Advertisement

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

11:16 AM Apr 26, 2024 | Team Udayavani |

ಉಡುಪಿ: ಗ್ಯಾರಂಟಿ ಹೆಸರಿನಲ್ಲಿ ಜಾಹೀರಾತು ನೀಡಿ ಬಿಟ್ಟಿ ಪ್ರಚಾರ ಪಡೆಯಲು ವಿಫಲ ಯತ್ನ ನಡೆಸುತ್ತಿರುವ ಕಾಂಗ್ರೆಸ್‌ ರಾಜ್ಯದ ಅಭಿವೃದ್ಧಿಗೆ ತಿಲಾಂಜಲಿಯನ್ನಿತ್ತು ರಾಜ್ಯವನ್ನು ದಿವಾಳಿಯ ಅಂಚಿಗೆ ನೂಕಿದೆ. ದೇಶದ ಭದ್ರತೆ, ಅಭಿವೃದ್ಧಿ ಹಾಗೂ ಆರ್ಥಿಕತೆ ಸದೃಢಗೊಳಿಸಲು ಮೋದಿ ಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಿ ಬೆಂಬಲಿಸಲು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್‌ ಕುಂದಾಪುರ ಮನವಿ ಮಾಡಿದರು.

Advertisement

ಅವರು ಕುಂದಾಪುರ ವಿಧಾನಸಭಾ ಕ್ಷೇತ್ರದ ಬೂತ್‌ ಸಂಖ್ಯೆ 2ರಲ್ಲಿ ಹಾಗೂ ಮದ್ದುಗುಡ್ಡೆ ವಾರ್ಡ್‌ನಲ್ಲಿ ಗುರುವಾರ ಮನೆ ಮನೆಗೆ ತೆರಳಿ ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ ಮತ ಯಾಚನೆ ಮಾಡಿದರು.

ಜನರ ತೆರಿಗೆ ಹಣದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದ ಅಭಿವೃದ್ಧಿಗೆ ಚಿಕ್ಕಾಸನ್ನೂ ನೀಡದ ರಾಜ್ಯ ಕಾಂಗ್ರೆಸ್‌ ಸರಕಾರ ಬೊಕ್ಕಸವನ್ನು ಬರಿದಾಗಿಸಿ ಕೇಂದ್ರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಾ ಚೊಂಬು ಹಿಡಿದು ಹೆಚ್ಚುವರಿ ಅನುದಾನ ಯಾಚಿಸುತ್ತಿರು ವುದು ವಿಷಾದನೀಯ. ಕಾಂಗ್ರೆಸ್‌ ಸರಕಾರ ಗ್ಯಾರಂಟಿಗಳ ಜತೆಗೆ ರಾಜ್ಯದ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನದ ವಿವರವನ್ನೂ ನೀಡಲಿ ಎಂದರು.

“ಮೂರು ತಲೆಮಾರಿಗೆ ಆಗುವಷ್ಟು ಕೂಡಿಟ್ಟಿದ್ದೇವೆ’ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಹಿರಿಯ ನಾಯಕ ರಮೇಶ್‌ ಕುಮಾರ್‌ ಅವರು ಪ್ರಧಾನಿ ಮೋದಿಯವರನ್ನು ಶನಿ ಎಂದು ಕರೆದಿದ್ದಾರೆ. ಭ್ರಷ್ಟಾಚಾರಿಗಳ ಪಾಲಿಗೆ ಮೋದಿ ಶನಿಯಾಗಿಯೇ ಕಾಡುವುದು ಸಹಜ ಎಂದು ತಿಳಿಸಿದರು.

ರಾಹುಲ್‌ ಹೆಸರಲ್ಲೇ ಮತಯಾಚಿಸಲಿ: ಬಿಜೆಪಿಗರು ಪ್ರಧಾನಿ ಮೋದಿ ಹೆಸರಲ್ಲಿ ಮತ ಯಾಚಿಸುತ್ತಾರೆ ಎಂದಿ ರುವ ಕಾಂಗ್ರೆಸ್‌ ಅಭ್ಯರ್ಥಿ ಕೂಡ ಸ್ವಯಂ ತಮ್ಮ ನಾಯಕ ರಾಹುಲ್‌ ಗಾಂಧಿ ಹೆಸರಲ್ಲೇ ಮತ ಯಾಚಿಸುವುದು ಉತ್ತಮ. ಮೋದಿ ಮಂಗಳೂರಿಗೆ ಆಗಮಿಸಿ ನಡೆಸಿದ ರೋಡ್‌ ಶೋ ಕಾರ್ಯಕರ್ತರು ಮತ್ತು ಮತದಾರರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದರು.

Advertisement

ಎ. 26ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಗರಿಷ್ಠ ಪ್ರಮಾಣದಲ್ಲಿ ಬಿಜೆಪಿ ಪರ ಮತ ಚಲಾಯಿಸುವ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕುಂದಾಪುರ ಪುರಸಭಾ ಸದಸ್ಯ ರಾಘವೇಂದ್ರ ಖಾರ್ವಿ, ರಮೇಶ್‌ ಪೂಜಾರಿ, ನಾರಾಯಣ ಖಾರ್ವಿ, ಸತೀಶ್‌ ಮೇಸ್ತ, ದಶಮಿ ರಾಘವೇಂದ್ರ ಖಾರ್ವಿ, ಮಣಿರಾಜ ಖಾರ್ವಿ, ದಯಾನಂದ ಖಾರ್ವಿ, ಸಂತೋಷ ಖಾರ್ವಿ, ಗುರುರಾಜ್‌ ಖಾರ್ವಿ, ಪ್ರಶಾಂತ ಖಾರ್ವಿ, ಪ್ರಕಾಶ ಮೊಗವೀರ, ನಾಗೇಶ ಪೂಜಾರಿ, ಮಂಜುನಾಥ ಪೂಜಾರಿ, ರಾಜಕುಮಾರ ಮೇಸ್ತ, ಪವನ ಮದ್ದುಗುಡ್ಡೆ ಹಾಜರಿದ್ದರು.

ಮೋದಿ ಬೆಂಬಲಿಸಲು ಬಿಜೆಪಿ ಗೆಲ್ಲಿಸಿ: ಕೋಟ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 10 ವರ್ಷಗಳಲ್ಲಿ ನೂರಾರು ಜನಪರ ಯೋಜನೆಗಳ ಸಹಿತ 40 ಕೋಟಿ ಜನತೆಯನ್ನು ಬಡತನದ ರೇಖೆಯಿಂದ ಮೇಲೆತ್ತಿದ್ದಾರೆ. ಜತೆಗೆ 70 ಕೋಟಿ ಜನರು ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ ಕೇಂದ್ರ ಸರಕಾರದ ಯೋಜನೆಗಳ ಫಲಗಳನ್ನು ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆಗೆ ಮಾಡುವ ಕ್ರಾಂತಿಕಾರಿ ಬದಲಾವಣೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗಿದೆ.

ಭಾರತವನ್ನು ವಿಶ್ವದ ಮುಂದುವರಿದ ದೇಶಗಳ ಯಾದಿಯಲ್ಲಿ 5ನೇ ಸ್ಥಾನಕ್ಕೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ 5 ವರ್ಷಗಳಲ್ಲಿ ಭಾರತವನ್ನು ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ದಿಕ್ಕಿನಲ್ಲಿ ಶ್ರಮಿಸಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಜತೆಗೆ ಗ್ರಾಮ ಪಂಚಾಯತ್‌ ಮಟ್ಟದಿಂದ ವಿಧಾನ ಪರಿಷತ್‌ ವಿಪಕ್ಷ ನಾಯಕ ಹಾಗೂ ಸಚಿವನಾಗಿ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಭ್ರಷ್ಟಾಚಾರ ರಹಿತವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರೀ ಅಂತರದಿಂದ ಗೆಲ್ಲಿಸಿ ಆಶೀರ್ವದಿಸಬೇಕು ಎಂದು ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next