Advertisement

ಮಂಡ್ಯದಲ್ಲಿ ಜೆಡಿಎಸ್‌ ಜನಶಕ್ತಿ ಪ್ರದರ್ಶನ

01:04 PM Mar 26, 2019 | Lakshmi GovindaRaju |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ ನಾಮಪತ್ರ ಸಲ್ಲಿಕೆ ಸಂದರ್ಭ ಹರಿದುಬಂದ ಜನಸಾಗರವನ್ನೇ ಸವಾಲಾಗಿ ಸ್ವೀಕರಿಸಿದ್ದ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಪುತ್ರ ನಿಖಿಲ್‌ ನಾಮಪತ್ರ ಸಲ್ಲಿಕೆ ವೇಳೆ ಜನಶಕ್ತಿ ಪ್ರದರ್ಶಿಸಿದರು.

Advertisement

ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಅಧಿಪತ್ಯವನ್ನೇ ಬಂಡವಾಳವನ್ನಾಗಿಸಿಕೊಂಡ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಒಗ್ಗೂಡಿಸುವಲ್ಲಿ ಮತ್ತೂಮ್ಮೆ ಯಶಸ್ವಿಯಾಗಿದ್ದಾರೆ.

ನಿಖಿಲ್‌ ನಾಮಪತ್ರ ಸಲ್ಲಿಕೆಯ ವೇಳೆ ಜನಸಂಘಟಿಸುವುದನ್ನೇ ಬಹು ದೊಡ್ಡ ಸವಾಲಾಗಿ ಸ್ವೀಕರಿಸಿದ್ದ ಹೆಚ್‌.ಡಿ.ಕುಮಾರಸ್ವಾಮಿ, ಕಳೆದ ಐದಾರು ದಿನಗಳಿಂದಲೇ ಪೂರಕ ಜನಸಂಘಟನೆಗೆ ಸಿದ್ಧತೆ ನಡೆಸಿದ್ದು, ಇಂದು ನಿರೀಕ್ಷೆಯಂತೆ ಸಹಸ್ರಾರು ಜನರನ್ನು ಸಮಾವೇಶಗೊಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರ ಜೊತೆಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಹಾಸನದ ಹೊಳೆನರಸೀಪುರ, ಚನ್ನರಾಯಪಟ್ಟಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಚನ್ನಪಟ್ಟಣ ಭಾಗದಿಂದಲೂ ಸಾವಿರಾರು ಕಾರ್ಯಕರ್ತರ ಪಡೆ ಹರಿದು ಬಂದಿದ್ದು ವಿಶೇಷವಾಗಿತ್ತು.

ಸಂಚಾರ ಸ್ಥಗಿತ: ಸೋಮವಾರ ಬೆಳಗ್ಗೆ 10 ಗಂಟೆಯಿಂದ ನಿಖಿಲ್‌ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ವಾಹನಗಳಲ್ಲಿ ನೂರಾರು ಜನರು ನಗರದತ್ತ ಬರಲಾರಂಭಿಸಿದರು.

Advertisement

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮವಿದ್ದ ಕಾರಣ ಸಹಸ್ರಾರು ಜನರು ಕಾಳಿಕಾಂಬ ದೇವಾಲದ ಬಳಿ ಧಾವಿಸಿ ಬಂದರು. ರಸ್ತೆಯ ಇಕ್ಕೆಲಗಳಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ರಸ್ತೆಯ ತುಂಬೆಲ್ಲಾ ಅಸಂಖ್ಯಾತ ಜನರು ನೆರೆದಿದ್ದರು.

ಎತ್ತಿನಗಾಡಿ ಮೆರವಣಿಗೆ: ನಿಖಿಲ್‌ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದ ಜೆಡಿಎಸ್‌ ಮುಖಂಡರು ನಗರದ ಕಾವೇರಿ ವನದ ಬಳಿ ಎಲ್‌ಇಡಿ ಪರದೆಗಳನ್ನು ಅಳವಡಿಸಿದ್ದರು. ಹತ್ತಾರು ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದವು.

ಅಲಂಕೃತ ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಸಾಥ್‌ ನೀಡಿದವು. ಜೆಡಿಎಸ್‌ ಬಾವುಟಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ನಿಖಿಲ್‌ ಮುಖವಾಡ ಹಾಗೂ ಟೀಶರ್ಟ್‌ ಧರಿಸಿದ ಯುವಕರು ಅಭಿಮಾನ ಮೆರೆದರು. ಮಧ್ಯಾಹ್ನ 1.30ರ ವೇಳೆಗೆ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಪೂಜೆ ಸಲ್ಲಿಸಿದ ನಿಖಿಲ್‌ ಕುಮಾರಸ್ವಾಮಿ ಮೆರವಣಿಗೆಗೆ ಸಿದ್ಧವಾಗಿದ್ದ ವಿಶೇಷ ವಾಹವನ್ನೇರಿ ಜನರತ್ತ ಕೈ ಬೀಸುತ್ತಾ ಮೆರವಣಿಗೆಯಲ್ಲಿ ಹೊರಟರು.

ಅಸಂಖ್ಯಾತ ಜನರು ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್‌ ಪರ ಹರ್ಷೋದ್ಘಾರ ಮೊಳಗಿಸಿದರು. ಮೆರವಣಿಗೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ನಿಖಿಲ್‌ಗೆ ದಳಪತಿಗಳು ಸಾಥ್‌ ನೀಡಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಿಎಂ ಕುಮಾರಸ್ವಾಮಿ, ಅಭ್ಯರ್ಥಿ ನಿಖಿಲ್‌ ಮೇಲೆ ಪುಷ್ಪವೃಷ್ಠಿಗರೆದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದವರು: ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ನಿಖಿಲ್‌ ಇದ್ದ ವಾಹನದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್‌, ಸಿ.ಎಸ್‌.ಪುಟ್ಟರಾಜು, ಸಂಸದ ಎಲ್‌.ಆರ್‌.ಶಿವರಾಮೇಗೌಡ, ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಸಿ.ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಇತರರಿದ್ದರು.

ಮತ್ತೂಂದು ವಾಹನದಲ್ಲಿ ಸಚಿವ ಬಂಡೆಪ್ಪ ಕಾಶೆಂಪೂರ್‌, ವಿಧಾನಪರಿಷತ್‌ ಸದಸ್ಯರಾದ ಶರವಣ, ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಮುಖಂಡರಾದ ಡಾ.ಕೃಷ್ಣ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಬೇಲೂರು ಶಶಿಧರ್‌ ಇತರರಿದ್ದರು.

ಹೊರೆ ಹೊತ್ತ ಯುವತಿಯರ ಸಖತ್‌ ಡ್ಯಾನ್ಸ್‌: ಮೆರವಣಿಗೆ ಮುಂದೆ ಸಾಗುತ್ತಿರುವ ವಾಹನದಲ್ಲಿ ಹೊರೆ ಹೊತ್ತ ಯುವತಿಯರ ನೃತ್ಯ ಗಮನಸೆಳೆಯಿತು. ತಮಟೆ, ಡೊಳ್ಳು ಕುಣಿತ, ಡಿಜೆ ಶಬ್ಧಕ್ಕೆ ಹೊರೆಹೊತ್ತ ಯುವತಿಯರು ನರ್ತಿಸುತ್ತಿದ್ದರು. ಹಸಿರು ಸೀರೆ, ಕೆಂಪು ಬಣ್ಣದ ರವಿಕೆ ತೊಟ್ಟು ಹುಲ್ಲಿನ ಕಮತೆ ಹೊತ್ತ ಯುವತಿಯರು ಟಗರು ಸಿನಿಮಾ ಸಾಂಗ್‌ಗೆ ಸಖತ್‌ ಸ್ಟೆಪ್‌ ಹಾಕಿದರು.

ಎತ್ತಿನಗಾಡಿ ಏರಿದ ಎಚ್‌ಡಿಕೆ, ನಿಖಿಲ್‌: ನಗರದ ಶ್ರೀ ಕಾಳಿಕಾಂಬ ದೇವಾಲಯದ ಎದುರು ದಳಪತಿಗಳು ಮೆರವಣಿಗೆ ಹೊರಡುವ ಎತ್ತಿನಗಾಡಿಗಳನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಮಲ್ಲನಾಯಕನಕಟ್ಟೆಯ ಪ್ರಮೋದ್‌, ಬೀರಗೌಡನಹಳ್ಳಿಯ ಶಂಕರಲಿಂಗೇಗೌಡರಿಗೆ ಸೇರಿದ ಎತ್ತಿನಗಾಡಿಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ನಿಖಿಲ್‌ ಮೆರವಣಿಗೆ ನಡೆಸಿದರು.

ಸ್ವಲ್ಪ ದೂರ ತೆರಳಿದ ಬಳಿಕ ತೆರೆದ ವಾಹನವನ್ನೇರಿ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ದಾರಿಯುದ್ದಕ್ಕೂ ನೆರೆದಿದ್ದ ಲಕ್ಷಾಂತರ ಜನಸಾಗರ ಅದ್ಧೂರಿ ಸ್ವಾಗತ ಕೋರಿತು. ಅಲ್ಲಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಗಣ್ಯರ ಮೇಲೆ ಪುಷ್ಪವೃಷ್ಠಿ ಮಾಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಬಂದಾಗ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅಭ್ಯರ್ಥಿ ನಿಖಿಲ್‌ ಅವರನ್ನು ನಾಮಪತ್ರ ಸಲ್ಲಿಸುವುದಕ್ಕೆ ಕಳುಹಿಸಿ ತಾವು ಸಮಾವೇಶದ ಬಳಿಯೇ ಉಳಿದುಕೊಂಡರು.

ಬಸವಳಿದ ಎತ್ತುಗಳಿಗೆ ಬಾಟಲ್ ನೀರು: ಜೆಡಿಎಸ್‌ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಜೋಡಿ ಎತ್ತುಗಳು ಬಿಸಿಲ ಝಳದಿಂದ ತೀವ್ರ ಬಸವಳಿದಿದ್ದವು. ಅವುಗಳಿಗೆ ರೈತನೊಬ್ಬ ಬಾಟಲ್‌ಗ‌ಳಿಂದ ನೀರು ಕುಡಿಸಿ ದಾಹ ಇಂಗಿಸಿದ ಘಟನೆಯೂ ನಡೆಯಿತು. ನಿಖಿಲ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಊರುಗಳಿಂದ ನೂರಾರು ಎತ್ತಿನಗಾಡಿಗಳು ನಗರದ ಶ್ರೀ ಕಾಳಿಕಾಂಬ ದೇವಾಲಯದ ಬಳಿ ಜಮಾಯಿಸಿದ್ದವು.

11 ಗಂಟೆಗೆ ಆರಂಭವಾಗಬೇಕಿದ್ದ ಮೆರವಣಿಗೆ ಮಧ್ಯಾಹ್ನ 1 ಗಂಟೆಯಾದರೂ ಆರಂಭವಾಗಲಿಲ್ಲ. ಬಿಸಿಲಿನಲ್ಲಿ ಬಸವಳಿದ ಜೋಡಿ ಎತ್ತುಗಳು ಕುಸಿದು ಬೀಳುವ ಸ್ಥಿತಿಯಲ್ಲಿದ್ದವು. ಇದನ್ನು ಗಮನಿಸಿದ ರೈತ ಬಾಟಲ್‌ ನೀರು ಕುಡಿಸಿ ದಾಹ ಇಂಗಿಸಿ ನಂತರ ಮೆರವಣಿಗೆಯಲ್ಲಿ ತೆರಳುವಂತೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next