Advertisement

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

12:13 AM Apr 26, 2024 | Team Udayavani |

ಮಂಗಳೂರು: ನೋಟು ಅಮಾನ್ಯಿàಕರಣ ಮಾಡಿದ ಸಂದರ್ಭ ಅದೆಷ್ಟೋ ಮಹಿಳೆಯರು ತಮ್ಮ ಮಂಗಳಸೂತ್ರವನ್ನೇ ಅಡವಿಟ್ಟಿದ್ದರು. ಆಗ ಪ್ರಧಾನಿ ಮೋದಿ ಮೌನವಾಗಿದ್ದು ಯಾಕೆ? ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಪತ್ನಿ ಮಂಗಳಸೂತ್ರವನ್ನು ಮಾರಬೇಕಾದಾಗ ಪ್ರಧಾನಿ ಎಲ್ಲಿದ್ದರು? ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಸಂದರ್ಭ ಏನನ್ನೂ ಹೇಳದ ಪ್ರಧಾನಿ ಅವರು ಈಗ ಮಾಂಗಲ್ಯವನ್ನು ಕಾಂಗ್ರೆಸ್‌ ಕಿತ್ತುಕೊಳ್ಳುತ್ತಿದೆ ಎಂಬ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

Advertisement

ಮಂಗಳೂರಿನ ವಿವಿಧ ಕಡೆಗಳಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಅವರ ಪರವಾಗಿ ಮನೆ ಮನೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಚುನಾವಣ ಭಾಷಣದಲ್ಲಿ ಹೇಳಿದ ಹೇಳಿಕೆಗಳು ಗೌರವಾನ್ವಿತ ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯವಾಗಿರುವುದಿಲ್ಲ ಹಾಗೂ ಅಂತಹ ಕೀಳುಮಟ್ಟದ ಹೇಳಿಕೆಗಳು ದೇಶದಲ್ಲಿರುವ ಧರ್ಮಗಳ ನಡುವೆ, ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತಿರುತ್ತದೆ ಎಂದರು.

ಮೋದಿ ಸರಕಾರ ಮೌನ ಯಾಕೆ?
ಕರ್ನಾಟಕದಲ್ಲಿ ಮುಸಲ್ಮಾನರಿಗೆ ನೀಡಿದ ಮೀಸಲಾತಿಯನ್ನು ಸ್ವಾತಂತ್ರ್ಯ ಪೂರ್ವದ ನಾಲ್ವಡಿ ಕೃಷ್ಣರಾಜ ಒಡೆಯರ್‌ ನೇಮಿಸಿದ ಮಿಲ್ಲರ್‌ ಆಯೋಗದಿಂದ ಹಿಡಿದು ಸ್ವಾತಂತ್ರ್ಯಾ ನಂತರದ ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಆಯೋಗದ ಆದಿಯಾಗಿ ಇಂದಿನ ಎಲ್ಲ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗಗಳು ಎಂದೇ ಕರ್ನಾಟಕದಲ್ಲಿ ಗುರುತಿಸಲಾಗಿದೆ. ಕರ್ನಾಟಕದಲ್ಲಿ ಮುಸಲ್ಮಾನರನ್ನು 2ಬಿ ಕೆಟಗರಿಯಾದ ಹಿಂದುಳಿದ ವರ್ಗದವರೊಂದಿಗೆ ಸೇರಿಸಿಕೊಂಡು 1974ರ ಎಲ್‌.ಜಿ. ಹಾವನೂರು ಅವರ ವರದಿಯಿಂದ ಇದು ಕಳೆದ 3 ದಶಕಗಳಿಂದ ಇದೆ. ಕಳೆದ ಸಲ ಬಿಜೆಪಿ ಸರಕಾರವಿರುವಾಗ ಅಥವಾ ಕಳೆದ 10 ವರ್ಷದಿಂದ ಮೋದಿ ಸರಕಾರ ಇದರ ಬಗ್ಗೆ ಯಾಕೆ ಚಕಾರ ಎತ್ತಲಿಲ್ಲ ಅಥವಾ ಕೋರ್ಟ್‌ನಲ್ಲಿ ಸಹ ಪ್ರಶ್ನೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಮೀಸಲಾತಿ; ಕೇಂದ್ರ ಸರಕಾರ ನಿರಾಕರಣೆ
ಧರ್ಮವನ್ನು ಒಡೆದು ಮತ ಗಳಿಸುವ ಉದ್ದೇಶದಿಂದ ಕಳೆದ ಸಲ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ತಿದ್ದುಪಡಿ ಮಾಡಿದೆ. ಆದರೆ ಸುಪ್ರೀಂ ಕೋರ್ಟ್‌ ಅದನ್ನು ಅನುಷ್ಠಾನ ಮಾಡಲು ಬಿಡಲಿಲ್ಲ. ಕಳೆದ ಬಿಜೆಪಿ ಸರಕಾರ ಎಸ್‌ಸಿ ರಿಸರ್ವೇಶನ್‌ ಶೇ. 15ರಿಂದ 17ರ ವರೆಗೆ, ಎಸ್‌ಟಿಯನ್ನು ಶೇ. 3ರಿಂದ 5ರ ವ ರೆ ಗೆ ಏರಿಸಿತ್ತು. ಆದರೆ ಮಾರ್ಚ್‌ 14ರಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರು ನಮಗೆ ರಾಜ್ಯದಿಂದ ಯಾವುದೇ ರೀತಿಯ ಮನವಿ ಬಂದಿಲ್ಲ ಎಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ ಎಂದರು.

Advertisement

ರಾಜ್ಯದಿಂದ ಗ್ಯಾರಂಟಿ; ಕೇಂದ್ರದಿಂದ ಚೊಂಬು
ಕಳೆದ 10 ವರ್ಷಗಳಿಂದ ಪ್ರಧಾನಿಯವರು ಭರವಸೆಗಳನ್ನು ನೀಡಿ ಯಾವುದನ್ನೂ ನಿರ್ವಹಿಸದೆ ಭಾರತೀಯ ಜನತೆಗೆ ಕೇವಲ ಚೊಂಬು ನೀಡಿದ್ದಾರೆ. ಆದರೆ ಕರ್ನಾಟಕ ಸರಕಾರದ ಗ್ಯಾರಂಟಿಗಳನ್ನು ನಂಬಿದ ಜನರು ಅದರಲ್ಲೂ ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿರುವ ಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿ ಅತ್ಯಧಿಕ ಸ್ಥಾನ ನೀಡುವ ಎಲ್ಲ ಸಾಧ್ಯತೆ ಇದೆ ಎಂದು ಮಂಜುನಾಥ ಭಂಡಾರಿ ಅವರು ಮತಯಾಚನೆಯ ಸಂದರ್ಭ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next