Advertisement

JSS Dharwad; ಜೀವನದಲ್ಲಿ ಶಿಕ್ಷಣದಷ್ಟೇ ಶಿಸ್ತು ಮುಖ್ಯ: ಡಾ.ಡಿ.ವೀರೇಂದ್ರ ಹೆಗ್ಗಡೆ

06:48 PM Oct 06, 2023 | Team Udayavani |

ಧಾರವಾಡ : ಜೀವನದಲ್ಲಿ ಶಿಕ್ಷಣದಷ್ಟೇ ಶಿಸ್ತು ಮುಖ್ಯ. ಇದರ ಜತೆಗೆ ಚಾರಿತ್ರ್ಯತೆ ಬೆಳೆಸುವಂತಹ ಕಾರ್ಯಗಳು ಆಗಬೇಕು. ಸದ್ಯ ಜೆಎಸ್‌ಎಸ್ ಸಂಸ್ಥೆಯಲ್ಲಿ ಶಿಸ್ತಿನ ಸಿಪಾಯಿ, ರಾಯಭಾರಿ ಆಗಿರುವ ಡಾ.ಅಜಿತ ಪ್ರಸಾದ ಮುಂದಾಳತ್ವದಲ್ಲಿ ಸಾಗುತ್ತಿದ್ದು, ಶಿಸ್ತಿನ ಜತೆಗೆ ಗುಣಮಟ್ಟವನ್ನು ಸದಾ ಕಾಪಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ,ಧಾರವಾಡ ಜೆಎಸ್‌ಎಸ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಆವರಣದ ಮೈದಾನದ ಡಾ.ನ.ವಜ್ರಕುಮಾರ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ(ಶುಕ್ರವಾರ, ಶನಿವಾರ) ಜನತಾ ಶಿಕ್ಷಣ ಸಮಿತಿ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಡಾ.ನ.ವಜ್ರಕುಮಾರ ಅವರ ಸಮರ್ಪಣಾ ಮನೋಭಾವವೇ ಕಾರಣ. ಸಮಸ್ಯೆಯ ಮಧ್ಯೆಯೂ ಸಂಸ್ಥೆಯನ್ನು ಕಟ್ಟಿದ ಅವರು ಎಲ್ಲರನ್ನೂ ಪ್ರೀತಿ, ಸ್ನೇಹದಿಂದ ಕಾಣುವ ಮೂಲಕ ಸಂಸ್ಥೆ ಉತ್ತುಂಗಕ್ಕೆ ಬೆಳೆಯುವಂತೆ ಮಾಡಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು, ವ್ಯವಸ್ಥೆ, ಸ್ವಚ್ಛತೆ ಹಾಗೂ ಚಾರಿತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅಧ್ಯಾಪಕರ ಸೇವೆ, ಜನರ ಪ್ರೀತಿಯಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಶಿಸ್ತಿನ ಜತೆಗೆ ಸಹ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಮಕ್ಕಳೇ ಸಮಾಜದ ಭವಿಷ್ಯವಾಗಿದ್ದು, ಅಂತಹ ಮಕ್ಕಳ ಭವಿಷ್ಯ ರೂಪಿಸುವಂತಹ ಮಹತ್ವ ಕಾರ್ಯ ಮಾಡುತ್ತಿರುವ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯ ಶ್ಲಾಘನೀಯವಾದದ್ದು ಎಂದು ಜೆಎಸ್‌ಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದುಕು ಉಜ್ವಲವಾಗಲು ಸಾಧ್ಯವಿದೆ.ಅಂತಹ ಶಿಕ್ಷಣವನ್ನು ಜನತಾ ಶಿಕ್ಷಣ ಸಮಿತಿ ನೀಡುತ್ತಿದೆ. ಕಷ್ಟದ ಸಮಯದಲ್ಲೇ ಸಂಸ್ಥೆ ಸುಪರ್ದಿಗೆ ತೆಗೆದುಕೊಂಡು ಹೋರಾಟದ ಮೂಲಕವೇ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಕಾರ್ಯ ಶ್ಲಾಘನೀಯ. ಸೇವೆ, ತ್ಯಾಗದ ಮೂಲಕ ಉತ್ತಮವಾಗಿ ಶಿಕ್ಷಣ ಸಂಸ್ಥೆ ನಿರ್ಮಾಣ ಆಗಿದ್ದು, ಧಾರವಾಡದ ಜ್ಞಾನದ ಗಂಗೋತ್ರಿಯಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಸಹ ಇನ್ನೂ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

ಇತಿಹಾಸ ಪ್ರಜ್ಞೆ ಇರದಿದ್ದರೆ ವರ್ತಮಾನ ಕಟ್ಟಲು ಅಸಾಧ್ಯ. ಹೀಗಾಗಿ ಮಕ್ಕಳು ಇತಿಹಾಸ ನಿರ್ಮಿಸುವಂತಹ ಕಾರ್ಯ ಮಾಡಬೇಕು ಎಂದ ಶ್ರೀಗಳು, ಮಕ್ಕಳ ಕಠಿಣ ಶ್ರಮಕ್ಕೆ ಆದ್ಯತೆ ಕೊಟ್ಟರೇ ಮಾತ್ರವೇ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.

ಕೃತಿಗಳ ಬಿಡುಗಡೆ
ಇದೇ ಸಂದರ್ಭದಲ್ಲಿ ಸುವರ್ಣಸಿರಿ ಸ್ಮರಣ ಸಂಚಿಕೆಯನ್ನು ಜೆಎಸ್‌ಎಸ್ ಉಪ ಕಾರ್ಯಾಧ್ಯಕ್ಷ ಡಾ.ಎಂ.ಎನ್. ತಾವರಗೇರಿ, ಮಗಳಿಗೊಂದು ಪತ್ರ ಕೃತಿಯನ್ನು ಧರ್ಮಸ್ಥಳ ಟ್ರಸ್ಟಿ ಹೇಮಾವತಿ ಹೆಗ್ಗಡೆ ಹಾಗೂ ಜೆಎಸ್‌ಎಸ್ ಅಂತರಂಗ ಕೃತಿಯನ್ನು ಶ್ರದ್ಧಾ ಹೆಗ್ಗಡೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೇಶವ ದೇಸಾಯಿ, ಕಮಲನಯನ ಮೆಹತಾ, ಹಳೇ ವಿದ್ಯಾರ್ಥಿ ಆನಂದ ತಾಳಿಕೋಟಿ, ಸುಮನ ವಜ್ರಕುಮಾರ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ್, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಾಜಿ ಸಂಸದ ಐ.ಜಿ. ಸನದಿ, ಮಹಾವೀರ ಉಪಾಧ್ಯೆ, ಸೂರಜ್ ಜೈನ, ಜಿನಪ್ಪ ಕುಂದಗೋಳ ಸೇರಿದಂತೆ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತಪ್ರಸಾದ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು. ಡಾ.ಜಿನದತ್ತ ಹಡಗಲಿ ವಂದಿಸಿದರು.

ಅದ್ದೂರಿ ಮೆರವಣಿಗೆ
ಜೆಎಸ್‌ಎಸ್ ಮಹಾದ್ವಾರದಿಂದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಡಾ.ಡಿ.ವೀರೆಂದ್ರ ಹೆಗ್ಗಡೆ ಮತ್ತು ಮಾತೋಶ್ರೀ ಹೇಮಾವತಿ ಹೆಗ್ಗಡೆ ಅವರನ್ನು ರಥದಲ್ಲಿ ಮೆರವಣಿಗೆ ಮೂಲಕ ಕರತರಲಾಯಿತು. ಈ ಮೆರವಣಿಗೆಯು ಮಹಾದ್ವಾರದಿಂದ ಜೆಎಸ್‌ಎಸ್ ಪದವಿ ಕಾಲೇಜು ಮಾರ್ಗವಾಗಿ ಜೆಎಸ್‌ಎಸ್ ಮೈದಾನದಲ್ಲಿ ಡಾ.ನ.ವಜ್ರಕುಮಾರ ವೇದಿಕೆಗೆ ಬಂದು ತಲುಪಿತು. ಈ ಮೆರವಣಿಗೆಗೆ ವಾದ್ಯಮೇಳವು ಇಂಬು ನೀಡಿದರೆ, ವರಾಹ ರೂಪ, ದೈವ ರೂಪದ ವೇಷಭೂಷಣವುಳ್ಳ ನೃತ್ಯಗಳು ಕಳೆ ನೀಡಿದವು. ಇದರ ಜತೆಗೆ ಮೆರವಣಿಗೆಗೆ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜೆಎಸ್‌ಎಸ್ ಸುವರ್ಣ ಪಥ
ಜೆಎಸ್‌ಎಸ್ ನಡೆದು ಬಂದ ದಾರಿಯ ಪದರ್ಶನಕ್ಕೆ ಜೆಎಸ್‌ಎಸ್ ಟ್ರಸ್ಟಿ ಮಾತೋಶ್ರೀ ಹೇಮಾವತಿ ಹೆಗ್ಗಡೆ ಚಾಲನೆ ನೀಡಿದರು. ಜನತಾ ಶಿಕ್ಷಣ ಸಮಿತಿಯ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಕಲಿತು, ಮುಂದೆ ಸಮಾಜಕ್ಕೆ ಕೀರ್ತಿ ತಂದರೆ ಅದುವೇ ನಮಗೆ ಕೊಡುವ ಗುರುದಕ್ಷಿಣೆ. ಇಲ್ಲಿ ಕಲಿತ ಮಕ್ಕಳು ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿ, ಸಮಾಜಕ್ಕೆ ಕೊಡುಗೆ ನೀಡಲಿ ಎಂದು ಹಾರೈಸಿದರು.

ಅಹಿಂಸೆ ಹಾಗೂ ಸತ್ಯದ ಮಾರ್ಗದಲ್ಲಿ ಸಾಗುತ್ತಿರುವ ಡಾ.ಡಿ. ವೀರೇಂದ್ರ ಹೆಗ್ಗಡೆ ಜೀವನವೇ ಅನುಕರಣೀಯ ಹಾಗೂ ಮಾದರಿ. ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ ನೈತಿಕತೆಯೂ ಮುಖ್ಯವಾಗಿದೆ. ಹೀಗಾಗಿ ಮಕ್ಕಳು ವರ್ತನೆ, ನೈತಿಕತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು. ಇಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ, ಸಂಸ್ಥೆ ಹಾಗೂ ಪೋಷಕರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಈ ಪ್ರದರ್ಶನದಲ್ಲಿ ಜೆಎಸ್‌ಎಸ್ ಆರಂಭದಿಂದ ಹಿಡಿದು ಈವರೆಗೆ ಇಟ್ಟ ಹೆಜ್ಜೆಗಳ ಗುರುತುಗಳ ಭಾವಚಿತ್ರಗಳು ಪ್ರದರ್ಶನಗೊಂಡಿವೆ. ಇದಲ್ಲದೇ ಜೆಎಸ್‌ಎಸ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಹಾಗೂ ಸಾಧನೆಯ ಜತೆಗೆ ಮಕ್ಕಳ ಶೈಕ್ಷಣಿಕ ಸಾಧನೆಯನ್ನೂ ಬಿಂಬಿಸಲಾಗಿದೆ. ಇದರ ಜತೆಗೆ ಜೆಎಸ್‌ಎಸ್ ಸಂಸ್ಥೆಯ ಮಾದರಿಯು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next