Advertisement

ಚಂಚಲ ಮನಸ್ಸಿಗೆ ಮೂಗುದಾರ ಹಾಕಲೊಂದು ಉಪಾಯ

06:00 AM Jul 24, 2018 | |

ಎಷ್ಟೋ ಹುಡುಗ -ಹುಡುಗಿಯರು ಚಂಚಲ ಮನಸ್ಸಿನಿಂದ ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗದೆ ಕ್ಷಣಿಕವಾಗಿ ಮನಸ್ಸು -ಬುದ್ಧಿ ಏನು ಹೇಳುತ್ತದೆಯೋ ಅದೇ ಸರಿ ಎಂದು ತಿಳಿದು ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನಗಳಲ್ಲಿ ಮದುವೆ ಯಾಗುತ್ತಾರೆ. ನಂತರ ಕೇವಲ ಒಂದೇ ವಾರದಲ್ಲಿ ಅವನು ಸರಿಯಿಲ್ಲ ಅಂತ ಅವಳು, ಅವಳು ಸರಿಯಿಲ್ಲ ಅಂತ ಅವನು ಕಿತ್ತಾಡಿಕೊಂಡು ಬೇರೆಯಾಗುತ್ತಾರೆ. 

Advertisement

ಮನಸ್ಸು ಚಂಚಲ ಅಂತ ಎಲ್ಲರಿಗೂ ಗೊತ್ತು. ಅದು ಅತಿಯಾಗಿ ಚಂಚಲತೆಗೆ ಸಿಕ್ಕಿ ಹಾಕಿಕೊಳ್ಳುವುದು ನಾವು ಪ್ರೌಢಾವಸ್ಥೆಗೆ ಬಂದಾಗ. ಅದರೆ ನಾವು ಮಕ್ಕಳಾಗಿದ್ದಾಗಲೂ ನಮ್ಮಲ್ಲಿ ಚಂಚಲತೆ ಇತ್ತು. ಅದನ್ನು ಗುರುತಿಸಿಕೊಳ್ಳುವಷ್ಟು ಬುದ್ಧಿ ಬೆಳೆದಿರಲಿಲ್ಲವಷ್ಟೆ. ಹಾಗಾಗಿ ಅದು ನಮಗೆ ತಿಳಿಯಲಿಲ್ಲ.

ನಾವು ಯಾವಾಗ ಚಂಚಲಗೊಳ್ಳುತ್ತೇವೆ? ಒಂದಕ್ಕಿಂತ ಹೆಚ್ಚು ಆಯ್ಕೆಗಳು ನಮ್ಮ ಕಣ್ಮುಂದೆ ಇದ್ದಾಗ ಬುದ್ಧಿ ಚಂಚಲವಾಗುತ್ತದೆ. ಯಾವುದು ಸರಿ, ಯಾವುದು ತಪ್ಪು, ಯಾವುದನ್ನು ಸೆಲೆಕ್ಟ್ ಮಾಡಿಕೊಳ್ಳಲಿ, ಯಾವುದು ಚೆನ್ನಾಗಿದೆ ಎಂಬ ಪ್ರಶ್ನೆ ನಮ್ಮನ್ನು ಅತ್ತಿತ್ತ ಹೊಯ್ದಾಡಿಸುತ್ತದೆ. ಕೆಲವು ಸಲ ನಮ್ಮ ಆಯ್ಕೆ ಸರಿಯಾಗಿರುತ್ತದೆ. ಇನ್ನು ಕೆಲವು ಸಲ ನಾವು ಮಾಡಿದ ಆಯ್ಕೆಗೆ ನಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ. 

ಪ್ರೌಢಾವಸ್ಥೆಯಲ್ಲಿ ಎಲ್ಲರೂ ಚಂಚಲತೆಯಲ್ಲೇ ಮುಳುಗಿರುತ್ತಾರೆ. ಒಂದು ಕಡೆ ತಾನು ಚೆನ್ನಾಗಿ ಓದಿ ಒಳ್ಳೆ ಅಂಕ ಪಡೆದರೇನೇ ಭವಿಷ್ಯದಲ್ಲಿ ಗೆಲ್ಲಬಹುದು ಅಂತ ಗೊತ್ತಿದ್ದರೂ ಮುಗ್ಧ ಮನಸ್ಸು ಸ್ವಲ್ಪ ಸುಂದರವಾಗಿ ಕಂಡ ಹುಡುಗಿಯರ ಹಿಂದೆ ಓಡುತ್ತದೆ. ತುಂಬಾ ಹುಡುಗಿಯರನ್ನು ಗುಂಪಲ್ಲಿ ಕಂಡಾಗ ಇಲ್ಲಿರುವವರಲ್ಲಿ ನನಗೆ ಯಾರು ಮ್ಯಾಚ್‌ ಆಗ್ತಾರೆ, ಇವಳಾ, ಅವಳಾ ಎಂದು ಹೊಯ್ದಾಡುತ್ತದೆ. ಅದಕ್ಕೆ ಗೆಳೆಯರು ಒಂದಷ್ಟು ಸಲಹೆ ಕೊಟ್ಟು ಇನ್ನೂ ಗೊಂದಲ ಹುಟ್ಟಿಸುತ್ತಾರೆ. ಇವನಿಗೆ ಇಷ್ಟ ಆದವಳನ್ನು ಇನ್ನೇನು ಬಾಯಿ ಬಿಟ್ಟು ಹೇಳಬೇಕು. ಅಷ್ಟರಲ್ಲಿ ಆ ಕೆಂಪು ಚೂಡಿಯವಳು ಎಷ್ಟು ಚೆನ್ನಾಗಿದ್ದಾಳಲ್ವಾ ಎಂದು ಪಕ್ಕದವನು ರಾಗ ತೆಗೆಯುತ್ತಾನೆ. ಆಗ ಇವನ ಮನಸ್ಸು ಚಕ್ಕನೆ ಜಿಗಿಯುತ್ತದೆ.

ಚಾಂಚಲ್ಯಕ್ಕೆ ವಯಸ್ಸಿಲ್ಲ
ನಾವು ಇಷ್ಟಪಟ್ಟಿದ್ದನ್ನು ನಮ್ಮ ಅಪ್ಪ ಅಮ್ಮ ಸೇರಿದಂತೆ ಇಡೀ ಜಗತ್ತು ಇಷ್ಟಪಡಬೇಕು ಎಂಬುದು ನಮ್ಮ ಆಸೆ ಅಥವಾ ನನಗಿಷ್ಟ ವಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭ್ರಮೆಯೂ ಕೆಲವರಿ ಗಿರುತ್ತದೆ. ಆದರೆ ಎಲ್ಲವೂ ಎಲ್ಲರಿಗೂ ಇಷ್ಟ ಆಗುವುದಿಲ್ಲ. ನಮಗೆ ಜಾಮೂನು ತಿನ್ನಬೇಕು ಅಂತ ಆಸೆಯಾದರೆ ಅಪ್ಪ ಅಮ್ಮನಿಗೆ ಪಾಯಸ ಇಷ್ಟ ಆಗಬಹುದು. ಇಂತಹ ವಿಷಯಗಳಲ್ಲಿ ನಾವು ಎಷ್ಟೋ ಸಲ ನಮ್ಮ ಇಷ್ಟವನ್ನು ಕಡೆಗಣಿಸಿ ಬೇರೆಯವರ ದಾಕ್ಷಿಣ್ಯಕ್ಕೆ ಬಲಿಯಾಗುವುದೂ ಇದೆ. ಯೌವನಾವಸ್ಥೆಗೆ ಬಂದಾಗ ಹೆಚ್ಚು ಚಂಚಲತೆ ಕಾಡುವುದು ಪ್ರೀತಿಯ ವಿಷಯದಲ್ಲಿ. ಚೆನ್ನಾಗಿರುವ ಯಾರೇ ಕಂಡರೂ ಅವ ರನ್ನು ಪ್ರೀತಿಸಬೇಕು ಅನ್ನಿಸುತ್ತದೆ. ಇನ್ನು ಕೆಲವರು ಮದುವೆ ಯಾಗುವ ತನಕ ಸರಿಯಾಗೇ ಇರುತ್ತಾರೆ, ಮದುವೆಯಾದ 
ನಂತರ ಚಂಚಲರಾಗುತ್ತಾರೆ. ಬಹುಶಃ ಚಂಚಲತೆಗೆ ವಯಸ್ಸಿಲ್ಲ. ಏಕೆಂದರೆ ನಮ್ಮನ್ನು ಸೃಷ್ಟಿಸಿದ ಪ್ರಕೃತಿಯೇ ಚಂಚಲ. ಪ್ರಕೃತಿಯಲ್ಲಿ ಯಾವುದೂ ಹೀಗೆ ನಡೆಯುತ್ತದೆ ಎಂದು ಹೇಳುವುದಕ್ಕಾಗದು.

Advertisement

ಅದು ಮಾಯೆ, ಹುಷಾರು!
ಚಂಚಲತೆ ಕ್ಷಣಿಕ, ಕೆಲವು ಸಲ ಕ್ಷುಲ್ಲಕ ಕೂಡಾ. ಆದರೆ ಅದೊಂದು ಮಾಯೆ. ಬಹಳ ಕಡಿಮೆ ಸಮಯದಲ್ಲಿ ಅದು ಹೇಗೆ ನಮ್ಮ ತಲೆ ಕೆಡಿಸುತ್ತದೆ ಅಂದರೆ, ನಾವು ಎಡವುತ್ತಿದ್ದೇವೆ ಎಂಬುದರ ಸುಳಿವೂ ನಮಗೆ ಸಿಗುವುದಿಲ್ಲ. ಕೆಲವು ವರ್ಷಗಳ ನಂತರ ನಮ್ಮ ಜೀವನವನ್ನು ಹಿಂತಿರುಗಿ ನೊಡಿದಾಗ ನಗು ಬರುತ್ತದೆ. ಅದು ನಾನಾ! ಎಷ್ಟು ಬಾಲಿಶವಾಗಿತ್ತು ನನ್ನ ನಡವಳಿಕೆ, ಪಾಪ ನಾನು ಅವಳಿಗೆ / ಅವನಿಗೆ ಹಾಗೆ ಮಾಡಬಾರದಿತ್ತು ಅನ್ನಿಸುತ್ತದೆ. ಇನ್ನು ಕೆಲವರು ಥೂ… ನಾನು ಆ ರೌಡಿಯನ್ನು ಪ್ರೀತಿಸಿದ್ನಲ್ಲಾ ! ಅವನು ನನಗೋಸ್ಕರ ಒಂದು ಹಾಡು ಹೇಳಿದ ಅಂತ ಮನಸ್ಸು ಅವನ ಕಡೆ ಹೊರಳಿತ್ತು. ಸದ್ಯ, ನನ್ನ ಅಪ್ಪ-ಅಮ್ಮ ಬೈದು ಬುದ್ಧಿ ಹೇಳಿ ಒಳ್ಳೆ ಕೆಲಸ ಮಾಡಿದರು. ಇಲ್ಲವಾದರೆ ಜೀವನಪೂರ್ತಿ ಅವನ ಜೊತೆ ಕಷ್ಟಪಡಬೇಕಿತ್ತು ಎಂದು ನಿಟ್ಟುಸಿರುಬಿಡುತ್ತಾರೆ. ಚಂಚಲತೆ ಎಲ್ಲಾ ವಯಸ್ಸಿನಲ್ಲೂ ಇರುತ್ತದೆಯಾದರೂ, ಯೌವನ ದಲ್ಲಿ ಕಾಡುವ ಚಾಂಚಲ್ಯ ಬಹಳ ಸೂಕ್ಷ್ಮವಾದದ್ದು. ಆ ಕಾಲಘಟ್ಟದಲ್ಲಿ ಎಚ್ಚರಿಕೆ ವಹಿಸದಿದ್ದರೆ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇವೆ. ಎಷ್ಟೋ ಹುಡುಗ -ಹುಡುಗಿಯರು ಚಂಚಲ ಮನಸ್ಸಿನಿಂದ ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗದೆ ಕ್ಷಣಿಕವಾಗಿ ಮನಸ್ಸು -ಬುದ್ಧಿ ಏನು ಹೇಳುತ್ತದೆಯೋ ಅದೇ ಸರಿ ಎಂದು ತಿಳಿದು ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನಗಳಲ್ಲಿ ಮದುವೆ ಯಾಗುತ್ತಾರೆ. ನಂತರ ಕೇವಲ ಒಂದೇ ವಾರದಲ್ಲಿ ಅವನು ಸರಿಯಿಲ್ಲ ಅಂತ ಅವಳು, ಅವಳು ಸರಿಯಿಲ್ಲ ಅಂತ ಅವನು ಕಿತ್ತಾಡಿಕೊಂಡು ಬೇರೆಯಾಗುತ್ತಾರೆ. ಕೊನೆಗೆ ಇನ್ನೊಬ್ಬರನ್ನು ಮದುವೆಯಾಗಿ ಕಪಟ ಜೀವನ ನಡೆಸುತ್ತಾರೆ.

ನಾನು ಸನ್ಯಾಸಿ ಆಗಿಬಿಡ್ತೀನಿ
ಚಂಚಲತೆ ಪ್ರೀತಿಗೆ ಮಾತ್ರವಲ್ಲ ನಾವು ಏನೇ ಕೆಲಸ ಮಾಡಬೇಕಾದರೂ ನಮ್ಮ ತಲೆಯಲ್ಲಿ ಒಂದು ಸಲ ಅದು ಹಾದು ಹೋಗುತ್ತದೆ. ಕೆಲವರು ಬಹಳ ಸಲೀಸಾಗಿ ನಾನು ಸ್ವಾಮೀಜಿ ಆಗ್ತಿàನಂತೆ, ನನ್ನ ಜಾತಕದಲ್ಲಿ ಸನ್ಯಾಸ ಯೋಗ ಇದೆಯಂತೆ, ನನಗೆ ಜೀವನ ಸಾಕಾಯ್ತು, ಮನೆಯಲ್ಲಿ ಬರೀ ಜಗಳ. ನಾನು ಸನ್ಯಾಸಿಯಾಗೋದೇ ಲೇಸು ಎನ್ನುತ್ತಿರುತ್ತಾರೆ. ಸನ್ಯಾಸಿ ಆಗೋದು ಅಷ್ಟು ಸುಲಭವೇ? ಅಥವಾ ಮನೆಯಲ್ಲಿ ನೆಮ್ಮದಿಯಿಲ್ಲ 
ಎಂದು ಸನ್ಯಾಸಿಯಾಗುವುದಕ್ಕೆ ಅರ್ಥವಾದರೂ ಇದೆಯೇ? ಕಾವಿ ಧರಿಸಿದ ಮಾತ್ರಕ್ಕೆ ಯಾರೂ ಸನ್ಯಾಸಿ ಆಗುವುದಿಲ್ಲ. ನಾವು ಹೇಗೆ ಒಂದು ಡಿಗ್ರಿ ಪಡೆಯಲು 15-20 ವರ್ಷ ಕಷ್ಟಪಡುತ್ತೇವೋ ಹಾಗೆಯೇ ಮನಸ್ಸನ್ನು ನಿಗ್ರಹಿಸಿ ಸನ್ಯಾಸಿಯಾಗುವುದಕ್ಕೂ ಅಷ್ಟೇ ಕಾಲ ಶ್ರಮ ಪಡಬೇಕಾಗುತ್ತದೆ. ಸನ್ಯಾಸಿಯಾಗುವುದಕ್ಕೆ ಯೋಗ್ಯತೆ ಬೇಕು. ಬೇರೇನೂ ಸರಿಹೊಂದುತ್ತಿಲ್ಲ, ಹಾಗಾಗಿ ಸನ್ಯಾಸಿಯಾಗುತ್ತೇನೆ ಎನ್ನುವುದು ತಮಾಷೆಯಷ್ಟೆ. ಮನೆಯಲ್ಲಿ ಸಣ್ಣದೊಂದು ಪೂಜೆ ಮಾಡುವಾಗಲೇ ನಮ್ಮ ಮನಸ್ಸು ಎಲ್ಲೆಲ್ಲೋ ಓಡುತ್ತಿರುತ್ತದೆ. ಇನ್ನು ಜೀವನಪೂರ್ತಿ ಸನ್ಯಾಸಿಯಾಗಿ ಭಗವಚ್ಚಿಂತನೆಯಲ್ಲೇ ಕಳೆಯಬೇಕು ಅಂದರೆ ಅದಕ್ಕೆ ಎಂತಹ ಏಕಾಗ್ರತೆ ಬೇಕು ಊಹಿಸಿ.

ನಿರ್ಧಾರ ಮುಂದೂಡಿ ಬಚಾವಾಗಿ
ಚಂಚಲತೆಯಿಂದ ಬಿಡುಗಡೆ ಹೊಂದಲು ಧ್ಯಾನ ಒಳ್ಳೆಯ ಮಾರ್ಗ. ಭಗವದ್ಗೀತೆಯಲ್ಲೂ ಸಹ ಅರ್ಜುನ ಚಂಚಲತೆಯ ಬಗ್ಗೆ ಕೇಳಿದಾಗ, ಭಗವಂತ ಅಭ್ಯಾಸ ಮಾರ್ಗವನ್ನೆ ಹೇಳಿದ್ದಾನೆ. ಚಂಚಲತೆ ಎಲ್ಲರಲ್ಲೂ ಸಹಜವಾಗಿ ಇರುವ ಸ್ಥಿತಿ. ಅದು ನಿತ್ಯವಲ್ಲ, ಕ್ಷಣಿಕ. ಅದನ್ನು ಆ ಕ್ಷಣದಲ್ಲಿ ಮೀರುವುದನ್ನು ಕಲಿತರೆ ಸಾಕು. ಮುಂದಿನ ಕ್ಷಣದಲ್ಲಿ ಸರಿಯಾದ ನಿರ್ಧಾರನ್ನೇ ಕೈಗೊಳ್ಳಬಹುದು. ಚಾಂಚಲ್ಯದಿಂದ ನಷ್ಟವಾಗದೆ ಇರುವಂತೆ ನೋಡಿ ಕೊಳ್ಳಲು ಏನು ಮಾಡಬೇಕು ಗೊತ್ತಾ? ಮನಸ್ಸು ಅತ್ತಿತ್ತ ಹೋಯ್ದಾಡುತ್ತಿದೆ ಅನ್ನಿಸಿದಾಗ ನಿರ್ಧಾರ ಕೈಗೊಳ್ಳಲು ಹೋಗ ಬಾರದು. ಸಾಧ್ಯವಾದಷ್ಟು ಪ್ರಯತ್ನಿಸಿ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಬೇಕು.ಆ ವಿಷಯದಲ್ಲಿ ಒಂದು ಖಚಿತತೆ ಸಿಕ್ಕಾಗ ನಿರ್ಧಾರ ಕೈಗೊಳ್ಳಬೇಕು. ಅದು ಸಾಮಾನ್ಯವಾಗಿ ಸರಿ
ಯಾದ ನಿರ್ಧಾರವೇ ಆಗಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next