Advertisement

ಆತ್ಮನಿರ್ಭರ ಭಾರತಕ್ಕೆ ಕೈಜೋಡಿಸಿ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

08:06 PM Dec 26, 2022 | Team Udayavani |

ಬೀದರ್ : ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣವನ್ನು ಕೌಶಲ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ಏಕ್ ಭಾರತ, ಶ್ರೇಷ್ಠ ಭಾರತ ಮತ್ತು ಆತ್ಮನಿರ್ಭರ ಭಾರತ ಮಾಡಲು ಬದ್ಧರಾಗಿದ್ದು, ಈ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕರೆ ನೀಡಿದರು.

Advertisement

ನಗರದ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಸರ್ದಾರ್ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಹೇಳಿದರು.

ನವ ಭಾರತ ನಿರ್ಮಾಣದಲ್ಲಿ ನಾವಿದ್ದೇವೆ. ಶಿಕ್ಷಣ, ಆರೋಗ್ಯ ಕ್ರೀಡೆ ಸೇರಿ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಬರುವ ದಿನಗಳಲ್ಲಿ ಭಾರತ ವಿಶ್ವಗುರು ಆಗಲಿದೆ. ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಉಂಟುಮಾಡುವ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಆಧುನಿಕ ಜ್ಞಾನವನ್ನು ಸಂಯೋಜಿಸುವ ಮೂಲಕ, ಧರ್ಮ-ಸಂಸ್ಕೃತಿ, ರಾ?ದ ಏಕತೆ-ಸಮಗ್ರತೆಯನ್ನು ಕಾಪಾಡುವ ಮತ್ತು ಸಮಾನತೆ ಹಾಗೂ ಸಾಮರಸ್ಯವನ್ನು ಕಾಪಾಡುವುದು ಇಂದಿನ ಶಿಕ್ಷಣದ ಅವಶ್ಯಕತೆಯಿದೆ ಎಂದರು.

ಕ.ಕ ಅಭಿವೃದ್ಧಿಯಲ್ಲಿ ನಾನಕ್ ಝಿರಾ ಸಾಹೇಬ್ ಫೌಂಡೇಷನ್ ಕೊಡುಗೆ ಅಪಾರವಾಗಿದೆ. ಗಡಿ ಜಿಲ್ಲೆ ಬೀದರ ಭವ್ಯ ಇತಿಹಾಸ ಹೊಂದಿದೆ. ಇಲ್ಲಿನ ಗುರುದ್ವಾರಕ್ಕೆ ನಾನು ಎರಡು ಬಾರಿ ಭೇಟಿ ನೀಡಿರುವೆ. ನಾನಕ್ ಫೌಂಡೇಷನ್ ಸಂಸ್ಥಾಪಕ ದಿ. ಜೋಗಾಸಿಂಗ್ ಸ್ಮರಣಾರ್ಥ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಸಾಧಕರು ಇಂದಿನ ಯುವಕರಿಗೆ ಮಾದರಿ ಎಂದು ಬಣ್ಣಿಸಿದರು.

ಗುರುನಾನಕ್ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಪ್ರಶಸ್ತಿ ಆಯ್ಕೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ದೇಶದ ವಿವಿಧ ಕ್ಷೇತ್ರಗಳ ೧೭ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.

Advertisement

ಪ್ರಶಸ್ತಿ ಸ್ವೀಕರಿಸಿ ಪಂಜಾಬ್ ವಿಧಾನಸಭೆ ಸಭಾಪತಿ ಸರ್ದಾರ್ ಕುಲ್ತರಸಿಂಗ್ ಸಂಧ್ವಾನ್, ರಾಜ್ಯಸಭಾ ಸದಸ್ಯ ಎಸ್. ವಿಕ್ರಮಜೀತಸಿಂಗ್ ಸಾಯನಿ, ದೆಹಲಿ ಮಾಜಿ ಶಾಸಕ ಸರ್ದಾರ್ ಜಿತೇಂದ್ರಸಿಂಗ್ ಶಂಟಿ, ಡಾ. ದೀಪಕ ಮಲಿಕ್ ಹಾಗೂ ಶಾಸಕ ರಹೀಮ್ ಖಾನ್, ಗುಲ್ಬರ್ಗ ವಿವಿ ಉಪ ಕುಲಪತಿ ಪ್ರೊ. ದಯಾನಂದ ಅಗಸರ್ ಮಾತನಾಡಿದರು.

ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ.ಸರ್ದಾರ್ ಬಲಬೀರಸಿಂಗ್, ಡಾ.ಸಿ. ಮನೋಹರ, ಜಿಲ್ಲಾಽಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಡೆಕ್ಕಾ ಕಿಶೋರಬಾಬು ಮೊದಲಾದವರು ಇದ್ದರು. ಗುರುನಾನಕ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಸ್ವಾಗತಿಸಿದರು.

ಪ್ರಶಸ್ತಿ ಪುರಸ್ಕೃತ ಸಾಧಕರು

ವಿವಿಧ ಕ್ಷೇತ್ರದ ಸಾಧಕರಿಗೆ ಸರ್ದಾರ್ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಂಜಾಬ್ ವಿಧಾನಸಭೆ ಸಭಾಪತಿ ಸರ್ದಾರ್ ಕುಲ್ತರಸಿಂಗ್ ಸಂಧ್ವಾನ್ (ಹಳೇ ವಿದ್ಯಾರ್ಥಿ), ನವದೆಹಲಿ ಮಾಜಿ ಶಾಸಕ ಸರ್ದಾರ್ ಜಿತೇಂದ್ರಸಿಂಗ್ ಶಂಟಿ (ಕೋವಿಡ್ ವಾರಿಯರ್), ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸರ್ದಾರ್ ಚಿರಂಜೀವಿಸಿಂಗ್ (ಜೀವಮಾನದ ಸಾಧನೆ), ಸಿದ್ಧಾರೂಢ ಮಠದ ಶ್ರೀ ಶಿವಕುಮಾರ ಸ್ವಾಮೀಜಿ (ಧಾರ್ಮಿಕ ಕ್ಷೇತ್ರ), ಡಾ.ರಾಬರ್ಟ್ ಮೈಕಲ್ ಮಿರಾಂಡ ಕಲಬುರಗಿ (ಶಿಕ್ಷಣ), ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ (ಸಬಲೀಕರಣ), ರಾಜ್ಯಸಭಾ ಸದಸ್ಯ ಎಸ್. ವಿಕ್ರಮಜೀತಸಿಂಗ್ ಸಾಯನಿ (ಲೋಕೋಪಕಾರಿ), ನಿಜಾಮಾಬಾದ್ ಶಾಸಕ ಬಿಗ್ಲಾ ಗಣೇಶ ಗುಪ್ತಾ (ಸಾರ್ವಜನಿಕ ಸೇವೆ), ಡಾ.ದೀಪಾ ಮಲಿಕ್ (ಕ್ರೀಡಾ ಕ್ಷೇತ್ರ), ಡಾ.ಸಮರ್ಥಾ ರಾಘವ ನಾಗಭೂಷಣ (ತಂತ್ರೋದ್ಯಮ) ಹಾಗೂ ಮಾಜೀದ್ ಬಿಲಾಲ್ ಬೀದರ್ (ಕೋವಿಡ್ ವಾರಿಯರ್). ಕೇಂದ್ರೀಯ ವಿವಿ ಕುಲಪತಿ ಪ್ರೊ.ಎನ್.ಆರ್. ಶೆಟ್ಟಿ (ಜೀವಮಾನದ ಸೇವೆ), ಕಲಬುರಗಿಯ ಖ್ವಾಜಾ ಬಂದಾನವಾಜ್ ವಿವಿ ಕುಲಪತಿ ಡಾ.ಸೈಯದ್ ಶಾ ಖುಸ್ರೋ ಹುಸೇನಿ (ಶೈಕ್ಷಣಿಕ ಸೇವೆ) ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ (ಸಾಮಾಜಿಕ ಸಬಲೀಕರಣ) ಪರವಾಗಿ ಅವರ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದರು. ನಿವೃತ್ತ ರಾಜ್ಯಪಾಲ ಸರ್ದಾರ್ ಜೋಗಿಂದ್ರ ಜಸ್ವಂತಸಿಂಗ್ (ಜೀವಮಾನದ ಸಾಧನೆ), ನಾಂದೇಡ್ ಗುರುದ್ವಾರದ ಸಂತ್ ಬಾಬಾ ಬಲವಿಂದ್ರಸಿಂಗ್ (ಸಾಮಾಜಿಕ ಸೇವೆ)ಹಾಗೂ ಡಾ.ಅನೀಲ ಡಿ. (ಶೈಕ್ಷಣಿಕ ಸುಧಾರಕ).

ನಾನು ಜಿಎನ್‌ಡಿ ಇಂಜಿನಿಯರಿಗ್ ಕಾಲೇಜಿನ ಹಳೇ ವಿದ್ಯಾರ್ಥಿ. ಇಲ್ಲಿ ನಾಲ್ಕು ವರ್ಷ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವೆ. ತರಗತಿ, ಚಲನಚಿತ್ರ ವೀಕ್ಷಣೆ ಸೇರಿ ಹಲವು ಪ್ರಸಂಗಗಳನ್ನು ಕುಲ್ತರಸಿಂಗ್ ನೆನಪಿಗೆ ಬಂದವು. ಇಲ್ಲಿನ ಕೆಂಪು ಮಣ್ಣಿನಿಂದ (ಲಾಲ್ ಮಿಟ್ಟಿ) ನನಗೆ ಎಲ್ಲವೂ ಸಿಕ್ಕಿದೆ. ನಾನು ಕಲಿತ ಕಾಲೇಜಿನ ಭೂಮಿಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ತಂದಿದೆ.
– ಕುಲ್ತರಸಿಂಗ್ ಸಂಧ್ವಾನ್, ಪಂಜಾಬ್ ಸಭಾಪತಿ

ಬೀದರ ಗುರುನಾನಕ್ ದೇವ್ ಐಟಿಐ ಕಾಲೇಜು ಮೇಲ್ದರ್ಜೆಗೇರಿಸಲು ನನ್ನು ಅನುದಾನದಿಂದ ಒಂದು ಕೋಟಿ ರೂ. ಒದಗಿಸಲಾಗುವುದು. ಐಟಿಐನಲ್ಲಿ ಉನ್ನತ ಶಿಕ್ಷಣ ಒದಗಿಸಲು ಹಾಗೂ ಕೌಶಲ ಹೆಚ್ಚಿಸಲು ಅನುದಾನ ನೀಡಲಾಗುತ್ತಿದೆ.
– ವಿಕ್ರಮಜೀತ್ ಸಿಂಗ್, ರಾಜ್ಯಸಭಾ ಸದಸ್ಯ.

ಭಗತ್‌ಸಿಂಗ್ ಸೇವಾ ದಳ ಮೂಲಕ ಎರಡು ದಶಕದಿಂದ ಮಾಡುತ್ತಿರುವ ಸೇವೆಯಲ್ಲಿ ಕೋವಿಡ್ ಸಮಯ ಮರೆಯಲಾಗದು. ಕರೊನಾ ವೇಳೆ ನವದೆಹಲಿಯಲ್ಲಿ ಜೀವದ ಹಂಗು ಬಿಟ್ಟು ನಮ್ಮ ತಂಡ ಸೇವೆ ಮಾಡಿದೆ. ದೇಶ ಮತ್ತು ಸಮಾಜಕ್ಕಾಗಿ ಜೀವ ನೀಡಲೂ ಸಿದ್ಧರಾಗಿ ಸೇವೆ ಮಾಡುವ ಯುವಕರು ಬೇಕಾಗಿದ್ದಾರೆ.
– ಜೀತೇಂದ್ರಸಿಂಗ್. ಮಾಜಿ ಶಾಸಕ, ಭಗತ್‌ಸಿಂಗ್ ಸೇವಾ ದಳ ಮುಖ್ಯಸ್ಥ.

ಕರ್ನಾಟಕ ನನಗೆ ಜನ್ಮ ನೀಡಿದ ಪುಣ್ಯ ಭೂಮಿ. ನನ್ನ ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಜನ್ಮ ಬೆಂಗಳೂರಿನಲ್ಲಿ ಆಗಿದೆ. ಜೋಗಾಸಿಂಗ್ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ಇಂದು ವೀರ್ ಬಾಲ್ ದಿವಸ್ ಆಗಿದ್ದು, ಈ ಪ್ರಶಸ್ತಿಯನ್ನು ಈ ದಿನಕ್ಕೆ ಸಮರ್ಪಿಸುತ್ತೇನೆ. ದಿವ್ಯಾಂಗ ಮಕ್ಕಳು ಮತ್ತು ಸ್ತ್ರೀ ಸಬಲೀಕರಣಕ್ಕಾಗಿ ನನ್ನ ಜೀವನ ಮುಡುಪಾಗಿಟ್ಟಿದ್ದೇನೆ.
– ಡಾ. ದೀಪಾ ಮಲಿಕ್, ಅಂತರಾಷ್ಟ್ರೀಯ ಕ್ರೀಡಾಪಟು.

Advertisement

Udayavani is now on Telegram. Click here to join our channel and stay updated with the latest news.

Next