Advertisement

ಜಯಂತನ ಹಾಯಿದೋಣಿ

12:35 AM Feb 09, 2019 | |

ಕನ್ನಡಕ್ಕೆ ದಕ್ಕಿದ ಸುಮಧುರ ಭಾಷೆಯ- ಮಧುರ ಭಾವನೆಯ ಲೇಖಕ ಜಯಂತ ಕಾಯ್ಕಿಣಿ. ಇತ್ತೀಚೆಗಷ್ಟೇ ?ಅವರಿಗೆ ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ ಲಭಿಸಿತು. ಆ ನೆಪದಲ್ಲಿ, ತಮ್ಮ ಬಾಲ್ಯ ಸ್ನೇಹಿತನನ್ನು, ಹಳೆಯ ದಿನಗಳ ಕಚಗುಳಿ ಸುಮಧುರ ಬಾಂಧವ್ಯದ ಕ್ಷಣಗಳನ್ನು ಹಿರಿಯ ಲೇಖಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಇಲ್ಲಿ ಕಟ್ಟಿಕೊಟ್ಟಿದ್ದಾರೆ…

Advertisement

ಜಯಂತ ಕಾಯ್ಕಿಣಿ ನನ್ನ ಸಹಪಾಠಿ. ನಮ್ಮದು ಒಂದೇ ಊರು. ಹೌದು, ಗೋಕರ್ಣ ನಮ್ಮ ಊರು. ಅಲ್ಲೇ ನಮ್ಮ ಗೆಳೆತನ. ಮಹಾಬಲೇಶ್ವರನ ದಿವ್ಯ ಸನ್ನಿಧಿಯ ಸುತ್ತ ಮುತ್ತಲ ಬೀದಿ, ಓಣಿ, ಗುಡ್ಡ, ಬೆಟ್ಟ, ಸಮುದ್ರತೀರ, ಅಘನಾಶಿನಿ ನದಿಯ ಮಧುರ ಜುಳುಜುಳು ದಂಡೆ, ತದಡಿ ಬಂದರಿನ ವ್ಯಾಪ್ತಿಯಲ್ಲಿ ಇತ್ಯಾದಿ, ಇತ್ಯಾದಿ…ಹೀಗೆ  ಈ ಗೆಳೆತನ, ಲಂಗೋಟಿ ದೋಸ್ತರು, ಚೆಡ್ಡಿ ದೋಸ್ತರು ಮುಂತಾದ ವಿಶೇಷಣಗಳ ಭಾರ ಹೊತ್ತಿದೆ.  ಕುಮಟಾದಲ್ಲಿ ಬಿಎಸ್‌ಸಿ ಮುಗಿಸಿದ ಮೇಲೆ ಜಯಂತ ಎಂ.ಎಸ್ಸಿಗಾಗಿ ಧಾರವಾಡಕ್ಕೆ ಹೋದ. ನನಗೆ ಐಎಎಸ್‌ ಮಳ್ಳು ಹಿಡಿದುಕೊಂಡಿತ್ತು. ಗೆಲ್ಲಲಾಗದ ಯುದ್ಧ ಎಂದು ತಿಳಿದೂ ಅದಕ್ಕಾಗಿ ಪ್ರಯತ್ನಿಸಿದ್ದು ಸತ್ಯ. ಜಯಂತ ಎಂ.ಎಸ್ಸಿ ಮುಗಿಸಿ ಮುಂಬೈಗೆ ಹೋದ. ಆ ಕಾಲದಲ್ಲಿ ಕರಾವಳಿಯ ಜನರು ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗುತ್ತಿದ್ದರು. ಮುಂಬೈ ಎಂಬ ಮಹಾಗರ್ಭದ ಕರಳುಬಳ್ಳಿ ಜಯಂತನನ್ನು ಸುತ್ತಿಕೊಂಡಿತು. 

ನಾನು ಬ್ಯಾಂಕ್‌ ಒಂದಕ್ಕೆ ಸೇರಿದೆ. ನನ್ನ ಮತ್ತು ಜಯಂತನ ಪ್ರಾರಬ್ಧ ಒಂದೇ. ಎಲ್ಲಿ ಉಸಿರು ಕಟ್ಟುತ್ತದೋ ಅಲ್ಲಿ ನಿರಂತರವಾದ ಯುದ್ಧ ಭೂಮಿಯೊಂದನ್ನು ನಿರ್ಮಿಸಿಕೊಳ್ಳುವುದಕ್ಕೆ ಬೇಕಾದ ಪರಾಕ್ರಮ ತೋರದಿರುವುದು. ಎಲ್ಲಾ ಸರಿ ಇದ್ದು ನಮ್ಮ ಜಾತಕದ ಕುಂಡಲಿಯಲ್ಲಿನ ಆಯುಷ್ಯದ ಭಾವ ಲಾಟರಿ ಹೊಡೆದಂತೆ ನೂರಕ್ಕೆ ನೂರು ವರ್ಷ ಆಯಸ್ಸು ಕೊಟ್ಟೇ ಬಿಟ್ಟಿತು ಎಂದಾದರೂ, ಬದುಕಬಹುದಾದ ನೂರು ವರ್ಷಗಳಲ್ಲಿ ಐವತ್ತು ವರ್ಷಗಳನ್ನು ಯಾಕೆ ಯುದ್ಧ ಭೂಮಿಯನ್ನಾಗಿಸಿಕೊಳ್ಳಬೇಕು ಎಂಬುದು ನನ್ನ ಸಮೀಕರಣ. ಅವನೇನು ನನಗೆ ಹೇಳಿಲ್ಲ. ಆದರೆ ನನಗೆ ಕಂಡಂತೆ ಅವನೂ ಯುದ್ಧಭೂಮಿಯ ಬಗೆಗಾಗಿ ನಂಬಿಕೆ ಇಟ್ಟವನಲ್ಲ. 

ಜಯಂತನೂ ಕೆಲಸ ತೊರೆದು ಮತ್ತೆ ಮುಂಬೈಯಲ್ಲೇ ಇದ್ದು, ಹೈದಾರಾಬಾದಿಗೂ ಹೋಗಿದ್ದ. ನಂತರ ಬೆಂಗಳೂರಿಗೆ ಬಂದು ” ಅನಿಸುತ್ತಿದೆ ಯಾಕೋ ಇಂದು’ ಎಂಬ ಸರ್ವಕಾಲಿಕ ಹಿಟ್‌ ಹಾಡು ಬರೆಯುವವರೆಗೆ ಏನೆಲ್ಲಾ ಆಯಿತು ಎಂಬುದು ಈಗ ಇತಿಹಾಸ. 

Advertisement

 ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಅನೇಕ ಭಿನ್ನಾಭಿಪ್ರಾಯಗಳಿವೆ. ಆದರೆ, ಜಯಂತ ಎಂದೂ ಸಿಟ್ಟುಗೊಳ್ಳಲಾರ. ಏರಿದ ಧ್ವನಿಯಲ್ಲಿ ಮಾತನಾಡಲಾರ. ನಾನು ಮನೆಯಲ್ಲಿ ಏರಿದ ಧ್ವನಿಯಲ್ಲಿ ನನ್ನ ಮಗನ ಬಳಿ, ಹೆಂಡತಿಯ ಬಳಿ ಕೂಗಾಡುವುದಿದೆ. ಆದರೆ ಜಯಂತ ಅದನ್ನೂ ಮಾಡಲಾರ. ನನ್ನ ಏರಿದ ಧ್ವನಿಯ ಕಾರಣಕ್ಕಾಗಿ ಮನೆಯಲ್ಲಿ ಅಂತಿಮವಾದ ಜಯ ಸಂಪಾದಿಸಿದ್ದು ಶೇಕಡಾ ಸೊನ್ನೆ. ಜಯಂತನ ಈ ತಾಳ್ಮೆ ನನಗೆ ಸೋಜಿಗದ ವಿಷಯ.  ಹಾಗೆಯೇ, ಅವನು ಪರೀಕ್ಷೆಯ ಅವಧಿಯಲ್ಲಿ ಎಲ್ಲವನ್ನೂ ಓದಿ ಒಂದಿಷ್ಟು ದಿನ ( ಅದು ಅಕ್ಷರ ಅಕ್ಷರ ನೆನಪಿಡುವ ) ಆ ತನ್ಮಯತೆಯಲ್ಲೇ ಇದ್ದು, ಪ್ರಶ್ನೆಗಳಿಗೆ ಉತ್ತರ ಬರೆದು ಅಂಕಗಳನ್ನು ಒಳ್ಳೆಯದಾಗಿ ಪಡೆಯುವ ಚೋದ್ಯ ಅವನಿಗೆ ಕರಗತವಾಗಿತ್ತು. ಇಡೀ ವರ್ಷದಲ್ಲಿ ಪರೀಕ್ಷೆಗಾಗಿ ಎಂದು ಆತ ಓದುತ್ತಿದ್ದುದು ಕೇವಲ 65 ದಿನಗಳು ಮಾತ್ರ.  

  ನಮ್ಮೂರಿನ ಟೆಂಟ್‌ನಲ್ಲಿ ಸಿನಿಮಾಗಳನ್ನು ನಾನು, ಜಯಂತ ಒಟ್ಟಿಗೇ ನೋಡುತ್ತಿದ್ದೆವು.  ಮಾಣೇಶ್ವರ ಗುಡ್ಡದ ರಸ್ತೆಯಲ್ಲಿ ಅವನ ಮನೆ. ನನ್ನದು ಕೋಟಿ ತೀರ್ಥದ ಬಳಿ. ಸಿನಿಮಾ ಟೆಂಟ್‌ ಇದ್ದದ್ದು ಒಂದು ಕಿ.ಮೀ ದೂರದಲ್ಲಿದ್ದ ಕಂಚಿಗದ್ದೆ ಹತ್ತಿರ. ಅಲ್ಲಿ ರಾತ್ರಿ ಶೋಗಳಿದ್ದವು. ಜಯಂತ ಸಿನಿಮಾಕ್ಕೆ ಹೋಗಬೇಕೋ ಬೇಡವೋ ಅನ್ನೋದನ್ನು ಅವನ ತಂದೆ, ತಾಯಿ ತೀರ್ಮಾನ ಮಾಡುತ್ತಿದ್ದುದರಿಂದ, ಕಡೆಗಳಿಗೆಯವರೆಗೂ ನಾನು, ಜಯಂತ ಬಂದೇ ಬರುತ್ತಾನೆ ಅನ್ನೋ ಉತ್ಕಟ ನಿರೀಕ್ಷೆಯಲ್ಲೇ ಕಾಯಬೇಕಿತ್ತು.  ಸಿನಿಮಾಕ್ಕೆ ಅವನ ಹೆತ್ತವರೂ ಬರುತ್ತಿದ್ದರಿಂದ, ಅವರು ಮನೆಯಿಂದ ಟೆಂಟ್‌ ಅನ್ನು ತಲುಪುವ ವೇಳೆಗೆ ಜಯಂತ ವೆಂಕಟ್ರಮಣ ಸ್ವಾಮಿ ದೇವಸ್ಥಾನದ ರಸ್ತೆ ಕಡೆಯಿಂದ ನಮ್ಮನೆಗೆ ಓಡಿ ಬಂದು, “ಸಿನಿಮಾಕ್ಕೆ ಬಾರೋ ಮೂರ್ತಿ’ ಅಂತ ನನ್ನ ಕರೆದು ಹೋಗುತ್ತಿದ್ದ.   ಒಂದು ಸಲವಂತೂ, “ಇವತ್ತು ಸಿನಿಮಾಕ್ಕೆ ಹೋದರೆ ನನ್ನ ಕರೆಯಬೇಕು’ ಅಂತ ಜಯಂತನಿಗೆ ಹೇಳಿ, ಇತ್ಲಕಡೆ ನಾನು ಮನೆಯಲ್ಲಿ  ನಿದ್ದೆ ಮಾಡಿಬಿಟ್ಟಿದ್ದೆ. ಅವನು ಮನೆ ತನಕ ಬಂದು ಹಾಗೇ ವಾಪಸ್ಸು ಹೋಗಿಬಿಟ್ಟಿದ್ದ. ಅವನಿಗೆ ಇದರಿಂದ ಬಹಳ ಬೇಸರವಾಗಿತ್ತು. ಅದನ್ನು ಎಂದೂ ತೋರಿಸಿಕೊಂಡಿರಲಿಲ್ಲ. 

ಸಿನಿಮಾ ನೋಡಿದ ಮುಂದುವರಿದ ಭಾಗವಾಗಿ- ಗೋಕರ್ಣದ ಸಮುದ್ರ ತೀರದ ಕೊರಕಲು ಬಂಡೆಗಳ ಮೇಲೆ, ಹಿಂದಿನ ದಿನ ನಾವು ನೋಡಿದ ಸಿನಿಮಾದಲ್ಲಿದ್ದ ಫೈಟಿಂಗ್‌ ದೃಶ್ಯಗಳನ್ನು ಅನುಸರಿಸುತ್ತಾ,  ನಾವು ಮಲ್ಲ ಯುದ್ಧ, ಕತ್ತಿಕಾಳಗ, ಧನುರ್‌ ಯುದ್ಧ, ಅಶ್ವಗಳ ಮೇಲೆ ಕುಳಿತು ನಡೆಸುತ್ತಿದ್ದೇವೆ.  ಈ ಯುದ್ಧದಲ್ಲಿ ಸಿನಿಮಾದಲ್ಲಿ ಕಿಕ್ಕಿರಿದು ತುಂಬುವ ವಾದ್ಯಗಳ ಕಾರಣಿದಿಂದಾಗುವ ಸದ್ದು ಎಂಬಂತೆ ನಮ್ಮ ಬಾಯಿಯಿಂದಲೇ ಸಂಗೀತ ಎದ್ದೆದ್ದು ಬರುತ್ತಿತ್ತು. ಅದರಲ್ಲಿ ಒಂದು ಬಗೆಯ ರೋಚಕತೆ ಇರುತ್ತಿತ್ತು.  ಯಾರು ನಾಯಕ, ಯಾರು ಖಳನಾಯಕ ಎಂಬ ವಿಚಾರದಲ್ಲಿ ನಮಗೆ ಗೋಜಲುಗಳಿರುತ್ತಿರಲಿಲ್ಲ. ಆತ ತನ್ನನ್ನು ತಾನೇ ಹೀರೋ ಎಂದು ತಿಳಿದುಕೊಂಡರೆ, ನಾನು ನಾನೇ ಹೀರೋ ಅಂದುಕೊಳ್ಳಲು ಅಭ್ಯಂತರಗಳೇನೂ ಇರಲಿಲ್ಲ. ಅಂತೂ ಯುದ್ಧವಿರುತ್ತಿತ್ತು. ಆ ಕಾಲದ ಸುಂದರ ನಟಿಯೊಬ್ಬಳನ್ನು ಜಯಂತ ಆದರಿಸುತ್ತಿದ್ದ. ಅದೃಷ್ಟವಶಾತ್‌ ಆಕೆ ನನ್ನ ಆದರದ ನಟಿಯಾಗರಲಿಲ್ಲ ಎಂಬುದು ಗಮನಾರ್ಹ. 

ಕೆಲ ಸಂದರ್ಭಗಳಲ್ಲಿ ಕಾಲೇಜಿನಲ್ಲಿ ಕೂರಲು ಇಬ್ಬರಿಗೂ ಆಸಕ್ತಿ ಇರುತ್ತಿರಲಿಲ್ಲ.  ಆಗ, “ಸಾರ್‌, ಜಯಂತನಿಗೆ ಹುಷಾರಿಲ್ಲ, ಅವನನ್ನು ಗೋಕರ್ಣಕ್ಕೆ ಕರೆದುಕೊಂಡು ಹೋಗಬೇಕು’ ಅಂತ ಒಂದು ದಿನ ನಾನು, ಮರುದಿನ  “ಮಹಾಬಲಮೂರ್ತಿಗೆ ಹುಷಾರಿಲ್ಲ. ಪಾಪಾ,  ಅವನನ್ನು ಗೋಕರ್ಣಕ್ಕೆ ಕರೆದುಕೊಂಡು ಹೋಗಬೇಕು’ ಅಂತ ಅವನು ಹೇಳುತ್ತಿದ್ದ. ಹೀಗೆ ಕಾಲೇಜು ಬಂಕ್‌ ಮಾಡಿ ಸಾಧನೆಗೈಯುತ್ತಿದ್ದದ್ದು ಏನೆಂದರೆ,  ಕುಮಟಾದ ಕಾಲೇಜಿನ ಮೈದಾನದಲ್ಲೋ, ಇನ್ನೆಲ್ಲೋ ಕುಳಿತು ಇಬ್ಬರೂ ನವ್ಯಸಾಹಿತ್ಯದ ಬಗೆಗಿನ ಚರ್ಚೆಗಳನ್ನು ನಡೆಸುವುದು ! ಅದರಿಂದ ನಮಗೆ ಏನು ಉಪಯೋವಾಯ್ತು, ಏನು ಆಗಲಿಲ್ಲ ಅಂತ ಈವರೆಗೂ ತಿಳಿಯಲಿಲ್ಲ.

  ಪರೀಕ್ಷೆಯನ್ನು ಇದಿರುಗೊಳ್ಳಲು ಇಬ್ಬರೂ ಒಟ್ಟೊಟ್ಟಿಗೆ ಹೋರಾಡುತ್ತಿದ್ದದ್ದು ಮಾಸದ ನೆನಪು. ನಾವು ತೆಗೆದುಕೊಂಡದ್ದು ಸಸ್ಯಶಾಸ್ತ್ರ ಓದು.  ಪ್ರಾಕ್ಟಿಕಲ್‌ಗೆ ನಮ್ಮನ್ನು ಕಾಪಾಡುತ್ತಿದ್ದದ್ದು ಗೋಕರ್ಣನಾಥನೇ. ಅದು ಹೇಗೆಂದರೆ- ಕೇಶವ್‌ ನಿರ್ವಾಳಿಕರ್‌ ಅನ್ನೊ ಅಟೆಂಡರ್‌ ಇದ್ದ. ಅವನಿಗೆ ನಾನು, ಜಯಂತ ಹೋಗಿ “ಮಾರಾಯ, ನಿನ್ನ ಜೀವನದಲ್ಲಿ ಕಷ್ಟಗಳೇ ಬರೋಲ್ಲ. ಹಾಗೇ ನಾವು ಮಾಡ್ತೀವಿ. ಯೋಚಿಸಬೇಡ. ಗೋಕರ್ಣನಾಥನ ಮುಂದೆ ಕೂತು ಪ್ರಾರ್ಥಿಸಿ ನಿನಗೆ ಪ್ರಸಾದ ತಂದು ಕೊಡ್ತೇವೆ. ಆದರೆ, ನೀನು ನಮಗೆ ಈ ಸಾಲಿನ ಪ್ರಾಕ್ಟಿಲ್‌ನಲ್ಲಿ ಯಾವ್ಯಾವ ಸಸ್ಯಗಳನ್ನು ಕೊಡ್ತಾರೆ ಅದನ್ನು ತೋರಿಸಬೇಕು ಅಂತ ಪುಸಲಾಯಿಸುತ್ತಿದ್ದೆವು.  ಕೇಶವ ಇನ್‌ಶರ್ಟ್‌ ಮಾಡದ ಅಟೆಂಡರ್‌. ಮಂಡಿಯ ಅರ್ಧ ಫ‌ುಟ್‌ ಮೇಲಿನ ತನಕವೂ ಷರಟು ಜೋತುಬಿದ್ದಿರುತ್ತಿತ್ತು. ಷರಟನ್ನು ಸ್ವಲ್ಪ ಮೇಲೆತ್ತಿದರೆ ಬುಟ್ಟಿಯಕಾರ ಆಗೋದು. ಅದರಲ್ಲಿ ಲಿಲಿಎಸಿಯೇ, (ಈರುಳ್ಳಿ ಹೂ) ಯುಫೋಹಿìಎಸಿಎ, ಹಾರಿಜಾ ಸೆಟಿವಾ (ಭತ್ತಹುಲ್ಲು) ಹೀಗೆ ಹಲವಾರು ಸಸ್ಯಗಳನ್ನು ಕಾಲೇಜಿನ ಹೊರಗೆ ಮೂಲೆಯೊಂದರಲ್ಲಿ ನಿಂತು, ತನ್ನ ಷರಟನ್ನು ಹೊರಗೆ ಮಾಡೋನು. ಒಂದಷ್ಟು ಸಸ್ಯಗಳು ಕಾಣುತ್ತಿದ್ದವು. ಅವುಗಳನ್ನು ನೋಡಿಕೊಂಡು ಹೋಗಿ ಪರೀಕ್ಷೆಯಲ್ಲಿ ಗುರುತು ಮಾಡುತ್ತಿದ್ದೆವು. 

   ಇಷ್ಟಾದರೂ, ಕಾಲೇಜಿನ ದಿನಗಳಲ್ಲಿ ಗಲ್ಲಕ್ಕೆ ಗುಳಿ ಬಿದ್ದುಕೊಳ್ಳುತ್ತಿದ್ದ ಕಾಲೇಜ್‌ಮೇಟ್‌ ಒಬ್ಬಳು ದುರ್ದೈವವಶಾತ್‌ ನಾವಿಬ್ಬರೂ ಏಕಕಾಲದಲ್ಲಿ ಪ್ರೀತಿಸುವ ಹುಡುಗಿಯಾದದ್ದು ಈಗಿಲ್ಲಿ ಉಲ್ಲೇಖನೀಯ. ಇದು ದುಧೈìವ ಎಂದಾಗಲೀ, ಅಸೂಯೆಯ ವಿಷಯವೆಂದಾಗಲೀ ನಾವು ಪರಸ್ಪರ ತಿಳಿಯಲೇ ಇಲ್ಲ. ಆದರೆ, ಅನಂತಮೂರ್ತಿಗಳ ಸಂಸ್ಕಾರ ಕಾದಂಬರಿಯ ಪ್ರಾಣೇಶಚಾರ್ಯರ ಅವಿರತ ಪ್ರಯತ್ನ,  ನಾರಾಣಪ್ಪನ ಶವಸಂಸ್ಕಾರ ಯಾವ ರೀತಿಯಲ್ಲಿ ಎಂಬ ಸಮಸ್ಯೆಯನ್ನು ತಿಳಿಯಲು ನಿರಂತರವಾಗುತ್ತಿದ್ದವರಿಗೆ, ನಮ್ಮ ಪ್ರೀತಿಯನ್ನು ಗುಳಿಬೀಳುತ್ತಿದ್ದ ಆ ಮನೋಹರಿಗೆ ಯೋಚನೆಯ ರೂಪದಲ್ಲಿ ತಿಳಿಸಲು ಸಾಧ್ಯವೇ ಆಗಿರಲಿಲ್ಲ.  ಅವಳೂ ಗುಟ್ಟು ಬಿಡುತ್ತಿರಲಿಲ್ಲ.  ಹೀಗೆ ಎಲ್ಲವೂ ತನ್ನ ಪಾಡಿಗೆ ತಾನು ಮುಂದುವರಿಯುತ್ತಿದ್ದಾಗಲೇ ಒಂದು ದಿನ ಅವಳ ಮದುವೆಯಾಯಿತು. ಹೀಗಾಗಿ ನಾವಿಬ್ಬರೂ ಮುಂದೆ ಸುಖವಾಗಿದ್ದೆವು.

ಶಿವರಾತ್ರಿ ಬಂದರೆ ನಮಗೆ ಖುಷಿ.  ಕಾರಣ, ಆಗ ಗೋಕರ್ಣಕ್ಕೆ ನಾಟಕದ ಕಂಪೆನಿಗಳು ಬರುತ್ತಿದ್ದವು. ನಾಟಕಕ್ಕಿಂತ, ಹೊರಗಡೆ ಜನರನ್ನು ಸೆಳೆಯಲು ಹಾಕುತ್ತಿದ್ದ  ಬೋರ್ಡು, ಅದರೊಳಗಿನ ಚಿತ್ರಗಳನ್ನು ನೋಡುವುದರಲ್ಲಿಯೇ ನಮಗೇನೋ ಆನಂದ. ಚಿತ್ರಗಳು ಬಹಳ ಮುಗªವಾಗಿರುತ್ತಿದ್ದವು. ಇಷ್ಟೊಂದು ಮುಗªರು ಅದ್ಹೇಗೆ ವೇದಿಕೆಯಲ್ಲಿ ಪಾತ್ರಗಳಾಗಿ ವಿಜೃಂಬಿಸುತ್ತಾರೆ ಅನ್ನೋದು ನಮ್ಮೊಳಗಿನ ಕುತೂಹಲ.   ಏಣಗಿ ಬಾಳಪ್ಪ , ನಟ ಶ್ರೀನಾಥ್‌, ವಜ್ರಮುನಿ ಅವರಂಥ ಘಟಾನುಘಟಿಗಳು ನಾಟಕವಾಡಲು ಗೋಕರ್ಣಕ್ಕೆ ಬರುತ್ತಿದ್ದರು. ವಜ್ರಮುನಿಗೆ ಖಳನಟನ ಇಮೇಜಿದ್ದಿದ್ದರಿಂದ ಅವರನ್ನು ಮಾತನಾಡಿಸುತ್ತಿರಲ್ಲ. ಇಬ್ಬರೂಶ್ರೀನಾಥ ಅವರಂಥವರ ಬಳಿ ಹೋಗಿ- ನಿಮ್ಮ ಸಂದರ್ಶನ ಮಾಡ್ತೀವಿ ಅನ್ನುತ್ತಿದ್ದೆವು. ಅವರು ಯಾವ ಪತ್ರಿಕೆಗೆ? ಅಂದಾಗ ಆ ಸಂದರ್ಭದಲ್ಲಿ ಉತ್ತರ ಕೊಡಲು ನಮಗೂ ಏನೂ ಗೊತ್ತಾಗುತ್ತಿರಲ್ಲ. ಗುರಿ ಇದ್ದರೆ ತಾನೆ? ಆದರೂ ಬಿಡದೇ ಸಂದರ್ಶನ ಮಾಡಿ, ಬರೆದು  “ಜಯಂತ, ಮೂರ್ತಿ’ ಅನ್ನೋ ಹೆಸರಲ್ಲಿ “ಉದಯವಾಣಿ’ಗೆ ಕಳುಹಿಸುತ್ತಿದ್ದೆವು. ಬನ್ನಂಜೆಯವರು ಅದನ್ನು ಪ್ರಕಟಿಸುತ್ತಿದ್ದರು. ಹೀಗೆ ಎಷ್ಟೋ ಲೇಖನಗಳು ಬಂದವು. 

ಯಾಕೆ ಜಯಂತ ಹೆಗಲಿಗೊಂದು ಚೀಲವನ್ನು ಹಾಕಿಕೊಂಡಿರುತ್ತಾನೆ ಎಂಬ ಪ್ರಶ್ನೆಯನ್ನು ನನ್ನಲ್ಲಿ ಕೇಳಿದ ಮಂದಿ ಇದ್ದಾರೆ. ಜಯಂತನಿಗೆ ಹೆಚ್ಚಾಗಿ ಗಿರೀಶ ಕಾರ್ನಾಡರು ಒಂದು ಆದರ್ಶ. ಅವರೂ ತಮ್ಮ ಹೆಗಲ ಮೇಲೊಂದು ಚೀಲ ಇದ್ದಾಗಲೇ ಕಾರ್ನಾಡ್‌.  ಅಧಿಕೃತವಾಗಿ ದೇಶದ ಬಹು ಜನರು ಯೋಚಿಸುವ ವಿರುದ್ಧ ದಿಕ್ಕಿನಲ್ಲಿ ಯೋಚಿಸುತ್ತಿರುತ್ತಾರೆ ಎಂಬುದು ನನ್ನ ಭಾವನೆ. ಆದರೆ ಜಯಂತ ಕಾರ್ನಾಡರ ಹಾಗೆ ಚೀಲವನ್ನು ಬಗಲಿಗೇರಿಸಿಕೊಳ್ಳುತ್ತಾನೆ. ಅಂತಯೇ ಯಾರ ವಿರುದ್ಧವೂ ನೇರವಾಗಿ ಏನನ್ನೂ ಹೇಳದ, ಹೇಳುವುದೇ ಆದರೆ, “ಸತ್ಯಂ ಭ್ರೂಯಾತ್‌ ಪ್ರಿಯಂ ಭ್ರೂಯಾತ್‌’  ಎಂಬ ಸಂಸ್ಕೃತದ ಉಕ್ತಿಯನ್ನು ನಮ್ಮ ಜಯಂತ ಗಂಭೀರವಾಗಿ ಪಾಲಿಸುತ್ತಾನೆ. 

ಚಿತ್ರ: ಮಹೇಂದ್ರಸಿಂಹ 

Advertisement

Udayavani is now on Telegram. Click here to join our channel and stay updated with the latest news.

Next