Advertisement

ಹಾಸನದಲ್ಲಿಂದು ಜೆಡಿಎಲ್‌ಪಿ ಸಭೆ

06:20 AM Sep 22, 2018 | Team Udayavani |

ಹಾಸನ: ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಶನಿವಾರ ಸಂಜೆ ಹಾಸನದಲ್ಲಿ ನಡೆಯಲಿದೆ. “ಆಪರೇಷನ್‌ ಕಮಲ’ದ ಆತಂಕದ ನಡುವೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ತವರು ಜಿಲ್ಲೆಯಲ್ಲಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಶನಿವಾರ
ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಹತ್ವದ ಕಾರ್ಯಸೂಚಿ ಏನೂ ಇಲ್ಲ. ಇದೊಂದು ಅನೌಪಚಾರಿಕ ಸಭೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಭೆ ನಡೆಯುವ ಸ್ಥಳವನ್ನು ಇನ್ನೂ ನಿಗದಿಪಡಿಸಿಲ್ಲ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಯಾವ ಸ್ಥಳ ಎಂಬುದನ್ನು ನಿಗದಿಪಡಿಸಲಾಗುವುದು ಎಂದರು.

ಭಾನುವಾರ ಹಾಸನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು
ಶಿಲಾನ್ಯಾಸ ಹಾಗೂ ವಿವಿಧ ಯೋಜನೆಗಳ ಉದ್ಘಾಟನೆ ನೆರವೇರಿಸುವರು. ಈ ಹಿನ್ನೆಲೆಯಲ್ಲಿ ಸಭೆಗೆ ಎಲ್ಲಾ ಜೆಡಿಎಸ್‌ ಶಾಸಕರನ್ನೂ ಆಹ್ವಾನಿಸಲಾಗಿದೆ. ಶಾಸಕರಿಗೆ ಕಾರ್ಯಕ್ರಮದ ಮುನ್ನಾ ದಿನವೇ ಬರಬೇಕೆಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ. ಜೆಡಿಎಸ್‌ ಶಾಸಕರು ಯಾವುದಾದರೂ ಪಕ್ಷಕ್ಕೆ ಹೋಗುತ್ತಾರೆಂಬ ಕಾರಣಕ್ಕೆ ಜೆಡಿಎಲ್‌ಪಿ ಸಭೆ ನಡೆಸುತ್ತಿಲ್ಲ. ಪಕ್ಷದ ಸಂಘಟನೆ, ಅತಿವೃಷ್ಟಿಯಿಂದಾಗಿರುವ ಹಾನಿ,
ಬರ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next