Advertisement

ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ಗಮನ ಸೆಳೆದ ಪದವೀಧರ !

05:13 PM Aug 02, 2021 | Team Udayavani |

ಕಾಪು : ಹಣದ ದಾಹದಿಂದಾಗಿ ಮನುಷ್ಯನಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆ. ಎಲ್ಲದಕ್ಕೂ ಹಣವೇ ಪ್ರಧಾನವಾಗಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ದಿಢೀರ್ ಶ್ರೀಮಂತಿಕೆ ಗಳಿಸಬೇಕೆಂಬ ಮನುಷ್ಯನ ಹಂಬಲಕ್ಕೆ ಬಿದ್ದಿರುವ ಮನುಷ್ಯ ಯಂತ್ರದಂತೆ ಹಣದ ಹಿಂದೆ ಓಡಲಾರಂಭಿಸಿದ್ದಾನೆ. ಇದರಿಂದಾಗಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿದ್ದು, ಮನುಷ್ಯನಲ್ಲಿ ಬುದ್ಧಿಮತ್ತೆ ಮತ್ತು ಪ್ರಾಪಂಚಿಕ ಜ್ಞಾನವು ನಶಿಸುತ್ತಿದೆ. ಇದನ್ನೆಲ್ಲಾ ಸಮಾಜದ ಮುಂದೆ ತಿಳಿಯಪಡಿಸಿ, ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಮತ್ತೆ ಪುನರುತ್ಥಾನಗೊಳಿಸುವ ಹಂಬಲದೊಂದಿಗೆ ಬೆಂಗಳೂರಿನ ವಿವೇಕಾಂದ ಎಚ್.ಕೆ. ಅವರು ಕೈಗೊಂಡಿರುವ ಜ್ಞಾನ ಭಿಕ್ಷಾ ಪಾದಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 53 ವರ್ಷ ಪ್ರಾಯದ ಎಂ. ಎ. ಪದವೀಧರ ವಿವೇಕಾನಂದ ಎಚ್.ಕೆ. ಅವರು ಏಕ ವ್ಯಕ್ತಿ ಸಂಯೋಜನೆಯಡಿಯಲ್ಲಿ ಸಮಾಜ ಮತ್ತು ಸಮಾಜದ ಜನರಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸುವ ಕನಸಿನೊಂದಿಗೆ ಜ್ಞಾನ ಭಿಕ್ಷಾ ಕಾಲ್ನಡಿಗೆ ಯಾತ್ರೆಯು ಶನಿವಾರ ಉಡುಪಿ ಜಿಲ್ಲೆಯ ಕಾಪುವಿನ ಮೂಲಕ ಹಾದು, ರವಿವಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ.

ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ 2020 ನ. 1 ರಂದು ಬೀದರ್ ಜಿಲ್ಲೆಯ ಹೌರಾ ತಾಲೂಕಿನ ವನಮಾರಪಳ್ಳಿ ಎಂಬ ಹಳ್ಳಿಯಿಂದ ಜ್ಞಾನ ಭಿಕ್ಷಾ ಪಾದಯಾತ್ರೆಯನ್ನು ಆರಂಭಿಸಿರುವ ಇವರು ಕಾಲ್ನಡಿಗೆಯಲ್ಲೇ ರಾಜ್ಯದ ಪ್ರತೀ ಜಿಲ್ಲೆಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈವರೆಗಿನ 273 ದಿನಗಳಲ್ಲಿ 8,300 ಕಿ.ಮೀ. ದೂರವನ್ನು ಕ್ರಮಿಸಿದ್ದು, ರಾಜ್ಯದ 180 ತಾಲೂಕುಗಳನ್ನು ಸಾಗಿ ಬಂದಿದ್ದು, ವರ್ಷಾಂತ್ಯದೊಳಗೆ ಚಾಮರಾಜನಗರ ತಲುಪುವ ಗುರಿ ಹೊಂದಿರುವ ಅವರು, ಆ ಮೂಲಕ ತನ್ನ ಒನ್ ಮೆನ್ ಆರ್ಮಿ ಪಾದಯಾತ್ರೆಯನ್ನು ಮುಗಿಸುವ ಸಂಕಲ್ಪ ತೊಟ್ಟಿದ್ದಾರೆ.

ಯಾಕಾಗಿ ಕಾಲ್ನಡಿಗೆ ಯಾತ್ರೆ ? : ತಂತ್ರಜ್ಞಾನ ಮತ್ತು ಆಧುನಿಕತೆ ಬೆಳೆಯುತ್ತಾ ಹೋದಂತೆ ಸಮಾಜದಲ್ಲಿ ಮಾನವೀಯ ಮೌಲ್ಯಗಳು ವೇಗವಾಗಿ ಕುಸಿಯುತ್ತಿವೆ. ವಸ್ತುಗಳು ನಮ್ಮನ್ನು ಆಳುತ್ತಿದ್ದು, ಧಾರ್ಮಿಕ, ಮಾದ್ಯಮ, ಶಿಕ್ಷಣ, ಆರೋಗ್ಯ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳೂ ಇಂದು ಸಂಕಷ್ಟಕ್ಕೆ ಸಿಲುಕಿವೆ. ನಮನ್ನು ಸಂಕಷ್ಟಕ್ಕೆ ಸಿಲುಕಿಸಿ ಬಿಟ್ಟಿವೆ. ಮನುಷ್ಯನ ದೇಹ ಮತ್ತು ಮನಸ್ಸು ನಶಿಸುತ್ತಿವೆ. ಯುವಕರಿಗೆ ಮಾನಸಿಕ ಮತ್ತು ದೈಹಿಕ ಧೃಡತೆಯನ್ನು ದೊರಕಿಸಿಕೊಡುವ ಉದ್ದೇಶದೊಂದಿಗೆ ಈ ಕಾಲ್ನಡಿಗೆ ಯಾತ್ರೆಯನ್ನು ಕೈಗೊಂಡಿದ್ದಾರೆ.

ಏನೇನು ಮಾಡ್ತಾರೆ ? : ಹಣ ಸಂಪಾದನೆಯೇ ಮುಖ್ಯವಾಗಿರುವುದರಿಂದ ಸಾಮಾಜಿಕ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿವೆ. ಘನತೆಯನ್ನು ಕಳೆದುಕೊಳ್ಳುತ್ತಿರುವ ಜನರ ನಡುವೆ ಗೊಂದಲದ ಗುಹೆಯೊಳಗೆ ಸಿಲುಕಿರುವ ಯುವ ಜನರ ಮನಪರಿವರ್ತನೆ ಮಾಡಿ,  ಮುಂದಿನ 15 ವರ್ಷಗಳೊಳಗೆ ಸಮಾಜದ ಸ್ವಾಸ್ಥ ವನ್ನು ಹೇಗೆಲ್ಲಾ ಕಾಪಾಡಿಕೊಳ್ಳಬಹುದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎನ್ನುವುದನ್ನು ತಿಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಲ್ಲಿ ಯುವ ಜನರು, ಸಮಾನ ಮನಸ್ಕರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ, ತಮ್ಮ ಮನದಾಳದ ಇಂಗಿತವನ್ನು ಆತಂಕವನ್ನು ಹಂಚಿಕೊಳ್ಳುತ್ತಿದ್ದಾರೆ. ಜನರಿಂದ ಪೂರಕ ಜ್ಞಾನ, ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ.

Advertisement

ಎಲ್ಲರಿಂದಲೂ ಉತ್ತಮ ಸಹಕಾರ : ಜೀವನದಲ್ಲಿ ಮುಂದೆಂದೂ ಹಣ ಸಂಪಾದನೆಯ ಯಾವುದೇ ವ್ಯವಹಾರದಲ್ಲಿ ತೊಡಗುವುದಿಲ್ಲ ಎಂಬ ಸಂಕಲ್ಪ ಸ್ವೀಕರಿಸಿರುವ ಇವರು, ಮುಂದೆ ಬರವಣಿಗೆಯ ಮೂಲಕ ಬರುವ ಹಣವನ್ನಷ್ಟೇ ತನ್ನ ವೈಯಕ್ತಿಕ ಜೀವನದಲ್ಲಿ ಬಳಸಿಕೊಳ್ಳಲು ಇಚ್ಛಿಸಿದ್ದಾರೆ. ಕಾಲ್ನಡಿಗೆ ಯಾತ್ರೆಯುದ್ದಕ್ಕೂ ಯಾರೇ ಹಣ ಕೊಟ್ಟರೆ ಪಡೆದುಕೊಳ್ಳುವುದಿಲ್ಲ. ಹಣವಿಲ್ಲದೆ ಕಾಲಿ ಕೈಯಲ್ಲಿ ನಡೆಯುತ್ತಿರುವ ಇವರಿಗೆ ಪರಿಚಿತರು ಮತ್ತು ಇವರ ಕಾಲ್ನಡಿಗೆಯ ಯಾತ್ರೆಯ ಮಹತ್ವ ಅರಿತವರು ತಾವಾಗಿಯೇ ಮುಂದೆ ಬಂದು ಊಟ ವಸತಿ ವ್ಯವಸ್ಥೆಗಳನ್ನು ಜೋಡಿಸಿಕೊಡುವ ಮೂಲಕ ಜನರು ಉತ್ತಮ ಸ್ಪಂಧನೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ : ಇತಿಹಾಸದಲ್ಲಿ ಎಂ. ಎ. ಪದವಿ ಪಡೆದಿರುವ ವಿವೇಕಾನಂದ ಎಚ್.ಕೆ. ಅವರು ಪತ್ರಿಕೋದ್ಯಮ ಮತ್ತು ಸಿನಿಮಾ ನಟನೆಯಲ್ಲಿ ಡಿಪ್ಲೋಮಾ ಮಾಡಿದ್ದು 20 ವರ್ಷ ಜಾಹೀರಾತು ರಂಗದಲ್ಲೂ ವೃತ್ತಿಯನ್ನು ನಿರ್ವಹಿಸಿದ್ದಾರೆ. ಮನುಷ್ಯತ್ವ ಮರೆಯಾಗಲು ಮನುಷ್ಯನಲ್ಲಿರುವ ಹಣದ ದುರಾಸೆಯೇ ಕಾರಣವೆಂಬ ಅಂಶವನ್ನು ಅರ್ಥೈಸಿಕೊಂಡ ಅವರು, ತನಗಾದ ಜ್ಞಾನೋದಯದ ಮಾರ್ಗವನ್ನು ಇತರರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಸಂಚರಿಸುವ ಉದ್ದೇಶ ಹೊಂದಿರುವ ಅವರು ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಸಂಚರಿಸಿ, ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಜನ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.

ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಿದ ವಿವೇಕಾನಂದ್ ಎಚ್. ಕೆ. ಅವರೊಂದಿಗೆ ಉಡುಪಿ ನಗರದಿಂದ ಹೆಜಮಾಡಿಯವರೆಗೆ ಕೆ.ಎನ್. ಪ್ರಭು, ಪ್ರೇಮಾನಂದ್ ಕಲ್ಮಾಡಿ, ನಾಗರಾಜ ಮೂರ್ತಿ ಅವರು ಕೈ ಜೋಡಿಸಿದ್ದರು. ಕಾಪುವಿನಲ್ಲಿ ಕಾಪು ತಾಲೂಕು ಕಾರ್ಯ ನಿರತರ ಪತ್ರಕರ್ತರ ಸಂಘದ ಸದಸ್ಯರು, ಪಡುಬಿದ್ರಿಯಲ್ಲಿ ಕಾಪು ತಾಲೂಕು ಅಂಬೇಡ್ಕರ್ ಯುವಸೇನೆ ಮತ್ತು ಪಡುಬಿದ್ರಿ ಗ್ರಾಮ ಶಾಖೆಯ ವತಿಯಿಂದ ಸ್ವಾಗತಿಸಿ, ಬೀಳ್ಕೊಡಲಾಯಿತು.

– ರಾಕೇಶ್ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next