Advertisement

ಪ್ರಾದೇಶಿಕ ಮಟ್ಟದಲ್ಲೂ ಉದ್ಯೋಗ ಮೇಳ: ಸಿಎಂ ಸಿದ್ದರಾಮಯ್ಯ

11:56 PM Feb 26, 2024 | Team Udayavani |

ಬೆಂಗಳೂರು: ಮುಂದಿನ ದಿನಗಳಲ್ಲಿ ಪ್ರಾದೇಶಿಕ ಮಟ್ಟದಲ್ಲೂ ಬೃಹತ್‌ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

Advertisement

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ(ಕೆಎಸ್‌ಡಿಸಿ)ದಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಯುವ ಸಮೃದ್ಧಿ ಸಮ್ಮೇಳನ ಬೃಹತ್‌ ಉದ್ಯೋಗ ಮೇಳ-2024ರ ಉದ್ಘಾಟನೆ ಹಾಗೂ ಮೇಳದ ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.

ಸರಕಾರ ಉದ್ಯೋಗ ಸೃಜನೆ ಮಾಡ ಬೇಕು, ಉದ್ಯೋಗ ಬಯಸುವವರಿಗೆ ಉದ್ಯೋಗ ನೀಡಬೇಕು ಎನ್ನುವ ಉದ್ದೇಶದಿಂದ ಇನ್ನು ಮುಂದೆ ಪ್ರತಿವರ್ಷ ರಾಜ್ಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಮೇಳವನ್ನು ಆಯೋಜಿಸುತ್ತೇವೆ. ಇದರ ಜತೆಗೆ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಆಯೋಜನೆ ಮತ್ತು ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೂ ಸರಕಾರ ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಕೇಂದ್ರ ಸರಕಾರಕ್ಕೆ ಚಾಟಿ
ಪ್ರಧಾನಿ ಮೋದಿ ಅವರು ಹತ್ತು ವರ್ಷಗಳ ಹಿಂದೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದರು. ಆ ಲೆಕ್ಕದಲ್ಲಿ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ ಮೋದಿಯವರು ಇರುವ ಉದ್ಯೋಗ ಅವಕಾಶವನ್ನೂ ಕಸಿದುಕೊಂಡ ಕಾರಣ ನಿರುದ್ಯೋಗ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. 2014ರಲ್ಲಿ ಶೇ.2.1ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ಶೇ. 8.40ಕ್ಕೆ ಏರಿಕೆಯಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

2016ರಲ್ಲಿ ನಮ್ಮ ಸರಕಾರದ ಅವಧಿಯಲ್ಲಿ ಕೌಶಲಾಭಿವೃದ್ಧಿ ಇಲಾಖೆಯನ್ನು ಆರಂಭಿಸಿ ಮಾನವ ಸಂಪನ್ಮೂಲ ಒದಗಿಸಿದೆವು. ಇಂದು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲಗಳಿಗೆ ಅನುಗುಣವಾಗಿ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಉದ್ಯೋಗ ಸಿಗದಿದ್ದರೆ
ಕೌಶಲ ತರಬೇತಿ
ಕೌಶಲಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್‌ ಪಾಟೀಲ್‌ ಮಾತನಾಡಿ, ಯುವ ಪೀಳಿಗೆಗೆ ಭದ್ರತೆ ನೀಡಲು, ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಸರಕಾರ ಬದ್ಧವಾಗಿದೆ. ಈ ಯುವ ಸಮೃದ್ಧಿ ಉದ್ಯೋಗ ಮೇಳದ ಮೂಲಕ ಎಲ್ಲ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳನ್ನು ಒಳಗೊಂಡಂತೆ ಉದ್ಯೋಗಾವಕಾಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಉದ್ಯಮಿಗಳಿಂದಲೇ ನೇಮಕಾತಿ ಪ್ರಕ್ರಿಯೆ ನಡೆಯುವುದರಿಂದ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌, ವ್ಯವಸ್ಥಾಪಕ ನಿರ್ದೇಶಕಿ ಕನಗವಲ್ಲಿ ಸೇರಿದಂತೆ ಕೌಶಲ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡರು.

ಯುವ ಜನರ ಸದೃಢಗೊಳಿಸಲು ತೀರ್ಮಾನ
ಉದ್ಯೋಗಕ್ಕಾಗಿ 5 ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರÂವಿದೆ. ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗದವರಿಗೆ ಕೌಶಲ ತರಬೇತಿ ನೀಡಿ, ಉದ್ಯೋಗ ಸಿಗುವವರೆಗೆ ನಿಮ್ಮ ಸಂಪರ್ಕದಲ್ಲಿರುತ್ತೇವೆ. ಬಜೆಟ್‌ನಲ್ಲಿ ಕೌಶಲಾಭಿವೃದ್ಧಿ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಜ್ಯದ ಯುವ ಜನರನ್ನು ಸದೃಢಗೊಳಿಸಲು ಸರಕಾರ ತೀರ್ಮಾನಿಸಿದೆ.
-ಡಾ| ಶರಣ ಪ್ರಕಾಶ್‌ ಪಾಟೀಲ್‌,
ಕೌಶಲಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next