Advertisement

ಗಡಿಭಾಗದಲ್ಲಿ ಪರಾರಿಯಾಗಲು ಸುಲಭ: ತಪಾಸಣೆ ಇಲ್ಲ, ಸಿಸಿ ಕೆಮರಾ ಇಲ್ಲ

01:29 AM Jul 28, 2022 | Team Udayavani |

ಉಳ್ಳಾಲ/ವಿಟ್ಲ/ಸುಳ್ಯ/ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಕೇರಳದ ಗಡಿಗಳಲ್ಲಿ ಇರುವ ಚೆಕ್‌ ಪೋಸ್ಟ್‌ಗಳು ಸುಸಜ್ಜಿತವಾಗದಿರುವುದು ಕರ್ನಾಟಕದಲ್ಲಿ ದುಷ್ಕೃತ್ಯ ಎಸಗಿ ಕೇರಳಕ್ಕೆ ಪರಾರಿಯಾಗುವ ದುಷ್ಕರ್ಮಿಗಳಿಗೆ ಸುಲಭದ ದಾರಿಯಾಗಿದೆ.

Advertisement

ಮಂಗಳವಾರ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯ ಕಾರಿ ಸಮಿತಿ ಸದಸ್ಯ ಪ್ರವೀಣ್‌ ನೆಟ್ಟಾರು ಅವರನ್ನು ಹತ್ಯೆಗೈದ ಕೊಲೆಗಡುಕರೂ ಕೇರಳದಿಂದಲೇ ಬಂದಿದ್ದರು ಎನ್ನಲಾಗಿದೆ.

ದಕ್ಷಿಣ ಕನ್ನಡಕ್ಕೆ ಬಹುಮುಖ್ಯವಾಗಿ ಇರುವ ಕೇರಳದ ಗಡಿಗಳಲ್ಲಿ ಬಂದೋಬಸ್ತ್ ಲೆಕ್ಕಾಚಾರಕ್ಕಷ್ಟೇ. ವಿಟ್ಲದ ಗಡಿ, ಸುಳ್ಯದ ಜಾಲ್ಸೂರು ಗಡಿ, ಉಳ್ಳಾಲದ ತಲಪಾಡಿ ಗಡಿ, ಪುತ್ತೂರಿನ ಈಶ್ವರ ಮಂಗಲದ ಗಡಿಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವಲ್ಲಿ ಎರಡೂ ಸರಕಾರಗಳೂ ಎಡವಿವೆ. ಹಾಗಾಗಿ ಗಡಿಗಳಲ್ಲಿ ಕೊಲೆ, ದರೋಡೆ, ಅಕ್ರಮ ಗೋಸಾಗಾಟ, ಮರಳು, ಮರ ಸಾಗಾಟ ಪ್ರಕರಣಗಳು ನಿರಂತರವಾಗಿ ನಡೆದಿವೆ. ಅದರಲ್ಲೂ ಕೊಲೆಗಡುಕರಿಗಂತೂ ದುಷ್ಕೃತ್ಯಗೈದು ಪರಾರಿಯಾಗಲು ಯಾವುದೇ ಅಡ್ಡಿಯಿಲ್ಲದಂತಾಗಿದೆ.

ವಿಟ್ಲ ಗಡಿ
ವಿಟ್ಲ ಹೋಬಳಿಯಲ್ಲಿ ಕೇರಳ ಮತ್ತು ಕರ್ನಾಟಕವನ್ನು ಸಂಪರ್ಕಿಸಲು ನಾಲ್ಕು ಪ್ರಮುಖ ರಸ್ತೆಗಳಿದ್ದರೆ, ಇನ್ನೂ ಐದಾರು ರಸ್ತೆಗಳು ಅನಧಿಕೃತವಾಗಿವೆ. ಅಡ್ಯನಡ್ಕ ಸಮೀಪದ ಸಾರಡ್ಕದಲ್ಲಿ ಕಡೂರು ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯಿದೆ. ಸಾರಡ್ಕ ಚೆಕ್‌ ಪೋಸ್ಟ್‌ ನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಿಂದ ಕೇರಳಕ್ಕೆ ಸಾಗಲು ಸಾಧ್ಯವಿದೆ. ಚೆಕ್‌ ಪೋಸ್ಟ್‌ ಇದೆ. ಆದರೆ ಸಿಸಿಟಿವಿ ಇಲ್ಲ. ಕನ್ಯಾನದ ಮೂಲಕ ಕರೋಪಾಡಿ ಗ್ರಾಮದಿಂದ ಎರಡು ಪ್ರಮುಖ ರಸ್ತೆ ಕೇರಳ ಸಂಪರ್ಕಿಸುತ್ತದೆ. ಆನೆಕಲ್ಲು ಮೂಲಕ ಮಂಜೇಶ್ವರ ಮತ್ತು ನೆಲ್ಲಿಕಟ್ಟೆ ಮುಗುಳಿ ಮೂಲಕ ಕುರ್ಚಿಪಳ್ಳವನ್ನು ಸಂಪರ್ಕಿಸಬಹುದು. ಪುಣಚ ಗ್ರಾಮದ ಮೂಲಕವೂ ಕೇರಳ ಸಂಪರ್ಕಿಸಬಹುದು.

ಮೂರ್ನಾಲ್ಕು ವರ್ಷಗಳ ಹಿಂದೆ ಕೇರಳದ ತಂಡವೊಂದು ಕನ್ಯಾನಕ್ಕೆ ಆಗಮಿಸಿ ಆಸಿಫ್ ನನ್ನು ಕೊಲೆ ಮಾಡಿತ್ತು.

Advertisement

ಸಾಲೆತ್ತೂರು ಕಟ್ಟತ್ತಿಲದಲ್ಲಿ ವಿಟ್ಲ ಠಾಣಾಧಿಕಾರಿ ಮತ್ತು ಪೊಲೀಸರ ಮೇಲೆ ಗುಂಡು ಹಾರಾಟ ನಡೆಸಿದ ಆರೋಪಿಗಳೂ ಕೇರಳಕ್ಕೆ ತೆರಳಿ ಅಡಗಿದ್ದರು. ಕರ್ನಾಟಕದಲ್ಲಿ ದರೋಡೆಗೆ ಸ್ಕೆಚ್‌ ಹಾಕುತ್ತಿದ್ದ ತಂಡವೊಂದನ್ನು ಕನ್ನಡಿಗರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಕರ್ನಾಟಕದ ಶಾಲೆ ಕಾಲೇಜುಗಳಿಗೆ ಗಾಂಜಾ ಸರಬರಾಜು ಮಾಡುವ ತಂಡದಲ್ಲಿ ಕೇರಳದವರೇ ಹೆಚ್ಚು. ಅದೇ ರೀತಿ ಕರ್ನಾಟಕದ ಅಪರಾಧ ಚಟುವಟಿಕೆ ಮಾಡುವ ತಂಡಗಳೂ ಕೇರಳದಲ್ಲಿ ಕುಕೃತ್ಯ ನಡೆಸಿ ರಾಜ್ಯದಲ್ಲಿ ಅಡಗುವ ಬಗ್ಗೆ ಅನೇಕ ಪ್ರಕರಣಗಳು ದಾಖಲಾಗಿವೆ.

ಉಳ್ಳಾಲ ವರದಿ
ಉಳ್ಳಾಲ, ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್‌ ಬಂದೋ ಬಸ್ತ್ ಏರ್ಪಡಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಚೆಕ್‌ಪಾಯಿಂಟ್‌ ಹಾಕಲಾಗಿದೆ. ಉಳ್ಳಾಲ ವ್ಯಾಪ್ತಿ ಯಲ್ಲಿರುವ ರಾ. ಹೆದ್ದಾರಿ 66ರ ತಲಪಾಡಿ ಮತ್ತು ದೇವಿಪುರದಲ್ಲಿ ವಾಹನಗಳ ಸಂಚಾರ ವಿದ್ದು, ಈ ಭಾಗದಲ್ಲಿ ಪೊಲೀಸರು ಬಂದೋಬಸ್ತ್ ಹಾಕಲಾಗಿದೆ. ಉಳಿದಂತೆ ತೊಕ್ಕೊಟ್ಟು, ಕುತ್ತಾರು ಭಾಗದಲ್ಲಿ ಪೊಲೀಸ್‌ ಚೆಕ್‌ಪಾಯಿಂಟ್‌ಗಳನ್ನು ಹಾಕಲಾಗಿದೆ.

ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಐದು ಪ್ರದೇಶಗಳಲ್ಲಿ ಗಡಿಭಾಗವಿದ್ದು, ಕೇರಳವನ್ನು ಸಂಪರ್ಕಿಸಲಾಗುತ್ತದೆ. ಕೊಣಾಜೆಯ ನಂದರಪಡು³, ನಾರ್ಯ, ಮುದುಂಗಾರುಕಟ್ಟೆ, ತೌಡುಗೋಳಿ, ನೆತ್ತಿಲಪದವು ಬಳಿ ಕೇರಳ ಸಂಪರ್ಕ ರಸ್ತೆಯಿದೆ. ಐದು ಗಡಿ ಪ್ರದೇಶಗಳಲ್ಲಿ ನೆತ್ತಿಲಪದವಿನಲ್ಲಿ ಪೊಲೀಸ್‌ ಬಂದೋಬಸ್ತ್ ಇದ್ದು, ಉಳಿದ ಕಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಟರ್‌ ರೌಂಡ್‌, ಬೈಕ್‌ ಪೆಟ್ರೋಲಿಂಗ್‌, ಪಿಸಿಆರ್‌ ನಿಯೋಜಿಸ ಲಾಗಿದೆ. ಕೊಣಾಜೆ ಠಾಣಾ ಗಡಿಭಾಗವಾಗಿರುವ ಚೇಳೂರು ಮತ್ತು ಗ್ರಾಮ ಚಾವಡಿ, ಮುಡಿಪು ದೇರಳಕಟ್ಟೆಯಲ್ಲಿ ಪೊಲೀಸ್‌ ಚೆಕ್‌ಪಾಯಿಂಟ್‌ ಹಾಕಲಾಗಿದೆ. ಇಲ್ಲಿ ಎಲ್ಲೂ ಸಹ ಸಿಸಿಟಿವಿ ಅಳವಡಿಸಿಲ್ಲ.

ಸಿಸಿಟಿವಿಗಳಿಲ್ಲ
ತಲಪಾಡಿ ಗಡಿಭಾಗದಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿಲ್ಲ. ದೇವಿಪುರದಲ್ಲಿ ಸಿಸಿಟಿವಿ ಇಲ್ಲ. ತಲಪಾಡಿಯಲ್ಲಿ ಟೋಲ್‌ಗೇಟ್‌ನಲ್ಲಿ ಸಿಸಿಟಿವಿಯಿದೆ.

ಒಳರಸ್ತೆಗಳೇ ಅಪರಾಧ
ಚಟುವಟಿಕೆಗೆ ಹೇತು..!
ಪುತ್ತೂರು: ಹತ್ಯಾ ಪ್ರಕರಣದಲ್ಲಿ ಕೇರಳದ ಹಂತಕರು ಭಾಗಿಯಾಗಿರುವ ಶಂಕೆ ಇದ್ದು ಪುತ್ತೂರು ತಾಲೂಕಿನಿಂದ ಕೇರಳಕ್ಕೆ ಸಂಪರ್ಕ ಹೊಂದಿರುವ ಈಶ್ವರಮಂಗಲ, ಪಾಣಾಜೆ ಗಡಿ ರಸ್ತೆ ಹೊರತುಪಡಿಸಿದಂತೆ ಹತ್ತಾರು ಒಳ ರಸ್ತೆಗಳು ಇರುವುದು ಅಪರಾಧ ಚಟುವಟಿಕೆಗಳಿಗೆ ಹೇತುವಾಗಿದೆ.

ಎರಡೂ ಗಡಿ ಪ್ರದೇಶದಲ್ಲಿ ಬಿಗಿ ತಪಾಸಣೆ ಇಲ್ಲದಿರುವ ಅಂಶ ಬೆಳಕಿಗೆ ಬಂದಿದೆ. ಇಲ್ಲಿ ವಾಹನಗಳು ನೇರವಾಗಿ ಸಂಚರಿಸುತ್ತಿದ್ದು ತಪಾಸಣೆ ನಡೆಸಿ ಒಳ ಪ್ರವೇಶಕ್ಕೆ ಅನುಮತಿ ನೀಡುವ ಕಠಿನ ಕ್ರಮ ಇಲ್ಲದಿರುವ ಕಾರಣ ಅಪರಾಧ ಕೃತ್ಯದಲ್ಲಿ ತೊಡಗಿರುವವರು ಮುಕ್ತವಾಗಿ ಸಂಚರಿಸುತ್ತಾರೆ. ಹೀಗಾಗಿ ಹತ್ಯೆ ಪ್ರಕರಣ ನಡೆದಾಗಲೂ ಆರೋಪಿಗಳು ಸುಲಭವಾಗಿ ತಪ್ಪಿಸಲು ಗಡಿ ರಸ್ತೆಗಳೆ ದಾರಿಗಳಾಗಿವೆ.

ಜಾಲ್ಸೂರು: ರಾತ್ರಿ ಹೆಚ್ಚಿನ ತಪಾಸಣೆ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಸಂಪರ್ಕಿಸುವ ಸುಳ್ಯ ಸಮೀಪದ ಜಾಲ್ಸೂರು ಪೇಟೆಯಲ್ಲಿ ಚೆಕ್‌ ಪೋಸ್ಟ್‌ ತಪಾಸಣ ಕೇಂದ್ರವಿದ್ದು, ಹಗಲಿ ಹೊತ್ತಿನಲ್ಲೂ ತಪಾಸಣೆ ನಡೆಸಲಾಗುತ್ತದೆ. ಆದರೆ ರಾತ್ರಿ ಹೆಚ್ಚಿನ ಮಟ್ಟದ ತಪಾಸಣೆ ನಡೆಯುತ್ತದೆ.

ಮುಂದಕ್ಕೆ ಕಾಸರಗೋಡಿನ ಅಡೂರು ಎಂಬಲ್ಲಿಯೂ ಚೆಕ್‌ ಪೋಸ್ಟ್‌ ಕಾರ್ಯಚರಿಸುತ್ತಿದೆ. ಇದು ಕೇರಳ ಪೊಲೀಸ್‌ ಇಲಾಖೆ ಅಡಿಯಲ್ಲಿದೆ. ಇನ್ನು ಸುಳ್ಯದಿಂದ ಕೇರಳ ಭಾಗಕ್ಕೆ ಮಂಡೆಕೋಲು, ಕಲ್ಲಪಳ್ಳಿ ಭಾಗದಿಂದಲೂ ತೆರಳಲು ಸಾಧ್ಯವಿದ್ದು, ಈ ಕಡೆಗಳಲ್ಲಿ ತಪಾಸಣಾ ವ್ಯವಸ್ಥೆ ಇಲ್ಲ ಎನ್ನಲಾಗಿದೆ. ಇಲ್ಲಿ ಹೆಚ್ಚಿನ ವಾಹನ ಸಂಚಾರ ಇರುವುದಿಲ್ಲ. ಆದರೂ ಹೊರ ಜಿಲ್ಲೆಯವರು ಇಲ್ಲಿಂದಲೂ ಸುಳ್ಯ ಭಾಗಕ್ಕೆ ಬರುವ ಸಾಧ್ಯತೆ ಇರುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next