Advertisement

ಜೋನ್‌ ಸಾವು ಲಾಕಪ್‌ ಡೆತ್‌ ಅಲ್ಲ; ಬಂಧಿತ ಐವರಲ್ಲಿ ಒಬ್ಬ ಡ್ರಗ್ಸ್‌ ವ್ಯಸನಿ

02:04 PM Aug 04, 2021 | Team Udayavani |

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ ಐವರು ಆಫ್ರಿಕಾ ಪ್ರಜೆಗಳ ಪೈಕಿ ಒಬ್ಬ ಮಾದಕ ವಸ್ತು ಸೇವಿಸಿದ್ದು, ಇತರರು ಮದ್ಯ ಸೇವಿಸಿ ಠಾಣೆ ಮುಂದೆ ದಾಂಧಲೆ ನಡೆಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಜೋನ್‌ ಸಾವು ಲಾಕಪ್‌ ಡೆತ್‌ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಕ್ಲೆಮೆಂಟ್‌ ಬಾರ್ಕೆಮಾx, ಯೂಸುಫ್ ಮಕೇಟಾ,ಅರ್ಮಾನ್‌ ಗ್ವಾಯ್‌, ಜುವಾನೆ ಮುಕುಂಜ,ಗುಲೊರ್ಗ್‌ ಬಂಧಿತರು. ಇತರೆ ಸುಮಾರು 10ಕ್ಕೂ
ಅಧಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ. ಆರೋಪಿಗಳ ಮೂತ್ರ ಪರೀಕ್ಷಿಸಿದಾಗ ಗುಲೊರ್ಗ್‌ ಎಂಬಾತ ಡ್ರಗ್ಸ್‌ ಸೇವಿಸಿರುವುದು ಪತ್ತೆಯಾಗಿದೆ. ಇತರರು ಮದ್ಯ ಸೇವಿಸಿದ್ದಾರೆ. ಪೊಲೀಸರ ಮೇಲೆ ದಾಳಿ
ನಡೆಸಿದ ಬಳಿಕ ಸುಮಾರು 12ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಆಟೋ, ಟೆಂಪೋ ಟ್ರಾವೆಲ್ಲರ್‌ನಲ್ಲಿ ತುಂಬಿಕೊಂಡು ಹೋಗಲಾಗಿತ್ತು. ಆದರೆ, ಆಟೋದಲ್ಲಿ ಕರೆದೊಯ್ಯುವಾಗ ಐದಾರು ಮಂದಿ ಆರೋಪಿಗಳು ಪೊಲೀಸರನ್ನು ತಳ್ಳಿ ಆಟೋದಿಂದ ನೆಗೆದು ಪರಾರಿಯಾಗಿದ್ದಾರೆ. ಟೆಂಪೋ ಟ್ರಾವೆಲ್ಲರ್‌ನಲ್ಲಿದ್ದ ಐದು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ದಾಂಧಲೆ ನಡೆಸಿದವರ ಪೈಕಿ ಕೆಲವರು ಡ್ರಗ್ಸ್‌ , ಮತ್ತೆ ಕೆಲವರು ಮದ್ಯ ಸೇವಿಸಿಯೇ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬಾಲಕನಿಗೆ ಗಾಯ: ಪೊಲೀಸರು ಲಾಠಿ ಜಾರ್ಜ್‌ ಮಾಡುವ ವೇಳೆ ಇಬ್ಬರು ಆಫ್ರಿಕಾ ಪ್ರಜೆಗಳು ತಾಯಿ ಜತೆ ಹೋಗುತ್ತಿದ್ದ ಬಾಲಕನನ್ನು ತಳ್ಳಿದ್ದಾರೆ. ಅದನ್ನು ಪ್ರಶ್ನಿಸಿದ ತಾಯಿಯನ್ನು ತಳ್ಳಿ ಪರಾರಿಯಾಗಿದ್ದಾರೆ. ಈ ವೇಳೆ ಮಗುವಿನ ತಲೆ, ಕಿವಿಗೆ ಗಾಯವಾಗಿದೆ. ಕೂಡಲೇ ಗಂಗಮ್ಮನಗುಡಿ ಠಾಣೆ ಇನ್‌ಸ್ಪೆಕ್ಟರ್‌ ಬಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಹೇಳಿದರು.

ನಾಲ್ಕು ಪ್ರಕರಣ: ಠಾಣೆ ಮುಂದೆ ದಾಂಧಲೆ ವೇಳೆ ಪಿಎಸ್‌ಐ ಲತಾ, ಮತ್ತೂಬ್ಬ ಪಿಎಸ್‌ಐ ಮೇಲಿನ ಹಲ್ಲೆ ಪ್ರಕರಣ, ಬಾಲಕನ ಮೇಲೆ ಪ್ರಕರಣ, ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ಹಾಗೂ ಜೋನ್‌ ಸಾವಿನ ಪ್ರಕರಣ ಸೇರಿ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಉತ್ತರ ವಿಭಾಗದ ಇಬ್ಬರು ಎಸಿಪಿಗಳು, ನಾಲ್ವರು ಇನ್‌ ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ 

Advertisement

ದೃಶ್ಯಾವಳಿ ಮೂಲಕ ಆರೋಪಿಗಳ ಪತ್ತೆ
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರಕುಮಾರ್‌ ಮೀನಾ, ಪ್ರತಿಭಟನೆ ನೆಪದಲ್ಲಿ ಪೊಲೀಸರ ಮೇಲೆ
ಹಲ್ಲೆ ನಡೆಸಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಐವರನ್ನು ಬಂಧಿಸಲಾಗಿದೆ. ಜೋನ್‌ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಯಾರಿಗೆ
ಮೃತದೇಹ ಹಸ್ತಾಂತರಿಸಬೇಕು ಎಂಬುದು ಚರ್ಚಿಸಬೇಕಿದೆ. ಗಲಭೆಯ ವಿಡಿಯೋ ಆಧರಿಸಿ ನಾಪತ್ತೆಯಾದವರ ಪತ್ತೆಗೆ ವಿಶೇಷ ತಂಡ
ರಚಿಸಲಾಗಿದೆ.2020ರ ಜೂನ್‌ನಿಂದ ಇದುವರೆಗೂ 154 ಮಂದಿ ವಿದೇಶಿ ಪ್ರಜೆಗಳ ವಿರುದ್ಧ ಡ್ರಗ್ಸ್‌ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು.

ಕೆಲವರು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ಅವರ ಪತ್ತೆ ಸ್ವಲ್ಪಕಷ್ಟ. ಗಲಭೆಯ ಪೂರ್ತಿ ವಿಡಿಯೋವನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಿ ಪ್ರತಿಯೊಬ್ಬರನ್ನು ವಶಕ್ಕೆ ಪಡೆಯಲಾಗುತ್ತದೆ. ಯಾರ ಬಳಿ ಪಾಸ್‌ಪೋರ್ಟ್‌, ವೀಸಾ ಇದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದರು

ಮಹಿಳೆ ಪತ್ತೆ ಕಾರ್ಯ ಚುರುಕು
ಆಫ್ರಿಕಾ ಪ್ರಜೆಗಳ ಪ್ರತಿಭಟನೆ ವೇಳೆ ಮಹಿಳೆಯೊಬ್ಬಳು ಅವರಿಗೆ ಪ್ರಚೋದನೆ ನೀಡುತ್ತಿದ್ದಳು. ಅವಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಆಕೆ ಈ ಹಿಂದೆ ಜೆ.ಸಿ.ನಗರದಲ್ಲಿ ವಾಸವಾಗಿದ್ದು, ಇದೀಗ ಬಾಬುಸಾಬ್‌ ಪಾಳ್ಯಕ್ಕೆ ಸ್ಥಳಾಂತರಗೊಂಡಿದ್ದಳು. ಅಲ್ಲದೆ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿಬೆಳಕಿಗೆಬಂದಿದೆ. ಆಕೆಯನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದರು.

ಆರೋಪ ಸುಳ್ಳು: ಪಂತ್‌
ಪೊಲೀಸರ ವಶದಲ್ಲಿದ್ದ ಜಾನೋ ಸಾವು ಲಾಕಪ್‌ ಡೆತ್‌ ಅಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸ್ಪಷ್ಟಪಡಿಸಿದ್ದಾರೆ. ಪೊಲೀಸರ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ‌( ಎನ್‌ಎ ಚ್‌ಆ ರ್‌ ಸಿ) ಮಾರ್ಗಸೂಚಿಗಳ ಪ್ರಕಾರವೇ ತನಿಖೆ ನಡೆಯಲಿದೆ. ಪ್ರಕರಣ ಸಿಐಡಿಗೆ ವಹಿಸಲಾಗಿದೆ. ಅಲ್ಲದೆ, ಘಟನೆ ಸಂಪೂರ್ಣ ವಿವರವನ್ನು ಆಫ್ರಿಕಾದ ಕಾಂಗೋ ದೇಶಕ್ಕೆ ಕಳುಹಿ ಸಲಾಗಿದೆ. ದೆಹಲಿಯಲ್ಲಿರುವ ಕಾಂಗೋ ದೇಶದ ರಾಯಭಾರ ಕಚೇರಿಯಿಂದ ಅಧಿಕಾರಿಯೊಬ್ಬರು ಬಂದ ಬಳಿಕ ಅವರ ಸಮ್ಮುಖದಲ್ಲಿ ಇಬ್ಬರು ವೈದ್ಯರು ಜೋನ್‌ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಅದನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಿ ಎನ್‌ಎಚ್‌ಆರ್‌ಸಿಗೆ ಕಳುಹಿಸಲಾಗುತ್ತದೆ ಎಂದರು.

ದಾಳಿ ಮುಂದುವರಿಕೆ: ಈ ಹಿಂದೆ ನಗರದಲ್ಲಿ 100ಕ್ಕೂ ಅಧಿಕ ಮಂದಿ ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಇನ್ಮುಂದೆಯೂ ದಾಳಿ ಪ್ರಕ್ರಿಯೆ ಮುಂದುವರಿಯಲಿದೆ. ಅಕ್ರಮ ವಾಸಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

ನಗರದಲ್ಲಿ 678 ಅಕ್ರಮ
ವಿದೇಶಿ ಪ್ರಜೆಗಳು
ಬೆಂಗಳೂರು:ಆಫ್ರಿಕಾ ಪ್ರಜೆಗಳಿಂದ ಪೊಲೀಸ್‌ ಮೇಲಿನ ಹಲ್ಲೆ ಪ್ರಕರಣದ ಬೆನ್ನಲ್ಲೇ ನಗರದಲ್ಲಿರುವ 678 ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ವಾಸವಾಗಿರುವುದು ಬೆಳಕಿಗೆ ಬಂದಿದೆ. 27 ಮಂದಿಯನ್ನು ಗಡಿಪಾರು ಮಾಡುವ ಕುರಿತ ಪ್ರಕ್ರಿಯೆಗಳು ಚಾಲನೆಯಲ್ಲಿವೆ. ಅಕ್ರಮವಾಗಿ ನೆಲೆಸಿರುವ ಬಹುತೇಕ ವಿದೇಶಿ ಪ್ರಜೆಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕೆಲವರು ಸೈಬರ್‌ ಕ್ರೈಂ, ಮಾದಕ ವಸ್ತು ಮಾರಾಟ, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಅಂದಾಜು 7-8 ಸಾವಿರ ಮಂದಿ ವಿದೇಶಿ ಪ್ರಜೆಗಳಿದ್ದು, ಈ ಪೈಕಿ ನೈಜಿರಿಯಾ, ಕಾಂಗೋ ದೇಶದ ಪ್ರಜೆಗಳೇ ಅಧಿಕವಾಗಿದ್ದಾರೆ ಎಂಬ ಮಾಹಿತಿಯಿದೆ. ಈ ಪೈಕಿ ಬೆಂಗಳೂರಿನಲ್ಲಿ ನೆಲೆಸಿರುವ 678 ಮಂದಿ ಯಾವುದೇ ವೀಸಾ, ಪಾಸ್‌ಪೋರ್ಟ್‌ ಹೊಂದಿಲ್ಲದೆ ಅಕ್ರಮವಾಗಿ ನೆಲೆಸಿದ್ದಾರೆ. ನಗರದಲ್ಲಿ ಮೇ ತಿಂಗಳಲ್ಲಿ 705 ಮಂದಿ ಅಕ್ರಮವಾಗಿ ನೆಲೆಸಿದ್ದರು. ಅವರನ್ನ ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜೂನ್‌ ಅಂತ್ಯಕ್ಕೆ ನಗರದಲ್ಲಿ 63 ಮಂದಿ ವಿದೇಶಿ ಪ್ರಜೆಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

1 ವರ್ಷದ ಕೆಲಸ ತೃಪ್ತಿ ತಂದಿದೆ
ಬೆಂಗಳೂರಿನ ಜನರು ಮತ್ತು ಅಧಿಕಾರಿ-ಸಿಬ್ಬಂದಿ ಸಹಕಾರದಿಂದ ಒಂದು ವರ್ಷದ ಕೆಲಸ ತೃಪ್ತಿ ತಂದಿದೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರಕರಣಗಳು ಸವಾಲಾಗಿದ್ದವು. ಈ ವೇಳೆ ಪೊಲೀಸರಿಗೆ ಬಹಳ ಸಮಸ್ಯೆಯಾಗಿತ್ತು. ಆದರೂ ಸಹೋದ್ಯೋಗಿಗಳ ಸಹಕಾರದಿಂದ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾದೆವು.2019ಕ್ಕೆ ಹೊಲಿಸಿದರೆ ಐದಾರು ಪಾಲು ಡ್ರಗ್ಸ್‌ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕೊರೊನಾ ಲಾಕ್‌ಡೌನ್‌ ನಿರ್ವಹಣೆ ಕೂಡ ತಮಗೆ ಒಂದು ಟಾಸ್ಕ್ ಮಾದರಿ ಇತ್ತು. ಇನ್ಮುಂದೆಯೂ ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಕಮಲ್‌ ಪಂತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next