Advertisement

ಅಕ್ರಮ ಮರಳು ತಡೆಗೆ ಜಾಗೃತದಳ

05:34 PM May 31, 2018 | Team Udayavani |

ಬಾಗಲಕೋಟೆ: ಜಿಲ್ಲಾದ್ಯಂತ ಅಕ್ರಮ ಮರಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಜಾಗೃತದಳ ತಂಡ ರಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ ತಿಳಿಸಿದರು.

Advertisement

ಜಿಲ್ಲಾಧಿ ಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಟಾಸ್ಕ್ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಜನ ಅ ಧಿಕಾರಿಗಳು ಹಾಗೂ ಇಬ್ಬರು ಹೋಮಗಾರ್ಡ್ಸ್ಗಳನ್ನೊಳಗೊಂಡ ಜಾಗೃತದಳ ತಂಡವನ್ನು ನೇಮಕ ಮಾಡಲಾಗಿದ್ದು, ಈ ತಂಡಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಜಾಗೃತ ತಂಡದವರು ನಿರ್ವಹಿಸುವ ಕಾರ್ಯದ ಬಗ್ಗೆ ನಿಗಾ ವಹಿಸಲು ಅವರ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೇ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ದೂರು ಸಲ್ಲಿಸಲು ದಿನ 24 ಗಂಟೆಗಳ ಕಾಲ ದೂರು ನಿರ್ವಹಣಾ ಕೇಂದ್ರ ತೆರೆಯುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜ ಅವರಿಗೆ ಸೂಚಿಸಿದರು. ಈ ದೂರು ನಿರ್ವಹಣಾ ಕೇಂದ್ರಕ್ಕೆ ಬರುವ ದೂರುಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವ ಕೆಲಸವಾಗಬೇಕು. ದೂರು ನಿರ್ವಹಣಾ ಕೇಂದ್ರದಲ್ಲಿ ಉಚಿತ ದೂರವಾಣಿ ಸೇವೆ ಒದಗಿಸುವುದರ ಜೊತೆಗೆ ಪ್ರತಿಯೊಂದು ಕರೆಗಳ ಧ್ವನಿ ಸಂಗ್ರಹಿಸುವ ಕೆಲಸವಾಗಬೇಕು. ಜೊತೆಗೆ ಕಂಪ್ಯೂಟರ್‌, ಫ್ಯಾಕ್ಸ್‌ ಹಾಗೂ ಸಿಬ್ಬಂದಿಗಳ ನೇಮಿಸಬೇಕು. ಈ ಕೇಂದ್ರದಲ್ಲಿ ಎರಡು ಸಿಪ್ಟ್ಗಳಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಈ ಕಾರ್ಯ ಒಂದು ವಾರದಲ್ಲಿ ಪ್ರಾರಂಭಿಸುವಂತೆ ಸೂಚಿಸಲಾಯಿತು. ಅಕ್ರಮ ಮರಳು ಸಾಗಾಣಿಕೆ
ಮಾಡುವವರನ್ನು ಪತ್ತೆ ಹಚ್ಚಿ ಮರಳು ಸಾಗಿಸುತ್ತಿರುವ ವಿರುದ್ಧ ಕೇಸ್‌ ಕೂಡ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 ವಶಪಡಿಸಿಕೊಂಡ ಮರಳನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ನೀಡಬೇಕು. ಲೋಕೋಪಯೋಗಿ ಇಲಾಖೆಯವರು ಜಪ್ತಿ ಮಾಡಿದ ಮರಳನ್ನು ಒಂದು ಕಡೆ ಸಂಗ್ರಹಿಸಿ ಮರಳಿನ ಗುಣಮಟ್ಟ ಪರೀಕ್ಷಿಸಿ ಎಸ್‌.ಆರ್‌ ದರದಲ್ಲಿ ಮಾರಾಟ ಮಾಡಬೇಕು. ಈಗಾಗಲೇ ಸಂಗ್ರಹಿಸಿದ್ದ ಮರಳಿನ ಮಾಹಿತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ನೀಡಿ ಎಸ್‌.ಆರ್‌ ದರದಲ್ಲಿ ಮಾರಾಟವಾಗದಿದ್ದಲ್ಲಿ ಸರಕಾರಕ್ಕೆ ವರದಿ ನೀಡಲು ಸಭೆಯಲ್ಲಿ ತಿಳಿಸಲಾಯಿತು. 

ಅಲ್ಲದೆ ಹಿಂದಿನ ಸಭೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅನುಪಾಲನಾ ವರದಿ ನೀಡದ ಅಧಿ ಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ ರಜಾ ಮೇಲೆ ತೆರಳಿದ ಅಧಿ ಕಾರಿಗಳಿಗೂ ಶೋಕಾಸ್‌ ನೋಟಿಸ್‌ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು. ಏಕ ಗವಾಕ್ಷಿ ಪದ್ಧತಿ ಅಡಿಯಲ್ಲಿ ಕಲ್ಲು ಗಣಿ ಗುತ್ತಿಗೆ ಮಂಜೂರಾತಿಗಾಗಿ ಬಂದ 10 ಅರ್ಜಿಗಳ ಪರಿಶೀಲಿಸಲಾಗಿ ಅರಣ್ಯ ಇಲಾಖೆಯ ಎನ್‌ಒಸಿ ಇಲ್ಲದ ಕಾರಣ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಅರಣ್ಯ ಇಲಾಖೆಯಿಂದ ಎನ್‌ಒಸಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ಸಭೆಯಲ್ಲಿ ತಿಳಿಸಲಾಯಿತು.

Advertisement

ಕಲ್ಲು ಪುಡಿ ಮಾಡುವ ಘಟಕಗಳು ಕಡ್ಡಾಯವಾಗಿ ಸಿ.ಎಫ್‌.ಒ ನವೀಕರಣ ಮಾಡಿಕೊಂಡಿರುವ ಬಗ್ಗೆ ಹಾಗೂ ಸುರಕ್ಷಿತ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಹೊಸದಾಗಿ ಮತ್ತು ನವೀಕರಣಕ್ಕೆ ಕಲ್ಲುಪುಡಿ ಮಾಡುವ ಘಟಕಗಳ ಸ್ಥಾಪನೆಗೆ ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು 45 ಕಲ್ಲು ಪುಡಿ ಮಾಡುವ ಘಟಕಗಳಿದ್ದು, 39 ಘಟಕಗಳು ಚಾಲ್ತಿಯಲ್ಲಿದ್ದು, ಅದರಲ್ಲಿ 16 ಘಟಕಗಳನ್ನು ಮುಚ್ಚಲು ಆದೇಶಿಸಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು. ತಹಶೀಲ್ದಾರರ ಜೊತೆ ಜಂಟಿಯಾಗಿ ಘಟಕಗಳಿಗೆ ಭೇಟಿ ಮಾಡಿ ತಕ್ಷಣ ಬಂದ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. 

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಸಿ.ವಂಶಿಕೃಷ್ಣ, ಜಿಪಂ ಸಿಇಒ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿಗಳಾದ ಎಚ್‌.ಜಯಾ, ಎಂ.ಮಾರುತಿ ಸೇರಿದಂತೆ ಸಮಿತಿಯ ಸದಸ್ಯರಾದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಇದ್ದರು.

ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟುವಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಬಂದ ದೂರುಗಳ ಬಗ್ಗೆ ಕ್ರಮಕೈಗೊಳ್ಳದಿರುವುದು ಹಾಗೂ ದೂರುಗಳ ದಾಖಲಾತಿ ಬಗ್ಗೆ ಸಹಿಯಲ್ಲಿ ನಮೂದಿಸದೇ ಇರುವದನ್ನು ಕಂಡ ಜಿಲ್ಲಾ ಧಿಕಾರಿ ಕೆ.ಜಿ. ಶಾಂತಾರಾಮ್‌ ಅವರಿಗೆ ಶೋಕಾಸ್‌ ನೋಟಿಸ್‌ ನೀಡಲು ಸೂಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next