Advertisement

ರಸ್ತೆ ಅಪಘಾತದಲ್ಲಿ ಇಬ್ಬರು ಸ್ನೇಹಿತರ ಸಾವಿಗೆ ಕಾರಣನಾದ ಚಾಲಕನಿಗೆ ಜೈಲು ಶಿಕ್ಷೆ

07:36 PM Feb 17, 2022 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿ ಇಬ್ಬರು ಸ್ನೇಹಿತರ ಸಾವಿಗೆ ಕಾರಣನಾದ ಚಾಲಕನಿಗೆ 9 ವರ್ಷಗಳ ಬಳಿಕ ಕೋರ್ಟ್‌ ಆರು ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

Advertisement

ಪರಪ್ಪನ ಅಗ್ರಹಾರ ನಿವಾಸಿ ಭಾನುಕುಮಾರ್‌(24) ಶಿಕ್ಷೆಗೊಳಗಾದವ. ಅಪರಾಧಿ 2013ರ ಮಾ.4ರಂದು ಕಂಠಪೂರ್ತಿ ಮದ್ಯ ಸೇವಿಸಿ ಇನೋವಾ ಕಾರಿನಲ್ಲಿ ಸ್ನೇಹಿತರಾದ ವಿಶ್ವನಾಥ್‌(22), ಸಂತೋಷ್‌(20), ನಿಖೀಲ್‌ ಕುಮಾರ್‌(23) ಮತ್ತು ಮಣಿಕಂಠ(23) ಎಂಬವರ ಜತೆ ನೈಸ್‌ ರಸ್ತೆಯಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಿಂಡ ಬನ್ನೇರುಘಟ್ಟ ಕಡೆ ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಡು ಹೋಗುತ್ತಿದ್ದ. ವಿಟ್ಟಸಂದ್ರ ಮೇಲು ಸೇತುವೆ ಬಳಿ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಎದುರು ರಸ್ತೆಗೆ ಹೋಗಿ ಬಿದ್ದಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವದಿಂದ ವಿಶ್ವನಾಥ್‌ ಮತ್ತು ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ನಿಖೀಲ್‌ ಕುಮಾರ್‌ ಮತ್ತು ಮಣಿಕಂಠ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು.

ಈ ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌ ಬಿ.ಕೆ.ಶೇಖರ್‌ ತನಿಖೆ ನಡೆಸಿ ಭಾನುಕುಮಾರ್‌ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಸುದೀರ್ಘ‌ ವಿಚಾರಣೆ ನಡೆಸಿದ ಜ.31ರಂದು 7ನೇ ಎಸಿಎಂಎಂ ಕೋರ್ಟ್‌ ಆರೋಪಿಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರು ವರ್ಷ ಆರು ತಿಂಗಳು ಸಾಧಾರಣ ಜೈಲು ಶಿಕ್ಷೆ ಮತ್ತು 1,04,000 ರೂ. ದಂಡ ವಿಧಿಸಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next