Advertisement

ಸುಂದರ ಬದುಕು ಮತ್ತು ಮಧುರ ಕಂಪಿನ ಹೂಗಿಡ

03:13 AM Sep 16, 2020 | Hari Prasad |

ಕೆಲವರು ಒಳ್ಳೆಯದಕ್ಕಾಗಿ ಅದೃಷ್ಟವನ್ನು ಕಾಯುತ್ತಿರುತ್ತಾರೆ. ಯಾವುದೋ ಒಂದು ದಿನ, ಒಂದು ಘಳಿಗೆ, ವಾರ, ವರ್ಷದ ಅನಂತರ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿರುತ್ತಾರೆ.

Advertisement

ಒಳ್ಳೆಯದನ್ನು ತರುತ್ತದೆ ಎಂದು ನಂಬಿ ಏನೇನನ್ನೋ ಧರಿಸುತ್ತಾರೆ, ಮನೆಯಲ್ಲಿ ತಂದಿಡುತ್ತಾರೆ. ಲಕ್ಕಿ ನಂಬರ್‌, ಲಕ್ಕಿ ಶರಟು, ಅದೃಷ್ಟದ ವಾಹನ… ಹೀಗೆ ನಂಬಿ ಅದೃಷ್ಟಕ್ಕಾಗಿ ಹುಡುಕಾಡುವ, ಕಾಯುವ ಪಟ್ಟಿ ಬೆಳೆಯುತ್ತದೆ.

ಅದೃಷ್ಟ ಉಂಟಾಗಲಿ ಎಂದು ಕಾಯುವ ಈ ಪ್ರಕ್ರಿಯೆಯಲ್ಲಿ ಮನುಷ್ಯ ತಾನಾಗಿ ಸೃಷ್ಟಿಸಬಹುದಾಗಿದ್ದ ಒಳ್ಳೆಯದು ಕಳೆದು ಹೋಗುವ ಸಾಧ್ಯತೆಯಿದೆ ಎನ್ನುತ್ತಾರೆ ಸದ್ಗುರು. ಅದೃಷ್ಟ ಸಂಭವಿಸುವುದಿಲ್ಲ, ನಮ್ಮ ಪ್ರಯತ್ನದಿಂದ ಒಳ್ಳೆಯ ಜೀವನವನ್ನು ನಾವೇ ಸಾಧಿಸಬಹುದು. ಸದ್ಗುರು ಜಗ್ಗಿಯವರ ಪ್ರತಿಪಾದನೆಯಂತೆ ಬದುಕಿನ ಎಲ್ಲ ಆಯಾಮಗಳಲ್ಲಿ, ಮಗ್ಗುಲುಗಳಲ್ಲಿ ಕೂಡ ಶ್ರೇಷ್ಠತೆಯನ್ನು ಉಂಟುಮಾಡುವುದು ನಮ್ಮ ಕೈಯಲ್ಲಿಯೇ ಇದೆ.

ಅಗೋಚರ ಶಕ್ತಿಯೊಂದು ಉನ್ನತವಾದ ದ್ದನ್ನು ರಚಿಸಿ ನಮ್ಮ ಕೈಯಲ್ಲಿಡುತ್ತದೆ ಎಂದು ಕಾಯುತ್ತ ಕುಳಿತರೆ ನಾವು ಇದ್ದಲ್ಲೇ ಇರಬಹುದು. ನಮ್ಮ ಶಾಂತಿ – ಅಶಾಂತಿ ನಮ್ಮ ಕೈಯಲ್ಲೇ ಇದೆ; ನಮ್ಮ ಸೌಖ್ಯ- ಅಸೌಖ್ಯ, ನಮ್ಮ ಸುಃಖ – ದುಃಖ, ನಮ್ಮ ಒಳಿತು- ಕೆಡುಕು ಇರುವುದು ನಮ್ಮ ಕೈಯಲ್ಲೇ.

ಅದೃಷ್ಟಕ್ಕಾಗಿ ಕಾಯುವುದು ಎಂದರೆ ನಮ್ಮ ಸಾಮರ್ಥ್ಯ, ನಮ್ಮ ಶಕ್ತಿ, ಸಂಪನ್ಮೂಲಗಳಲ್ಲಿ ನಾವು ವಿಶ್ವಾಸ ಹೊಂದಿಲ್ಲ ಎಂದೂ ಅರ್ಥವಾಗುತ್ತದೆ. ನಮ್ಮ ಶಕ್ತಿ ಸಾಮರ್ಥ್ಯ, ಶ್ರಮವನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಿದರೆ ನಮಗೆ ತಕ್ಕುದಾದ ಉತ್ತಮ ಪರಿಸರ, ಉತ್ತಮ ಬದುಕು, ಉದ್ಯೋಗ ಎಲ್ಲವನ್ನೂ ನಾವೇ ನಿರ್ಮಿಸಿಕೊಳ್ಳಬಲ್ಲೆವು. ಇದಕ್ಕೆ ತದ್ವಿರುದ್ಧವಾದದ್ದು ಅದೃಷ್ಟವನ್ನು ಅವಲಂಬಿಸುವುದು.

Advertisement

ಅತಿಶಯ ಎಂಬಂತಹ ಒಂದು ಕಥೆಯಿದೆ. ಬಸ್‌ ನಿಲ್ದಾಣದಲ್ಲಿ ಹ್ಯಾಪು ಮೋರೆ ಹಾಕಿಕೊಂಡಿದ್ದ ಒಬ್ಬನನ್ನು ಇನ್ನೊಬ್ಬ ಕೇಳಿದನಂತೆ, “ಏನಾಯಿತು?’ ಆತ ಹೇಳಿದ, “ನನ್ನ ಮೊದಲನೇ ಹೆಂಡತಿ ಸತ್ತುಹೋದಳು. ಎರಡನೇ ಪತ್ನಿ ಓಡಿಹೋಗಿದ್ದಾಳೆ. ಮಗು ಅಪರಾಧ ಮಾಡಿ ಜೈಲುಪಾಲಾಗಿದ್ದಾನೆ. ಮಗಳಿಗೆ ತೀವ್ರ ಅನಾರೋಗ್ಯವಿದೆ. ಆಸ್ತಿಪಾಸ್ತಿ ಪಾಲಾಗಿ ನನಗೇನೂ ಉಳಿದಿಲ್ಲ…’

ಇನ್ನೊಬ್ಟಾತ ಹೇಳಿದ, “ಅಯ್ಯೋ ಎಂಥ ದುರದೃಷ್ಟ! ಅಂದಹಾಗೆ ನಿನ್ನ ಉದ್ಯೋಗವೇನು?’ ಮೊದಲನೆಯಾತ ಹೇಳಿದ, ‘ಅದೃಷ್ಟದ ಹರಳುಗಳನ್ನು ಮಾರುವುದು…’

ಇವತ್ತಿನ ದಿನದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಏನೇನು ಅನುಭವಿಸುತ್ತೇವೆ ಅನ್ನುವುದು ಖಂಡಿತವಾಗಿಯೂ ನಮ್ಮದೇ. ನಮ್ಮ ಹೆಂಡತಿ, ಮಕ್ಕಳು, ಸುತ್ತಮುತ್ತಲಿನವರ ಜತೆಗೆ ಎಷ್ಟು ಘರ್ಷಣೆ ನಡೆಸುತ್ತೇವೆ, ಎಷ್ಟು ಪ್ರೀತಿ ವಾತ್ಸಲ್ಯಗಳಿಂದ ನಡೆದು ಕೊಳ್ಳುತ್ತೇವೆ ಎಂಬುದು ನಮ್ಮೊಳಗೆಯೇ ಇರು ವಂಥದ್ದು. ನಮ್ಮ ಪರಿಸರಕ್ಕೆ ನಾವು ಸ್ಪಂದಿಸುವ ಸೂಕ್ಷ್ಮತೆ, ವಿವೇಚನೆ, ಬುದ್ಧಿವಂತಿಕೆಗಳನ್ನು ಆಧರಿಸಿರುತ್ತದೆ. ಜಗಳವಾದರೆ ಅದು ದುರಾದೃಷ್ಟದಿಂದ ಆದದ್ದಲ್ಲ, ನಕ್ಕು ನಲಿದರೆ ಅದಕ್ಕೆ ಅದೃಷ್ಟ ಕಾರಣವಲ್ಲ.

ಒಂದೆಡೆ ಸುಮಧುರ ಕಂಪಿನ ಹೂವು ಗಳುಳ್ಳ ಗಿಡ, ಇನ್ನೊಂದೆಡೆ ಮುಳ್ಳುಗಿಡ ಇದೆ ಎಂದುಕೊಳ್ಳಿ. ಚಿಟ್ಟೆಗಳು, ದುಂಬಿಗಳು, ಕೊನೆಗೆ ನಾವು ಕೂಡ ಮುಖ ಮಾಡುವುದು ಸುವಾಸನೆಯ ಹೂಗಿಡದ ಕಡೆಗೆ ಅಲ್ಲವೆ? ನಮ್ಮ ಜೀವನ ಕೂಡ ಹಾಗೆಯೇ; ಕೆಲವು ಉತ್ಕೃಷ್ಟ ಗುಣಗಳು, ಅಂಶಗಳು ನಮ್ಮಲ್ಲಿದ್ದರೆ ಎಲ್ಲರೂ ನಮ್ಮತ್ತ ಆಕರ್ಷಿತರಾಗುತ್ತಾರೆ. ಬದುಕನ್ನು ಸುಮಧುರ ಹೂವುಗಳ ಗಿಡವಾಗಿಸುವ ಸಾಧ್ಯತೆಯತ್ತ ಮುಖ ಮಾಡೋಣ…

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next