Advertisement

Janaspandana: ಕೆಳಹಂತದಲ್ಲಿ ಬಾಕಿಯಾದ ಸಮಸ್ಯೆ ರಾಜಧಾನಿಯಲ್ಲಿ ಇತ್ಯರ್ಥ

10:24 PM Feb 08, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ತರೇಹವಾರಿ ದೂರುಗಳು ವ್ಯಕ್ತವಾಗಿದ್ದು, ಕೆಳ ಹಂತದಲ್ಲಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬಾಕಿಯಾದ ಸಮಸ್ಯೆಗಳೇ ಈಗ ರಾಜಧಾನಿಯಲ್ಲಿ ಇತ್ಯರ್ಥ ಬಯಸುವಂತಾಗಿದೆ.

Advertisement

ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ಇತ್ಯರ್ಥವಾಗಬೇಕಿದ್ದ ಸಮಸ್ಯೆಗಳು ಇನ್ನೂ ಬಾಕಿ ಇರುವ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಕೆಡಿಪಿ ಸಭೆಯಲ್ಲಿ ಪದೇಪದೆ ಎಚ್ಚರಿಕೆ ನೀಡಿದ ಬಳಿಕವೂ ದೂರುಗಳು ಇತ್ಯರ್ಥವಾಗದೇ ಇರುವುದರಿಂದ ಸಿದ್ದರಾಮಯ್ಯ ಗರಂ ಆದರು ಎನ್ನಲಾಗಿದೆ.

ಕೆಲವು ಪ್ರಕರಣಗಳಂತೂ ಐದಾರು ವರ್ಷ ಹಿಂದಿನದ್ದಾಗಿದೆ. ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲೇ ಇಂಥ ಪ್ರಕರಣಗಳು ಹೆಚ್ಚಿವೆ. ಇಂಥ ಪ್ರಕರಣಗಳನ್ನು ವಿಶೇಷ ಆದ್ಯತೆಯಿಂದ ಪರಿಗಣಿಸಬೇಕು. ಒಂದು ವೇಳೆ ಕಾನೂನು ರೀತ್ಯ ಸಮಸ್ಯೆ ಇತ್ಯರ್ಥ ಸಾಧ್ಯವಾಗದೇ ಇದ್ದರೆ, ಯಾಕೆ ಸಾಧ್ಯವಿಲ್ಲ ಎಂದು ಕಡ್ಡಾಯ ಹಿಂಬರಹ ನೀಡುವಂತೆಯೂ ಅವರು ಸೂಚನೆ ನೀಡಿದ್ದಾರೆ.

ಜನಸ್ಪಂದನದಲ್ಲಿ ಕಂಡು ಬಂದ ದೃಶ್ಯಾವಳಿಗಳು
ವರ್ಗಾವಣೆ ಕೋರಿ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದ ಶಿಕ್ಷಕಿಯೊಬ್ಬರು ಸಿಎಂ ಎದುರು ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಳ್ಳಲು ಶಿಕ್ಷಕಿ ಸುಷ್ಮಾ ವರ್ಗಾವಣೆ ಕೋರಿದ್ದರು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ವರ್ಗಾವಣೆ ಕೋರಿದ್ದಾರೆ.

ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಬಂದವರೇ ಹೆಚ್ಚು
ಗೃಹ ಲಕ್ಷ್ಮಿ ಯೋಜನೆಯ ಹಣ ತಮಗೆ ತಲುಪಿಲ್ಲ ಎಂದು ಹೆಚ್ಚಿನ ಮಹಿಳೆಯರು ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶ್ರೀಮಂತ ಕುಟುಂಬದಿಂದ ಬಂದ ಕೆಲವು ಮಹಿಳೆಯರೂ ಈ ಬಗ್ಗೆ ದೂರು ನೀಡಿದ್ದು ಕುತೂಹಲವಾಗಿತ್ತು.

Advertisement

ತಿಂಗಳೊಳಗೆ ಅರ್ಜಿ ವಿಲೇವಾರಿ ಮಾಡಲು ಮುಖ್ಯಮಂತ್ರಿ ಸೂಚನೆ
ಬೆಂಗಳೂರು: ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ತಿಂಗಳೊಳಗೆ ವಿಲೇವಾರಿ ಮಾಡಬೇಕು; ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇದೇ ಮೊದಲ ಬಾರಿಗೆ ವಿಧಾನಸೌಧದ ಮುಂದೆ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ ಚುರುಕು ಗೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸ ಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಸರಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫ‌ಲಾನುಭವಿಗಳಿಗೆ ತಲುಪಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವಾಗುವುದು ಅಭಿವೃದ್ಧಿ ಕೆಲಸವಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಅಭಿವೃದ್ಧಿ, ಸಮಾನತೆ, ಸಾಮಾಜಿಕ ನ್ಯಾಯ ಅಂದರೆ ಗೊತ್ತಿಲ್ಲದ ವಿಪಕ್ಷದವರು ಜನಪರ ಕಾರ್ಯಕ್ರಮಗಳ ಬಗ್ಗೆ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಆರ್ಥಿಕ ವಾಗಿ ದಿವಾಳಿಯಾಗುತ್ತದೆ ಎಂದು ಬಿಜೆಪಿ ಮೊದಲು ಟೀಕಿಸಿತ್ತು. ಈಗ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲುತ್ತವೆ ಎನ್ನುತ್ತಿದೆ ಎಂದರು.

ನ. 27ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ.98ರಷ್ಟು ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಸರಕಾರವನ್ನು ಜನರ ಬಳಿಗೆ ಒಯ್ಯಬೇಕೆಂಬುದು ಸರಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರಕಾರ ಪರಿಹಾರ ಒದಗಿಸಲಿದೆ. ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು ಎಂದರು.

ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಿವರಾಜ ತಂಗಡಗಿ, ಡಾ| ಎಂ.ಸಿ.ಸುಧಾಕರ್‌, ಬೈರತಿ ಸುರೇಶ್‌, ದಿನೇಶ್‌ ಗುಂಡೂರಾವ್‌, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್‌, ನಜೀರ್‌ ಅಹ್ಮದ್‌, ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು.

ಇವುಗಳಿಗೆ ಯಾವುದೇ ಅರ್ಜಿ ಬಂದಿಲ್ಲ
ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ, ಮುಖ್ಯ ಕಾರ್ಯದರ್ಶಿಗಳ ಕಾರ್ಯಾಲಯ, ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಇ- ಆಡಳಿತ), ಮುಖ್ಯಮಂತ್ರಿಗಳ ಕಾರ್ಯಾಲಯ, ಸಂಸದೀಯ ವ್ಯವಹಾರಗಳ ಇಲಾಖೆಯಂಥ ಐದು ಇಲಾಖೆಗಳಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ.

ಕಾವೇರಿ ನೀರು ಬಳಸದಿದ್ದರೂ 18 ಸಾವಿರ ರೂ. ಬಿಲ್‌ !
ನಾನು ಕಾವೇರಿ ನೀರನ್ನು ಬಳಸಿಯೇ ಇಲ್ಲ, ಆದರೂ ನನಗೆ 18 ಸಾವಿರ ರೂ. ಬಿಲ್‌ ನೀಡಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಿದ್ದರಾಮಯ್ಯ ಅವರನ್ನು ತಬ್ಬಿಬ್ಬುಗೊಳಿಸಿತು. ಬೆಂಗಳೂರಿನ ಯಲಹಂಕ ನಿವಾಸಿ ಶಿವಶಂಕರ್‌ ಜಲಮಂಡಳಿ ಬಿಲ್‌ ಹಾಗೂ ಮೀಟರ್‌ ಬೋರ್ಡ್‌ ಸಮೇತ ಸಿಎಂಗೆ ಮನವಿ ಸಲ್ಲಿಸಿದರು. ನಾನು ಇಲ್ಲಿಯವರೆಗೆ ಮನೆಯಲ್ಲಿ ಕಾವೇರಿ ನೀರನ್ನು ಬಳಸಿಲ್ಲ .ವಾಟರ್‌ ಮೀಟರ್‌ ಕೂಡ ಹಾಕಿಲ್ಲ. ಆದರೂ ಬಿಲ್‌ ಬಂದಿದೆ. ಮಾಡದ ತಪ್ಪಿಗೆ ದಂಡ ಕಟ್ಟು ಎಂದರೆ ಹೇಗೆ ಸ್ವಾಮಿ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಹೈಸ್ಕೂಲ್‌ಗಾಗಿ ಅಗಡಿಯಿಂದ ಆಗಮಿಸಿದ ವಿದ್ಯಾರ್ಥಿಗಳು
ತಮ್ಮ ಊರಿಗೆ ಹೈಸ್ಕೂಲ್‌ ಮಂಜೂರು ಮಾಡಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯ ಅಗಡಿ ಗ್ರಾಮದ‌ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮದಲ್ಲಿ ಬೇಡಿಕೆ ಸಲ್ಲಿಸಿದರು. ಸುಮಾರು 50 ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯತ್‌ ಸದಸ್ಯರು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಸರತಿ ಸಾಲಿನಲ್ಲಿ ನಿಂತು ದೂರು ನೀಡಿದರು. ಅಗಡಿ ಗ್ರಾಮದಲ್ಲಿ 8ನೇ ತರಗತಿಯವರೆಗೆ ಶಾಲೆ ಇದೆ. ಸುಮಾರು 70 ಮಕ್ಕಳು 9 ಹಾಗೂ 10ನೇ ತರಗತಿಯ ಅಧ್ಯಯನಕ್ಕಾಗಿ ಪ್ರತಿ ದಿನ ಸುಮಾರು 10 ಕಿ.ಮೀ.ಪ್ರಯಾಣ ಬೆಳೆಸಬೇಕಾಗಿದೆ. ಪ್ರತಿ ನಿತ್ಯ ಇಷ್ಟು ದೂರ ಬಸ್ಸಿನಲ್ಲಿ ಪ್ರಯಾಣಿಸಿ ಮನೆಗೆ ಬರುವಷ್ಟರಲ್ಲಿ ಮಕ್ಕಳು ಹೈರಾಣಾಗುತ್ತಾರೆ. ಈ ಹಿನ್ನೆಲೆಯಲ್ಲಿ ನಾನು 1ಎಕ್ರೆ ಭೂಮಿಯನ್ನು ಶಾಲೆಗೆ ದಾನ ನೀಡಲು ಸಿದ್ಧನಿದ್ದೇನೆ. ಎರಡು ವರ್ಷದಿಂದ ಈ ಬೇಡಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಸದಸ್ಯ ಅರವಿಂದ ಸಂಗಣ್ಣನವರ್‌ “ಉದಯವಾಣಿ’ಗೆ ತಿಳಿಸಿದರು.

ಧಿಕ್ಕಾರ ವರ್ಸಸ್‌ ಜೈಕಾರ!
ಜನಸ್ಪಂದನದಲ್ಲಿ ಅರ್ಜಿ ಸ್ವೀಕಾರ ತಡವಾಗಿದ್ದಕ್ಕೆ ಸಿಬಂದಿ ವರ್ತನೆಯಿಂದ ಬೇಸರಗೊಂಡು ವ್ಯಕ್ತಿಯೊಬ್ಬರು ಧಿಕ್ಕಾರ ಕೂಗಿದ ಘಟನೆ ನಡೆಯಿತು. ಇದರ ಬೆನ್ನಲ್ಲೇ ಧಿಕ್ಕಾರಕ್ಕೆ ಪ್ರತಿಯಾಗಿ ಜೈಕಾರ ಹಾಕಿದ ಪ್ರಸಂಗ ನಡೆಯಿತು. ಕಾರ್ಯಕ್ರಮದಲ್ಲಿ ಇಲಾಖೆಯೊಂದಕ್ಕೆ ಅರ್ಜಿ ಹಿಡಿದುಕೊಂಡು ಬಂದಿದ್ದ ವ್ಯಕ್ತಿಯೊಬ್ಬರು, ಅದನ್ನು ಸ್ವೀಕರಿಸಲು ವಿಳಂಬ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ “ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಿಕ್ಕಾರ’ ಅಂತ ಘೋಷಣೆ ಕೂಗಿದ. ಕೂಡಲೇ ಆ ವ್ಯಕ್ತಿಯನ್ನು ಹೊರಗಡೆ ಕರೆದುಕೊಂಡು ಹೋಗುವಂತೆ ಅಲ್ಲಿದ್ದವರು ಆಗ್ರಹಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಆ ವ್ಯಕ್ತಿಯನ್ನು ಹೊರಗೆ ಕರೆದೊಯ್ದರು. ಬೆನ್ನಲ್ಲೇ ಅಲ್ಲಿ ಅರ್ಜಿ ಸಲ್ಲಿಸಲು ಬಂದಿದ್ದ ಕೆಲವರು ಸಿದ್ದರಾಮಯ್ಯನವರಿಗೆ ಜೈಕಾರ ಹಾಕಿದರು.

ದಯಾ ಮರಣ ನೀಡಿ ಎಂದ ಶ್ರೀರಂಗ‌ಪಟ್ಟಣದ ಮಹಿಳೆ
ನನ್ನ ಗಂಡ ಕೋವಿಡ್‌ನಿಂದ 3 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಜೀವನ ನಡೆಸಲು ಕಷ್ಟವಾಗುತ್ತಿದೆ. ಕೆಲಸ ಅರಸಿ ಹೋದ ಕಡೆಯಲೆಲ್ಲ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿದೆ. ಬದುಕೇ ಅಸಹನೀಯವಾಗಿದೆ. ನನಗೆ ದಯಾಮರಣ ಕೊಡಿ ಎಂದು ಶ್ರೀರಂಗಪಟ್ಟಣದ ಮಹಿಳೆಯೊಬ್ಬರು ಜನಸ್ಪಂದನ ಕಾರ್ಯಕ್ರಮದಲ್ಲಿ ನೋವು ತೋಡಿಕೊಂಡರು. ನಾನು ವಿಕಲಚೇತನ ಮಹಿಳೆ. ಯಾರೂ ಕೆಲಸ ಕೊಡುತ್ತಿಲ್ಲ. ನನ್ನ ಮಗನ ಓದಿಗಾಗಿ ಸಹಾಯಬೇಕಿದೆ. ಕೆಲಸ ಕೊಡುವುದಾಗಿ ಮೊಬೈಲ್‌ ನಂಬರ್‌ ತೆಗೆದುಕೊಂಡು ಒಂದು ದಿನ ಜತೆಗಿರಲು ಕರೆಯುತ್ತಾರೆ. ಹೀಗಾಗಿ ನಮಗೆ ದಯಮರಣ ಕೊಡಿ. ನಾನು ಸತ್ತು ಹೋದರೆ ನನ್ನ ಮಗನನ್ನು ನೋಡಿಕೊಳ್ಳುವುದು ಯಾರು? ಸರಕಾರ ಜವಾಬ್ದಾರಿ ತೆಗೆದುಕೊಳ್ಳಲಿ ಎಂದು ಕಣ್ಣೀರು ಹಾಕಿದರು.

ಮಗನ ಕೆಲಸ ಖಾಯಂಗೊಳಿಸಲು ಸಿಎಂ ಕಾಲಿಗೆ ಬಿದ್ದ ಮಹಿಳೆ
“ನನ್ನ ಮಗನಿಗೆ ಒಂದು ಕಣ್ಣು ಕಾಣಿಸುತ್ತಿಲ್ಲ, ಅವನ ಕೆಲಸವನ್ನು ಖಾಯಂಗೊಳಿಸಿ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಅಜ್ಜಿಯೊಬ್ಬರು ಕಾಲಿಗೆ ಬಿದ್ದ ಪ್ರಸಂಗ ನಡೆಯಿತು. ಮೈಸೂರು ಸರಕಾರಿ ಆಯುರ್ವೇದ ಕಾಲೇಜಿನ ಎನ್‌. ರಾಜೇಶ್‌ ಅವರ ಕೆಲಸ ಖಾಯಂಗೊಳಿಸುವಂತೆ ಅವರ ಇಳಿವಯಸ್ಸಿನ ತಾಯಿ ಮನವಿ ಮಾಡಿದರು. ಜನಸ್ಪಂದನದ ವೇದಿಕೆಗೆ ಆಗಮಿಸಿದ ಅಜ್ಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next