ಕುಂದಾಪುರ: ಮಲ್ಲಿಗೆ ಕೃಷಿಗೆ ಹೆಚ್ಚೇನು ಜಾಗದ ಆವಶ್ಯಕತೆಯಿಲ್ಲ. ಲಕ್ಷಾಂತರ ರೂ. ಬಂಡವಾಳವೂ ಬೇಕಿಲ್ಲ. ಇರುವ ಅಲ್ಪ ಭೂಮಿಯಲ್ಲಿಯೇ ಬಂಗಾರ ಅರಳಿಸುವ ಬೆಳೆ ಮಲ್ಲಿಗೆಯಾಗಿದೆ. ಇದೇ ಮಲ್ಲಿಗೆ ಕೃಷಿಯೂ ಈಗ ಆಜ್ರಿಯ ಕನಕಕ್ಕನಿಗೂ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿದೆ.
ಆಜ್ರಿ ಗ್ರಾ.ಪಂ. ವ್ಯಾಪ್ತಿಯ ನಿವಾಸಿ ಕನಕ ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯದಿಂದ ಮಲ್ಲಿಗೆ ಕೃಷಿ ಮಾಡಿ, ಅದರಿಂದ ಉತ್ತಮ ಆದಾಯ ಗಳಿಸುತ್ತಿದ್ದು, ತನ್ನಂತೆ ಇತರರಿಗೂ ಮಾದರಿಯಾಗಿದ್ದಾರೆ.
ಮಾಸಿಕ 10 ಸಾವಿರ ರೂ.
ಕನಕಾ ಅವರು ತನ್ನ ಒಂದೂವರೆ ಎಕರೆ ಜಮೀನಿನ ಪೈಕಿ 12 ಸೆಂಟ್ಸ್ ಜಾಗದಲ್ಲಿ ವೈಜ್ಞಾನಿಕವಾಗಿ ಮಲ್ಲಿಗೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆಯಿಂದ 8 ಸಾವಿರ ರೂ. ಸಹಾಯಧನ ಪಡೆದು 120 ಗಿಡಗಳನ್ನು ಬೆಳೆಸಿದ್ದು, ಅದರಿಂದ ಪ್ರಸ್ತುತ ಮಾಸಿಕ 10 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.
Related Articles
ಇತರ ಕಾಮಗಾರಿಗೂ ನೆರವು
ಇವರು ನರೇಗಾ ಯೋಜನೆಯಡಿ ಮಲ್ಲಿಗೆ ಕೃಷಿಗೆ ಮಾತ್ರವಲ್ಲದೆ, ಅಡಿಕೆ ಕೃಷಿ, ದನದ ಹಟ್ಟಿ, ಕೋಳಿ ಶೆಡ್ಗಳನ್ನು ಮಾಡಲು ಮುಂದಾಗಿದ್ದು, ಗ್ರಾ.ಪಂ.ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸ್ವಾವಲಂಬಿ ಬದುಕಿನ ಕನಸು ಕಂಡ ಬಡ ಮಹಿಳೆ ಕನಕ ಅವರ ಕನಸಿಗೆ ನರೇಗಾ ಯೋಜನೆ ಆಸರೆಯಾಗಿದ್ದು, ಇತರ ಗ್ರಾಮೀಣ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ನರೇಗಾದಿಂದ ಅನುಕೂಲ
ಮಲ್ಲಿಗೆ ಕೃಷಿ ಮಾಡಬೇಕು ಎಂಬ ಬಗ್ಗೆ ನನಗೆ ಮೊದಲಿನಿಂದಲೂ ಅಪೇಕ್ಷೆಯಿತ್ತು. ಆದರೆ ಆರ್ಥಿಕ ಸಮಸ್ಯೆಯಿಂದ ಸಾಧ್ಯ ವಾಗಿರಲಿಲ್ಲ. ಆದರೆ ಈಗ ನರೇಗಾ ಯೋಜನೆಯಿಂದ ಸಹಾಯಧನ ಪಡೆದು ಮಲ್ಲಿಗೆ ಕೃಷಿ ಮಾಡಿದ್ದೇವೆ. ಇದರಿಂದ ಉತ್ತಮ ಆದಾಯ ಬರುತ್ತಿದೆ. ನರೇಗಾದಿಂದ ಬಹಳಷ್ಟು ಅನುಕೂಲವಾಗಿದೆ. – ಕನಕಾ ಆಜ್ರಿ
ಇತರರಿಗೂ ಮಾದರಿ
ನರೇಗಾ ಯೋಜನೆಯನ್ನು ಕನಕ ಅವರು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಬರುವ ಅಡಿಕೆ ಕೃಷಿ, ದನದ ಹಟ್ಟಿ, ಕೋಳಿ ಶೆಡ್ ಗಳಿಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಇವರು, ಇತರ ಮಹಿಳೆಯರಿಗೆ ಮಾದರಿ. – ಗೋಪಾಲ್ ದೇವಾಡಿಗ, ಆಜ್ರಿ ಗ್ರಾ.ಪಂ. ಪಿಡಿಒ