Advertisement

ಸುಧಾರಣ ಪರ್ವಕ್ಕೆ ಮುನ್ನುಡಿ ಬರೆದ ಜಯಚಾಮರಾಜೇಂದ್ರ ಒಡೆಯರ್‌

12:59 PM Jul 18, 2020 | mahesh |

ರಾಜಯೋಗಿ ಎಂದೇ ಬಿರುದಾಂಕಿತರಾದ ಮಹಾರಾಜರು ಸದಾ ಸಮಾಜಮುಖಿ ಚಿಂತನೆಗಳಿಂದ, ಜನಪರ ಕಾರ್ಯಗಳಿಂದ ಜನರ ಮನಗೆದ್ದವರು. ಅವರ ಸ್ಮರಣೆಗಾಗಿ ಲೇಖಕ ಮೈಸೂರು ಸುರೇಶ್‌ ರಚಿಸಿರುವ “”ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌” ಕೃತಿಯ ಆಯ್ದ ಭಾಗವಿದು…

Advertisement

ಮೈಸೂರು ರಾಜ ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರ ಅಳ್ವಿಕೆಯಲ್ಲಿ ಮೈಸೂರು ಅರಸು ಸಂಸ್ಥಾನದ ಕೀರ್ತಿ ಪತಾಕೆ ವಿಶ್ವದ ಎಲ್ಲೆಡೆ ಝಗಮಗಿಸುತ್ತಿರುತ್ತದೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಯುವರಾಜ ರಾಗಿ ಸೆಕ್ರೇಟರಿಯಟ್‌ ಮತ್ತು ಸರಕಾರದ ನಾನಾ ಕಚೇರಿಗಳ ಕಾರ್ಯಕಲಾಪಗಳನ್ನು ಎಲ್ವಿನ್‌ ಮತ್ತು ಮೇಕ್ರಿಯಂತಹ ಮೇಧಾವಿ ಅಧಿಕಾರಿಗಳ ನಿಗಾವಣೆಯಲ್ಲಿ ಕಲಿಯತೊಡಗುತ್ತಾರೆ.

ಯುವರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರು ನ್ಯಾಯಾಲಯಗಳ ಕಾರ್ಯಕಲಾಪಗಳಲ್ಲಿ ಖುದ್ದಾಗಿ ಪಾಲ್ಗೊಂಡು ಕಾರ್ಯವಿಧಾನ ಮನನ ಮಾಡಿಕೊಳ್ಳುತ್ತಾರೆ. ಮೈಸೂರು ಸಂಸ್ಥಾನದ ಸುತ್ತಮುತ್ತಲ ಗ್ರಾಮಗಳು, ಪ್ರದೇಶಗಳಿಗೆ ತೆರಳಿ ಅಲ್ಲಿನ ಗ್ರಾಮಸ್ಥರೊಂದಿಗೆ ಬೆರೆಯುತ್ತಾರೆ. ಜನರ ಕಷ್ಟ ಸುಖಗಳನ್ನು ಅರಿಯುತ್ತಾರೆ. ಆ ಮೂಲಕ ಸಮಾಜಮುಖೀ ಚಿಂತನೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ.

ಯುರೋಪ್‌ ಪ್ರವಾಸ, ಪೋಪ್‌ ಭೇಟಿಯಾಗಿದ್ದು: ಮೈಸೂರು ಸಂಸ್ಥಾನದ ಯುವರಾಜರೂ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸಹೋದರರೂ ಆಗಿದ್ದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಅವರ ನೇತೃತ್ವದಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಮತ್ತು ಸತ್ಯ ಪ್ರೇಮಕುಮಾರಿ ದಂಪತಿಗಳು, ರಾಜಪರಿವಾರದ ಸದಸ್ಯರು ಹಾಗೂ ಸಂಗೀತಗಾರರು, ಸಾಹಿತ್ಯಾಸಕ್ತರನ್ನೊಳಗೊಂಡ ತಂಡವು ಮೈಸೂರಿನಿಂದ ಮುಂಬಯಿಗೆ ತಲುಪಿ ಅಲ್ಲಿಂದ 1939 ಜುಲೈ 13ರಂದು ಯುರೋಪ್‌ ಪ್ರವಾಸ ಕೈಗೊಂಡಿತು.

ಯುರೋಪ್‌ ಭೇಟಿಯಲ್ಲಿ ಹಲವು ಮುಖ್ಯ ವಿಚಾರಗಳಿದ್ದವು. ಮುಖ್ಯವಾಗಿ ಕ್ರೈಸ್ತರ ಜಗದ್ಗುರು ಪೋಪ್‌ ಅವರನ್ನು ಭೇಟಿ ಮಾಡುವುದು. ಲಂಡನ್‌ ನಗರಿ ಸೇರಿದಂತೆ ಪ್ರಮುಖ ನಗರಿಗಳಿಗೆ ಭೇಟಿ ನೀಡುವುದು ಹಾಗೂ ಬ್ರಿಟನ್‌ ರಾಣಿಯವರನ್ನು ಸಂದರ್ಶಿಸುವುದು ಹಾಗೂ ಎಲ್ಲೆಡೆ ಉದ್ಯಮಿಗಳು, ಸಾಹಿತ್ಯಾ ಸಕ್ತರು ಹಾಗೂ ಸ್ನೇಹಿತರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿ ಸುವುದು. ಯುವರಾಜರು ಮತ್ತು ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಮೊದಲೇ ಅಂಗ್ಲ ಸಂಸ್ಕೃತಿ ಪರಿಚಯ ವಿದ್ದರಿಂದ ಅವರಿಗೆ ಯುರೋಪ್‌ ಪ್ರವಾಸ ಮೆಚ್ಚಿನದಾಗಿತ್ತು.

Advertisement

ಲಂಡನ್‌ ಸೇರಿದಂತೆ ಯುರೋಪಿನ ಎಲ್ಲ ಪ್ರಮುಖ ನಗರಿಗಳಲ್ಲಿ ಕರ್ನಾಟಕ ಸಂಗೀತ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಸಾರ್ವಜನಿಕ ಸಮಾರಂಭಗಳಲ್ಲದೇ ರೇಡಿಯೋ ವಾಹಿನಿಗಳು ಸಹ ಮೈಸೂರು ಪ್ಯಾಲೇಸ್‌ ಕಲಾವಿದರನ್ನು ಕೇಂದ್ರ ಗಳಿಗೆ ಕರೆಯಿಸಿ ಕಾರ್ಯಕ್ರಮ ಪ್ರಸಾರ ಮಾಡಿದವು. ಇದರಿಂದ ಪಾಶ್ಚಿಮಾತ್ಯ ಸಂಗೀತಪ್ರಿಯರಿಗೆ ಕರ್ನಾಟಕ ಸಂಗೀತ ಕೇಳುವ ಸುಯೋಗ ಸಿಕ್ಕಿತ್ತು. ಅಲ್ಲದೇ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಪಾಶ್ಚಾತ್ಯ ಸಂಗೀತ ಪ್ರಕಾರವು ತಿಳಿದಿದ್ದರಿಂದ ಅವರು ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತವನ್ನು ಸಂಯೋಜಿಸಿ ಕಾರ್ಯಕ್ರಮ ನೀಡಿದ್ದು, ಯುವರಾಜರ ಜೊತೆಗೆ ತೆರಳಿದ್ದ ಕಲಾವಿದರ ತಂಡಕ್ಕೆ ಮನ್ನಣೆಯು, ಪ್ರಚಾರವೂ ದೊರೆಯಿತು.

ಕಾರ್ಯಕ್ರಮದ ಪ್ರಮುಖ ಭಾಗ ರೋಮ್‌ನ ವ್ಯಾಟಿಕನ್‌ ಸಿಟಿಯಲ್ಲಿ ಕ್ಯಾಥೋಲಿಕ್‌ ಚರ್ಚ್‌ ಮತ್ತು ಪೋಪ್‌ ಅವರ ಧರ್ಮನಿವಾಸ ದಿ ಅಪೋಸ್ಟೋಲಿಕ್‌ ಪ್ಯಾಲೇಸ್‌ಗೆ ರಾಜಪರಿವಾರ ಭೇಟಿ ನೀಡಿ ಜಾನ್‌ ಪೋಪ್‌ 12 ಉಜಿನಿಯೋ ಮರಿಯಾ ಗ್ಯುಸಿಪ್ಪೇ ಜಿಯೋವನ್ನಿ ಪಸೇಲಿ ಅವರನ್ನು ಭೇಟಿ ಮಾಡಿದರು. ಇದು ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಸುದ್ದಿಯಾಯಿತು.

ಇದೇ ಸಮಯದಲ್ಲಿ ಬ್ರಿಟಿಷ್‌ ಮಹಾರಾಣಿಯವರನ್ನು ಸಂದರ್ಶಿಸಲಾಯಿತು. ಲಂಡನ್‌ ನಗರದ ವೆಸ್ಟ್‌ ಮಿನಿಸ್ಟರ್‌ನಲ್ಲಿರುವ ರಾಣಿಯ ಅರಮನೆಯಲ್ಲಿ ಇವರಿಗೆ ಭವ್ಯ ಸ್ವಾಗತ, ರಾಜೋಪಚಾರ ನಡೆಯಿತು. ಎರಡನೇ ಮಹಾಯುದ್ಧದ ಕರಿನೆರಳು ಎಲ್ಲೆಡೆ ಹಬ್ಬಿತ್ತು. ಇದು ಆರಂಭದ ಮುನ್ಸೂಚನೆ ಆದ್ದರಿಂದ ರಕ್ಷಣೆಯ ವಿಚಾರದಿಂದಾಗಿ ಹೆಚ್ಚು ದಿನ ಪ್ರವಾಸ ಮುಂದುವರೆಸಲು ರಾಜಪರಿವಾರದಿಂದ ಸಾಧ್ಯವಾಗಲಿಲ್ಲ. ರಾಜ ಪರಿವಾರದ ಸದಸ್ಯರನ್ನು ಯುವರಾಜ ಶ್ರೀಕಂಠೀರವ ನರಸಿಂಹ ರಾಜ ಒಡೆಯರ್‌ ಅವರು ವಿಮಾನದ ಮೂಲಕ ಮುಂಬಯಿಗೆ ಕಳುಹಿಸಿಕೊಟ್ಟು ದೇಹಾರೋಗ್ಯವನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಅವರು ಅಲ್ಲಿಯೇ ಉಳಿದರು.

ರಾಜಕೀಯ ಮೀಸಲಾತಿ
1940ರ ಆರಂಭದಿಂದಲೂ ರಾಜಕೀಯವಾಗಿ ಹರಿಜನರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯ ಹೆಚ್ಚಿತ್ತು. ಇದಕ್ಕೆ ಸ್ಪಂದಿಸಿದ ಜಯ ಚಾಮರಾಜೇಂದ್ರ ಒಡೆಯರು ಹರಿಜನರಿಗಾಗಿ ರಾಜಕೀಯ ಆಡಳಿತ ಕ್ಷೇತ್ರದಲ್ಲಿ 30 ಸ್ಥಾನಗಳನ್ನು ಹಾಗೂ ಮೇಲ್ಮನೆಯಲ್ಲಿ 4 ಸ್ಥಾನಗಳನ್ನು ಮೀಸಲಿಟ್ಟರು. ಅಂದು ಮೈಸೂರು ಸಂಸ್ಥಾನದಲ್ಲಿ ಗುರುತಿಸಲಾಗಿದ್ದ 9 ಜಿಲ್ಲೆಗಳಿಂದಲೂ ರೋಟೆಷನ್‌ ಆಧಾರದ ಮೇಲೆ ಸದಸ್ಯರ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಆ 30 ಸ್ಥಾನಗಳ ಪೈಕಿ ಹರಿಜನರಲ್ಲಿಯೇ ಹಿಂದುಳಿದಿದ್ದ ಹಾಗೂ ಬೆರಳೆಣಿಕೆಯಷ್ಟು ಇದ್ದ ಕೊರಚರು, ಬೋವಿ, ಲಂಬಾಣಿಗಳಿಗೆ ತಲಾ ಒಂದೊಂದು ಸ್ಥಾನವನ್ನು ಮೀಸಲಿಟ್ಟರು.

ಭಿಕ್ಷುಕರ ಪುನರ್ವಸತಿ ಕೇಂದ್ರ
ಮಹಾರಾಜರು ಅಂಗವಿಕಲರು, ಭಿಕ್ಷುಕರನ್ನು ಕಡೆಗಣಿಸಲಿಲ್ಲ. ಅವರು ಸಹ ಬೇರೆ ಜನರಂತೆ ಸಮಾನರಾಗಿ ಬದುಕಲೆಂದು ಇಚ್ಛಿಸಿದರು. ಅದಕ್ಕಾಗಿ 1943ರಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ತೆರೆದರು. ಅಂಗವಿಕಲರು, ನಿರಾಶ್ರಿತರಿಗಾಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ತೆರೆದರು. ಇದು ಸಹ ಭಾರತ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೀಗೆ ಮೈಸೂರು ಸಂಸ್ಥಾನದಲ್ಲಿ ಸಮಾಜ ಸುಧಾರಣೆಯ ಪರ್ವ ರಭಸವಾಗಿ ನಡೆಯಿತು.
ಲಂಬಾಣಿ ಸಮುದಾಯಕ್ಕೆ ರಾಯಲ್‌ ಅಸೆಂಬ್ಲಿ ಗೌರವ ನೀಡಿದ ಮಹಾರಾಜರು !

ಅದು ಲಂಬಾಣಿ ಸಮುದಾಯವನ್ನು ಅಪರಾಧಿಗಳೆಂದು ನೋಡುತ್ತಿದ್ದ ಕಾಲ. ಬ್ರಿಟಿಷರು ಲಂಬಾಣಿಗಳನ್ನು “ಡಿನೋಟಿಫೈಡ್‌ ಕ್ರಿಮಿನಲ್ಸ್‌’ ಎಂದು ಪರಿಗಣಿಸಿ ರಾಜ್ಯಪತ್ರ ಹೊರಡಿಸಿದ್ದರು. ಯಾರೋ ಮಾಡಿದ ತಪ್ಪಿಗೆ ಇಡೀ ಲಂಬಾಣಿ ಸಮುದಾಯವು ಸುಂಕ ಕಟ್ಟಬೇಕಿತ್ತು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಲಂಬಾಣಿ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿತ್ತು.

ಲಂಬಾಣಿಗಳು (ಬಂಜಾರ) ಮೈಸೂರು ಅರಸು ಸಂಸ್ಥಾನ ದಲ್ಲಿಯೂ ಬಹುವಾಗಿ ಇದ್ದು, ಸಣ್ಣ ಪುಟ್ಟ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು, ಊರೂರು ಸುತ್ತಿ ಬದುಕು ಕಟ್ಟಿಕೊಳ್ಳು ತ್ತಿದ್ದರು. ಅವರ ಪ್ರಾಮಾಣಿಕತೆ, ನಿಷ್ಠೆ, ಸಂಸ್ಕೃತಿ, ಉಡುಗೆ ತೊಡುಗೆ ಗಳಿಂದ ಆಕರ್ಷಿತರಾಗಿದ್ದ ಮೈಸೂರು ಮಹಾರಾಜರು ಮೈಸೂರು ರಾಜ ಸಂಸ್ಥಾನದಲ್ಲಿ ಲಂಬಾಣಿಗಳಿಗೆ ಅಂಟಿಕೊಂಡಿದ್ದ ಕ್ರಿಮಿನಲ್‌ ಪಟ್ಟ ಕಿತ್ತೂಗೆದು ಅವರಿಗೆ ಸಾಮಾಜಿಕವಾಗಿ ಇತರೆ ಸಮುದಾಯದೊಂದಿಗೆ ಶಾಂತಿಯುತ ಬಾಳ್ವೆ ನಡೆಸಲು ಅನುಕೂಲ ಮಾಡಿಕೊಟ್ಟರು. ಮೈಸೂರು ರಾಜ ಸಂಸ್ಥಾನಕ್ಕೆ ಸದಸ್ಯರನ್ನಾಗಿ ನೇಮಿಸಿದರು.

ಅದು ಹೇಗೆ ಎನ್ನುವುದೇ ಕುತೂಹಲಕಾರಿ ಸಂಗತಿ. ರಾಜಕೀಯ ಮೀಸಲಾತಿ ಅಡಿಯಲ್ಲಿ ರಾಯಲ್‌ ಅಸೆಂಬ್ಲಿ ಸದಸ್ಯರಾಗಿ ಲಂಬಾಣಿ ಸಮುದಾಯದ ಮುಖಂಡರಾದ ಜಟೆರ್‌ ನಾಯ್ಕ, ಕೀರಾ ನಾಯ್ಕ, ಸಣ್ಣರಾಮ ನಾಯ್ಕ, ಹನಿಯಾ ನಾಯ್ಕ, ಅಯನೂರ್‌ ಸೇವಾ ನಾಯ್ಕ, ಭೀಮಾನಾಯ್ಕ, ಚಾಂಡ್ಯ ನಾಯ್ಕ ಈ 7 ಮಂದಿ 1941 ರಿಂದ 45ರವರೆಗೆ ನಾಮ ನಿರ್ದೇಶಿತರಾಗಿ ನೇಮಕಗೊಂಡಿದ್ದರು. ಈ ಸಂದರ್ಭದಲ್ಲಿ ಇವರು ಮಾಡಿದ ಮನವಿಯನ್ನು ಪುರಸ್ಕರಿಸಿದ ಅಂದಿನ ದಿವಾನರಾದ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ಅವರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಒಪ್ಪಿಸಿ ಕ್ರಿಮಿನಲ್‌ ಪಟ್ಟ ಕಿತ್ತೂಗೆಯಲು ಸಹಾಯ ಮಾಡಿದರು.

ಸಮಾಜ ಸುಧಾರಣೆಗಳ ಪರ್ವ
ದೇವಾಲಯಗಳಲ್ಲಿ ಹರಿಜನರಿಗೆ ಪ್ರವೇಶ ನೀಡಿದ ಹಿನ್ನೆಲೆಯಲ್ಲಿಯೇ ಇನ್ನೂ ಮಹತ್ತರವಾದ ಸಮಾಜ ಸುಧಾರಣೆಗಳು ಮೈಸೂರು ಅರಸರ ಸಂಸ್ಥಾನ ದಲ್ಲಿ ನಡೆಯಿತು. ಅನಗತ್ಯವಾಗಿ ಗೋವಿನ ಹತ್ಯೆ ಮಾಡುವುದನ್ನು ತಡೆಯಲಾ ಯಿತು. ಕೆಲಸ ಮಾಡುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಅಪಘಾತಕ್ಕೀಡಾದರೆ ಅವರಿಗೆ ಪರಿಹಾರವನ್ನು ನೀಡುವ ಕಾನೂನು ಜಾರಿಗೆ ಬಂದಿತು. ಆರೋಗ್ಯವಂತ ಮಕ್ಕಳು ಜನನವಾಗಲು ಪೂರಕವಾಗುವಂತೆ ಹೆರಿಗೆ ಆಸ್ಪತ್ರೆ ತೆರೆದು, ಗರ್ಭಿಣಿಯರಿಗೆ ಶುಶ್ರೂಷೆ, ರಜೆ ಸೌಲಭ್ಯ ಕಲ್ಪಿಸಲಾಯಿತು. ಗ್ರಾಮ, ಪಟ್ಟಣಗಳ ಸ್ವತ್ಛತೆಗೆ ಆದ್ಯತೆ ನೀಡಿ ಪೌರಕಾರ್ಮಿಕರಿಗೆ ಉಚಿತ ವಸತಿ ಸೌಲಭ್ಯ ಒದಗಿಸಲಾಯಿತು. ಅವರಿಗೆಂದು ಅಚ್ಚುಕಟ್ಟಾದ ಮನೆಗಳನ್ನು ನಿರ್ಮಿಸಿ ಕೊಡಲಾಯಿತು.

ಅಪರಾಧಗಳನ್ನು ಮಾಡಿ ಸೆರೆಮನೆಗೆ ಸೇರಿದ್ದ ಖೈದಿಗಳನ್ನು ಖೈದಿಗಳೆಂದು ಪರಿಗಣಿಸದೇ ಅವರು ಪರಿಸ್ಥಿತಿಯ ಕೈಗೂಸು ಎಂದು ವ್ಯಾಖ್ಯಾನ ಮಾಡಲಾಯಿತು. ಅದಕ್ಕಾಗಿಯೇ ಯುರೋಪಿನ ಮಾದರಿಯಲ್ಲಿ ಅಪರಾಧಿಗಳ ಮನಪರಿವರ್ತನೆಗೆ ದೇಶದಲ್ಲಿಯೇ ಮಾದರಿಯಾಗಿ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜೈಲಿನಲ್ಲಿಯೇ ಖೈದಿಗಳಿಗೆ ತರಬೇತಿ ಕಾರ್ಯಕ್ರಮಗಳು ನಡೆದವು. ಬಟ್ಟೆ ನೇಯುವುದು, ಶೂ, ಬೆಲ್ಟ್ ತಯಾರಿಕೆ, ತಿಂಡಿ ತಿನಸುಗಳ ತಯಾರಿ ಮೊದಲಾದ ಉತ್ಪಾದನೆಗಳು ನಡೆದವು. ಅದರಿಂದ ಖೈದಿಗಳು ಬಿಡುಗಡೆ ನಂತರ ಗೌರವಯುತ ಜೀವನ ನಡೆಸಲು ಪೂರಕ ವಾತಾವರಣ ನಿರ್ಮಿ ಸಲಾಯಿತು. ದೇಶದಲ್ಲಿಯೇ ಪ್ರಥಮ ಎಂಬಂತೆ, ಮುಕ್ತಬಂಧಿಗಳ ಸಹಾಯ ಸಂಘಗಳ ರಚನೆ ಮಾಡಲಾಯಿತು. ಅದರಿಂದ ಬಿಡುಗಡೆಗೊಂಡ ಖೈದಿಗಳು ವ್ಯಾಪಾರ, ವ್ಯವಹಾರ ಮಾಡಲು ಅಗತ್ಯ ಸಾಲ, ಸಹಾಯಧನಗಳನ್ನು ಒದಗಿಸಲಾಯಿತು. ಆ ಮೂಲಕ ಮುಕ್ತಬಂಧಿಗಳು ಸ್ವಾವಲಂಬಿಯನ್ನಾಗಿಸಿದರು. ಅಲ್ಲದೇ ಅವರು ಬೇರೆ ಜನರಂತೆ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಪ್ರೋತ್ಸಾಹ ಮಾಡಲಾಯಿತು.

ಮೈಸೂರು ಸುರೇಶ್‌

Advertisement

Udayavani is now on Telegram. Click here to join our channel and stay updated with the latest news.

Next