸಿನಲ್ಲಿಯೇ ದೇವರಿಗೆ ಕೈ ಮುಗಿದೆ. ಪಕ್ಕದ ಮನೆಯ ರೇವತಕ್ಕನ ಮಗಳು ಚೊಚ್ಚಲ ಬಾಣಂತಿ. ದೇವತೆಯಂತೆ ಆಗ ನನ್ನೆದುರು ಬಂದವಳು ಶಿಖಾ. ಆಕೆ ಒಳ ಬಂದೊಡನೆ ಬ್ಯಾಗನ್ನು ಒಂದು ಕಡೆ ಇಟ್ಟು ಗ್ಲಾಸೊಂದರಲ್ಲಿ ಉಪ್ಪು ಸಕ್ಕರೆ ಬೆರೆಸಿ ಚಮಚದಿಂದಲೇ ಬಾಯಿಗೆ ಸುರಿಸಿದಳು. ಇಂತಹ ಸಮಯದಲ್ಲೇ ನನ್ನ ಕೈ ಕಾಲು ಸ್ತಬ್ಧವಾಗುವುದು. ಅವಳ ಧೈರ್ಯದ ಮಾತಿನಿಂದಲೇ ನಾನು ಅತ್ತೆಯನ್ನು ಸರಿ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವಂತಾಯಿತು. ಆಸ್ಪತ್ರೆ ಸೇರಿಸಿದ ಮೇಲೆ ಇನ್ನೇನು ಅವರು ಹೇಳಿದಂತೆ ಕುಣಿಯಲೇ ಬೇಕು. ಒಂದೊಂದು ತಾಸಿಗೆ ಒಂದೊಂದು ಪರೀಕ್ಷೆಗಳು.

ಇವೆಲ್ಲಾ ನಿಜವಾಗಿಯೂ ಬೇಕಾ? ಅಲ್ಲ,
ಆಸ್ಪತ್ರೆಗಳ ದುಬಾರಿ ಯಂತ್ರಗಳು
ಹೂಡಿದ ಬಂಡವಾಳವನ್ನು ವಸೂಲಿಯ
ಕಂತುಗಳಲೀ ತುಕ್ಕು ಹಿಡಿದ ಮನಕೆ
ಆರೋಗ್ಯ ಭಾಗ್ಯದ ಇನ್‌ಷುರೆನ್ಸ್‌ ಲಭ್ಯವೆ?
ತುರ್ತಾಗಿ ಅಪರೇಷನ್‌ ಮಾಡಬೇಕಾಗಿ ಬಂತು. ನನ್ನ ಪತಿ ಔಷಧ ತರಲೆಂದು ಕೆಳಗೆ ಹೋಗಿದ್ದರು. ಅತ್ತೆಗೆ ವಾಶ್‌ರೂಮ್‌ಗೆ ಹೋಗಬೇಕಿತ್ತು. ನನಗೆ ಎರಡನೆಯ ದಿನ ಅವರನ್ನು ಮುಟ್ಟಬೇಕಾ? ಬೇಡವಾ ಎನ್ನುವುದೇ ದೊಡ್ಡ ಪ್ರಶ್ನೆ. ತಾನೇ ಎದ್ದೇಳಲು ಪ್ರಯತ್ನಿಸಿದರೂ ನಿತ್ರಾಣ ಜೀವ ಸಾಥ್‌ ಕೊಡಲಿಲ್ಲ. ನನಗೆ ಒಳಗೆಲ್ಲ ತಳಮಳ. ಈ ಸಮಯದಲ್ಲಿ ಅವರ ಜೀವ ಮುಖ್ಯವಾಯಿತು. ಮತ್ತೆ ಬೇಕಾದರೆ ಬೈಸಿಕೊಳ್ಳುವೆ ಎಂದು ಎರಡೂ ತೆಕ್ಕೆಗಳಿಗೆ ಬಲಕೊಟ್ಟು ಎಬ್ಬಿಸಿ ಕರೆದುಕೊಂಡು ಹೋದೆ. ಈ ಕ್ಷಣದಲ್ಲಿ ಮಡಿ-ಮೈಲಿಗೆ ಅದು ಇದು ಎಂದು ಪಾಲನೆ ಮಾಡಿದರೆ ಪ್ರಾಣಕ್ಕೆ ಅಪಾಯವೆಂದು ಕಣ್ಣು ಮುಚ್ಚಿಕೊಂಡಿರುವ ಬೆಕ್ಕಿನ ಪಾಡು ಅವರದಾಗಿತ್ತು. ನಾನು ನನ್ನಷ್ಟಕ್ಕೆ ನಗುತ್ತಿರುವಾಗ ಅವರು ಮಗಳಂತೆ ಕಂಡರು. ಅವರ ಸಮಯದಲ್ಲಿ ಅವರು ಬೆಳೆದುಬಂದ ಪರಿಸರದಲ್ಲಿಯೂ ಇಂತಹದ್ದೇ ನಿರ್ಬಂಧನೆಗಳಿರಬೇಕು. ಅದನ್ನೇ ಪಾಲಿಸುತ್ತ ರೂಢಿಯಾಗಿರಬೇಕು. ಕೆಲವು ಸಲ ಪ್ರವಾಹದ ದಿಕ್ಕಿಗೆ ಹರಿಯುವುದೇ ಸರಿ ಎಂದೆನಿಸುತ್ತದೆ.

ಅಂದ ಹಾಗೆ, ಸಾಸಿವೆಯಂತಿರುವ ಶಿಖಾ ಮುಗ್ಧತೆಯ ಬೆಳದಿಂಗಳಲ್ಲಿ ಆತ್ಮವಿಶ್ವಾಸದ ಪ್ರಖರವಾದ ಬೆಳಕನ್ನು ಕುಡಿದು ಪ್ರಬುದ್ಧ ವಾ ಗಿ ರಲು ಕಾರಣವಾದರೂ ಏನು? ಇನ್ನಾದರೂ ಅಮ್ಮ ಅವಳಿಗಾಗಿ ಬದುಕಲಿ ಎನ್ನುವ ಪುಟ್ಟ ಆಶೆಯೆ?

ಹೇಮಾ ಸದಾನಂದ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next