Advertisement

ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ಬದಲಾಗಲಿ

06:00 AM Sep 16, 2018 | Team Udayavani |

ಬೆಳಗಾವಿ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಉನ್ನತ ಶಿಕ್ಷಣ ಹಾಗೂ ಕಾನೂನಿನ ಪಾತ್ರ ಗುರುತರವಾಗಿದೆ.ಅದನ್ನು ಕೇವಲ ವೃತ್ತಿಯ ಸೀಮಿತಕ್ಕೆ ಮಾತ್ರ ತೆಗೆದುಕೊಂಡು ಹೋಗದೆ ಬಡವರ,ಅಸಹಾಯಕರ, ದುರ್ಬಲರ ಹಾಗೂ ನ್ಯಾಯ ವಂಚಿತರ ಶ್ರೇಯೋಭಿವೃದ್ಧಿಗೆ ಅನುಕೂಲ ಕಲ್ಪಿಸಲು ಬಳಕೆ ಮಾಡಬೇಕೆಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ ಸಲಹೆ ನೀಡಿದ್ದಾರೆ.

Advertisement

ಶನಿವಾರ ನಗರದ ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ ಮತ್ತು ರಾಜಾ ಲಖಮನಗೌಡ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ಹಾಗೂ ವೃತ್ತಿ ಕೂಡ ಬದಲಾಗಬೇಕಿದೆ. 21ನೇ ಶತಮಾನದ ಅಗತ್ಯಕ್ಕೆ ಅನುಗುಣವಾಗಿ ಕಾನೂನು ಶಿಕ್ಷಣ ಸಂಸ್ಥೆ ಗಳು ಹಾಗೂ ಸರ್ಕಾರಗಳು ಪರಸ್ಪರ ಸಮನ್ವಯದೊಂದಿಗೆ ಕಾನೂನು ಶಿಕ್ಷಣ ಮತ್ತು ವೃತ್ತಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಬೇಕು ಎಂದರು.

ವಕೀಲ ವೃತ್ತಿ ವೈಯಕ್ತಿಕ ಹಿತಾಸಕ್ತಿಗೆ ಸೀಮಿತಗೊಳ್ಳಬಾರದು. ಬದಲಾಗಿ ಆರೋಗ್ಯಕರ ಸಮಾಜ,ಸಮೃದಟಛಿ ಹಾಗೂ ಸದೃಢ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಡಾ.ಬಿ.ಆರ್‌. ಅಂಬೇಡ್ಕರ ಅವರು ಸಂವಿಧಾನ ರಚನೆಯ ಮೂಲಕ ಆಧುನಿಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಕಾರಣವಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಉತ್ತಮ ಸಮಾಜಕ್ಕೆ ತಮ್ಮ ವಕೀಲ ವೃತ್ತಿಯನ್ನು ನಿರ್ವಹಿಸಿದ್ದು, ಅವರ ಸಾಧನೆಗಳು ಇಂದು ನಮಗೆ ಸ್ಫೂರ್ತಿ ಹಾಗೂ ಮಾದರಿಯಾಗಬೇಕು ಎಂದರು.

ಬೆಳಗಾವಿಗೆ ಬಂದಿದ್ದು ನನ್ನ ಸೌಭಾಗ್ಯ: ಸ್ವಾತಂತ್ರ ಹೋರಾಟ, ಸಾಂಸ್ಕೃತಿಕ ಕೊಡುಗೆ ಮತ್ತು  ಶಾಸ್ತ್ರಿಯ
ಸಂಗೀತದಲ್ಲಿ ಬೆಳಗಾವಿಯ ಕೊಡುಗೆ ಅನನ್ಯವಾಗಿದೆ. ದೇಶ ಇಂದು ಸ್ವಾಮಿ ವಿವೇಕಾನಂದರು ಶಿಕಾಗೋದ ಧರ್ಮ ಸಂಸತ್‌ನಲ್ಲಿ ಭಾಷಣ ಮಾಡಿದ 150ನೇ ವರ್ಷಾಚರಣೆಯಲ್ಲಿದೆ.ಅವರು ಶಿಕಾಗೋದಲ್ಲಿ ಭಾಷಣ ಮಾಡಲು ತೆರಳುವ ಮುನ್ನ 1892ರಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದರು.ಹೀಗಾಗಿ, ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣ ಬೆಳಗಾವಿಯಿಂದ ಆರಂಭವಾಗಿದೆ.

Advertisement

ಅದೇ ರೀತಿ 1916ರಲ್ಲಿ ಲೋಕಮಾನ್ಯ ತಿಲಕ್‌ ಅವರು ತಮ್ಮ ಹೋಮ್‌ ರೂಲ್‌ ಚಳವಳಿಯನ್ನು ಬೆಳಗಾವಿಯಿಂದ ಆರಂಭಿಸಿರುವುದು ಐತಿಹಾಸಿಕ ಸಂಗತಿ. ಇಂತಹ ಇತಿಹಾಸವುಳ್ಳ ನೆಲಕ್ಕೆ ಬಂದಿರುವದು ನನ್ನ ಸೌಭಾಗ್ಯ ಎಂದರು.

ನ್ಯಾಯಾಧೀಶರು ಸಾರ್ವಕಾಲಿಕ ಅಭಿಯಂತರರು: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮಾತನಾಡಿ, ವ್ಯಕ್ತಿಯ ಶ್ರೇಯೋಭಿವೃದ್ಧಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಜ್ಞಾನ ಬಹಳ ಮುಖ್ಯ. ಇಂತಹ ಜ್ಞಾನಮೂರ್ತಿಗಳಾದ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಆರೋಗ್ಯಕರ ಸಮಾಜ ನಿರ್ಮಾಣದ ಸಾರ್ವಕಾಲಿಕ ಅಭಿಯಂತರರಾಗಿದ್ದಾರೆ. ಈ ಶಿಲ್ಪಿಗಳನ್ನು, ಜ್ಞಾನವಂತರನ್ನು ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆ
ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ ಮಾತನಾಡಿದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನ್ಯಾಯಮೂರ್ತಿ ವಿ.ಎಸ್‌. ಮಳೀಮಠ ಹಾಗೂ ಎಸ್‌.ವಿ.ವೆಂಕಟರಾಮಯ್ಯ ಅವರ ಭಾವಚಿತ್ರಗಳನ್ನು ರಾಜ್ಯಪಾಲ ವಜೂಭಾಯಿ ವಾಲಾ ಅನಾವರಣಗೊಳಿಸಿದರು.

ಸಿಎಂ ಕುಮಾರಸ್ವಾಮಿ ಅವರು ಕೆ.ಕೆ.ವೇಣುಗೋಪಾಲ್‌ ಆಡಿಟೋರಿಯಂ ಉದ್ಘಾಟಿಸಿದರು. ನ್ಯಾಯಮೂರ್ತಿ ಗಳಾದ
ಮೋಹನ ಶಾಂತನಗೌಡರ, ಎಸ್‌.ಅಬ್ದುಲ್‌ ನಜೀರ, ವಿನೀತ ಸರಣ್‌, ಸಂಸದ ಸುರೇಶ ಅಂಗಡಿ, ಕೆಎಲ್‌ ಎಸ್‌ ಅಧ್ಯಕ್ಷ ಅನಂತ ಮಂಡಗಿ ಉಪಸ್ಥಿತರಿದ್ದರು.

ಆತ್ಮೀಯ ಸ್ವಾಗತ
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಹಾಗೂ ಅವರ ಪತ್ನಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ರಾಜ್ಯಪಾಲ ವಜೂಭಾಯಿ ವಾಲಾ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪುಷ್ಪಗುತ್ಛ ನೀಡಿ ಸ್ವಾಗತಿಸಿದರು. ಮಹಾ ಪೌರ ಬಸಪ್ಪ ಚಿಕ್ಕಲದಿನ್ನಿ, ಸಂಸದ ಸುರೇಶ ಅಂಗಡಿ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಡೀಸಿಜಿಯಾವುಲ್ಲಾ, ಐಜಿಪಿ ಅಲೋಕ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next