Advertisement

ಕೊರೊನಾ ತಡೆಗೆ ಜೋಗುಂಡಭಾವಿ ಗ್ರಾಪಂ ಪಣ

07:23 PM Jun 06, 2021 | Team Udayavani |

ನಾರಾಯಣಪುರ: ಕೊರೊನಾ ಎರಡನೇ ಅಲೆ ತೀವ್ರ ವೇಗವಾಗಿ ಹರಡುತಿದ್ದು ಹಳ್ಳಿಗಳೂ ಇದರಿಂದ ಹೊರತಾಗಿಲ್ಲ. ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಹುಣಸಗಿ ತಾಲೂಕಿನ ಜೋಗುಂಡಭಾವಿ ಗ್ರಾಮ ಪಂಚಾಯಿತಿ ಇದನ್ನು ತಡೆಗಟ್ಟಲು ಪಣತೊಟ್ಟು ಪ್ರಯತ್ನಿಸುತ್ತಿದೆ.

Advertisement

ಗ್ರಾ.ಪಂ. ಕಾರ್ಯ (ಟಾಸ್ಕ್ ಫೋರ್ಸ್‌) ಪಡೆಯು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ತೆರಳಿ, ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ಹರಡದಂತೆ ವಿಶೇಷ ಕಾಳಜಿ ವಹಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೋಗುಂಡಭಾವಿ, ಕೋಟೆಗುಡ್ಡ, ಅಮ್ಮಾಪುರ, ಹುಲ್ಲಿಕೇರಿ, ರಾಯನಗೊಳ, ತಂಗಡಬಯಲು, ಬಸಿರಿಗಿಡ ತಾಂಡಾ, ಗಡ್ಡದ ತಾಂಡಾ, ಬೆಳ್ಳಿಗುಂಡ ತಾಂಡಾ, ಸಣ್ಣ ಚಾಪಿ ತಾಂಡಾ, ದೊಡ್ಡ ಚಾಪಿ ತಾಂಡಾ ಗ್ರಾಮಗಳಿವೆ.

ಪಂಚಾಯತ್‌ ಒಟ್ಟು 21 ಸದಸ್ಯರನ್ನೊಳಗೊಂಡಿದೆ. ಪಂಚಾಯತ್‌ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಗ್ರಾ.ಪಂ. ವಾಹನದ ಮೂಲಕ ತೆರಳಿ ಕಡ್ಡಾಯ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಪಾಲಿಸುವಂತೆ, ಸ್ವತ್ಛತೆಗೆ ಮಹತ್ವ ನೀಡುವಂತೆ, ಸ್ಯಾನಿಟೈಸರ್‌ ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸ್ಯಾನಿಟೈಸರ್‌ ಸಿಂಪಡಣೆ ಮಾಡಿಸಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಧಿಸಿದ ನಂತರ ಗ್ರಾಮಗಳಲ್ಲೂ ಇದನ್ನು ಜಾರಿಗೆ ತರುವಲ್ಲಿ ಗ್ರಾ.ಪಂ. ಮುತುವರ್ಜಿ ವಹಿಸಿದೆ. ಗ್ರಾ.ಪಂ.ನ ಎಲ್ಲ ಸದಸ್ಯರು, ಸಿಬ್ಬಂದಿ ಕಂದಾಯ, ಆರೋಗ್ಯ, ಪೊಲೀಸ್‌, ಆಶಾ, ಅಂಗನವಾಡಿ ಕಾರ್ಯಕರ್ತ ರೊಟ್ಟಿಗೆ ಗ್ರಾಮಸ್ಥರು ಅನಾವಶ್ಯಕ ಮನೆಯಿಂದ ಹೊರ ಬಾರದಂತೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತಿದ್ದಾರೆ. ಅಲ್ಲದೆ ಮಾರ್ಗಸೂಚಿಯಂತೆ ಅರ್ಹರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ ಕೊರೊನಾ ಮುಕ್ತ ಗ್ರಾಮ ಪಂಚಾಯತಿಯಾಗಿಸುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ.

ಗ್ರಾಮ ಪಂಚಾಯತ ಮಟ್ಟದಿಂದಲೇ ಸೋಂಕು ನಿಯಂತ್ರಿಸಲು ಶಾಸಕ ನರಸಿಂಹನಾಯಕ (ರಾಜುಗೌಡ) ಅವರು ಗ್ರಾ.ಪಂ.ಸಭಾ ಭವನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ತಾಲೂಕು ಆಡಳಿತದ ಅಧಿಕಾರಿಗಳ, ಕಂದಾಯ, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್‌ ಮತ್ತು ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ್ದಾರೆ. ಗ್ರಾಮ ಪಂಚಾಯತ್‌ ಮಟ್ಟದಿಂದಲೇ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಪಾಲನೆಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಗ್ರಾಮೀಣ ಮಟ್ಟದ ಕಾರ್ಯ ಪಡೆಯು ಅತ್ಯಂತ ಮುತುವರ್ಜಿ ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೊನಾ ಸರಪಳಿ ತುಂಡರಿಸಿ ಕೊರೊನಾ ಮುಕ್ತ ಗ್ರಾಮವಾಗಿಸುವತ್ತ ದಿಟ್ಟ ಹೆಜ್ಜೆ ಇಡಲಾಗಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ನರೆಗಾ ಅಡಿಯಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಗೆ ತಮ್ಮ ಜಮೀನುಗಳಲ್ಲಿ ಬದು, ರಸ್ತೆ ನಿರ್ಮಾಣ ಸೇರಿದಂತೆ ಇತರೆ ಕೃಷಿಗೆ ಪೂರಕವಾಗುವ ಕಾಮಗಾರಿಗಳನ್ನು ಕೈಗೊಂಡು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ.

ಕೋವಿಡ್‌ ಮಾರ್ಗಸೂಚಿಯಂತೆ ಕೂಲಿ ಕಾರ್ಮಿಕರು ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಸ್ಯಾನಿಟೈಸರ್‌ ಬಳಸಿ ಕೆಲಸ ನಿರ್ವಹಿಸುವಂತೆ ನೋಡಿಕೊಂಡು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ವಾರ್ಡ್‌ ವ್ಯಾಪ್ತಿಯ ಮನೆಗಳಿಂದ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಿ ಗ್ರಾಮವನ್ನು ಕಸ ಮುಕ್ತ, ಸ್ವತ್ಛ ಗ್ರಾಮವಾಗಿಸಲು ಶ್ರಮಿಸಲಾಗುತ್ತಿದೆ.

ಕೊರೊನಾ ಸಂಕಷ್ಟದ ಮಧ್ಯೆಯೂ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಗುರುರಾಜ ಜೋಶಿ, ಲೆಕ್ಕಿಗ ಲಕ್ಷ್ಮಣ ನಾಯಕ, ಬಿಲ್‌ ಕಲೆಕ್ಟರ್‌, ಕಂಪ್ಯೂಟರ್‌ ಆಪ್‌ರೇಟರ್‌, ವಾಟರ್‌ವೆುನ್‌, ಸ್ವತ್ಛತಾ ಕರ್ಮಿಗಳು ಇತರೆ ಎಲ್ಲ ಸಿಬ್ಬಂದಿ ಸೋಂಕು ನಿಯಂತ್ರಣಕ್ಕೆ ವಿಶೇಷ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸುತ್ತ ಕೊರೊನಾ ಯೋಧರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next