Advertisement

ಯಹೂದಿ ನರಮೇಧ, ಹಿಟ್ಲರ್ ಬಗ್ಗೆ ಮಾತನಾಡುವವರು.. ಕಾಶ್ಮೀರ್ ಫೈಲ್ಸ್ ಬಗ್ಗೆ ತಕರಾರು ಸರಿಯೇ?

01:16 PM Mar 19, 2022 | Team Udayavani |

ಇತ್ತೀಚೆಗಷ್ಟೇ ತೆರೆಕಂಡ ವಿವೇಕ್ ಅಗ್ನಿಹೋತ್ರಿ ಅವರ ಕಾಶ್ಮೀರ್ ಫೈಲ್ಸ್ ಸಿನಿಮಾ ಸತ್ಯಘಟನೆಯಾಧಾರಿತವಾಗಿದ್ದು, ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.  90 ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧ ಹಾಗೂ ವಲಸೆಯ ಕುರಿತಾದ ಘಟನೆಯೇ ಚಿತ್ರದ ಕಥಾವಸ್ತು. ಇದು ದಶಕಗಳ ಹಿಂದೆ ಸದ್ದಿಲ್ಲದೆ ನಡೆದ ಘಟನೆಯಾಗಿದ್ದು, ಇದೀಗ ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ.

Advertisement

ದೂರದ ಯೂರೋಪ್ ಖಂಡದ ಜರ್ಮನಿಯಲ್ಲಿ ನಡೆದ ಯಹೂದಿಯರ ನೋವು, ಕಣ್ಣೀರಿನ ಕಥೆ , ಅದಕ್ಕೆ ಕಾರಣನಾದ ಹಿಟ್ಲರ್ ಎಂಬ ನರರೂಪಿ ರಾಕ್ಷಸನ ಬಗ್ಗೆ ನಮಗೆಲ್ಲಾ ತಿಳಿದಿದೆ.  ಯಹೂದಿಯರ ನರಮೇಧದ ಬಗ್ಗೆ ನಾವು ಮಾತನಾಡುತ್ತೇವೆ, ಅದರ ಇತಿಹಾಸವನ್ನು ಓದುತ್ತೇವೆ.ಆದರೆ ನಮ್ಮದೇ ದೇಶದಲ್ಲಿ ನಮ್ಮದೇ ಜನಗಳ ಮೇಲೆ ನಡೆದ ಮಾರಣಹೋಮ, ಅತ್ಯಾಚಾರದ ಬಗ್ಗೆ ನಮಗೆಷ್ಟು ಗೊತ್ತು?

1990ರ ದಶಕದಲ್ಲಿ ಕಾಶ್ಮಿರದಲ್ಲಿ ಪ್ರತ್ಯೇಕತಾವಾದಿಗಳು, ಉಗ್ರರ ಅಟ್ಟಹಾಸದಿಂದ ಕಾಶ್ಮೀರಿ ಪಂಡಿತರು ತಮ್ಮ ಮನೆಮಠ ತೊರೆದು ವಲಸೆ ಹೋದರು. ಕೆಲವಷ್ಟು ಜನ ಹತರಾದರು. ಇದಷ್ಟೆ ನಮಗೆ ಗೊತ್ತಿರುವ ಅಥವಾ ಗೊತ್ತುಪಡಿಸಿದ  ಮಾಹಿತಿ. ಆದರೆ ನಿಜವಾಗಿಯೂ ನಡೆದದ್ದೇನು? ಹಾಗೆ ನೂರಾರು ವರ್ಷಗಳಿಂದ ವಾಸವಿದ್ದ ತಮ್ಮ ಆಸ್ತಿಪಾಸ್ತಿ, ಮನೆ ಮಠ, ನೆಲ ,ನೆನಪುಗಳ ಬೇರು ಕತ್ತರಿಸಿಕೊಂಡು ಹಾಗೆ ರಾತ್ರೋರಾತ್ರಿ ಉಟ್ಟ ಬಟ್ಟೆಯಲ್ಲಿ ಪ್ರಾಣ ಉಳಿದರೆ ಸಾಕು ಎಂಬಂತೆ ಓಡಿಹೋಗಬೇಕಾಗಿ ಬಂದದ್ದರ ಹಿಂದಿರುವ ಕಾರಣಗಳೇನು? ನಿಜವಾಗಿಯೂ ನಡೆದದ್ದಾರೂ ಏನು ? ಹೀಗೆ ಹಲವು ಪ್ರಶ್ನೆಗಳಿಗೆ  ಸಮರ್ಪಕ ಉತ್ತರ ಈ ಚಿತ್ರದಲ್ಲಿ ಲಭ್ಯ.

ಆದರೆ ಈ ಸತ್ಯಗಳ ಬಗ್ಗೆ ಜಗತ್ತಿಗೆ ಸಾರಿಹೇಳಲು ಇಷ್ಟು ವರ್ಷಗಳೇ ಬೇಕಾದವು. ನಮ್ಮದೇ ನೆಲದಲ್ಲಿ, ನಮ್ಮದೇ ಜನಗಳಮೇಲೆ ನಡೆದ ಹಿಂಸಾಚಾರ, ಅತ್ಯಾಚಾರಗಳ ಸತ್ಯವನ್ನು ಕೂಗಿಹೇಳಲು ಜನರಿಗೆ ತಲುಪಿಸಲು ಇಷ್ಟೊಂದು ವಿಳಂಬವೇಕೆ? ನಿರ್ಲಕ್ಷ್ಯವೇಕೆ ? ಮಾನವೀಯತೆ ,ಜಾತ್ಯಾತೀತತೆ , ಧರ್ಮ ನಿರಪೇಕ್ಷತೆ ಎಂಬೆಲ್ಲಾ ದೊಡ್ಡ ದೊಡ್ಡ ಮೌಲ್ಯಗಳ ಕುರಿತು ಗಂಟೆಗಟ್ಟಲೆ ಟಿವಿ ಚಾನೆಲ್ ಗಳಲ್ಲಿ ಭಾಷಣ ಬಿಗಿಯುವ ,  ದಿನಕ್ಕೊಂದು ಮೋರ್ಚಾ, ಚಳುವಳಿ ಮಾಡುವ , ಗಂಟೆಗೊಂದು ಟ್ವೀಟ್ ಮಾಡುವ ,ನಿಮಿಷಕ್ಕೊಂದು ಪೋಸ್ಟ್ ಹಾಕುವ , ಪ್ರಶಸ್ತಿ ಹಿಂದಿರುಗಿಸುವ  ಅಭಿಯಾನ ಶೂರರಾದ ಸೋಕಾಲ್ಢ್ ಬುದ್ಧಿಜೀವಿಗಳು, ಚಿಂತಕರು, ಮಾನವತಾವಾದಿಗಳು  ಕಾಶ್ಮೀರಿ ಪಂಡಿತರ ವಿಷಯದಲ್ಲಿ ಬಾಯಿಗೆ ಬೀಗ ಜಡಿದುಕೊಂಡು ಸುಮ್ಮನೆ ಕುಳಿತಿರುವುದಾದರೂ ಯಾಕೆ?? .

ಕಾಶ್ಮೀರಿ ಪಂಡಿತರ ಕುರಿತು ಧ್ವನಿ ಎತ್ತುವುದು ,ಮಾತನಾಡುವುದು ಪ್ರಚಾರಗಿಟ್ಟಿಸುವ ವಿಷಯವಲ್ಲವೆಂದೇ ಅಥವಾ ಅತ್ಯಾಚಾರಕ್ಕೊಳಗಾದ ಜನರ ವರ್ಗ  ಜಾತಿಗಳ ಕಾರಣಕ್ಕಾಗಿಯೇ? ಅಥವಾ ಇದಕ್ಕೆಲ್ಲಾ ಕಾರಣರಾದವರ ಹಿತರಕ್ಷಣೆಯೇ?  ಅಥವಾ ಸತ್ತವರು ನಾಲ್ಕೋ ಐದು ನೂರು ಜನರು ಸತ್ತರೆ ಸಾಯ್ಲಿ ಅನ್ನೊ ಉಡಾಫೆಯೇ ಅಥವಾ ಪಾಕಿಸ್ತಾನಿಗಳಂತೆ ಕಾಶ್ಮೀರ ನಮ್ಮದೇಶದ ಭಾಗವೇ ಅಲ್ಲ. ಅದು ವಿವಾದಿತ ಪ್ರದೇಶ ಅಲ್ಲಿ ಜನರ ನೋವು ಕಟ್ಕೊಂಡು ನಮಗೇನು ಅನ್ನೊ ಮನಸ್ಥಿತಿಯೋ ಯಾವ ಕಾರಣವೊ ಒಟ್ಟಿನಲ್ಲಿ ಕಾಶ್ಮೀರಿ ಪಂಡಿತರೆಂಬ ಜನಾಂಗ ಅನುಭವಿಸಿದ ನೋವುಗಳ ಬಗ್ಗೆ ಹೇಳುವ ಒಂದು ಚಿತ್ರತೆರೆ ಕಾಣಲು ಇಷ್ಟು ಸಮಯ ಬೇಕಾಯ್ತೇ ಎಂಬುದು ಪ್ರಶ್ನೆಯಾಗಿ ಉಳಿದಿದೆ.

Advertisement

ಇದನ್ನು ಚಿತ್ರ ಎಂದು ಹೇಳುವುದಕ್ಕಿಂತ ಒಂದು ಡಾಕ್ಯುಮೆಂಟರಿ ಎನ್ನಬಹುದು.  ಸಿನಿಮಾ ಎಂದರೆ ಪ್ರೇಮಕಥೆ, 4 ಹಾಡು, ಒಂದಷ್ಟು ಹೊಡೆದಾಟ ಬಡಿದಾಟ , ಮತ್ತೊಂದಷ್ಟು ನಾಟಕೀಯತೆ ಅತಿರಂಜಿತ ದೃಶ್ಯಗಳಿರುವ ಎರಡೂವರೆ ತಾಸಿನ ಮನರಂಜನೆ ಎಂದೆಲ್ಲಾ ನಿರೀಕ್ಷೆಗಳಿದ್ದರೆ ಈ ಚಿತ್ರದಲ್ಲಿ ನಿರಾಸೆಯೇ ಸಿಗಬಹುದು. ಬೋರ್ ಅನ್ನಿಸಬಹುದು. ಯಾಕೆಂದರೆ ಇದು ಗೋಳಿನ ಕಥೆ , ನೋವು ಕಣ್ಣಿರು ರಕ್ತಪಾತಗಳೇ ತುಂಬಿರುವ  ಸತ್ಯಕಥೆ.

1989-90ರದಶಕದಲ್ಲಿ  ನಡೆದ ಸಾಲು ಸಾಲು ಕೊಲೆಗಳು, ಹೆಣ್ಣು ಮಕ್ಕಳ ಅತ್ಯಾಚಾರಗಳು, ಮಾರಣಹೋಮ, ಗಲಭೆಗಳು, ಹೊತ್ತಿ ಉರಿದ ಕಾಶ್ಮೀರ , ಪಾಕಿಸ್ತಾನ ಬೆಂಬಲಿತ ಪ್ರತ್ಯೇಕತಾವಾದಿಗಳು ,ಉಗ್ರಗಾಮಿಗಳ ಅಟ್ಟಹಾಸ, ಪ್ರತಿ ನಿಮಿಷವೂ ಜೀವ ಕೈಯಲ್ಲಿ ಹಿಡಿದು ಜೋರಾಗಿ ಉಸಿರೆಳೆದುಕೊಳ್ಳಲೂ ಸಹ ಹೆದರಿ ಕುಳಿತ ಅಸಾಹಯಕ ಪಂಡಿತರು. ಕೈಲಾಗದ ಹೇಡಿ ಕಾಶ್ಮಿರದ ಸರ್ಕಾರ,  ಕೈಚೆಲ್ಲಿ ಕುಳಿತ ಕೇಂದ್ರ ಸರ್ಕಾರ.  ಪಕ್ಷಪಾತಿ ಸುದ್ದಿಮಾಧ್ಯಮಗಳು… ಹೀಗೆ ಆ ಘಟನೆಗಳಿಗೆಲ್ಲಾ ಸಾಧ್ಯವಾದಷ್ಟು ಜೀವ ತುಂಬುವ ನ್ಯಾಯಕೊಡುವ ಕೆಲಸವನ್ನು  ತಮಗಿರುವ ಚೌಕಟ್ಟಿನಲ್ಲಿ ನಿರ್ದೇಶಕ ವಿವೇಕ ಅಗ್ನಿಹೋತ್ರಿ  ಸಮರ್ಪಕವಾಗಿಯೇ ನಿರ್ವಹಿಸಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ.  ಇನ್ನು ಸ್ವತಃ ಒಬ್ಬ ಕಾಶ್ಮೀರಿ ಪಂಡಿತ ಜನಾಂಗದ ವ್ಯಕ್ತಿಯಾಗಿರುವ ಅನುಪಂ ಖೇರ್  ಪಾತ್ರವನ್ನು ಅಭಿನಯಿಸಿಲ್ಲ. ಬದಲಾಗಿ ಜೀವಿಸಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಚಿತ್ರದಲ್ಲಿ ತೋರಿಸಿದ ಹಿಂಸಾಚಾರ , ಮಹಿಳೆಯೊಬ್ಬಳನ್ನು ಜೀವಂತವಾಗಿ ಕತ್ತರಿಸುವ ದೃಶ್ಯ , 24ಜನರನ್ನು ಸಾಲಾಗಿ ನಿಲ್ಲಿಸಿ ಕಿಂಚಿತ್ ಕರುಣೆ ಇಲ್ಲದೆ ಗುಂಡು ಹಾರಿಸುವ ದೃಶ್ಯ , ಮಹಿಳೆಯರ ಸಾಮೂಹಿಕ ಅತ್ಯಾಚಾರ, ಬೆತ್ತಲುಗೊಳಿಸುವ  ನಿರ್ದಯತೆಯ ಪರಮಾವಧಿ ಎಲ್ಲವೂ ಎಲ್ಲವೂ ಸತ್ಯವೆಂಬುದಕ್ಕೆ ಇಂದಿಗೂ ಅದನ್ನೆಲ್ಲಾ ಕಣ್ಣಾರೆ ಕಂಡು ಜೀವಉಳಿಸಿಕೊಂಡು ಓಡಿಬಂದ ನೂರಾರು ಜೀವಗಳ ಕಣ್ಣೀರೇ ಸಾಕ್ಷಿ.

ಪಂಡಿತರ   ಅನ್ಯಾಯದ ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಆ ನರಮೇಧದಲ್ಲಿ ಸಾವನ್ನಪ್ಪಿರುವವರು 400ರಿಂದ 500 ಮಂದಿ ಎಂಬುದು ಆಗಿನ ಸರ್ಕಾರ ಕೊಟ್ಟ ಅಥವಾ ಜನತೆಯ ಮುಂದಿಟ್ಟ ಅರ್ಧ ಸತ್ಯ . ಬ್ರಿಟಿಷರ ಕಾಲದಲ್ಲಿ ಅಂದರೆ 194`ರಲ್ಲಿ ನಡೆದ ಜನಗಣತಿಯಲ್ಲಿ 80ಸಾವಿರದಷ್ಟಿದ್ದ ಕಾಶ್ಮೀರಿ ಪಂಡಿತರು 2011 ರ ಜನಗಣತಿಯ ವೇಳೆ 2ರಿಂದ 3 ಸಾವಿರಕ್ಕೆ ಬಂದು ತಲುಪಿದ್ದಾರೆಂಬುದಕ್ಕಿಂತ ಬೇರೆ ಯಾವ ಉದಾಹರಣೆ ಬೇಕು.

ಆ ನೆಲ ಅವರದ್ದು, ಅಲ್ಲಿನ ಸಂಸ್ಕೃತಿ , ಭಾಷೆ ಅದೆಲ್ಲಾ ಅವರದ್ದೂ  ಸಹ. ಪೀಳಿಗೆಗಳು ತಲೆಮಾರುಗಳು ಬೇರೂರಿ ತಮ್ಮತನವನ್ನು ಧಾರೆ ಎರೆದ ನೆಲ ಅದು ಅವರ ಪರಿಚಯ.  ಅವರ ಗುರುತು, ಅವರ ಹೆಮ್ಮೆ. ಇಂದಿಗೂ ಅವರನ್ನು ಗುರುತಿಸುವುದು ಕಾಶ್ಮೀರಿ ಪಂಡಿತ್ ಎಂದೇ ತಾನೆ. ಹಾಗೆ ಆ ನೆಲದೊಂದಿಗೆ ಹಾಸುಹೊಕ್ಕಾಗಿ ಬೆರೆತು ಬೇರೂರಿದವರನ್ನು ಇದ್ದಕ್ಕಿದ್ದಂತೆ ಮತಾಂತರ ಗೊಳ್ಳಿ, ಓಡಿಹೋಗಿ ಇಲ್ಲವೆ ಸಾಯಿರಿ ಎಂಬ ಆಯ್ದುಕೊಳ್ಳಲಾಗದ ಆಯ್ಕೆಗಳನ್ನು ಕೊಟ್ಟಾಗ ಆ ಜನ ಯಾವುದನ್ನೂ ಆಯ್ಕೆಮಾಡಿದರೂ ಸಹ ಸತ್ತಂತೆಯೇ ಎಂಬುದು ಕಟುಸತ್ಯ.

ಇದು ಮುಚ್ಚಿಟ್ಟ ಬಚ್ಚಿಟ್ಟ ಇತಿಹಾಸವಾದರೆ ಮತ್ತೊಂದೆಡೆ ದೇಶದ ದೊಡ್ಡ ದೊಡ್ಧ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕಂಡುಬರುವ ರಾಜಕೀಯ ಅಲ್ಲಿನ ವಿದ್ಯಾರ್ಥಿಗಳು ಚುನಾವಣೆಗಳ ಮೇಲೆ ರಾಜಕೀಯ ಪಕ್ಷಗಳು ಬೀರುವ ಪ್ರಭಾವ . ಪ್ರೊಪೆಸರ್ ಎನ್ನಿಸಿಕೊಂಡವರೇ ವ್ಯವಸ್ಥಿತವಾಗಿ ವಿದ್ಯಾರ್ಥಿಗಳ ಬ್ರೇನ್ ವಾಷ್ ಮಾಡುವ ರೀತಿ. ನಮ್ಮದೇ ದೇಶ ನಮ್ಮದೇ ಸರ್ಕಾರದ ವಿರುದ್ದ ನಮ್ಮ ವಿದ್ಯಾರ್ಥಿಗಳನ್ನೇ ಎತ್ತಿಕಟ್ಟಿ ರಾಜಾರೋಷವಾಗಿ ಮಾಡುವ ದೇಶದ್ರೋಹ . ಮತ್ತೆ ಹಾಗೆ ಒಂದು ದೇಶದ್ರೋಹದ ಆರೋಪದ ಕೇಸ್ ಧಾಖಲಾದರೆ ಸಾಕು ಒಂದು ನೊಬೆಲ್ ಪಾರಿತೋಷಕ ಪಡೆದಂತೆ ಹೆಮ್ಮೆಯಿಂದ ಓಡಾಡುವ ವಿದ್ಯಾರ್ಥಿಗಳು ಎಲ್ಲವೂ ಈಗ ನಡೆಯುತ್ತಿರುವ ವರ್ತಮಾನವಷ್ಟೆ.

ನಮ್ಮ ಜಾತ್ಯಾತೀತ, ಉದಾರವಾದಿ ಮಹಾನ್ ನಾಯಕರು ನಟ ನಟಿಯರು , ಸಾಹಿತಿಗಳು ಚಿಂತಕರು ಬುದ್ದಿಜೀವಿಗಳು ತಮ್ಮ ತಾರತಮ್ಯತೊರೆದು  ವೋಟ್ ಬ್ಯಾಂಕ್ ರಾಜಕಾರದಿಂದ ಕೆಲ ಸಮಯವಾದರೂ ಹೊರಬಂದು ಒಂದೇ ಒಂದು ಸಲವಾದರು ಕಾಶ್ಮೀರಿ ಪಂಡಿತರ ಪರವಾಗಿ ಧ್ವನಿ ಎತ್ತುವ ಧೈರ್ಯ  ಸಾಹಸ ತೋರುವರೆ???

ಎಷ್ಟೋ ವರ್ಷಗಳ ನಂತರವಾದರೂ ಸತ್ಯವನ್ನು ಹೇಳಲು ಹೊರಟ ಈ ಚಿತ್ರವನ್ನು ಅವರೆಲ್ಲಾ ಈಗಾಗಲೇ ವಿರೋಧಿಸಿದ್ದಾರೆ. ಆದರೆ ಸತ್ಯವೆಂಬುದು ನಿಧಾನವಾಗಿಯಾದರೂ ಸರಿ ಹೊರಬರಲೇಬೇಕಲ್ಲ. ಪ್ರತಿಬಾರಿಯೂ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಪರವಹಿಸುವ ದೊಡ್ಡಣ್ಣನಂತಹ ದೇಶಗಳಿಗೂ ಕಾಶ್ಮೀರ ಭಾರತದ ಭಾಗವೇ ಅಲ್ಲವೆಂದು ನಕ್ಷೆಯನ್ನು ಬಿಂಬಿಸುವ  ಪರದೇಶಿ ಸರ್ಕಾರಗಳಿಗೂ , ಕಾಶ್ಮೀರದ ಆರ್ಟಿಕಲ್ 370ಯನ್ನು ತೆಗೆದುಹಾಕಿದಾಗ  ಪಾಕಿಸ್ತಾನಕ್ಕಾದ ಮಹಾಮೋಸವೆಂಬಂತೆ ಬೊಬ್ಬೆಹೊಡೆದ ಮಹಾನ್ ಸ್ಟೇಟ್ಸ್ ಮೆನ್ ಗಳಿಗೂ ಕಾಶ್ಮಿರದ ನಿಜವಾದ ಹಕಿಕತ್ತು, ಕಾಶ್ಮಿರದ ನಿಜವಾದ ನೋವಿನ ಪುಟಗಳು ಕಾಣಲೇಬೇಕಿದೆ.

ಕಾಶ್ಮೀರಿಪಂಡಿತರೆಡೆಗೆ ಒಂದು ಸಣ್ಣ ಸಂತಾಪ ಹಾಗೂ ಮತ್ತೊಂದು ಭರವಸೆಯ ಬೆಂಬಲ ನಿಮಗಿದ್ದರೆ ತಪ್ಪದೇ ಚಿತ್ರ ನೋಡಿ ಕಾಶ್ಮೀರ್ ಫೈಲ್ಸ್.  ಯಾರನ್ನು ಬೆಂಬಲಿಸಲು ಮತ್ಯಾರನ್ನೋ ದ್ವೇಷಿಸಲು ಖಂಡಿತವಾಗಿ ಅಲ್ಲ. ಕೇವಲ ಮಾನವೀಯತೆಯಿಂದ ಮಾನವೀಯತೆಗಾಗಿ.

*ಅಶ್ವಿನಿ ಕುಲಕರ್ಣಿ, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next