Advertisement

ಜಯಂತಿ, ಉತ್ಸವಗಳಿಗೆ ಹೊಸ ರೂಪ

09:06 PM Sep 28, 2019 | Lakshmi GovindaRaju |

ಮೈಸೂರು: ಜಯಂತಿ ಮತ್ತು ಉತ್ಸವಗಳಿಗೆ ಹೊಸ ರೂಪ ನೀಡಲು ಚಿಂತಿಸಲಾಗಿದೆ. ಆಚರಣೆಯ ಸ್ವರೂಪವನ್ನು ಬದಲಾಯಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ತಿಳಿಸಲು ಸೂಚಿಸಲಾಗಿದೆ. ಮಹಾತ್ಮರನ್ನು ಜಾತಿಗೆ ಸೀಮಿತಮಾಡಿದ್ದು, ಮಹಾತ್ಮರನ್ನು ಮಹಾತ್ಮರಾಗಿಯೇ ಬಿಡಬೇಕು. ಜಾತಿಗೆ ಸೀಮಿತ ಮಾಡಬಾರದು ಎಂದರು.

2 ತಿಂಗಳು ಪ್ರವಾಸ: ಎರಡು ತಿಂಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಎಲ್ಲಾ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ನಂತರ ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾಗುವ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗುವುದು. ನಮ್ಮಲ್ಲಿ 5 ರಾಷ್ಟ್ರೀಯ ಉದ್ಯಾನವನ, 40 ಜಲಪಾತಗಳು, 17 ಗಿರಿ ಶಿಖರಗಳು ಸೇರಿದಂತೆ ವಿವಿಧ ಭಾಷೆ ,ಆಹಾರ ಪದ್ಧತಿ, ಪ್ರಕೃತಿ ಸೊಬಗು ಇರುವ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿರುವ ರಾಜ್ಯವಾಗಿದೆ. ಇದನ್ನು ಬಳಸಿಕೊಂಡು ಯಾವ ರೀತಿ ಪ್ರವಾಸೋದ್ಯಮ ಉತ್ತೇಜಿಸಬೇಕು ಮತ್ತು ವಿಶ್ವ ಮಟ್ಟದ ಪ್ರವಾಸಿಗರನ್ನು ಹೇಗೆ ಆಕರ್ಷಿಸಬೇಕು ಎಂಬುದರ ಬಗ್ಗೆ ಈಗಾಗಲೇ ಆಲೋಚನೆ ಮಾಡಲಾಗಿದೆ ಎಂದು ಹೇಳಿದರು.

ಡಿಸ್ನಿಲ್ಯಾಂಡ್‌ಗೆ ಸಹಮತ: ಡಿಸ್ನಿಲ್ಯಾಂಡ್‌ ಬಗ್ಗೆ ಹಿಂದಿನ ಸರ್ಕಾರ ಯೋಜಿಸಿದ ಯೋಜನೆಯಾಗಿದೆ. ಅದಕ್ಕೆ 1,500 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡುವಷ್ಟು ಹಣ ನಮ್ಮ ಇಲಾಖೆಯಲ್ಲಿ ಇಲ್ಲ ಹಾಗೂ ಅದಕ್ಕೆ ಪ್ರವಾಸೋದ್ಯಮ ದೃಷ್ಟಿಯಿಂದ ಏನಾದರೂ ಸರ್ಕಾರ ಸಮ್ಮತಿ ನೀಡಿದರೆ ನಮ್ಮ ಇಲಾಖೆಯಿಂದ ಸಹಮತ ಇದೆ. ಅಲ್ಲದೇ ಸಾ.ರಾ.ಮಹೇಶ್‌ ಅವರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದ‌ರು. ದಸರಾ ಸಮಯದಲ್ಲಿ ಯಾವ ರೀತಿಯಾಗಿ ಪ್ರವಾಸಿಗರನ್ನು ಸೆಳೆಯಬೇಕು ಎನ್ನುವುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಉತ್ತಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಮತ್ತು ಮುಂದೆಯೂ ತರಲಾಗುವುದು ಎಂದರು.

ವೆಬ್‌ಸೈಟ್‌ ಆರಂಭ: ಪ್ರಸ್ತುತ ಸಾಮಾಜಿಕ ಜಾಲತಾಣ ತುಂಬಾ ಪ್ರಸಿದ್ಧಿ ಪಡೆದಿರುವುದರಿಂದ, ಪ್ರವಾಸಿರನ್ನು ಆಕರ್ಷಿಸುವ ಸಲುವಾಗಿ ವೆಬ್‌ಸೈಟ್‌ ಆರಂಭಿಸಲು ಚಿಂತಿಸಲಾಗಿದೆ. ರಾಜ್ಯದ ಐತಿಹಾಸಿಕ ಸ್ಥಳ‌, ಆಹಾರ ಪದ್ಧತಿ, ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಕಿರುಚಿತ್ರಗಳನ್ನು ತಯಾರಿಸಿ ಅಪ್‌ಲೋಡ್‌ ಮಾಡಬಹುದು. ಪ್ರತಿ ಗ್ರಾಮಗಳ ಇತಿಹಾಸವನ್ನು ಅಪ್‌ಲೋಡ್‌ ಮಾಡಬಹುದಾಗಿದೆ. ವಿಕಿಪೀಡಿಯಾ ಮಾದರಿ ಯಾರು ಬೇಕಾದರು ಅಪ್‌ಲೋಡ್‌ ಮಾಡುವಂತೆ ತಂತ್ರಜ್ಞಾನ ರೂಪಿಸುವುದಾಗಿ ತಿಳಿಸಿದರು.

Advertisement

ಖಾಲಿ ಹುದ್ದೆ ಭರ್ತಿಗೆ ಕ್ರಮ: ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.81.64 ರಷ್ಟು ಹುದ್ದೆಗಳು ಖಾಲಿ ಇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.61 ರಷ್ಟು ಹುದ್ದೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಿಂದಿಯಿಂದ ಶಾಲೆ ಮುಚ್ಚಿಲ್ಲ: ಪ್ರಾದೇಶಿಕ ಭಾಷೆಯ ಶಾಲೆಗಳು ಮುಚ್ಚಲು ಹಿಂದಿ ಕಾರಣವಲ್ಲ. ಕೆಲವರು ಹಿಂದಿ ವಿರೋಧಿಸುವುದೇ ಭಾಷಾಭಿಮಾನ ಎಂದು ಕೊಂಡಿದ್ದಾರೆ. ಅದು ತಪ್ಪು. ಇಂದಿನ ಮನೆಗಳಲ್ಲಿ ಮಾತೃಭಾಷೆ ಕಾಣೆಯಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಯಾವ ಭಾಷೆಯಿಂದಲೂ ಕನ್ನಡಕ್ಕೆ ಕುಂದುಂಟಾಗದಂತೆ ನೋಡಿಕೊಳ್ಳುವ ಕೆಲಸ ನಮ್ಮದು.

ಹಿಂದಿ ಭಾಷೆಯಿಂದ ಪ್ರಾದೇಶಿಕ ಮತ್ತು ಮಾತೃ ಭಾಷೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ಜ್ಞಾನ ಪೀಠ ಪ್ರಶಸ್ತಿ ಪಡೆದ ನಮ್ಮ ಕನ್ನಡ ಮತ್ತು ಸಂಸ್ಕೃತಿಯ ವಾರಸುದಾರನಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಬಾಬು ಉಪಸ್ಥಿತರಿದ್ದರು.

ಹಿಂದಿನ ಸರ್ಕಾರ ಮಹಿಷಾ ದಸರೆಗೆ ಅವಕಾಶ ನೀಡಿದ್ದ ತಪ್ಪು: ನಮ್ಮ ಮೂಲ ಸಂಸ್ಕೃತಿಯನ್ನು, ಹಿಂದಿನಿಂದ ನಡೆದುಕೊಂಡು ಬಂದಿರುವ ಹಬ್ಬ ಆಚರಣೆಗಳನ್ನು ತಡೆಯಲು ಪೂರ್ವಗ್ರಹ ಪೀಡಿತ ಮನಸುಗಳು, ದುರುದ್ದೇಶ ಪೂರಿತ ವ್ಯಕ್ತಿತ್ವಗಳ ಜೊತೆ, ವಿತಂಡವಾದಿಗಳ ಜೊತೆ ನಾವು ಬಹಿರಂಗ ಚರ್ಚೆ ಮಾಡುವುದು ಅನವಶ್ಯಕ ಎಂದು ಪ್ರವಾಸೋದ್ಯಮ ಸಚಿವ ಸಿ .ಟಿ ರವಿ ತಿಳಿಸಿದರು.

ಹಿಂದಿನ ಸರ್ಕಾರದಲ್ಲಿ ಮಹಿಷಾ ದಸರಾ ಮಾಡಲು ಅವಕಾಶ ಕೊಟ್ಟಿದ್ದೆ ತಪ್ಪು. ಅದೊಂದು ದಾರಿ ತಪ್ಪಿಸುವ ಉದ್ದೇಶದಿಂದ ಪೂರ್ವಗ್ರಹ ಪೀಡಿತ ಹಾಗೂ ದುರುದ್ದೇಶ ಪೂರಿತ ವ್ಯಕ್ತಿತ್ವಗಳು ನಮ್ಮ ಸಂಸ್ಕೃತಿ ಮತ್ತು ಶಾಂತಿಗೆ ಭಂಗ ತರುವುದಕ್ಕೆ ಮಾಡುತ್ತಿರುವ ಕುತಂತ್ರ ಎಂದ ಸಿ.ಟಿ. ರವಿ, ಸಂಸದನಾಗಿ ಪ್ರತಾಪ್‌ ಸಿಂಹ ಆ ಪೊಲೀಸರ ಮೇಲೆ ಬಳಸಿದ ಭಾಷೆ ಸರಿಯಲ್ಲ ಎಂದು ಹೇಳಿದರು.

ಪಕ್ಷ ಬೆಳೆಸಿ ರಾಜಕೀಯ ಪ್ರಾತಿನಿಧ್ಯ ಕೇಳಿ: ಕೆಲವರು ಬೇರೆ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮಾಡಿ, ಇನ್ನೊಂದು ಬ್ಯಾಂಕ್‌ನಲ್ಲಿ ಹಣ ಕೇಳಲು ಹೋಗುತ್ತಾರೆ. ಡೆಪಾಸಿಟ್‌ ಮಾಡಿದಲ್ಲಿ ಆ ಬ್ಯಾಂಕ್‌ನಲ್ಲಿ ಹಣ ಪಡೆಯಬೇಕು. ಮಂಡ್ಯದಲ್ಲಿ ಒಂದು ಸೀಟನ್ನೂ° ಗೆಲ್ಲಿಸಿಲ್ಲ. ಆದರೆ, ಮಂಡ್ಯ ಮೂಲದ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯ ಪ್ರಾತಿನಿಧ್ಯಕ್ಕೆ ರಾಜಕೀಯ ನೇತೃತ್ವ ಬೇಕಾಗುತ್ತದೆ. ಈ ಭಾಗದ ಜನರು ಬಿಜೆಪಿಯನ್ನು ಇನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು. ಅಭಿವೃದ್ಧಿಯಲ್ಲಿ ಯಾವ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ಎಲ್ಲಾ ರಾಜ್ಯಗಳನ್ನು ಸಮನಾಗಿ ನೋಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next