Advertisement

ಜಯದೇವಶ್ರೀ ಕ್ರಾಂತಿಪುರುಷ

06:16 AM Jan 21, 2019 | Team Udayavani |

ದಾವಣಗೆರೆ: ಬಸವ ತತ್ವದ ಆಧಾರದ ಮೇಲೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರದ್ದಾಗಿದೆ ಎಂದು ಚಿತ್ರದುರ್ಗ ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.

Advertisement

ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಭಾನುವಾರ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮೂರನೇ ದಿನದ ಸಹಜ ಶಿವಯೋಗದ ಸಾನ್ನಿಧ್ಯವಹಿಸಿ ಮಾತನಾಡಿದರು.

ಶ್ರೀ ಜಯದೇವ ಜಗದ್ಗುರುಗಳು ಬಸವತತ್ವ ಪಾಲಿಸಿದವರು. ಆ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 28 ವರ್ಷಗಳಿಂದಲೂ ಬಸವತತ್ವ ಪಾಲನೆ ಹಾಗೂ ಪ್ರಸಾರದಲ್ಲಿ ಚಿತ್ರದುರ್ಗ ಬೃಹನ್ಮಠ ಹಲವಾರು ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಮುನ್ನಡೆದಿದೆ ಎಂದರು.

ಬೆಂಗಳೂರಿನಂತಹ ಮಹಾನಗರದಲ್ಲಿ ಬಸವಣ್ಣನವರ ಕಾರ್ಯಕ್ರಮಗಳಲ್ಲಿ ಅವರ ವಚನಗಳನ್ನೇ ಹೇಳುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಬಸವಣ್ಣನ ವಚನಗಳನ್ನು ಹೇಳುವಂತೆ, ಸಮಾರಂಭಗಳಲ್ಲಿ ಪ್ರಾರ್ಥನೆಗೆ ವಚನಗಳನ್ನೇ ಹಾಡುವಂತೆ ಮಾಡಲಾಯಿತು. ಸಹಜ ಶಿವಯೋಗ, ಶರಣ ಸಂಗಮ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ರಾಜ್ಯವಲ್ಲದೆ ಹೊರ ರಾಜ್ಯ, ರಾಷ್ಟ್ರಗಳಲ್ಲಿ ಬಸವ ಪ್ರಜ್ಞೆಯನ್ನು ಮೂಡಿಸಿ, ಅದನ್ನು ಅನುಸರಿಸುವಂತೆ ಮಾಡಿದ ಕೀರ್ತಿ ಮುರುಘಾಮಠಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಬಸವಣ್ಣ ಎಂದರೆ ವಿಶ್ವ, ವಿಶ್ವ ಎಂದರೆ ವಿಶಾಲ. ಶರಣರ ಭಾವನೆಗಳು, ಅವರ ವಚನಗಳೂ ವಿಶಾಲವಾದ ಅರ್ಥವನ್ನು ಒಳಗೊಂಡಿವೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಚನಗಳ ಅರಿವು ಮೂಡಿಸಲಾಗುತ್ತಿದೆ ಎಂದರು.

Advertisement

ಶರಣ ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಬದುಕನ್ನು ಉದಾತ್ತಗೊಳಿಸುವುದು, ಪರಿಶ್ರಮಿಸುವುದು, ಸಂಸ್ಕಾರಗೊಳಿಸುವುದು, ಗೌರವಿಸುವುದು, ಒಗ್ಗೂಡಿಸುವುದು, ಕಟ್ಟುವುದು, ಸಮಾನತೆಯನ್ನು ತರುವುದು ಎಂದೆಲ್ಲಾ ಕರೆಯಲಾಗುತ್ತದೆ. ಈ ಶರಣ ಸಂಸ್ಕೃತಿ ಉತ್ಸವದ ಮೂಲಕ ಇಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುರುಘಾಮಠ ನಡೆದುಕೊಂಡು ಬರುತ್ತಿದೆ. ಜಾತ್ಯತೀತವಾಗಿ, ಸರ್ವರಿಗೂ ಸಮಾನತೆ, ಮಹಿಳಾ ಸ್ವಾತಂತ್ರ್ಯ ನೀಡುತ್ತಾ ಪ್ರತಿಯೊಬ್ಬರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಬಸವತತ್ವದ ಪ್ರಚಾರಕ್ಕೆ 12ನೇ ಶತಮಾನದ ನಂತರವೂ ಹಲವಾರು ಶರಣರು ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ. ಅಲ್ಲದೇ ತೋಂಟದ ಸಿದ್ದಲಿಂಗ ಶರಣರು, ನಂತರ ಮುರುಘೆಯ ಶ್ರೀ ಶಾಂತವೀರ ಸ್ವಾಮೀಜಿಗಳು ಶ್ರಮಿಸಿದ್ದಾರೆ. ಇಲ್ಲಿನ ವಿಜಯ ಮಹಾಂತಸ್ವಾಮಿ, ನಾಗನೂರು, ಅಥಣಿ ಶ್ರೀಗಳು, ಫ.ಗು. ಹಳಕಟ್ಟಿ, ಹರ್ಡೇಕರ್‌ ಮಂಜಪ್ಪ ಅವರ ಕೊಡುಗೆಯೂ ಅಪಾರವಾಗಿದೆ ಎಂದು ಸ್ಮರಿಸಿಕೊಂಡರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಶರಣೆ ಲಿಂಗದೇವಿ, ಧಾರವಾಡದ ಈಶ್ವರ ಸಾಣಿಕೊಪ್ಪ, ಹರಿಹರದ ಸುಬ್ರಮಣ್ಯ ನಾಡಿಗೇರ, ಜಿಲ್ಲಾ ಪಂಚಾಯತಿ ಸದಸ್ಯ ತೇಜಸ್ವಿ ಪಟೇಲ್‌, 30ಕ್ಕೂ ಹೆಚ್ಚು ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು.

ನಂತರ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಬಸವಕೇಂದ್ರದ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ಕಾರ್ಯಕ್ರಮ ನಡೆಯಿತು.

ನೂತನ ಸ್ವಾಮೀಜಿ ನೇಮಕ ಸಂತಸ ತಂದಿದೆ
ದಾವಣಗೆರೆ:
ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ನೂತನ ಪೀಠಾಧಿಪತಿಗಳಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ ನೇಮಕ ಸಮಾಜಕ್ಕೆ ಸಂತಸ ತಂದಿದೆ ಎಂದು ಅಖೀಲ ಕರ್ನಾಟಕ ಕೇತೇಶ್ವರ ಮೇದಾರ ಸಮಾಜದ ರಾಜ್ಯಾಧ್ಯಕ್ಷ ಪಿ.ಸಿ. ಪಾಟೀಲ್‌ ನುಡಿದರು. ಮೇದಾರ ಸಮುದಾಯದ ಕುಲಗುರುಗಳನ್ನಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಕೇತೇಶ್ವರ ಮೇದಾರ ಗುರುಪೀಠದ ಗುರು ಬಸವಪ್ರಭು ಶ್ರೀ ಲಿಂಗೈಕ್ಯರಾದ ಬಳಿಕ ಕಳೆದ 5 ವರ್ಷದಲ್ಲಿ ಪೀಠಕ್ಕೆ ಇಬ್ಬರು ಗುರುಗಳನ್ನು ಮಾಡಲಾಗಿತ್ತು. ಅವರ ತಂದೆ, ತಾಯಿ ಅನಾ ರೋಗ್ಯದಿಂದ ಸ್ವಾಮೀಜಿಗಳು ಮಠ ಬಿಟ್ಟು ಹೋದರು. ಈ ಸಂದರ್ಭದಲ್ಲಿ ಬಸವಪ್ರಭುಗಳ ಬಳಿ ಬಾಲ್ಯದಿಂದಲೇ ವಟುವಾಗಿ ಸೇವೆ ಸಲ್ಲಿಸಿದ ಮಂಜುನಾಥ್‌ ಎಂಬುವವರನ್ನು ಮೇದಾರ ಸಮಾಜದವರು ಗುರ್ತಿಸಿ, ಈ ಅನಾಥ ಮಠಕ್ಕೆ ಸ್ವಾಮೀಜಿಯಾಗಿ ನೇಮಕ ಮಾಡಬೇಕೆಂದು ಒಮ್ಮತದಿಂದ ನಿಶ್ಚಯ ಮಾಡಿಕೊಂಡೆವು.

ಮೇದಾರಪೀಠಕ್ಕೆ ನೂತನ ಸ್ವಾಮೀಜಿ ನೇಮಿಸುವ ಸಲುವಾಗಿ ಈ ಪ್ರಸ್ತಾಪವನ್ನು ಮುರುಘಾ ಶರಣರ ಮುಂದಿಟ್ಟೆವು. ಆಗ ಅವರು ದಾವಣಗೆರೆಯ ಕಾರ್ಯಕ್ರಮದಲ್ಲಿ ದೀಕ್ಷೆ ನೀಡುವುದಾಗಿ ತಿಳಿಸಿ, ಅದರಂತೆ ಇಂದು ನೂತನ ಸ್ವಾಮೀಜಿಗೆ ಕಾವಿ ಲಾಂಛನ, ಲಿಂಗದೀಕ್ಷೆ ನೀಡಿ, ನಮ್ಮ ಮಠಕ್ಕೆ ನೂತನ ಸ್ವಾಮೀಜಿಯಾಗಿ ಮಾಡಿದ್ದಾರೆ. ನೂತನ ಸ್ವಾಮೀಜಿ ನೇಮಕದಿಂದ ಸಮಾಜಕ್ಕೆ ಸಂತಸವಾಗಿದೆ ಎಂದರು.

ಚಿತ್ರದುರ್ಗದ ಶಿಬಾರದಲ್ಲಿ ಮುರುಘಾಶರಣರು ನೀಡಿರುವ 5 ಎಕರೆ ಜಾಗದಲ್ಲಿ ಕೇತೇಶ್ವರ ಮಠ ನಿರ್ಮಾಣವಾಗುತ್ತಿದೆ. ಈಗ ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಅರ್ಧ ಕೆಲಸ ಮುಗಿದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next