Advertisement

ನರೇಗಾ ಕಾಮಗಾರಿಗಳಲ್ಲಿ ಜೆಸಿಬಿ ಅಬ್ಬರ

08:42 AM May 31, 2020 | Suhan S |

ಧಾರವಾಡ: ನಮಗೆ ಕೂಲಿ ಕೆಲಸ ಕೊಡಿ ಎಂದು ಕೇಳಿ ಕೆಲಸ ಮಾಡುವ ಕಾಯಕಯೋಗಿಗಳು ಒಂದೆಡೆಯಾದರೆ, ತಮಗೆ ಕೊಟ್ಟ ಕೆಲಸವನ್ನು ಯಂತ್ರಗಳ ಮೂಲಕ ಮಾಡಿಸಿ ಸರ್ಕಾರದಿಂದ ಹಣ ಪಡೆಯುತ್ತಿರುವ ವರ್ಗ ಇನ್ನೊಂದು ಕಡೆ. ಒಟ್ಟಿನಲ್ಲಿ ಕೋವಿಡ್ ದಿಂದ ಕೂಲಿಗೆ ಕುತ್ತು ಬರದಂತೆ ಸರ್ಕಾರ ರೂಪಿಸಿದ ನರೇಗಾ ಕೂಲಿ ಯೋಜನೆಯಲ್ಲಿ ಇದೀಗ ಜೆಸಿಬಿಗಳು ಸದ್ದು ಮಾಡುತ್ತಿವೆ. ಯಾರಿಗೂ ಸಂಶಯ ಬರದಂತೆ ಜೆಸಿಬಿಗಳ ಬಳಕೆ ನಡೆದಿರುವುದು ಜಿಪಂಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಕೋವಿಡ್ ದಿಂದ ಕೆಲಸವಿಲ್ಲದೇ ಕಂಗಾಲಾದ ರೈತರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಸರ್ಕಾರ ಹೆಚ್ಚಿನ ಹಣ ಒದಗಿಸಿ ರೂಪಿಸಿರುವ ನರೇಗಾ ಯೋಜನೆಯ ಮಹತ್ವವನ್ನು ಹಳ್ಳಿಗರು ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಯಂತ್ರಗಳ ಬಳಕೆ ಮಾಡಿಯೇ ಅನೇಕ ಕಾಮಗಾರಿಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನಲ್ಲಿಯೇ ಅತೀ ಹೆಚ್ಚು ಯಂತ್ರೋಪಕರಣಗಳ ಬಳಕೆ ಇದ್ದು, ಬದು ನಿರ್ಮಾಣ ಮತ್ತು ಕೃಷಿ ಹೊಂಡ ತೋಡಿಸಲು ಹಳ್ಳಿಗರು ಜೆಸಿಬಿಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 4578 ಕ್ಕೂ ಅಧಿಕ ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ತಾಲೂಕಾವಾರು ಕಲಘಟಗಿ ತಾಲೂಕಿನಲ್ಲಿ ಹೆಚ್ಚಿನ ಕಾಮಗಾರಿಗಳು ಚಾಲ್ತಿಯಲ್ಲಿವೆ.

2,590 ಬದು ನಿರ್ಮಾಣ: ಜಿಲ್ಲೆಯಲ್ಲಿ ಸದ್ಯ 2590 ಬದುಗಳ ನಿರ್ಮಾಣಕ್ಕೆ ಜಿಪಂ ಹಸಿರುನಿಶಾನೆ ತೋರಿಸಿದೆ. 300 ಅಡಿ ಉದ್ದ, 5 ಅಡಿ ಅಗಲ ಹಾಗೂ ಒಂದುವರೆ ಅಡಿ ಆಳ  ತೋಡಿ ನಿರ್ಮಿಸುವ ಬದುಗಳಿಗೆ 20 ಸಾವಿರ ರೂ. ನೀಡಲಾಗುತ್ತಿದೆ. ಇಲ್ಲಿ ಕನಿಷ್ಠ 35 ಜನರು ಒಂದು ವಾರದ ವರೆಗೂ ಕೆಲಸ ಮಾಡಬಹುದಾಗಿದೆ. ಆದರೆ ಈ ಕೆಲಸ ಜೆಸಿಬಿ ಯಂತ್ರಗಳಿಗೆ ಬರೀ ಎರಡು ಗಂಟೆ ಕೆಲಸವಾಗಿದೆ. ಈಗಾಗಾಲೇ 1878 ಬದು ನಿರ್ಮಾಣ ಕಾಮಗಾರಿಗಳು ಮುಗಿದು ಹೋಗಿದ್ದು, ಈ ಪೈಕಿ 890 ಬದು ನಿರ್ಮಾಣ ಜೆಸಿಬಿಗಳಿಂದಲೇ ಆಗಿದೆ ಎನ್ನಲಾಗಿದೆ!

848 ಕೃಷಿ ಹೊಂಡಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಈ ಪೈಕಿ 489 ಕೃಷಿ ಹೊಂಡಗಳ ಕಾಮಗಾರಿ ಮುಗಿದಿದೆ. ಇಲ್ಲಿಯೂ ಜೆಸಿಬಿಗಳದ್ದೇ ಅಬ್ಬರ ಕೇಳಿಸುತ್ತಿದೆ. ಒಂದು ಬದು ನಿರ್ಮಾಣಕ್ಕೆ ಜೆಸಿಬಿಗೆ ಐದು ಸಾವಿರ, ಬಿಲ್‌ಪಾಸ್‌ ಮಾಡುವವನಿಗೆ ಒಂದು ಸಾವಿರ, ಉಳಿದಿದ್ದು ಹೊಲದ ಮಾಲೀಕನಿಗೆ. ಈ ಹಣವನ್ನು ಸರ್ಕಾರ ಉದ್ಯೋಗ ಚೀಟಿ ಇದ್ದವರ ಖಾತೆಗಳಿಗೆ ಹಾಕುತ್ತದೆ. ಆದರೆ ಇದನ್ನು ಕೂಡ ಹಳ್ಳಿಗರು ಮೊದಲೇ ಬುಕ್‌ ಮಾಡಿಕೊಂಡು ತಮ್ಮ ಸ್ನೇಹಿತರು ಮತ್ತು ನೆಂಟರ ಅಕೌಂಟ್‌ ಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ.

ಐಡಿಯಾ ಮಾಡ್ಯಾರ! : ಸರ್ಕಾರವು ನರೇಗಾ ಕೂಲಿಯಾಧಾರಿತ ಕಾಮಗಾರಿಗಳನ್ನು ಹಳ್ಳಿಗರಿಗೆ ನೀಡುವಾಗ ಸಾಕಷ್ಟು ಉತ್ತಮ ಮಾರ್ಗಸೂಚಿಗಳನ್ನು ನೀಡಿದೆ. ಆದರೆ ಸರ್ಕಾರ ಚಾಪೆ ಕೆಳಗೆ ತೂರಿದರೆ ಹಳ್ಳಿಗರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ತಮ್ಮ ಹೊಲದಲ್ಲಿ ಬದು ನಿರ್ಮಾಣ ಮತ್ತು ಕೃಷಿಹೊಂಡದಂತಹ ಕಾಮಗಾರಿಗಳನ್ನು ಮಾಡುವಾಗ ತಮ್ಮ ಮನೆಯವರು ಮತ್ತು ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಕೆಲಸ ಆರಂಭಿಸಲು ಛಾಯಾಚಿತ್ರ ತೆಗೆಸಿಕೊಳ್ಳುತ್ತಾರೆ. ಈ ಛಾಯಾಚಿತ್ರಗಳು ತಾವೇ ಖುದ್ದಾಗಿ ಕಾಮಗಾರಿ ಮಾಡಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಆದರೆ ಆರಂಭದಲ್ಲಿ ನಡೆದ ಈ ಫೋಟೋ ಸೆಶನ್‌ನ ನಂತರ ಹೊಲಕ್ಕೆ ಜೆಸಿಬಿ ನುಗ್ಗಿಸಲಾಗುತ್ತದೆ.

Advertisement

ಅನಿವಾರ್ಯವಾಗಿ ಯಂತ್ರಕ್ಕೆ ಮೊರೆ? : ಒಂದೆಡೆ ಜನರಿಗೆ ಉದ್ಯೋಗವಿಲ್ಲ ಎನ್ನುವ ಕೂಗು ಕೇಳುತ್ತಲೇ ಇದೆ. ಇನ್ನೊಂದೆಡೆ ಹಳ್ಳಿಗರು ತಮ್ಮ ಹೊಲಗಳಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡುವಂತೆ ಒತ್ತಾಯ ಕೂಡ ಮಾಡುತ್ತಿದ್ದಾರೆ. ಆದರೆ ಬದು ನಿರ್ಮಾಣ, ಕೃಷಿಹೊಂಡದಂತಹ ಹೊಲದ ಕಾಮಗಾರಿಗಳಿಗೂ ಇಂದು ಹಳ್ಳಿಗರು ಹಿಂದೇಟು ಹಾಕುತ್ತಿದ್ದಾರೆ. ನಿಗದಿತ ಸಮಯದಲ್ಲಿ ತಮ್ಮ ಹೊಲದಲ್ಲಿನ ಕೆಲಸ ಮಾಡಿಸಿಕೊಳ್ಳಲು ಕೂಲಿಯಾಳುಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಅನಿವಾರ್ಯವಾಗಿ ಜೆಸಿಬಿ ಮೊರೆ ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ.

ಉದ್ಯೋಗ ಒದಗಿಸಿದ ವಿವರ :  ಕೋವಿಡ್ ನಂತರ ಜನರ ಅನುಕೂಲಕ್ಕಾಗಿ ನರೇಗಾದಲ್ಲಿ ಜಿಪಂ ವ್ಯವಸ್ಥಿತವಾಗಿ ಅತೀ ಹೆಚ್ಚು ಮಾನವ ದಿನಗಳ ಸೃಜನೆಗೆ ಒತ್ತು ನೀಡಿದೆ. ಒಂದೇ ತಿಂಗಳಿನಲ್ಲಿ ಎಲ್ಲಾ ತಾಲೂಕಿನಲ್ಲಿಯೂ 10 ಪಟ್ಟು ಹೆಚ್ಚು ಮಾನವ ದಿನಗಳ ಸೃಜನೆ ಮಾಡಲಾಗಿದೆ.ಒಟ್ಟು 2,84,911 ಮಾನವ ದಿನಗಳ ಸೃಜನೆಯಾಗಿದ್ದು, 12987 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಕೋವಿಡ್ ಸಂಕಷ್ಟದಿಂದ ಹೊರಜಿಲ್ಲೆಗಳಿಂದ ಮರಳಿ ಧಾರವಾಡ ಜಿಲ್ಲೆಗೆ ಆಗಮಿಸಿದ ಒಟ್ಟು 837 ಜನರಿಗೆ ನೂತನವಾಗಿ ಉದ್ಯೋಗ ಚೀಟಿ ನೀಡಲಾಗಿದೆ.

ಜೆಸಿಬಿ ಬಳಸಿ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸ್ಥಳೀಯ ಗ್ರಾಪಂಗಳ ಪಿಡಿಒ ಮತ್ತು ಪಂಚಾಯ್ತಿಯನ್ನೇ ಹೊಣೆ ಮಾಡಲಾಗುವುದು. –ಡಾ| ಬಿ.ಸಿ. ಸತೀಶ, ಜಿಪಂ ಸಿಇಒ

ಸರ್ಕಾರದವರು ಗುದ್ದಲಿ, ಬುಟ್ಟಿ ಬಳಸಿಯೇ ಬದು ನಿರ್ಮಿಸಿ ಅಂತಾರ. ಆದರ ನಡಾ ಬಗ್ಗಿಸಿ ಕೆಲಸ ಮಾಡೋದಕ್ಕ ಕೂಲಿಯಾಳು ಬರಿ¤ಲ್ಲಾ. ಅದಕ್ಕೆ ಜೆಸಿಬಿ ಬಳಸಿ ಬದು ನಿರ್ಮಿಸುವುದು ಅನಿವಾರ್ಯವಾಗಿದೆ. – ಶಂಕರಪ್ಪ ತಳವಾರ, ಬಮ್ಮಿಗಟ್ಟಿ ರೈತ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next